“ಒಂದು ಒಂದು ಎರಡು ಆದ್ರೆ
ಎರಡು ಎರಡು?” – “ನಾಲ್ಕು
ನಾಲ್ಕು ಚಕ್ಲಿ ಬೇಕು!”
“ಎರಡು ಎರಡು ನಾಲ್ಕು ಸರಿ
ಮೂರು ಮೂರು?” – “ಆರು
ಆರು ಲೋಟ ಖೀರು!”
“ಮೂರು ಮೂರು ಆರು ಹೌದು
ನಾಲ್ಕು ನಾಲ್ಕು?” – “ಎಂಟು
ಬಿಚ್ಚು ತಿಂಡಿ ಗಂಟು!”
“ನಾಲ್ಕು ನಾಲ್ಕು ಎಂಟು, ನಿಜ
ಐದು ಐದು?” – “ಹತ್ತು
ಉಂಡೆ ಜೀಬಿಗ್ ಬಿತ್ತು!
“ಐದು ಐದು ಹತ್ತು, ಸರಿ
ಆರು ಆರು?” – “ತಾಳಿ
ತಿಂಡಿ ಬಂತು ಏಳೀ.”
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.