Home / ಕವನ / ಕವಿತೆ / ನಗುವಿತ್ತು ಹೂವಂತ ಮಾತಿತ್ತು

ನಗುವಿತ್ತು ಹೂವಂತ ಮಾತಿತ್ತು

ಹಠಾತ್ತಾಗಿ ಬಂದ ಚಡಪಡಿಕೆ
ಅದ್ಹೇಕೋ ನಿನ್ನ ಪಾದಗಳು
ಒಮ್ಮೆಲೆ ನೆನಪಾದವು
ಪಾದಗಳ ಬಳಿ ಕುಳಿತು
ಸರಿರಾತ್ರಿ ಧ್ಯಾನಿಸಿದ ನೆನಪು

ಇಡೀ ದೇಹವನ್ನು ಉಂಡ ಮೇಲೆ
ಉಳಿದದ್ದೇನು??
ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ
ಕನಸು ನನಸು ಬೀಜ ಮೊರೆತದ
ಜೀವ ಮಿಡಿತದ ಸದ್ದು
ಕಿವಿಗೆ ಮಾತಾಡಿ ತೆರಳಿತು

ಪಾದಗಳ ಬಳಿ ಕುಳಿತು ಧ್ಯಾನಿಸಿದೆ
ಮಗು ಪುಟ್ಟು ಕಾಲುಗಳಿಂದ
ಹಿತವಾಗಿ ಮುಖಕ್ಕೆ ಒದೆಯುತ್ತಿತ್ತು ಕಿಲಕಿಲ
ನಗುತ್ತಿತ್ತು ,ಭೂಮಿ ಮಳೆಮಿಂದು ನಕ್ಕಂತೆ

ಮಗು ತನ್ನ ಮುಖದಲ್ಲಿ
ನನಗೆ ಕನ್ನಡಿ ಹಿಡಿದಿತ್ತು
ಪಾದಗಳ‌ ಬಳಿ ಕುಳಿತು ಶರಣಾದೆ

ಬೆಳಗೊಳದ ಬಾಹುಬಲಿ
ಕಲ್ಲಾಗಿ ಆಕಾಶದೆತ್ತರಕೆ ಬೆಳೆದಿದ್ದ
ಅವನ ಪಾದಗಳ ಬಳಿ ನಿಂತೆ
ಕುಳಿತೆ ಧ್ಯಾನಿಸಿದೆ ಮಲಗಿದೆ

ಆಗಲೂ ನೆನಪಾದದ್ದು
ನೀನು, ಮಗುವಿನ ಒದೆತ ತಿವಿತ
ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಅದು ಸಾಮಾನ್ಯವೇನಲ್ಲ??

ಭೂಮಿ ತಾಯಿಯ ಬಳಿ ಬಂದೆ
ಹೊಲದಲ್ಲಿ ಮಲಗಿದೆ, ಸ್ವಲ್ಪ ಹೊತ್ತು ನಡೆದೆ…
ಕೈಗಳಿಂದ ಮಣ್ಣ ಸ್ಪರ್ಶಿಸಿದೆ
ಮಣ್ಣಲ್ಲಿ ಆಕೆಯ ಪಾದಗಳು ಸಿಕ್ಕವು
ಅಲ್ಲೇ ಆಕೆಯ ಧ್ವನಿ ಇತ್ತು
ಬದುಕಿತ್ತು ಒಡಲಿತ್ತು
ದಶಕಗಳ ನಂತರ ಹೊಲದ ಮುಖ ನೋಡಿದೆ
ಬಾಲ್ಯ ಮರುಕಳಿಸಿತು
ಇದೇ ಹೊಲದಲ್ಲಿ ಎತ್ತುಗಳು ದುಡಿದಿದ್ದವು, ಅಪ್ಪನ ಬೆವರಿತ್ತು ನಗುವಿತ್ತು ಹೂವಂತ ಮಾತಿತ್ತು

ಇದೇ ಹೊಲದಲ್ಲಿ ಬೆಳೆದ ನವಣೆ ಜೋಳದ ತೆನೆಯ ಜೊತೆ ಆಟವಾಡಿ, ಹಣ್ಣು ತಿಂದು ನಕ್ಕಿದ್ದೆವು ಹಸಿಗಡಲೆ ಸುಟ್ಟು ಮುಕ್ಕಿದ್ದೆವು

ಹೊಲದ ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಹುಡುಗಾಟವಲ್ಲ
ಕಳೆದು ಹೋದ ತಾಯಿ, ಯೌವ್ವನದ ಪ್ರೇಯಸಿಯ ಜೊತೆ
ನಕ್ಕಂತೆ ಬಿಕ್ಕಿದಂತೆ
ಮತ್ತೆ ನಕ್ಕು ಜಾತ್ರೆ ಮುಗಿಸಿ
ಮರಳಿ ಬದುಕಿಗೆ ನಡೆದಂತೆ…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...