ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಮಳೆ ಹನಿಯ ಬಿಡು ಹೂಗಳಲಿ, ಮರ
ಗಳ ಹಸುರು ಹಚ್ಚೆಯಲಿ, ಕಡಲಿನ
ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ,
ಹೊಳೆವ ಹೊಳೆಗಳ ಗಳದ ಸರದಲಿ
ಝಳದ ಹಿಮಗಿರಿಮಕುಟದಲ್ಲಿ ಥಳ
ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ!

ಹೊತ್ತಿಸಿದೆನೌ ಮುಂಚಿನಾಳಕೆ
ವೆತ್ತ ಬೀರರ ಪೂರ್ವದರಸರ
ಹೊತ್ತ ನಿನ್ನುದರವನು; ಧರ್ಮಾಮೃತದ ಬೋಧಕರ
ಹೆತ್ತ ನಿನ್ನೀಬಸುರು, ನನ್ನನು
ಹೆತ್ತು ಹಡೆಯಿತು ವಿಷವ; ಸೀಗೆಯ
ಬಿತ್ತು ಮೊಳೆತಂತಾಯ್ತು ಬಾಳೆಯ ಬುಡದಿ ನನ್ನಿಂದ!

ಕತ್ತಿವೀರರು ನಿನ್ನ ಹಗೆತಲೆ
ಯೊತ್ತಿ, ರಣದಲಿ ಜಯಿಸಿ, ಕುಂಕುಮ
ನೆತ್ತರಿನ ಬೊಟ್ಟಿಟ್ಟು ಶೌರ್ಯದ ಹಣೆಯ ನಡುವಿನಲಿ,
ಮತ್ತೆ ಕೀರ್ತಿಯ ಕಾಲ್ಗೆ ಗೆಜ್ಜೆಯ
ಸುತ್ತಿ ಬೆಳಗಿದ ನಿನ್ನ ಮುಖದಲಿ
ಬಿತ್ತು ನನ್ನೆದೆಯೊಳಗೆ ತುಂಬಿದ ಕತ್ತಲೆಯ ನೆರಳು.

ಮೆರೆದೆನೌ ಹೊಂಗೋಳ ಕೈಯಲಿ
ಮೆರೆದೆನೌ ಮಾಯೆಯಲಿ ಹೊಟ್ಟೆಯ
ಹೊರೆದೆನೌ, ನನ್ನೆಲುಬು ಮಾಂಸವ ನಾನೆ ಉಂಡುಂಡು!
ತೊರೆದೆನೌ ನನ್ನವರ ಮುಟ್ಟಿದೆ
ಒರೆದೆನೌ ಪರತಂತ್ರ ಪಾಠವ
ಬರೆದೆನೌ ನಿನ್ನಯ ಲಲಾಟದಿ ದಾಸ್ಯಮುದ್ರೆಯನು!

ಕದ್ದ ಕಳ್ಳನು ಕೆಡುಕನಾದರು
ಮುದ್ದು ಮಗನಲೆ ತಾಯಿಗಾತನ
ನೊದ್ದು ಬಿಡುವಳೆ? ತಾಯೆ! ನೋಡೌ ಕರುಣದಿಂದೀಗ!
ನಿದ್ದೆಯಿಂದೆಚ್ಚೆತ್ತೆ, ಹೋ! ಹೋ!
ತಿದ್ದಿಕೊಳ್ಳಲು ಹೊತ್ತಿದೇ! ನೀ
ನಿದ್ದು ಕೈಗೊಟ್ರೆನಗೆ ಕಲಿಸೌ ನಿನ್ನ ಸೇವೆಯನು!

ನನ್ನ ಹಸಿ ಮೈದೊಗಲ ಜೋಡನು
ನಿನ್ನಡಿಗೆ ಜೋಡಿಸುವೆ; ಗುಡಿಸುವೆ
ನನ್ನ ಕೂದಲ ಚೌರಿಯಲಿ ನಿನ್ನಡಿಯ ಧೂಳಿಯನು;
ನನ್ನ ಮನದಲ್ಲಿ ಹಿಡಿವೆ ನಿನ್ನನು!
ಇನ್ನು ಕುಳ್ಳಿರ್ದೀ ಮನೋರಥ
ವನ್ನು ಬೇಗನೆ ನೂಕಿ ನಡೆವೆನು ಸುಖವ ಮೇರುವಿಗೆ!

ಎಲ್ಲಿ ಸಾಹಸ ಸತ್ವದಳತೆಗೆ
ಬಳ್ಳವಾಗದೊ ಮೈಯ ಬಣ್ಣವು,
ಎಲ್ಲಿ ಅನ್ಯಾಯಕ್ಕೆ ಕತ್ತಿಯು ಕೊಡದೊ ಬೆಂಬಲವ,
ಎಲ್ಲಿ ಆತ್ಮೋನ್ನತಿಯ ಹಾದಿಗೆ
ಕಲ್ಲು ಮುಳ್ಳನ್ನಿಡಿರೊ, ಆ ಸುಖ
ಸಲ್ಲಲಿತ ಸಮ ಸತ್ಯ ಸೀಮೆಗೆ ತಾಯೆ ನಡಿಸೆನ್ನಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧಿವಾದ
Next post ಕತ್ತಲಲ್ಲಿರುವವನು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…