ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

ಚಿತ್ರ: ಜೋರ್‍ಗ ಬಂಟ್ರಾಕ್
ಚಿತ್ರ: ಜೋರ್‍ಗ ಬಂಟ್ರಾಕ್

‘ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿಯನ್ನು ಯಾರೂ ಅಲ್ಲಗಳೆಯಲಾರರು.  ಈ ಭಾಗ್ಯವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿದೆ.  ಉಚಿತಾನುಚಿತಗಳನ್ನು ಅರಿತು ಸಕಾಲದಲ್ಲಿ ಸೇವಿಸುವ ಶುಚಿರುಚಿಯ ಆಹಾರವು ನಮ್ಮ ಆರೋಗ್ಯಪಾಲನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಇದು ಸಾಮಾನ್ಯ ಅಭಿಪ್ರಾಯ ಮಾತ್ರವಲ್ಲದೇ ವೈದ್ಯಕೀಯ ಅಭಿಪ್ರಾಯವೂ ಹೌದು.

ಒಳ್ಳೆಯ ಆಹಾರವೇ ಒಳ್ಳೆಯ ಜೀವನ.  ಒಳ್ಳೆಯ ಜೀವನವೇ ದೀರ್ಘಾಯುರಾರೋಗ್ಯವನ್ನು ಪ್ರಾಪ್ತ ಮಾಡಿಕೊಡುತ್ತದೆ.  ನಮ್ಮ ದಿನನಿತ್ಯದ ಆಹಾರವು ವಿಟಮಿನ ಯುಕ್ತವಾಗಿರಬೇಕು.  ಇವು ನಮ್ಮ ಆರೋಗ್ಯದಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತವೆ.  ಕೆಲವು ಪ್ರಮುಖ ವಿಟಮಿನ್‌ಗಳ ಪಾತ್ರವನ್ನು ಇಲ್ಲಿ ವಿವರಿಸಲಾಗಿದೆ.

ವಿಟಮಿನ್ – ಎ

ಇದು ಬಣ್ಣಿವಿಲ್ಲದ ಎಣ್ಣೆಯಂತಹ ವಸ್ತು.  ಇದನ್ನು ದೇಹವು ಯಕೃತ್ [ಲಿವರ್‍]ನಲ್ಲಿ ಸಂಗ್ರಹಿಸಿಟ್ಟುಕೊಂಡು ಅಗತ್ಯ ಬಿದ್ದಾಗ ಉಪಯೋಗಿಸಿಕೊಳ್ಳುತ್ತದೆ.

ವಿಟಮಿನ್-ಎ, ಶರೀರದ ಕೆಲವು ಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಸೋಂಕು ನಿರೋಧಕ ವಿಟಮಿನ್ ಎಂದೇ ಹೆಸರು ಪಡೆದಿರುವ ಇದು, ಕಣ್ಣುಗಳಿಗೆ ಹೊಳಪನ್ನು, ಚರ್ಮಕ್ಕೆ ಮೃದುತ್ವವನ್ನು, ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಮತ್ತು ಮುಖಕ್ಕೆ ಸೌಂದರ್ಯವನ್ನೂ ಕೊಡುತ್ತದೆ.

ದಿನಂಪ್ರತಿ ಆರೋಗ್ಯವಂತ ಯುವಕರಿಗೆ ೨,೫೦೦ರಿಂದ ೩,೦೦೦ ಯೂನಿಟ್, ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ೩,೦೦೦ ರಿಂದ ೫,೦೦೦ ಯೂನಿಟ್ ವಿಟಮಿನ್-ಎ ಅವಶ್ಯಕ.

ವಿಟಮಿನೆ-ಎ ಕೊರತೆಯಾದರೆ ತಲೆದೋರುವ ಪ್ರಮುಖ ತೊಂದರೆಯೆಂದರೆ ರಾತ್ರಿ ಕುರುಡುತನ. ಸಕಾಲದಲ್ಲಿ ಇದನ್ನು ವಾಸಿಮಾಡಿದಿದ್ದರೆ ಕುರುಡಾಗಬಹುದು.

ದೇಹದಲ್ಲಿ ವಿಟಮಿನ-ಎ ಕೊರತೆಯಾದರೆ ಚರ್ಮದಲ್ಲಿ ಬೆವರು ಗ್ರಂಥಿಗಳು ಕ್ಷಯಿಸುವುದರಿಂದ, ಬೆವರುವುದು ಕಡಿಮೆಯಾಗುವುದು.  ಹುರುಪೆ ಮತ್ತು ಗುಳ್ಳೆಗಳು ಏಳುತ್ತವೆ.  ಕರುಳಿನ ಗ್ರಂಥಿಗಳು ಕ್ಷಯಿಸುವುದರಿಂದ ಜೀರ್ಣಕ್ರಿಯೆ ತಗ್ಗುತ್ತದೆ.  ಕೆಲವು ವೇಳೆ ಮೂತ್ರಕೋಶ ಮತ್ತು ಮೂತ್ರಪಿಂಡಗಳಲ್ಲಿ ಕಲ್ಲುಗಳು ಕೂಡಾ ಉಂಟಾಗಬಹುದು.

ಮೇಲಿನ ತೊಂದರೆಗಳು ಬರದಂತೆ ನೋಡಿಕೊಳ್ಳಬೇಕಾದರೆ ವಿಟಮಿನ-ಎ ಅಂಶವಿರುವ ಆಹಾರವನ್ನು ಸೇವಿಸಬೇಕು.  ವಿಟಮಿನ್-ಎ ಯು ಒಂದು ಪಿಂಟ್ ಹಾಲಿನಲ್ಲಿ ೨,೦೦೦ ಯೂನಿಟ್‌ಗಳು, ಒಂದು ಮೊಟ್ಟೆಯಲ್ಲಿ ೩೦೦ ಯೂನಿಟ್‌ಗಳು, ಒಂದು ಗ್ರಾಂ ಹಾಲಿಬಟ್ ಎಣ್ಣೆಯಲ್ಲಿ ೨೦,೦೦೦ ಯೂನಿಟ್‌ಗಳು ಮತ್ತು ಒಂದು ಗ್ರಾಂ ಕಾಡ್‌ಲಿವರ್‍ ಎಣ್ಣೆಯಲ್ಲಿ ೪೦೦ ರಿಂದ ೪,೦೦೦ ಯೂನಿಟ್‌ಗಳಷ್ಟಿರುತ್ತದೆ.

ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ನುಗ್ಗೆ ಸೊಪ್ಪು, ಮೂಲಂಗಿ ಸೊಪ್ಪು, ಬಸಲೆ ಸೊಪ್ಪು, ದಂಟಿನ ಸೊಪ್ಪು, ಮೆಂತ್ಯದ ಸೊಪ್ಪು, ಪುದೀನಾ ಸೊಪ್ಪು, ಎಲೆಕೋಸು, ಹಣ್ಣು, ಹಾಲು, ಮೊಟ್ಟೆ ಮುಂತಾದವುಗಳಲ್ಲಿ ವಿಟಮಿನ್-ಎ ಅಂಶವಿದೆ.

ವಿಟಮಿನ್-ಬಿ

ವಿಟಮಿನ್-ಬಿ ಒಂದು ವಸ್ತುವಾಗಿರದೇ ಹಲವು ಉಪಜೀವ ವಸ್ತುಗಳ ಮಿಶ್ರಣವಾಗಿದೆ.  ಇದರಲ್ಲಿ ಬಿ೧, ಬಿ೨, ಬಿ೩… ಎಂದು ಮುಂತಾಗಿ ೧೨ ಉಪಜೀವ ವಸ್ತುಗಳಿವೆ.

ನಮ್ಮ ನಿತ್ಯ ಜೀವನದಲ್ಲಿ ಇದರ ಪಾತ್ರ ಅತ್ಯಂತ ಮಹತ್ತ್ವದಾಗಿದೆ.  ಬಾಯಿಬಸಳೆ, ಪೆಲ್ಲಾಗ್ರ ರೋಗ, ನುರೇಸ್ಥೆನಿಯಾ, ಬೆರಿಬೆರೆ, ನರದೌರ್ಬಲ್ಯ, ತಲೆನೋವು, ಕೋಪ, ಏಕಾಗ್ರತೆ ಸಾಧಿಸದಿರುವುದು ಮುಂತಾದ ಉಪದ್ರವಗಳಿಗೆ ಈ ವಿಟಮಿನ್-ಬಿ ಕೊರತೆಯೇ ಮೂಲ ಕಾರಣವಾಗಿದೆ.

ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಬೇಕಾದರೆ ವಿಟಮಿನ್-ಬಿ ಅಂಶವಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.  ಅದು ಮೆಂತ್ಯ ಸೊಪ್ಪು, ಬಸಳೆ ಸೊಪ್ಪು, ದಂಟಿನ ಸೊಪ್ಪು, ಅಕ್ರೋಟ್, ಹಣ್ಣು, ಹಾಲು, ಮೀನು ತತ್ತಿಗಳಲ್ಲಿ ಯಥೇಚ್ಫವಾಗಿದೆ.  ಅಕ್ಕಿ, ತೌಡು, ಮೊಳಕೆ ಬಂದ ಬೇಳೆಕಾಳುಗಳಲ್ಲಿಯೂ ಅದರ ಅಂಶವಿದೆ.

ನಮ್ಮ ನಿತ್ಯಜೀವನದಲ್ಲಿ ನಾವು ಮಾಡುತ್ತಿರುವ ಒಂದು ದೊಡ್ಡ ತಪ್ಪೆಂದರೆ-ಧಾನ್ಯಗಳನ್ನು ಹಿಟ್ಟಿನ ಗಿರಣಿಗಳಿಗೆ ಕೊಂಡೊಯ್ದು ಹಿಟ್ಟು ಮಾಡಿಸಿಕೊಳ್ಳುವುದು.  ಹಿಟ್ಟಿನ ಗಿರಣಿಗಳಲ್ಲಿ ಹಿಟ್ಟು ಮಾಡಿಸುವುದರಿಂದ ಹೆಚ್ಚಿನ ಪ್ರಮಾಣದ ವಿಟಮಿನ್ ನಾಶವಾಗುತ್ತದೆ.  ಆದ್ದರಿಂದ ಧಾನ್ಯಗಳನ್ನು ಬೀಸುವ ಕಲ್ಲಿನಲ್ಲೇ ಬೀಸಿಕೊಳ್ಳುವುದು ಒಳ್ಳೆಯದು.

ಆಹಾರ ಪಚನವಾಗಲು ಸಹಕರಿಸುವ ವಿಟಮಿನ್-ಬಿ, ಚರ್ಮ ಮತ್ತು ಸ್ನಾಯುಗಳನ್ನು ಆರೋಗ್ಯಪೂರ್ಣವಾಗಿರಿಸುತ್ತದೆ.

ವಿಟಮಿನ್-ಸಿ

ವಿಟಮಿನ್ಸಿಯು ಇಡೀ ದೇಹವನ್ನು ಮೃದುವಾಗಿಸಿ ತಾರುಣ್ಯಾವಸ್ಥೆಯಲ್ಲಿ ಇಡುತ್ತದೆ.

ದಿನವೊಂದಕ್ಕೆ ಮಕ್ಕಳಿಗೆ ೩೦ ಮಿಲಿಗ್ರಾಂ, ದೊಡ್ಡವರಿಗೆ ೭೫ ಮಿಲಿಗ್ರಾಂ, ಗರ್ಭಿಣಿಯರಿಗೆ ೧೦೦ ಮಿಲಿಗ್ರಾಂ ಮತ್ತು ಬಾಣಂತಿಯರಿಗೆ ೧೫೦ ಮಿಲಿಗ್ರಾಂ ನಷ್ಟು ಬೇಕಾಗುವ ವಿಟಮಿನ್-ಸಿ ಕೊರತೆಯಾದರೆ ಸ್ಕರ್ವಿ ರೋಗವಲ್ಲದೇ ಅಕಾಲ ವೃದ್ಧಾಪ್ಯ ಮತ್ತು ಸಂಧಿವಾತ ರೋಗ ಕೂಡ ಬರುವ ಸಾಧ್ಯತೆಯಿದೆ.

ಮೇಲಿನ ತೊಂದರೆಗಳನ್ನು ಹೋಗಲಾಡಿಸಬೇಕಾದರೆ ವಿಟಮಿನ್-ಸಿ ಅಂಶವಿರುವ ಆಹಾರವನ್ನು ಸೇವಿಸಬೇಕು.

ವಿಟಮಿನ್-ಸಿಯು, ಒಂದು ಮಿಲಿ ಲೀಟರ್‍ ನಿಂಬೆರಸದಲ್ಲಿ ೦.೫ ಮಿಲಿಗ್ರಾಂನಷ್ಟಿರುತ್ತದೆ. ಹಸಿರು ತರಕಾರಿಗಳಲ್ಲಿ ಮತ್ತು ಸೊಪ್ಪು, ಹಾಲು, ಮಾಂಸ, ಮೀನು ಮುಂತಾದವುಗಳಲ್ಲಿ ವಿಟಮಿನ್-ಸಿಯ ಅಂಶವಿದೆ.  ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿದಾಗ ವಿಟಮಿನ-ಸಿಯ ಪ್ರಮಾಣ ಹೆಚ್ಚುತ್ತದೆ.

ಇದು ರಕ್ತನಾಳಗಳನ್ನು, ಹಲ್ಲು ಮತ್ತು ಎಲುಬುಗಳನ್ನು ಗಟ್ಟಿಯಾಗಿಸಿ ಆರೋಗ್ಯಪೂರ್ಣವಾಗಿರಿಸುತ್ತದೆ.

ವಿಟಮಿನ್-ಸಿಯಿಂದ ನೆಗಡಿ ಮಾತ್ರವಲ್ಲ, ಹೃದಯಾಘಾತ, ಕ್ಯಾನ್ಸರ್‍ ಮತ್ತು ಸ್ಕರ್ವಿ ರೋಗಗಳೂ ಹಿಡಿತಕ್ಕೆ ಬರಬಹುದು.  ನೈಟ್ರೊ ಅಸ್ಯೆಮನುಗಳ ರಾಸಾಯನಿಕ ಸಂಘಟನೆಯನ್ನು ಪ್ರತಿಬಂಧಿಸುವ ವಿಟಮಿನ್-ಸಿ, ಡಯಾಬಿಟೀಸ್ ರೋಗವನ್ನು ಕೂಡಾ ಉಪಶಮನಗೊಳಿಸುವಲ್ಲಿಯೂ ನೆರವಾಗಬಲ್ಲುದು.

ದೇಹದ ಚಟುವಟಿಕೆ ವಿಪರೀತವಾದಾಗ ಇಲ್ಲವೇ ಜ್ವರ ಬಂದಾಗ, ದೇಹವು ವಿಟಮಿನ್-ಸಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ.  ಆದ್ದರಿಂದ ನೆಗಡಿ ಅಥವಾ ಜ್ವರ ಬಂದಾಗ ವಿಟಮಿನ್-ಸಿ ಅಂಶವಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ವಿಟಮಿನ್-ಡಿ

ಬಾಯಿಯಿಂದ ಸೇವಿಸದೆಯೇ ದೇಹಕ್ಕೆ ಪೂರೈಸಬಹುದಾದ ವಿಟಮಿನ್‌ಗಳಲ್ಲಿ ವಿಟಮಿನ್-ಡಿಯೂ ಒಂದು.  ಮೈಯನ್ನು ಬಿಸಿಲಿಗೆ ಬಿಡುವುದರಿಂದ ಸೂರ್ಯ ಕಿರಣದಿಂದ ನಾವು ವಿಟಮಿನ್-ಡಿಯನ್ನು ಪಡೆಯಬಹುದು.

ಶರೀರದ ಮೂಳೆಗಳು ಶಕ್ತಿಯುತವಾಗಿ ಬೆಳೆಯಲು ಈ ವಿಟಮಿನ್ ಅತ್ಯವಶ್ಯ.  ದಿನವೊಂದಕ್ಕೆ ಸಣ್ಣಮಕ್ಕಳಿಗೆ ೪೦೦ ಯೂನಿಟ್‌ನಿಂದ ೮೦೦ ಯೂನಿಟ್, ವಯಸ್ಕರಿಗೆ ೪೦೦ ಯೂನಿಟ್ ಬೇಕಾಗುವ ವಿಟಮಿನ್-ಡಿಯ ಕೊರತೆಯಾದರೆ ಮಕ್ಕಳಲ್ಲಿ ರಿಕೆಟ್ಸ್ ಮತ್ತು ದೊಡ್ಡವರಲ್ಲಿ ಮೂಳೆಮೆತು ರೋಗ [ಆಸ್ಟಿಯೋಮಲೇಷಿಯಾ] ಕಾಣಿಸುತ್ತದೆ.

ಬಿಸಿಲಿಗೆ ಮೈಯೊಡ್ಡದೇ ಮನೆಯಲ್ಲಿ ಉಳಿಯುವ, ಹೊರಬಂದರೂ ಬಟ್ಟೆಯೊಳಗೇ ಅಡಗುವ ಮಹಿಳೆಯರು, ವಿಟಮಿನ್-ಡಿಯ ಕೊರತೆಯಿಂದ ಬಹುವಾಗಿ ಬಳಲುತ್ತಾರೆ.  ಇದರ ಕೊರತೆಯಿಂದ ಹಲ್ಲುಗಳು ಕೆಡುವುದಲ್ಲದೇ ದೇಹದ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುವುದು.

ಮೇಲಿನ ತೊಂದರೆಗಳನ್ನು ಹೋಗಲಾಡಿಸಲು ವಿಟಮಿನ್-ಡಿ ಅಂಶವಿರುವ ಆಹಾರವನ್ನು ಸೇವಿಸಬೇಕು.  ಇದು ಹಾಲು, ಬೆಣ್ಣೆ, ತುಪ್ಪಗಳಲ್ಲಲ್ಲದೆ ಕಾಡುಮೀನಿನ ಈಲಿಯ ಎಣ್ಣೆಯಲ್ಲಿ ೧೦೦ ಯೂನಿಟ್ ಮತ್ತು ೧ ಗ್ರಾಂ ಹಾಲಿಬಟ್ ಮೀನಿನ ಎಣ್ಣೆಯಲ್ಲಿ ೧,೦೦೦ ಯೂನಿಟ್ ನಷ್ಟಿರುತ್ತದೆ.

ಮಕ್ಕಳಿಗೆ ವಿಟಮಿನ್-ಡಿ ಅಭಾವ ಆಗದಂತೆ ನೋಡಿಕೊಳ್ಳಲು ಅವರಿಗೆ ಜೀವಸತ್ವವಿರುವ ಟಾನಿಕ್ ಮತ್ತು ಮೀನಿನ ಎಣ್ಣೆಯನ್ನು ಕೊಡಬೇಕು.  ಮಕ್ಕಳನ್ನು ಇಷ್ಟಬಂದಂತೆ ಆಟವಾಡಲು ಬಿಸಿಲಿಗೆ ಬಿಡಬೇಕು.

ವಿಟಮಿನ್-ಡಿಯು ಕರುಳು, ಎಲುಬು ಮತ್ತು ಹಲ್ಲುಗಳಲ್ಲಿ ಸುಣ್ಣ ಮತ್ತು ರಂಜಕಗಳು ರಕ್ತಗತವಾಗಲು ಸಹಕರಿಸುತ್ತದೆ.

ವಿಟಮಿನ್-ಇ

ಲೈಂಗಿಕ ಜೀವನಕ್ಕೆ ಯೋಗ್ಯವಾದ ವಯೋಮಾನದ ಸ್ತ್ರೀಯರಲ್ಲಿ ವಿಟಮಿನ್-ಇ ಸಾಕಷ್ಟಿರದಿದ್ದರೆ ಅವಳು ಗರ್ಭವತಿಯಾಗುವ ಸಂಭವವೂ ಕಡಿಮೆ.  ಇದು ಲೈಂಗಿಕ ಭಾಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.  ಇದರ ಕೊರತೆಯಿಂದ ಸಂತಾನೋತ್ಪತ್ತಿಯಾಗದಿರಬಹುದು.  ಆದ್ದರಿಂದ ಇದು ದೇಹಕ್ಕೆ ಅತ್ಯಗತ್ಯ.

ಇಡ್ಲಿ, ಗೋಧಿ, ತತ್ತಿ ಮುಂತಾದವುಗಳಲ್ಲಿ ವಿಟಮಿನ-ಇ ಯ ಅಂಶವಿದೆ.

ವಿಟಮಿನ್-ಕೆ

ಓಟ್, ಮೀನು, ಗೋಧಿಗಳಲ್ಲಿ ಇರುವ ಈ ವಿಟಮಿನ್ ಕೆ, ರಕ್ತ ಹೆಪ್ಪುಗಟ್ಟುವಲ್ಲಿ ಅತಿ ಉಪಯುಕ್ತ.

ವಿಟಮಿನ್-ಪಿ

ಇದು ವಿಟಮಿನ್-ಸಿಯೊಂದಿಗೆ ಕೆಲಸ ಮಾಡುತ್ತದೆ.  ವಿಟಮಿನ್-ಸಿ ಕಾರ್ಯಗತವಾಗಲು ಸಹಾಯಮಾಡುವ ಈ ವಿಟಮಿನ್, ರಕ್ತನಾಳಗಳನ್ನು ಆರೋಗ್ಯವಾಗಿರಿಸಲು ಬಹುಮುಖ್ಯ.

ಅತಿಯಾದರೆ ಅಮೃತವೂ ವಿಷ!

‘ಅತಿಯಾದರೆ ಅಮೃತವೂ ಕೂಡಾ ವಿಷ’ ವಾಗಬಲ್ಲದೆಂಬ ಗಾದೆ ಮಾತು, ವಿಟಮಿನ್‌ಗಳಿಗೂ ಅನ್ವಯಿಸುತ್ತದೆ.  ಲೇಖನದಲ್ಲಿ ಸೂಚಿಸಿದಂತೆ ಎಷ್ಟು ಬೇಕೋ ಅಷ್ಟೇ ಸಾಕು.  ಅತಿಯಾದರೆ ಅದೇ ಅಪಾಯಕ್ಕೆ ಎಡೆ ಮಾಡಿಕೊಡುವುದು!

ವಿಟಮಿನ್-ಬಿ ಹೆಚ್ಚಾಗಿ ಸೇವಿಸಿದರೆ ಕಾಲು ಮತ್ತು ಕೈಗಳ ನರಗಳು ಸತ್ವಹೀನವಾಗುತ್ತವೆ.  ಬಿ, ಸಿ ಮತ್ತು ಡಿ ವಿಟಮಿನ್ನುಗಳನ್ನು ದೀರ್ಘಕಾಲ ಅತಿಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರ ಪಿಂಡಗಳಿಗೆ ಹಾನಿಯಾಗುತ್ತದೆ ಹಾಗೂ ಮೂತ್ರಕೋಶದಲ್ಲಿ ಕಲ್ಲುಗಳೂ ರೂಪುಗೊಳ್ಳಬಹುದು!

ಸೂರ್ಯಕಿರಣಗಳಲ್ಲಿ ವಿಟಮಿನ್-ಡಿ ಸತ್ವವಿರುವುದರಿಂದ ಸೂರ್ಯಸ್ನಾನ ಇಂದು ಸಾಮಾನ್ಯವಾಗಿದೆ.  ಆದರೆ ಇತ್ತೀಚಿನ ವರದಿಗಳು ಸೂರ್ಯಸ್ನಾನ ಕ್ಯಾನ್ಸರ್‌ಗೆ ಪೂರಕ ಎಂದು ತಿಳಿಸಿವೆ.

ಹೆಚ್ಚು ವಿಟಮಿನುಗಳನ್ನು ಸೇವಿಸಿದರೆ ತಮ್ಮ ಮಕ್ಕಳು ಹೆಚ್ಚು ಚುರುಕಾಗುತ್ತಾರೆ, ಹಾಗೂ ಅವರ ಬುದ್ದಿಮತ್ತೆಯೂ ಹೆಚ್ಚಿ ಅವರ ಉಗ್ರವರ್ತನೆಯು ನಿಲ್ಲುವುದೆಂದು ಜನ ತಮ್ಮ ಮಕ್ಕಳಿಗೆ ವಿಟಮಿನ್ ಮಾತ್ರೆಗಳನ್ನು ಕೊಡುತ್ತಾರೆ.  ಆದರೆ ಇವುಗಳ ಸೇವನೆಯಿಂದ ಒಳಿತಿಗಿಂತ ಕೆಡುಕೇ ಹೆಚ್ಚಾಗುತ್ತದೆ.

ಆದ್ದರಿಂದ ವಿಟಮಿನ್‌ಗಳ ಹಿತಮಿತ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.  ಆದರೆ ಅದೇ ಅತಿಯಾಗಿ ಸೇವಿಸಿದರೆ ವಿಷವಾಗಿ ಪರಿಣಮಿಸಬಲ್ಲುದು ಎಂಬುದನ್ನು ತಿಳಿದಿರುವುದವಶ್ಯ.

ಈ ಕಡೆಯೂ ಸ್ವಲ್ಪ ಗಮನ ಕೊಡಿ

* ತರಕಾರಿಗಳನ್ನು ಹೆಚ್ಚುವುದಕ್ಕೆ ಮೊದಲು ಅವನ್ನು ಶುಚಿಯಾಗಿ ತೊಳೆಯಬೇಕು.  ಹೆಚ್ಚಿದ ಮೇಲೆ ತೊಳೆದರೆ ವಿಟಮಿನ್‌ಗಳು ತೊಳೆದ ನೀರಿನಲ್ಲಿ ಹೋಗುತ್ತವೆ.

* ಹಸಿರು ಕಾಯಿಪಲ್ಯಗಳನ್ನು ತೊಳೆಯುವಾಗ ಬೋರಾಕ್ಸ್‌ನಿಂದ ತೊಳೆದರೆ ಕ್ರಿಮಿಗಳು ನಾಶವಾಗುವುದಲ್ಲದೇ ಕಾಯಿಪಲ್ಯಗಳಿಗೆ ರುಚಿ ಹೆಚ್ಚಾಗುತ್ತದೆ.

* ತರಕಾರಿಗಳನ್ನು ಹೆಚ್ಚುವಾಗ ಬಹಳ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಡಿ.  ಈ ರೀತಿ ಮಾಡಿದರೆ ಅವುಗಳಲ್ಲಿನ ಲವಣಗಳು, ವಿಟಮಿನ್‌ಗಳು ಮತ್ತು ಇತರ ಆಹಾರಾಂಶಗಳು ನಾಶವಾಗುತ್ತವೆ.

* ಬೆಂದ ಆಹಾರದ ಆಹಾರಾಂಶದ ಮೌಲ್ಯ, ಹಸಿ ಆಹಾರಾಂಶದ ಮೌಲ್ಯಕ್ಕಿಂತಲೂ ಕಡಿಮೆ.  ಆದ್ದರಿಂದ ಯಾವ ಆಹಾರವನ್ನೂ ಹೆಚ್ಚಿಗೆ ಬೇಯಿಸುವ ಗೋಜಿಗೆ ಹೋಗಬೇಡಿ.  ಹೀಗೆ ಮಾಡಿದರೆ ಅದರಲ್ಲಿನ ಸತ್ವ ನಾಶವಾಗುತ್ತದೆ.

* ತರಕಾರಿಗಳನ್ನು ಬೇಯಿಸಲು ಎಷ್ಟು ಬೇಕೋ ಅಷ್ಟು ಪ್ರಮಾಣದ ನೀರನ್ನು ಮಾತ್ರ ಉಪಯೋಗಿಸಿ.  ಒಂದು ವೇಳೆ ನೀರು ಜಾಸ್ತಿಯಾದರೆ ಹೊರಚೆಲ್ಲಬೇಡಿ.  ಸಾರಿಗೆ ಬಳಸಿ.

* ತರಕಾರಿಗಳನ್ನು ಬೇಯಿಸುವಾಗ ಪ್ರೆಷರ್‍ ಕುಕ್ಕರ್‌ನಲ್ಲಿ ಬೇಯಿಸಬೇಕು ಅಥವಾ ಮುಚ್ಚಳ ಮುಚ್ಚಿ ಬೇಯಿಸಬೇಕು.  ಸೊಪ್ಪನ್ನು ಬೇಯಿಸುವಾಗ ಮಾತ್ರ ಮುಚ್ಚಳ ತೆರೆದಿರಲಿ.  ನಮಗೆ ಬೇಡವಾದ ಕೆಲವು ಅಂಶಗಳು ಹೋಗಿ ಹಸಿರು ಬಣ್ಣ ಕೆದೆಡದಿರಲು ಇದೊಂದು ಉತ್ತಮ ಉಪಾಯ.

* ತಾಮ್ರದ ಪಾತ್ರೆಗಳಲ್ಲಿ ಕುದಿಸುವುದಾಗಲಿ ಅಥವಾ ಶೇಖರಿಸಿಡುವುದಾಗಲಿ ಎಂದು ಮಾಡಬೇಡಿ.

* ಹಸಿರು ತರಕಾರಿಗಳನ್ನು ಬೇಯಿಸುವಾಗ ಎರಡು ತೊಟ್ಟು ನಿಂಬೆರಸ ಹಾಕಿದರೆ ತರಕಾರಿಗಳು ಕಂದು ಬಣ್ಣಕ್ಕೆ ತಿರುಗುವುದಿಲ್ಲ.

* ಸೊಪ್ಪು ಬೇಯುತ್ತಿರುವಾಗ ಕೊನೆಯಲ್ಲಿ ನಿಂಬೇ ಹಣ್ಣಿನ ರಸ ಅಥವಾ ಹುಣಸೇ ಹಣ್ಣಿನ ರಸವನ್ನು ಹಿಂಡುವುದರಿಂದ ಸೊಪ್ಪಿನ ಹಸಿರು ಬಣ್ಣ ಹೋದರೂ ಜೀವಸತ್ವಗಳು ಉಳಿಯುತ್ತವೆ.

* ಸೊಪ್ಪು, ಕಾಯಿಪಲ್ಯಗಳನ್ನು ಬೇಯಿಸುವಾಗ ಹೆಚ್ಚಾಗಿ ಸೌಟಿನಿಂದ ತಿರುವಬೇಡಿ.  ಗಾಳಿಯಲ್ಲಿನ ಆಮ್ಲಜನಕ ಸೊಪ್ಪು, ಕಾಯಿಪಲ್ಯಗಳ ಒಳನುಗ್ಗಿ ಅವುಗಳಲ್ಲಿರುವ ವಿಟಮಿನ್ನುಗಳನ್ನು ನಾಶಪಡಿಸುತ್ತದೆ.

* ಹಸಿ ತರಕಾರಿಗಳನ್ನು ಬೇಯಿಸಿದ ನೀರಿನಲ್ಲಿ ವಿಟಮಿನ್ ಜಾಸ್ತಿ ಇರುವುದರಿಂದ ಅದಕ್ಕೆ ಸ್ವಲ್ಪ ಮಜ್ಜಿಗೆಯನ್ನು ಬೆರೆಸಿ ಮಕ್ಕಳಿಗೆ ಆಹಾರವಾಗಿ ಕೊಡಿ.

* ಅಡಿಗೆಗೆ ಎಷ್ಟು ಬೇಕೋ ಅಷ್ಟು ಮಾತ್ರ ವನಸ್ಪತಿಯನ್ನು ಸ್ವಲ್ಪವಾಗಿ ಉಪಯೋಗಿಸಿ.  ಒಲೆಯಿಂದ ಕೆಳಗೆ ಇಳಿಸಿದ ಮೇಲೆ ಉಳಿದ ವಸ್ಪತಿಯನ್ನು ಹಾಕಿ ಚೆನ್ನಾಗಿ ಸೌಟಿನಿಂದ ಕಲಸಿ.  ಹೀಗೆ ಮಾಡುವುದರಿಂದ ಅದರಲ್ಲಿರುವ ‘ಎ’ ಅನ್ನಾಂಗ ಕೆಡದೇ ಉಳಿಯುತ್ತದೆ.

* ಅಕ್ಕಿಯನ್ನು ಕುದಿಸುವುದಕ್ಕಿಂತ ಮುಂಚೆ ಕೇವಲ ಒಂದೇ ಒಂದು ಸಲ ತೊಳೆದು ಅನ್ನಮಾಡಬೇಕೇ ವಿನಾ ಮೂರ್‍ನಾಲ್ಕು ಸಲ ತೊಳೆದು ಬಹಳ ಕಾಲ ನೀರಿನಲ್ಲಿ ನೆನೆಸಿಡಬೇಡಿ.

* ಬೆಂದ ತರಕಾರಿಗಳನ್ನು ಆದಷ್ಟೂ ಬೇಗ ಸೇವಿಸಿ. ಹಳತಾದಷ್ಟೂ ಅವುಗಳ ಪೋಷಕಾಂಶಗಳು ಕುಗ್ಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಕ – ವಚನ
Next post ಕನ್ನಡ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys