Home / ಕವನ / ಕವಿತೆ / ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಮಳೆ ಹನಿಯ ಬಿಡು ಹೂಗಳಲಿ, ಮರ
ಗಳ ಹಸುರು ಹಚ್ಚೆಯಲಿ, ಕಡಲಿನ
ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ,
ಹೊಳೆವ ಹೊಳೆಗಳ ಗಳದ ಸರದಲಿ
ಝಳದ ಹಿಮಗಿರಿಮಕುಟದಲ್ಲಿ ಥಳ
ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ!

ಹೊತ್ತಿಸಿದೆನೌ ಮುಂಚಿನಾಳಕೆ
ವೆತ್ತ ಬೀರರ ಪೂರ್ವದರಸರ
ಹೊತ್ತ ನಿನ್ನುದರವನು; ಧರ್ಮಾಮೃತದ ಬೋಧಕರ
ಹೆತ್ತ ನಿನ್ನೀಬಸುರು, ನನ್ನನು
ಹೆತ್ತು ಹಡೆಯಿತು ವಿಷವ; ಸೀಗೆಯ
ಬಿತ್ತು ಮೊಳೆತಂತಾಯ್ತು ಬಾಳೆಯ ಬುಡದಿ ನನ್ನಿಂದ!

ಕತ್ತಿವೀರರು ನಿನ್ನ ಹಗೆತಲೆ
ಯೊತ್ತಿ, ರಣದಲಿ ಜಯಿಸಿ, ಕುಂಕುಮ
ನೆತ್ತರಿನ ಬೊಟ್ಟಿಟ್ಟು ಶೌರ್ಯದ ಹಣೆಯ ನಡುವಿನಲಿ,
ಮತ್ತೆ ಕೀರ್ತಿಯ ಕಾಲ್ಗೆ ಗೆಜ್ಜೆಯ
ಸುತ್ತಿ ಬೆಳಗಿದ ನಿನ್ನ ಮುಖದಲಿ
ಬಿತ್ತು ನನ್ನೆದೆಯೊಳಗೆ ತುಂಬಿದ ಕತ್ತಲೆಯ ನೆರಳು.

ಮೆರೆದೆನೌ ಹೊಂಗೋಳ ಕೈಯಲಿ
ಮೆರೆದೆನೌ ಮಾಯೆಯಲಿ ಹೊಟ್ಟೆಯ
ಹೊರೆದೆನೌ, ನನ್ನೆಲುಬು ಮಾಂಸವ ನಾನೆ ಉಂಡುಂಡು!
ತೊರೆದೆನೌ ನನ್ನವರ ಮುಟ್ಟಿದೆ
ಒರೆದೆನೌ ಪರತಂತ್ರ ಪಾಠವ
ಬರೆದೆನೌ ನಿನ್ನಯ ಲಲಾಟದಿ ದಾಸ್ಯಮುದ್ರೆಯನು!

ಕದ್ದ ಕಳ್ಳನು ಕೆಡುಕನಾದರು
ಮುದ್ದು ಮಗನಲೆ ತಾಯಿಗಾತನ
ನೊದ್ದು ಬಿಡುವಳೆ? ತಾಯೆ! ನೋಡೌ ಕರುಣದಿಂದೀಗ!
ನಿದ್ದೆಯಿಂದೆಚ್ಚೆತ್ತೆ, ಹೋ! ಹೋ!
ತಿದ್ದಿಕೊಳ್ಳಲು ಹೊತ್ತಿದೇ! ನೀ
ನಿದ್ದು ಕೈಗೊಟ್ರೆನಗೆ ಕಲಿಸೌ ನಿನ್ನ ಸೇವೆಯನು!

ನನ್ನ ಹಸಿ ಮೈದೊಗಲ ಜೋಡನು
ನಿನ್ನಡಿಗೆ ಜೋಡಿಸುವೆ; ಗುಡಿಸುವೆ
ನನ್ನ ಕೂದಲ ಚೌರಿಯಲಿ ನಿನ್ನಡಿಯ ಧೂಳಿಯನು;
ನನ್ನ ಮನದಲ್ಲಿ ಹಿಡಿವೆ ನಿನ್ನನು!
ಇನ್ನು ಕುಳ್ಳಿರ್ದೀ ಮನೋರಥ
ವನ್ನು ಬೇಗನೆ ನೂಕಿ ನಡೆವೆನು ಸುಖವ ಮೇರುವಿಗೆ!

ಎಲ್ಲಿ ಸಾಹಸ ಸತ್ವದಳತೆಗೆ
ಬಳ್ಳವಾಗದೊ ಮೈಯ ಬಣ್ಣವು,
ಎಲ್ಲಿ ಅನ್ಯಾಯಕ್ಕೆ ಕತ್ತಿಯು ಕೊಡದೊ ಬೆಂಬಲವ,
ಎಲ್ಲಿ ಆತ್ಮೋನ್ನತಿಯ ಹಾದಿಗೆ
ಕಲ್ಲು ಮುಳ್ಳನ್ನಿಡಿರೊ, ಆ ಸುಖ
ಸಲ್ಲಲಿತ ಸಮ ಸತ್ಯ ಸೀಮೆಗೆ ತಾಯೆ ನಡಿಸೆನ್ನಾ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...