Home / ಕವನ / ಕವಿತೆ / ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ
ಅಲ್ಲಿ ಏನೆಲ್ಲ ಇದೆಯಂತೆ
ಅದೊಂದು ಮಾಯಾ ಪೆಟ್ಟಿಗೆಯಂತೆ
ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ
ಸುಮ್ಮನೆ ಕನಸು ಕಾಣಬಾರದಂತೆ;
ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ
ವಿಚಿತ್ರವಲ್ಲದೇ ಮತ್ತಿನ್ನೇನು-

ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ ಪಕ್ಕ ಕುಳಿತಿದ್ದೇನೆ.
ಅಕ್ಕಪಕ್ಕ-ಮುಂದಿನ-ಹಿಂದಿನ ಸೀಟುಗಳಲ್ಲೆಲ್ಲಾ
ಘಾಟಿಯೋ, ಹುಳಿಯೊಗರಿನ ಎಣ್ಣೆಯ ವಾಸನೆ.
ಅವರೂ ಚುರುಕಾಗಿರಬೇಕೆಂದೇ ತಾನೆ!
ಕುಬೇರನರಮನೆಗೆ ಹೋಗಲು
ಕಣ್ತುಂಬ ಮನತುಂಬ ಲೂಟಿ ಮಾಡಲು-

ಮೋಡಗಳು ಅದೇಕೋ ಹಿಂದೆ ಹಿಂದೆಯೇ ಉಳಿದವು.
ಸಮುದ್ರ ತೆರೆಗಳಿಗೆ ನಗುವಿಲ್ಲ, ಬಾಯಿಗೆ ಬೀಗ ಹಾಕಿಕೊಂಡವೋ
ಅವುಗಳೊಂದಿಗೆ ಮಾತನಾಡುತ್ತಿದ್ದೆನಲ್ಲಾ!!!
ಕುಬೇರನ ವಿಲಾಸಿ ಬುದಕ ನೋಡ ಹೊರಟಿರುವೆನೆಂದು
ಯಾಕೋ ಮುಖ ಕವುಚಿಕೊಂಡು
ಕೇಳಿಯೂ ಕೇಳಿಸದಂತೆ ಮೆಳ್ಳಗಣ್ಣಲ್ಲಿ
ಮೈಯೊಡಮೂರಿ ಆಚೆ ಹೊರಳಿದವು.

ವೈನ್ ಸುರಿವ ಸುಂದರಿ ಕಿಲಕಿಲಸಿ
‘ಮೊದಲ ಸಲ ಅಮೇರಿಕಾ ಪ್ರವಾಸವೆ?
ಸುರಿಯಲೇ ಮಾಯಾನಗರಿಯ ರಹಸ್ಯ.’
ಆರಡಿ ಹೆಣ್ಣಿನ ಮೂರು ಮಾತುಗಳು
ಹಸಿರು ಕಣ್ಣಿನ ಬೆಕ್ಕಿನ ನೋಟ
ಕಿವಿಯವರೆಗಿನ ಬಾಯಗಲ ನಗು
ಕುಬೇರನರಮನೆಯ ಸ್ವಾಗತ ಕಾರಿಣಿಯ
ಬೆಡಗಿಗೆ ಮೊದಲ ಹಂತದಲ್ಲೇ ಬೆಚ್ಚಿ ಬಿದ್ದೆ.

ಕುತೂಹಲದ ಮೂಟೆಯ ನನ್ನ ಮುಖ
ಹಳಬನೊಬ್ಬ ಕುಬೇರನರಮನೆಯ ಹೊಕ್ಕು
ಚಿತ್ರ ವಿಚಿತ್ರ ಸೆಳೆತದ ಭ್ರಮೆ ಸಂತೋಷಿಸಿ
ನೆಮ್ಮದಿ ಕಳೆದುಕೊಂಡದ್ದಾಗಿ,
ಶಾಂತಿಗಾಗಿ ಯೋಗಾಶ್ರಮಗಳು ಹುಡುಕುತ್ತಾ
ಊರೂರ ಅಲೆಯುತ್ತಿರುವುದಾಗಿ ಉಸಿರಾಡಿದ.
ಕಿಟಕಿಯಾಚೆ ಮೋಡಗಳ ಗಹಗಹಿಸುವಿಕೆ
ದೂರದೂರ ಕೆಳಗೆ ಸಮುದ್ರದಬ್ಬರಿಸುವಿಕೆಯ
ಶಬ್ದ ಶಬ್ದ ಶಬ್ದ
ಅದೇಕೋ ಮತ್ತೊಮ್ಮೆ ನನ್ನ ನೂಕಿ
ತೇಲಾಡಿ ಸುತ್ತಾಡಿ ಹೊರಳಾಡಿ
ಗಕ್ಕೆಂದು ಹಿಂದಿರುಗಿ ಹೊರಟೇ ಹೋದವು.

ಹಾಗಾದರೆ ಕುಬೇರನ ದೇಶ ನೋಡಲೆ?
ಅಥವಾ ನಾಳೆ ಬೆಳಗಾಗುವುದರಲ್ಲೇ
ಮರು ಪ್ರಯಾಣಿಸಿ ಯೋಗಾಶ್ರಮ ಹುಡುಕಲೆ?
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...