ನಗುವಿತ್ತು ಹೂವಂತ ಮಾತಿತ್ತು

ಹಠಾತ್ತಾಗಿ ಬಂದ ಚಡಪಡಿಕೆ
ಅದ್ಹೇಕೋ ನಿನ್ನ ಪಾದಗಳು
ಒಮ್ಮೆಲೆ ನೆನಪಾದವು
ಪಾದಗಳ ಬಳಿ ಕುಳಿತು
ಸರಿರಾತ್ರಿ ಧ್ಯಾನಿಸಿದ ನೆನಪು

ಇಡೀ ದೇಹವನ್ನು ಉಂಡ ಮೇಲೆ
ಉಳಿದದ್ದೇನು??
ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ
ಕನಸು ನನಸು ಬೀಜ ಮೊರೆತದ
ಜೀವ ಮಿಡಿತದ ಸದ್ದು
ಕಿವಿಗೆ ಮಾತಾಡಿ ತೆರಳಿತು

ಪಾದಗಳ ಬಳಿ ಕುಳಿತು ಧ್ಯಾನಿಸಿದೆ
ಮಗು ಪುಟ್ಟು ಕಾಲುಗಳಿಂದ
ಹಿತವಾಗಿ ಮುಖಕ್ಕೆ ಒದೆಯುತ್ತಿತ್ತು ಕಿಲಕಿಲ
ನಗುತ್ತಿತ್ತು ,ಭೂಮಿ ಮಳೆಮಿಂದು ನಕ್ಕಂತೆ

ಮಗು ತನ್ನ ಮುಖದಲ್ಲಿ
ನನಗೆ ಕನ್ನಡಿ ಹಿಡಿದಿತ್ತು
ಪಾದಗಳ‌ ಬಳಿ ಕುಳಿತು ಶರಣಾದೆ

ಬೆಳಗೊಳದ ಬಾಹುಬಲಿ
ಕಲ್ಲಾಗಿ ಆಕಾಶದೆತ್ತರಕೆ ಬೆಳೆದಿದ್ದ
ಅವನ ಪಾದಗಳ ಬಳಿ ನಿಂತೆ
ಕುಳಿತೆ ಧ್ಯಾನಿಸಿದೆ ಮಲಗಿದೆ

ಆಗಲೂ ನೆನಪಾದದ್ದು
ನೀನು, ಮಗುವಿನ ಒದೆತ ತಿವಿತ
ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಅದು ಸಾಮಾನ್ಯವೇನಲ್ಲ??

ಭೂಮಿ ತಾಯಿಯ ಬಳಿ ಬಂದೆ
ಹೊಲದಲ್ಲಿ ಮಲಗಿದೆ, ಸ್ವಲ್ಪ ಹೊತ್ತು ನಡೆದೆ…
ಕೈಗಳಿಂದ ಮಣ್ಣ ಸ್ಪರ್ಶಿಸಿದೆ
ಮಣ್ಣಲ್ಲಿ ಆಕೆಯ ಪಾದಗಳು ಸಿಕ್ಕವು
ಅಲ್ಲೇ ಆಕೆಯ ಧ್ವನಿ ಇತ್ತು
ಬದುಕಿತ್ತು ಒಡಲಿತ್ತು
ದಶಕಗಳ ನಂತರ ಹೊಲದ ಮುಖ ನೋಡಿದೆ
ಬಾಲ್ಯ ಮರುಕಳಿಸಿತು
ಇದೇ ಹೊಲದಲ್ಲಿ ಎತ್ತುಗಳು ದುಡಿದಿದ್ದವು, ಅಪ್ಪನ ಬೆವರಿತ್ತು ನಗುವಿತ್ತು ಹೂವಂತ ಮಾತಿತ್ತು

ಇದೇ ಹೊಲದಲ್ಲಿ ಬೆಳೆದ ನವಣೆ ಜೋಳದ ತೆನೆಯ ಜೊತೆ ಆಟವಾಡಿ, ಹಣ್ಣು ತಿಂದು ನಕ್ಕಿದ್ದೆವು ಹಸಿಗಡಲೆ ಸುಟ್ಟು ಮುಕ್ಕಿದ್ದೆವು

ಹೊಲದ ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಹುಡುಗಾಟವಲ್ಲ
ಕಳೆದು ಹೋದ ತಾಯಿ, ಯೌವ್ವನದ ಪ್ರೇಯಸಿಯ ಜೊತೆ
ನಕ್ಕಂತೆ ಬಿಕ್ಕಿದಂತೆ
ಮತ್ತೆ ನಕ್ಕು ಜಾತ್ರೆ ಮುಗಿಸಿ
ಮರಳಿ ಬದುಕಿಗೆ ನಡೆದಂತೆ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿನ ಜುಟ್ಟು
Next post ಉರುಳಿ ಅರಿವಿನ ಮೋರಿಯಲ್ಲಿ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…