Home / ಕವನ / ಕವಿತೆ / ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ
ನರಳುತ್ತಿರುವೆ
ಇಲ್ಲಿ ನೆಮ್ಮದಿ ಎಲ್ಲಿ ?
ಕೊಳೆತು ನಾರುತ್ತಿರುದ ಹಳೆಯ ಭೂತ ;
ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ,
ಎರಡು ಗಡಿಗಳ ನಡುವೆ
ಒಡೆದು ಬಿದ್ದಿದೆ ರೂಪ.
ಹೊಕ್ಕುಳಿನ ಹುರಿ ಕಡಿದು
ಹಳಿ ಬಿಟ್ಟು ಹೊರನಡೆದು
ಪ್ರತ್ಯೇಕತೆಯ ಸುಳ್ಳ ಕೋಟಿ ಕೊರಳುಗಳಲ್ಲಿ
ಕೂಗಿ ದಣಿದಿದೆ ಪಾಪ

ಚಿತ್ತ ಹೊತ್ತ ಮನುಷ್ಯ
ಚಿತ್ತವಿಲ್ಲದ ನೆಲ,
ಬೆಟ್ಟ ಮರ ಗಿಡ ಕಲ್ಲು,
ಹುಲ್ಲು ಪರಿಮಳ ಜಲ ;
ಯಾರು ಉತ್ತಮ, ಯಾರು ಅಧಮ, ಏತಕೆ, ಹೇಗೆ ?
ಯಾರು ಪಡೆಯುತ್ತಾರೆ ಯಾರಿಂದ, ಏತಕ್ಕೆ ?
ಹೇಗೆ ದುಡಿಸುತ್ತಾರೆ, ದುಡಿಸಿ ಗುಡಿಸುತ್ತಾರೆ
ಯಾರು ಯಾರನ್ನೇಕೆ ಜೀತಕ್ಕೆ ?

ಯೋಚಿಸಬರದ ಅಶೋಕ
ಋತು ತಪ್ಪದೆ ಸುರಿವ ಚಿಗುರು,
ಯೋಚಿಸಲಾಗದ ಆಲದ ಅರ್ಧ ಎಕರೆ ನೆರಳು
ಯೋಚಿಸಲಾಗದ ಮಾವು,
ಆಲೋಚಿಸಲಾಗದ ಹೂವು,
ಯೋಚಿಸುವ ಮನುಷ್ಯನನ್ನೇ
ಸಾಕುವ ಪರಿಯನ್ನು
ಆಲೋಚಿಸಬೇಕು ನಾವು

ಚಿತ್ತವೇ ಶತ್ರುವೇ ನಮಗೆ ? ಸೃಷ್ಟಿಯ ಹಡೆದ
ಮೂಲಕ್ಕೆ ಮಿಥ್ಯವೇ ?
ಅದಕ್ಕೂ ಮೀರಿದ ಶಕ್ತಿ ಜಡಕ್ಕೆ ಸಲೀಸು ದಕ್ಕಿ
ಸತ್ಯ ಪ್ರತ್ಯಕ್ಷವೆ ಅದಕ್ಕೆ ?
ಕಡಿಸಿಕೊಳ್ಳುವ ನೋವು ಕಡಿಯುವ ಜೀವಕ್ಕಿರದ
ಸ್ಥಿತಿ ಮರ್ತ್ಯಮಾತ್ರವೆ ?
ಮೂಲಪ್ರಜ್ಞೆಯ ಬಿಂಬ
ಕೋಟಿ ಚೂರುಗಳಾಗಿ
ಹಿರಿಕಡಲು ಹನಿಹನಿಗಳಾಗಿ ಒಡೆದ ವಿಕಾರ
ಗುರುತಿಸಿದರೂ ನಿಜವ ರುಚಿಯಲ್ಲಿ, ಹನಿಗೆಲ್ಲಿ
ಹಡಗುಗಳ ತೇಲಿಸುವ ಅಧಿಕಾರ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...