Home / ಕಥೆ / ಜನಪದ / ಸತ್ತೇನು ಗುಬ್ದಿ ?

ಸತ್ತೇನು ಗುಬ್ದಿ ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ.

ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸಕ್ಕಂಜಿಯೇ ಹಕ್ಕಿಗಳೆಲ್ಲ ಹಾರಿಹೋದವು, ಆದರೆ ಒಂದು ಗುಬ್ದಿ ಮಾತ್ರ ಹಾರಿ ಹೋಗದೆ, ಒಂದು ತೆನೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು. ಹೊಲದವನ ಬಾಯ ಬೆದರಿಕೆಗಾಗಲಿ, ಬಾರಕೋಲಿನ ಸಪ್ಪಳಕ್ಕಾಗಲಿ ಅದು ಮಿಸುಕಲಿಲ್ಲ; ಕವಣೆಗಲ್ಲಿಗೂ ಹಣಿಯಲಿಲ್ಲ. ಅಟ್ಟದಿಂದಿಳಿದು ಕಾವಲಿಗನು ಆ ಗುಬ್ದಿ ಕುಳಿತಲ್ಲಿಗೆ ಮೆಲ್ಲನೆ ಹೋಗಿ ಅದನ್ನು ಗಪ್ಪನೆ ಹಿಡಿದು ತಂದು, ಅದರ ಕಾಲಿಗೆ ದಾರಕಟ್ಟಿ ಅಟ್ಟದ ಕಾಲಿಗೆ
ಬಿಗಿದನು. ಆದರೂ ಅದು ಪಕ್ಕ ಬಿಚ್ಚಿ ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು ಕಾವಲಿಗನು ಕೇಳಿದನು – “ಸತ್ತೇಯೇನು ಗುಬ್ಬಿ?”
ಆ ಗುಬ್ದಿ ಹೇಳಿತು –

“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚಗೀ ಕಾಲಿನಲ್ಲಿ
ಜೋಕಾಲಿ ಆಡಹತ್ತಿದ್ದೇನೆ.
ನಾನೇಕೆ ಸಾಯುವೆನು ?”

ಹೊಲದವನು ಅದನ್ನು ಬಿಚ್ಚಿ ಕೊಂಡೊಯ್ದು ಹರಿಯುವ ಹಳ್ಳದಲ್ಲಿ ಒಗೆದನು, ಆಗಲೂ ಅದು ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು – “ಸತ್ತೆಯಾ ಗುಬ್ಬಿ” ಎಂದು ಕೇಳಿದನು. ಗುಬ್ಬಿ ಹೇಳಿತು –

“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳಕ್ಕೆ ಬಂದು ಈಸಾಡುತ್ತಿದ್ದೇನೆ.
ನಾನೇಕೆ ಸಾಯುವೆನು ?”

ಒಕ್ಕಲಿಗನು ಆ ಗುಬ್ಬಿಯನ್ನು ಊರಲ್ಲಿ ತೆಗೆದುಕೊಂಡು ಹೋಗಿ, ಗಾಣಿಗನ ಗಾಣದ ಗಾಲಿಯಲ್ಲಿ ಹಾಕಿದನು. ಮತ್ತೆಯೂ ಅದು ಫಡಫಡಿಸಿತು. ಕೇಳಿದನು-
“ಸತ್ತೆಯೇನು ಗುಬ್ಬಿ ?”
ತನ್ನ ದಾಟಿಯಲ್ಲಿಯೇ ಗುಬ್ಬಿ ಮರುನುಡಿಯಿತು.
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಿನಲ್ಲಿ ಈಸಾಡಿ
ಈಗ ಎಣ್ಣೆ ಹೂಸಿಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”

ಹೊಲದವನು ಗುಬ್ದಿಯನ್ನು ಮನೆಗೊಯ್ದು ಒಲೆಯಮೇಲಿನ ಸಳಮಳಿಸುವ ನೀರಿನ ಭಾಂಡೆಯಲ್ಲಿ ಚೆಲ್ಲಿದನು. ಅಲ್ಲಿಯೂ ಗುಬ್ಬಿಯ ಫಡಫಡಾಟ ನಡೆದೇ ಇತ್ತು. “ಸತ್ತೆಯಾ ಗುಬ್ದಿ” ಎಂದು ಕೇಳಿದನು. ಗುಬ್ದಿ ಹೇಳಿತು –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಇಲ್ಲಿ ಬಿಸಿಬಿಸಿ ನೀರಿನಿಂದ
ಎರಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”

ಗುಬ್ಬಿಯನ್ನು ಹೆಂಡತಿಯ ಕೈಗಿತ್ತು, ಇದನ್ನು ಕೊಯ್ದು ಅಡಿಗೆ ಮಾಡಲು ಹೊಲದವನು ತಿಳಿಸಿದನು. ಹೆಂಡತಿಯು ಮರುಕ್ಷಣದಲ್ಲಿ ಅಡಿಗೆಮಾಡಿ ಗಂಡನಿಗೆ ಉಣಬಡಿಸಿದಳು. ಉಂಡ ಬಳಿಕ ಹೊಟ್ಟೆಯಲ್ಲಿ ಫಡಫಡಿಸುತ್ತಿರುವ ಗುಬ್ಬಿಯನ್ನು ಕುರಿತು ಗಂಡನು ಕೇಳಿದನು –
“ಸತ್ತೆಯಾ ಗುಬ್ಬಿ ?”

ಮರುಕ್ಷಣದಲ್ಲಿಯೇ ಒಕ್ಕಲಿಗನು ಕಾರಿಕೊಂಡನು. ಅದರಲ್ಲಿ ಗುಬ್ಬಿ ಕಾಣಿಸಿ ಕೊಂಡಿತು. ಮತ್ತೆ ಫಡಫಡಿಸುತ್ತ –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದ ಕಾಲಿಗೆ ಜೋಕಾಲಿ ಆಡಿ
ಹಳ್ಳದ ತಿಳಿ ನೀರಿನಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಬಿಸಿಬಿಸಿ ನೀರಿನಿಂದ ಎರಕೊಂಡು
ಪಲ್ಲೆ ಮಾಡಿಸಿ ಉಂಡುಗಿಂಡು
ಹೊರಟಿದ್ದೇನೆ ನೋಡು.
ನಾನೇಕೆ ಸಾಯುವೆನು ?”

ಎನ್ನುತ್ತ ಬುರ್ರನೆ ಹಾರಿಹೋಯಿತು ಸಾವಿಲ್ಲದ ಗುಬ್ಬಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...