Home / ಕವನ / ಕವಿತೆ / ಬುದ್ಧಿವಾದ

ಬುದ್ಧಿವಾದ

ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು
ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು?
ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ!
ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ
ನಿಂತ ನೆಲವನ್ನೆ ಕೊರೆದು
ಗರಗರ ಬುಗುರಿ ತಿರುಗಿ ಹೋಗುತ್ತದೆಯೆ ಬದುಕು!
ಕೀಲು ಹಾಕದ ಚಕ್ರ ಹೊರಳದೆ ಇರುತ್ತದ?
ಕೆರಳದೆ ಇರುತ್ತದೇನೇ
ಸರಳ ನಡುವೆ ಹಸಿದು ಸುತ್ತುವ ತೋಳದ ಹಿಂಡು?
ಅಲ್ಲವೆ, ಪಾಳೆಯದಲ್ಲೇ ದಂಗೆ ಎದ್ದು ಗುಲ್ಲಾಗಿದೆ
ದಡಗಳ ತಡೆಗಳ ದಾಟಿ ಹೊಲಕ್ಕೆ ಮದಜಲ ನುಗ್ಗಿದೆ
ಆದರು ಕೋಟೆಯ ಹೊರಗೆ
ಸಿಪಾಯಿ ಭಂಗಿಯ ಶಿಸ್ತಿನ ಅಂಗಿಯ ಸಂಗತಿಯೇನೇ?
ಹೇಳೇ ದೀಪಿಕಾ
ಎಣ್ಣೆ ಇರುವಾಗ ಉರಿಯದೆ ಕಣ್ಣು ಮುಚ್ಚುವುದೇನೇ?

ಈ ಶಿಸ್ತಿನ ನಾಟಕ ಹೀಗೇ ಸಾಗಿರುವಾಗಲೆ
ಭರತವಾಕ್ಯಕ್ಕೆ ಇನ್ನೂ ಹೊತ್ತಿರುವಾಗಲೆ
ಕಾಡು ಕರೆಯುತ್ತದೆ ಹಾಡು ಮುಗಿಯುತ್ತದೆ,
ಎಣ್ಣೆಯೆಲ್ಲ ಒಣಗಿ ಹಣತೆ
ಮಣ್ಣ ಹೊಳಕೆಯಾಗುತ್ತದೆ;
ನಿನ್ನೆ ಮೈಯಲ್ಲಿ ಚೈತ್ರ ಬಿಚ್ಚಿರುವ ಚಿಗುರನ್ನು ಹಚ್ಚಿರುವ ಅಗರನ್ನು
ಮಂಜುನಾಲಿಗೆಯೊಂದು ನೆಕ್ಕಿ ಚಪ್ಪರಿಸಿ ಬಿಡುತ್ತದೆ;
ನೀ ಮುಟ್ಟಿದ್ದನ್ನು ಮುತ್ತಿಡುತ್ತ
ಮೆಟ್ಟಿದಲ್ಲಿ ಮಣ್ಣು ಮುಕ್ಕುತ್ತ
ಬೆನ್ನುಬಿದ್ದು ಅಲೆದ ಊರು
ಗುಡ್‌ಬೈ ಕೂಗಿ ಓಡುತ್ತದೆ.

ಅಮೇಲೆ
ಅಜ್ಜಿಯರ ಬಳಗ ಕರೆಯುತ್ತದೆ ನಿನ್ನನ್ನ
ಪುಣ್ಯಕಥೆ ಕೇಳುವುದಕ್ಕೆ ಪುರಾಣದ ಕಟ್ಟೆಗೆ
ಹತ್ತಿ ಬಿಡಿಸುವುದಕ್ಕೆ ಬತ್ತಿ ಹೊಸೆಯುವುದಕ್ಕೆ;
ಕಣ್ವರು ಸಾಕಿದ ಕನ್ಯೆ
ಕಣ್ಣು ಹೊರಳಿದ್ದ ವೇಳೆ
ಭೂಪನೊಬ್ಬನ ಮೈ ಬೆಂಕಿಗೆ ಧೂಪಹಾಕಿದ್ದ ಕೇಳುವುದಕ್ಕೆ:
ಬೆಣ್ಣೆ ಹಾಲು ಹೊತ್ತು ನೆರೆದ ಕನ್ಯೆಗೋಪಿಯರ ನಡುವಿನಲ್ಲಿ
ಬೃಂದಾವನದ ಭಗವಂತ ಮೆರೆದ
ಶೃಂಗಾರದಲ್ಲಿ ಕಿವಿತೊಳೆಯುವುದಕ್ಕೆ!

ಕೇಳುತ್ತ ಕೇಳುತ್ತ ಕಣ್ಣೀರು ಕರೆಯುತ್ತೀಯ
ದೇವರೇ ಗೆಜ್ಜೆಕಟ್ಟಿ ಕುಣಿದರೂ
ನಾನು ಹೆಜ್ಜೆಹಾಕದೆ ಹೋದೆನೆ ಅಂತ;
ಅಟ್ಟಮೇಲೆ ವ್ಯರ್ಥವಾಗಿ ಉರಿಯುತ್ತೀಯ
ಮಡಿಲಲ್ಲೇ ಹಾಲು ಹಣ್ಣಿದ್ದೂ
ಬಡಿವಾರಕ್ಕೆ ಉಪವಾಸ ಬಿದ್ದೆನೆ ಅಂತ;
ಕಟ್ಟದ ಮಾಲೆ ಯಾರೂ ಮುಟ್ಟದೆ ಬಾಡಿತೆ ದೇವರೆ
ಪಲ್ಲವಿ ತಾನಗಳಿಲ್ಲದೆ ಪವಮಾನಕ್ಕೆ ಬಂದೆನೆ ಅಂತ;
ಅದರೆ ದೀಪಿಕಾ ಅಗ
ತಿದ್ದಲು ಏನಿರುತ್ತದೆ?
ಡೋಲು ಹರಿದಿರುತ್ತದೆ, ಕೋಲು ಮುರಿದಿರುತ್ತದೆ
ಉಪ್ಪು ಮುಕ್ಕಿದ ಸೊಕ್ಕು ನೀರು ಕುಡಿಯುತ್ತಿರುತ್ತದೆ.
*****
ದೀಪಿಕಾ ಕವನಗುಚ್ಛ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...