Home / ಕಥೆ / ಜನಪದ / ಸತ್ತೇನು ಗುಬ್ದಿ ?

ಸತ್ತೇನು ಗುಬ್ದಿ ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ.

ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸಕ್ಕಂಜಿಯೇ ಹಕ್ಕಿಗಳೆಲ್ಲ ಹಾರಿಹೋದವು, ಆದರೆ ಒಂದು ಗುಬ್ದಿ ಮಾತ್ರ ಹಾರಿ ಹೋಗದೆ, ಒಂದು ತೆನೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು. ಹೊಲದವನ ಬಾಯ ಬೆದರಿಕೆಗಾಗಲಿ, ಬಾರಕೋಲಿನ ಸಪ್ಪಳಕ್ಕಾಗಲಿ ಅದು ಮಿಸುಕಲಿಲ್ಲ; ಕವಣೆಗಲ್ಲಿಗೂ ಹಣಿಯಲಿಲ್ಲ. ಅಟ್ಟದಿಂದಿಳಿದು ಕಾವಲಿಗನು ಆ ಗುಬ್ದಿ ಕುಳಿತಲ್ಲಿಗೆ ಮೆಲ್ಲನೆ ಹೋಗಿ ಅದನ್ನು ಗಪ್ಪನೆ ಹಿಡಿದು ತಂದು, ಅದರ ಕಾಲಿಗೆ ದಾರಕಟ್ಟಿ ಅಟ್ಟದ ಕಾಲಿಗೆ
ಬಿಗಿದನು. ಆದರೂ ಅದು ಪಕ್ಕ ಬಿಚ್ಚಿ ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು ಕಾವಲಿಗನು ಕೇಳಿದನು – “ಸತ್ತೇಯೇನು ಗುಬ್ಬಿ?”
ಆ ಗುಬ್ದಿ ಹೇಳಿತು –

“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚಗೀ ಕಾಲಿನಲ್ಲಿ
ಜೋಕಾಲಿ ಆಡಹತ್ತಿದ್ದೇನೆ.
ನಾನೇಕೆ ಸಾಯುವೆನು ?”

ಹೊಲದವನು ಅದನ್ನು ಬಿಚ್ಚಿ ಕೊಂಡೊಯ್ದು ಹರಿಯುವ ಹಳ್ಳದಲ್ಲಿ ಒಗೆದನು, ಆಗಲೂ ಅದು ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು – “ಸತ್ತೆಯಾ ಗುಬ್ಬಿ” ಎಂದು ಕೇಳಿದನು. ಗುಬ್ಬಿ ಹೇಳಿತು –

“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳಕ್ಕೆ ಬಂದು ಈಸಾಡುತ್ತಿದ್ದೇನೆ.
ನಾನೇಕೆ ಸಾಯುವೆನು ?”

ಒಕ್ಕಲಿಗನು ಆ ಗುಬ್ಬಿಯನ್ನು ಊರಲ್ಲಿ ತೆಗೆದುಕೊಂಡು ಹೋಗಿ, ಗಾಣಿಗನ ಗಾಣದ ಗಾಲಿಯಲ್ಲಿ ಹಾಕಿದನು. ಮತ್ತೆಯೂ ಅದು ಫಡಫಡಿಸಿತು. ಕೇಳಿದನು-
“ಸತ್ತೆಯೇನು ಗುಬ್ಬಿ ?”
ತನ್ನ ದಾಟಿಯಲ್ಲಿಯೇ ಗುಬ್ಬಿ ಮರುನುಡಿಯಿತು.
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಿನಲ್ಲಿ ಈಸಾಡಿ
ಈಗ ಎಣ್ಣೆ ಹೂಸಿಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”

ಹೊಲದವನು ಗುಬ್ದಿಯನ್ನು ಮನೆಗೊಯ್ದು ಒಲೆಯಮೇಲಿನ ಸಳಮಳಿಸುವ ನೀರಿನ ಭಾಂಡೆಯಲ್ಲಿ ಚೆಲ್ಲಿದನು. ಅಲ್ಲಿಯೂ ಗುಬ್ಬಿಯ ಫಡಫಡಾಟ ನಡೆದೇ ಇತ್ತು. “ಸತ್ತೆಯಾ ಗುಬ್ದಿ” ಎಂದು ಕೇಳಿದನು. ಗುಬ್ದಿ ಹೇಳಿತು –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಇಲ್ಲಿ ಬಿಸಿಬಿಸಿ ನೀರಿನಿಂದ
ಎರಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”

ಗುಬ್ಬಿಯನ್ನು ಹೆಂಡತಿಯ ಕೈಗಿತ್ತು, ಇದನ್ನು ಕೊಯ್ದು ಅಡಿಗೆ ಮಾಡಲು ಹೊಲದವನು ತಿಳಿಸಿದನು. ಹೆಂಡತಿಯು ಮರುಕ್ಷಣದಲ್ಲಿ ಅಡಿಗೆಮಾಡಿ ಗಂಡನಿಗೆ ಉಣಬಡಿಸಿದಳು. ಉಂಡ ಬಳಿಕ ಹೊಟ್ಟೆಯಲ್ಲಿ ಫಡಫಡಿಸುತ್ತಿರುವ ಗುಬ್ಬಿಯನ್ನು ಕುರಿತು ಗಂಡನು ಕೇಳಿದನು –
“ಸತ್ತೆಯಾ ಗುಬ್ಬಿ ?”

ಮರುಕ್ಷಣದಲ್ಲಿಯೇ ಒಕ್ಕಲಿಗನು ಕಾರಿಕೊಂಡನು. ಅದರಲ್ಲಿ ಗುಬ್ಬಿ ಕಾಣಿಸಿ ಕೊಂಡಿತು. ಮತ್ತೆ ಫಡಫಡಿಸುತ್ತ –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದ ಕಾಲಿಗೆ ಜೋಕಾಲಿ ಆಡಿ
ಹಳ್ಳದ ತಿಳಿ ನೀರಿನಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಬಿಸಿಬಿಸಿ ನೀರಿನಿಂದ ಎರಕೊಂಡು
ಪಲ್ಲೆ ಮಾಡಿಸಿ ಉಂಡುಗಿಂಡು
ಹೊರಟಿದ್ದೇನೆ ನೋಡು.
ನಾನೇಕೆ ಸಾಯುವೆನು ?”

ಎನ್ನುತ್ತ ಬುರ್ರನೆ ಹಾರಿಹೋಯಿತು ಸಾವಿಲ್ಲದ ಗುಬ್ಬಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...