ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಸಂಭಾಷಣೆ.
ಮನುಷ್ಯ:- “ನಿನಗೊಂದು ಪ್ರಶ್ನೆ ಕೇಳಲೇ?”
ದೇವರು:- ” ಕೇಳು”
ಮನುಷ್ಯ:-“ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏಕೆ?”
ದೇವರು:-“ನಿನ್ನ ಪ್ರಶ್ನೆಗಳನ್ನು ನಿಖರವಾಗಿ ಕೇಳು?”
ಮನುಷ್ಯ:-“ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ?”
ದೇವರು:-“ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮಜೀವ ಕಾಪಾಡಲು ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.
ನೀನು ಸಂಚರಿಸುವ ದಾರಿಯಲ್ಲಿ ಕುಡಿದಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್ ಆಗುವಂತೆ ಮಾಡಿದೆ.
ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ. ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.
ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ.”
ಮನುಷ್ಯ:-” ಕ್ಷಮಿಸಿ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದ್ದೆ.”
ದೇವರು:-“ನೀನು ಮಾಡುವ ಯೋಜನೆಗಳಿಗಿಂತ ನಾನು ಮಾಡುವ ಯೋಜನೆಗಳು ನಿನ್ನ ಬದುಕಿಗೆ ಉತ್ತಮ ಫಲಿತಾಂಶಗಳನ್ನುನೀಡುತ್ತವೆ. ನೀನು ಮಾಡಿದ ಯೋಜನೆಗಳು ವಿಫಲವಾಯಿತೆಂದು ಬೇಸರವಾಗಬೇಡ.”
ಮನುಷ್ಯ :-“ಧನ್ಯವಾದಗಳು ಪ್ರಭುವೆ?”
ದೇವರು:-“ಎಲ್ಲ ಜೀವಿಗಳು ನನ್ನ ಮಕ್ಕಳು. ಅವರ ಒಳಿತಿನ ಬಗ್ಗೆ ಮಾತ್ರ ನಾನು ಚಿಂತಿಸುತ್ತೇನೆ. ನಾನು ಮಾಡಿದ ಯೋಜನೆಗಳಿಂದ ಎಂದಿಗೂ ಕೆಡಕಾಗುವುದಿಲ್ಲ. ಮನುಷ್ಯರಿಗಾಗಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ನಿಧಾನವಾಗಿ ಯೋಚಿಸಿ ನನಗೆ ಉತ್ತರಿಸಿ.”
ನಿಮಗೆ, ಮೂರು ಗಂಟೆಯ ಸಿನಿಮಾ ಅಥವಾ ಮನರಂಜನೆ ಕಾರ್ಯಕ್ರಮ ನೋಡುವಾಗ ಏಕಾಗ್ರತೆ ಇರುತ್ತದೆ. ಆದರೆ, ೧೦ ನಿಮಿಷದ ಪ್ರಾರ್ಥನೆಗೆ ಏಕಾಗ್ರತೆ ಇರಲಿ ಸಮಯವೂ ಇರುವುದಿಲ್ಲ ಏಕೆ?
ಮನರಂಜನೆ ಹಾಗೂ ಹೋಟೆಲ್, ಪಾರ್ಲರ್, ಮೊಬೈಲ್ & ಬಾರ್ ಗಳಲ್ಲಿ ಕಳೆಯುವ ಸಮಯಕ್ಕಿಂತ ಪ್ರಾರ್ಥನೆಗಾಗಿ ನೀಡುವ ಸಮಯ ಕಿರಿದಾಗಿರುತ್ತದೆ ಏಕೆ?
ಸಾವಿರಾರು ಪುಟಗಳಿರುವ ಕಥೆ ಕಾದಂಬರಿಗಳನ್ನು ಏಕಕಾಲದಲ್ಲಿ ಓದಿ ಮುಗಿಸುವ ಸಾಮರ್ಥ್ಯ ನಿಮ್ಮದಾಗಿದ್ದರೂ, ಧಾರ್ಮಿಕ ಗ್ರಂಥಗಳನ್ನು ಓದುವ ತಾಳ್ಮೆ ಇರುವುದಿಲ್ಲ ಏಕೆ?
ದೇವರೊಂದಿಗೆ ಎಂದರೆ, ನಿಮ್ಮ ಮನಸಾಕ್ಷಿಯೊಂದಿಗೆ ಮಾತನಾಡುವ ವ್ಯವಧಾನ ಕ್ಷೀಣಿಸುತ್ತಿದೆ ಏಕೆ?
ಈ ಪ್ರಶ್ನೆಗಳಿಗೆ ಉತ್ತರ ದೊರೆತರೆ, ನೀವು ನಿಮ್ಮ ಮನಸಾಕ್ಷಿಯೊಂದಿಗೆ ಉತ್ತಮವಾದ ಸಂವಾದಿಸುವ ಶಕ್ತಿ ಹೊಂದಿದ್ದೀರಿ ಹಾಗೂ ದೇವರು ನಿಮ್ಮೊಂದಿಗೆ ಸದಾ ಇರುತ್ತಾನೆ ಎಂದರ್ಥ.