ಕಟ್ಟಿದ್ದೇನು ಕುಣಿದಿದ್ದೇನು
ಸಿಂಗರಿಸಿದ್ದು ಅದೇನು!
ಒಂದೇ ದಿನದ ಮಂಗಕುಣಿತಕ್ಕೆ
ಹಡೆ ವೈಯಾರ ಅದೇನು!
ಆರತಿ ಬಂತು, ಅಕ್ಷತೆ ಬಿತ್ತು
ಉಘೇ ಉಘೇ ಜನ ಘೋಷ,
ನಂದೀಕೋಲು ನೂರು ಹಿಲಾಲು
ಕುಣಿತ ಕೇಕೆ ಆವೇಶ.
ಭಜನೆ ಮುಗಿದು ಮೈ ಬಸವಳಿದು
ಕಣ್ಣಿಗಿಳಿದಿದೆ ಮಂಪರು,
ಆಗಸೆ ಬಾಗಿಲಿಗೆ ಬಂದಿತು ತೇರು
ಮುಗಿಯಿತು ಹಬ್ಬದ ಜೋರು.
ಇಷ್ಟೇ ಎಲ್ಲಾ ತೇರಿನ ಕಥೆಯೂ
ಒಂದು ದಿನದ ಮೆರೆದಾಟ,
ಯಾಕೆ ಮೆರೆಯುವಿ ತಿಳಿಯದೆ ತಮ್ಮಾ
ನಿಲ್ಲಿಸು ಹುಸಿ ಕುಣಿದಾಟ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.