Home / ಕಥೆ / ಜನಪದ / ಗಂಡ ಹೆಂಡಿರ ಕದನ

ಗಂಡ ಹೆಂಡಿರ ಕದನ

ಗಂಡ ಹೆಂಡಿರ ಕದನನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ ಸಾಗಿಯೇ ಬಂದಿತ್ತು. ಆದರೆ ಹಲವು ಸಾರೆ ಅವರಲ್ಲಿ ವಿರಸಪ್ರಸಂಗಗಳು ಬರುತ್ತಲೆ ಅವರಲ್ಲಿ ಬಾಯಿಗೆ ಬಾಯಿ, ಕೈಗೆಕೈ ಹತ್ತಿ ಕದನಗಳಾಗುತ್ತಿದ್ದವು. ಆದರೆ ಗಂಡಹೆಂಡಿರ ಜಗಳ ಉಂಡು ಮಲಗುವವರೆಗಷ್ಟೇ ಅಲ್ಲವೇ ?

ಬಾಯಿಗೆ ಬಾಯಿ ಹತ್ತಿ ಜಗಳಾಡಿದ್ದು ಸಾಕಾಗದೆ, ನನ್ನೀಸಾಹೇಬನು ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಒಳಿತಾಗಿ ಥಳಿಸಬೇಕೆಂದು, ಒಂದು ಬಡಿಗೆಯತ್ತಿ ಆಕೆಯ ಮೈಮುಟ್ಟಹೋಗಿ ಹೊಡೆಯಲನುವಾದನು. ಅಷ್ಣರಲ್ಲಿ ಹೆಂಡತಿ ಆತನನ್ನು ಎದುರಿಸಿ ಆತನ ಕೈಯೊಳಗಿನ ಬಡಿಗೆಯನ್ನು ನಿರಾಯಾಸವಾಗಿ ಕಸಿದುಕೊಂಡು ಜಂತಿಯಲ್ಲಿ ತುರುಕಿಬಿಡುವಳು. ಅದು ಕುಳ್ಳನಾದ ನನ್ನೀ ಸಾಹೇಬನಿಗೆ ನಿಲುಕದಂತಾಗುವದು. ಆ ಕಾರಣದಿಂದ ಅವರ ಜಗಳವು ಮೊಂಡವಾಗಿಬಿಡುವದು.

ಒಮ್ಮೊಮ್ಮೆ ಬಡೇಮಾನಿಗೆ ಸಿಟ್ಟು ಬಂದಾಗ ಆಕೆ ಬಾಗಿಲಿಕ್ಕಿ ಗಂಡನನ್ನು ಅದೇ ಬಡಿಗೆಯಿಂದ ಬಡಿಯುವಳು. ಹೆಂಡತಿ ಬಡೆಯುವಳೆಂದರೂ ಗಂಡನ ಬಾಯ ಅಬ್ಬರವೇ ಹೆಚ್ಚು. ಅದನ್ನು ಕೇಳಿದವರಿಗೆ ಅನಿಸುವುದು – “ಗಂಡನೇ ಬಾಗಿಲು ಹಾಕಿ ಹೆಂಡತಿಯನ್ನು ಜಿಗಿಜಿಗಿದು ಬಡಿಯುತ್ತಿದ್ದಾನೆ. ಅಂತೆಯೇ ದನಿ ತೇಕುತ್ತದೆ.”

ಹೆಂಡತಿ ಎಡಗೈಯಿಂದ ಗಂಡನ ರಟ್ಟೆಹಿಡಿದು ಮಗ್ಗುಲಿಗೆ ನಿಲ್ಲಿಸಿ, ಬೆನ್ನ ಮೇಲೆ ಬಡಿಗೆಯೇಟು ಹಾಕುವಳು. ಇನ್ನೇನು ಏಟು ಬೀಳುವುದಿನ್ನು ಎನ್ನುವ ಕ್ಷಣದಲ್ಲಿ – “ಎಷ್ಟಿರಬೇಕು ನಿನ್ನ ಸೊಕ್ಕು” ಎಂದು ಚೀರುವನು. ಅದು ಮುಗಿಯುವಷ್ಟರಲ್ಲಿ ಬಡಿಗೆಯೇಟಿನ ಸಪ್ಪಳ ! ಆಮೇಲೆ – “ನಿನ್ನ ಜೀವ ಉಳಿಸುವದಿಲ್ಲ ಇನ್ನು” ಎಂದು ಗುಡುಗುವನು. ತರುವಾಯ ಇನ್ನೊಂದು ಏಟು. ಅನಂತರ – ನಿನ್ನನ್ನು ಕೊಂದು ಹಾಕಿದರೂ ನನ್ನ ಸಿಟ್ಟು ಇಳಿಯದು” ಎನ್ನುತ್ತ ಬೇರೊಂದು ಏಟು ತಿನ್ನುವನು.

ಬಾಗಿಲು ಹಾಕಿಕೊಂಡಿರುವದರಿಂದ ಅವರ ಬಡಿದಾಟ – ಚೀರಾಟಗಳನ್ನು ಕೇಳಿ, ನೆರೆಹೊರೆಯವರು ನೆರೆಯುತ್ತಿದ್ದರೂ ಅವರನ್ನು ಬಿಡಿಸುವುದು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ತುಸು ಹೊತ್ತು ನಿಂತುಕೊಂಡು – “ನನ್ನೀಸಾಹೇಬನು ಹಿಡಿಯಾಳು ಆಗಿದ್ದರೂ ಅವನಿಗೆ ಸಿಟ್ಟು ಬಂದಾಗ ಯಾರಿಗೂ ಆಟೋಪವಲ್ಲ. ಹೆಂಡತಿಗೆ ಸಾಯುವಂತೆ ಹೊಡೆಯುತ್ತಾನೆ” ಎನ್ನುತ್ತ ಸಾಗಿ ಹೋಗುವರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...