Home / ಕವನ / ಕವಿತೆ / ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಮಳೆ ಹನಿಯ ಬಿಡು ಹೂಗಳಲಿ, ಮರ
ಗಳ ಹಸುರು ಹಚ್ಚೆಯಲಿ, ಕಡಲಿನ
ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ,
ಹೊಳೆವ ಹೊಳೆಗಳ ಗಳದ ಸರದಲಿ
ಝಳದ ಹಿಮಗಿರಿಮಕುಟದಲ್ಲಿ ಥಳ
ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ!

ಹೊತ್ತಿಸಿದೆನೌ ಮುಂಚಿನಾಳಕೆ
ವೆತ್ತ ಬೀರರ ಪೂರ್ವದರಸರ
ಹೊತ್ತ ನಿನ್ನುದರವನು; ಧರ್ಮಾಮೃತದ ಬೋಧಕರ
ಹೆತ್ತ ನಿನ್ನೀಬಸುರು, ನನ್ನನು
ಹೆತ್ತು ಹಡೆಯಿತು ವಿಷವ; ಸೀಗೆಯ
ಬಿತ್ತು ಮೊಳೆತಂತಾಯ್ತು ಬಾಳೆಯ ಬುಡದಿ ನನ್ನಿಂದ!

ಕತ್ತಿವೀರರು ನಿನ್ನ ಹಗೆತಲೆ
ಯೊತ್ತಿ, ರಣದಲಿ ಜಯಿಸಿ, ಕುಂಕುಮ
ನೆತ್ತರಿನ ಬೊಟ್ಟಿಟ್ಟು ಶೌರ್ಯದ ಹಣೆಯ ನಡುವಿನಲಿ,
ಮತ್ತೆ ಕೀರ್ತಿಯ ಕಾಲ್ಗೆ ಗೆಜ್ಜೆಯ
ಸುತ್ತಿ ಬೆಳಗಿದ ನಿನ್ನ ಮುಖದಲಿ
ಬಿತ್ತು ನನ್ನೆದೆಯೊಳಗೆ ತುಂಬಿದ ಕತ್ತಲೆಯ ನೆರಳು.

ಮೆರೆದೆನೌ ಹೊಂಗೋಳ ಕೈಯಲಿ
ಮೆರೆದೆನೌ ಮಾಯೆಯಲಿ ಹೊಟ್ಟೆಯ
ಹೊರೆದೆನೌ, ನನ್ನೆಲುಬು ಮಾಂಸವ ನಾನೆ ಉಂಡುಂಡು!
ತೊರೆದೆನೌ ನನ್ನವರ ಮುಟ್ಟಿದೆ
ಒರೆದೆನೌ ಪರತಂತ್ರ ಪಾಠವ
ಬರೆದೆನೌ ನಿನ್ನಯ ಲಲಾಟದಿ ದಾಸ್ಯಮುದ್ರೆಯನು!

ಕದ್ದ ಕಳ್ಳನು ಕೆಡುಕನಾದರು
ಮುದ್ದು ಮಗನಲೆ ತಾಯಿಗಾತನ
ನೊದ್ದು ಬಿಡುವಳೆ? ತಾಯೆ! ನೋಡೌ ಕರುಣದಿಂದೀಗ!
ನಿದ್ದೆಯಿಂದೆಚ್ಚೆತ್ತೆ, ಹೋ! ಹೋ!
ತಿದ್ದಿಕೊಳ್ಳಲು ಹೊತ್ತಿದೇ! ನೀ
ನಿದ್ದು ಕೈಗೊಟ್ರೆನಗೆ ಕಲಿಸೌ ನಿನ್ನ ಸೇವೆಯನು!

ನನ್ನ ಹಸಿ ಮೈದೊಗಲ ಜೋಡನು
ನಿನ್ನಡಿಗೆ ಜೋಡಿಸುವೆ; ಗುಡಿಸುವೆ
ನನ್ನ ಕೂದಲ ಚೌರಿಯಲಿ ನಿನ್ನಡಿಯ ಧೂಳಿಯನು;
ನನ್ನ ಮನದಲ್ಲಿ ಹಿಡಿವೆ ನಿನ್ನನು!
ಇನ್ನು ಕುಳ್ಳಿರ್ದೀ ಮನೋರಥ
ವನ್ನು ಬೇಗನೆ ನೂಕಿ ನಡೆವೆನು ಸುಖವ ಮೇರುವಿಗೆ!

ಎಲ್ಲಿ ಸಾಹಸ ಸತ್ವದಳತೆಗೆ
ಬಳ್ಳವಾಗದೊ ಮೈಯ ಬಣ್ಣವು,
ಎಲ್ಲಿ ಅನ್ಯಾಯಕ್ಕೆ ಕತ್ತಿಯು ಕೊಡದೊ ಬೆಂಬಲವ,
ಎಲ್ಲಿ ಆತ್ಮೋನ್ನತಿಯ ಹಾದಿಗೆ
ಕಲ್ಲು ಮುಳ್ಳನ್ನಿಡಿರೊ, ಆ ಸುಖ
ಸಲ್ಲಲಿತ ಸಮ ಸತ್ಯ ಸೀಮೆಗೆ ತಾಯೆ ನಡಿಸೆನ್ನಾ!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...