ಬುದ್ಧಿವಾದ

ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು
ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು?
ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ!
ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ
ನಿಂತ ನೆಲವನ್ನೆ ಕೊರೆದು
ಗರಗರ ಬುಗುರಿ ತಿರುಗಿ ಹೋಗುತ್ತದೆಯೆ ಬದುಕು!
ಕೀಲು ಹಾಕದ ಚಕ್ರ ಹೊರಳದೆ ಇರುತ್ತದ?
ಕೆರಳದೆ ಇರುತ್ತದೇನೇ
ಸರಳ ನಡುವೆ ಹಸಿದು ಸುತ್ತುವ ತೋಳದ ಹಿಂಡು?
ಅಲ್ಲವೆ, ಪಾಳೆಯದಲ್ಲೇ ದಂಗೆ ಎದ್ದು ಗುಲ್ಲಾಗಿದೆ
ದಡಗಳ ತಡೆಗಳ ದಾಟಿ ಹೊಲಕ್ಕೆ ಮದಜಲ ನುಗ್ಗಿದೆ
ಆದರು ಕೋಟೆಯ ಹೊರಗೆ
ಸಿಪಾಯಿ ಭಂಗಿಯ ಶಿಸ್ತಿನ ಅಂಗಿಯ ಸಂಗತಿಯೇನೇ?
ಹೇಳೇ ದೀಪಿಕಾ
ಎಣ್ಣೆ ಇರುವಾಗ ಉರಿಯದೆ ಕಣ್ಣು ಮುಚ್ಚುವುದೇನೇ?

ಈ ಶಿಸ್ತಿನ ನಾಟಕ ಹೀಗೇ ಸಾಗಿರುವಾಗಲೆ
ಭರತವಾಕ್ಯಕ್ಕೆ ಇನ್ನೂ ಹೊತ್ತಿರುವಾಗಲೆ
ಕಾಡು ಕರೆಯುತ್ತದೆ ಹಾಡು ಮುಗಿಯುತ್ತದೆ,
ಎಣ್ಣೆಯೆಲ್ಲ ಒಣಗಿ ಹಣತೆ
ಮಣ್ಣ ಹೊಳಕೆಯಾಗುತ್ತದೆ;
ನಿನ್ನೆ ಮೈಯಲ್ಲಿ ಚೈತ್ರ ಬಿಚ್ಚಿರುವ ಚಿಗುರನ್ನು ಹಚ್ಚಿರುವ ಅಗರನ್ನು
ಮಂಜುನಾಲಿಗೆಯೊಂದು ನೆಕ್ಕಿ ಚಪ್ಪರಿಸಿ ಬಿಡುತ್ತದೆ;
ನೀ ಮುಟ್ಟಿದ್ದನ್ನು ಮುತ್ತಿಡುತ್ತ
ಮೆಟ್ಟಿದಲ್ಲಿ ಮಣ್ಣು ಮುಕ್ಕುತ್ತ
ಬೆನ್ನುಬಿದ್ದು ಅಲೆದ ಊರು
ಗುಡ್‌ಬೈ ಕೂಗಿ ಓಡುತ್ತದೆ.

ಅಮೇಲೆ
ಅಜ್ಜಿಯರ ಬಳಗ ಕರೆಯುತ್ತದೆ ನಿನ್ನನ್ನ
ಪುಣ್ಯಕಥೆ ಕೇಳುವುದಕ್ಕೆ ಪುರಾಣದ ಕಟ್ಟೆಗೆ
ಹತ್ತಿ ಬಿಡಿಸುವುದಕ್ಕೆ ಬತ್ತಿ ಹೊಸೆಯುವುದಕ್ಕೆ;
ಕಣ್ವರು ಸಾಕಿದ ಕನ್ಯೆ
ಕಣ್ಣು ಹೊರಳಿದ್ದ ವೇಳೆ
ಭೂಪನೊಬ್ಬನ ಮೈ ಬೆಂಕಿಗೆ ಧೂಪಹಾಕಿದ್ದ ಕೇಳುವುದಕ್ಕೆ:
ಬೆಣ್ಣೆ ಹಾಲು ಹೊತ್ತು ನೆರೆದ ಕನ್ಯೆಗೋಪಿಯರ ನಡುವಿನಲ್ಲಿ
ಬೃಂದಾವನದ ಭಗವಂತ ಮೆರೆದ
ಶೃಂಗಾರದಲ್ಲಿ ಕಿವಿತೊಳೆಯುವುದಕ್ಕೆ!

ಕೇಳುತ್ತ ಕೇಳುತ್ತ ಕಣ್ಣೀರು ಕರೆಯುತ್ತೀಯ
ದೇವರೇ ಗೆಜ್ಜೆಕಟ್ಟಿ ಕುಣಿದರೂ
ನಾನು ಹೆಜ್ಜೆಹಾಕದೆ ಹೋದೆನೆ ಅಂತ;
ಅಟ್ಟಮೇಲೆ ವ್ಯರ್ಥವಾಗಿ ಉರಿಯುತ್ತೀಯ
ಮಡಿಲಲ್ಲೇ ಹಾಲು ಹಣ್ಣಿದ್ದೂ
ಬಡಿವಾರಕ್ಕೆ ಉಪವಾಸ ಬಿದ್ದೆನೆ ಅಂತ;
ಕಟ್ಟದ ಮಾಲೆ ಯಾರೂ ಮುಟ್ಟದೆ ಬಾಡಿತೆ ದೇವರೆ
ಪಲ್ಲವಿ ತಾನಗಳಿಲ್ಲದೆ ಪವಮಾನಕ್ಕೆ ಬಂದೆನೆ ಅಂತ;
ಅದರೆ ದೀಪಿಕಾ ಅಗ
ತಿದ್ದಲು ಏನಿರುತ್ತದೆ?
ಡೋಲು ಹರಿದಿರುತ್ತದೆ, ಕೋಲು ಮುರಿದಿರುತ್ತದೆ
ಉಪ್ಪು ಮುಕ್ಕಿದ ಸೊಕ್ಕು ನೀರು ಕುಡಿಯುತ್ತಿರುತ್ತದೆ.
*****
ದೀಪಿಕಾ ಕವನಗುಚ್ಛ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯತಿ (ಸನ್ಯಾಸಿ)
Next post ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…