ಶಿವರಾತ್ರಿ – ಪಾರಣೆ

ಶಿವರಾತ್ರಿ – ಪಾರಣೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಗಂಡನು ಶಿವರಾತ್ರಿಯ ದಿನ ಉಪವಾಸ ಮಾಡುವನೆಂದು ತಿಳಿದು ಹೆಂಡತಿ ತಾನೂ ಉಪವಾಸ ಮಾಡುವುದನ್ನು ನಿರ್ಧರಿಸಿದಳು. ಉಪವಾಸವೆಂದರೂ ಹಳ್ಳಿಯಲ್ಲಿ ಗೆಣಸು, ಬಾಳೆಹಣ್ಣು, ಕಜ್ಜೂರಿ, ಸೇಂಗಾ ತಿನ್ನುವುದು ವಾಡಿಕೆಯಾಗಿದೆ. ಆ ಪ್ರಕಾರ ಗಂಡ ಹೆಂಡಿರು ಸಾಯಂಕಾಲದಲ್ಲಿ ಫಲಾಹಾರ ಮಾಡಿದರು. ಮರುದಿನ ಹೊತ್ತು ಹೊರಡುವ ವೇಳೆಗೆ ಪಾರಣೆ. ಅದಕ್ಕಾಗಿ ಹಿಟ್ಟು, ಬೇಳೆ, ಬೆಲ್ಲ, ಅಕ್ಕಿಗಳನ್ನು ಸಾವರಿಸಿಟ್ಟಳು.

ಶಿವರಾತ್ರಿಯದಿನ ಇಡಿಯರಾತ್ರಿ ಮಹಾದೇವನ ಗುಡಿಯಲ್ಲಿ ನಡೆಯುವ ಭಜನೆಯಲ್ಲಿ ಭಾಗವಹಿಸಿಲು ಗಂಡನು ಹೊರಟನು “ನೀನೂ ಗುಡಿಗೆ ಬಂದುಬಿಡು ನನ್ನೊಡನೆ. ಭಜನೆ ಕೇಳುವಿಯಂತೆ. ಸಾಕಷ್ಟು ಹೆಣ್ಣು ಮಕ್ಕಳು ಬಂದಿರುತ್ತಾರೆ” ಎಂದು ಹೆಂಡತಿಗೆ ಹೇಳಲು, ಆಕೆ ಗಂಡನ ಬಿಡೆಯಕ್ಕಾಗಿ ಗುಡಿಗೆ ಹೋದಳು.

ಭಜನೆ ಆರಂಭವಾಗಿ ಒಳ್ಳೆಯ ಭರಕ್ಕೆ ಬರತೊಡಗಿತ್ತು. ಅಂಥ ಪ್ರಸಂಗದಲ್ಲಿ ಆಕೆಯ ಮನಸ್ಸು ಮನೆಯತ್ತ ಎಳೆಯತೊಡಗಿತು. ಬೇಕಾದಷ್ಟು ಫಲಾಹಾರ ಮಾಡಿದ್ದರೂ ಆಕೆಗೆ ಉಂಡಷ್ಟು ತೃಪ್ತಿಯಾಗಿರಲಿಲ್ಲ. ಹಸಿವೆಯೆನಿಸಹತ್ತಿದ್ದರಿಂದ ಮನೆಗೆ ಹೋಗಿ, ಏನಾದರೂ ಮಾಡಿಕೊಂಡು ತಿಂದು ಮಲಗಬೇಕೆಂದು ಯೋಚಿಸಿದಳು. “ಗಂಡನಂತೂ ಭಜನೆಯಲ್ಲಿ ಭಾಗಿಯಾಗಿದ್ದರಿಂದ ಅಡ್ಡಹೊತ್ತಿನಲ್ಲಿ ಮನೆಗೆ ಬರುವಂತಿಲ್ಲ. ಆದ್ದರಿಂದ ನನ್ನ ಉದ್ದೇಶವು ನಿರ್ಬಾಧವಾಗಿ ನೆರವೇರುತ್ತದೆ” – ಎಂದು ಎದ್ದು ಮನೆಯ ಹಾದಿ ಹಿಡಿದಳು. ಮನೆಗೆ ಬಂದವಳೇ ಒಲೆಹೊತ್ತಿಸಿ, ಭಾಂಡೆಯಲ್ಲಿ ಸಟ್ಟುಗವನ್ನು ಅಟ್ಟು, ಕೋಣಮಗಿಯಲ್ಲಿ ಆರಹಾಕಿದಳು. ತಾಬಾಣದಲ್ಲಿ ಅಷ್ಟಷ್ಟು ತೆಗೆದುಕೊಂಡು ತಿಂದರಾಯಿತೆಂದು. ತಾಬಾಣ ತೆಗೆದುಕೊಳ್ಳುವಷ್ಟರಲ್ಲಿ ಗುಡಿಯಿಂದ ಗಂಡ ಬಂದು. ಬಾಗಿಲು ತೆಗೆಯೆಂದು ಕೂಗಿದನು. ಹೆಂಡತಿ ಲಗುಬಗೆಯಿಂದ ಅದೆಲ್ಲವನ್ನೂ ಮುಚ್ಚಿಟ್ಟು ದಡದಡನೆ ಬಾಗಿಲಿಗೆ ಬಂದು ಕದ ತೆರೆದಳು.

“ಗುಡಿಯಿಂದ ತೀವ್ರವೇ ಬಂದುಬಿಟ್ಟೆಯಲ್ಲ ! ಏಕೆ ?” ಎಂದು ಕೇಳಿದನು ಗಂಡ.

ನನಗೇನು ತಿಳಿಯುವದೇ – ಹೊಳೆಯುವದೇ ? ಆದ್ದರಿಂದ ಬೇಸರವೆನಿಸಿತು. ಓಡಿ ಮನೆಗೆ ಬಂದೆ.”

“ಒಳ್ಳೆಯದೇ ಆಯಿತು. ಮಲಗಿಕೊಂಡುಬಿಡೋಣ ಹಾಗಾದರೆ” ಎಂದು ಗಂಡನು ಮಲಗುವದಕ್ಕೆ ಅಣಿಯಾದನು.

“ಅನಕಾ ಒಂದು ಕಥೇಯನ್ನಾದರೂ ಹೇಳಿರಿ” ಎಂದಳು ಹೆಂಡತಿ.

“ನಿದ್ದೆಯ ಹೊತ್ತಿನಲ್ಲಿ ಕಥೆ ಕೇಳಬೇಕನ್ನುವಳಲ್ಲ” ಎಂದು, ಬೇಸರದಿಂದ ಎಂಥದೋ ಕತೆಯನ್ನು ಹೇಳಲು ಆರಂಭಿಸಿದನು ಗಂಡ.

“ಕತ್ತಲದಾಗ ಕಡೋಡಿ, ಕೊಣಮಗ್ಯಾಗ ತೊಡೋಡಿ, ಸುಮ್ಮನೆ ಮನಗ ಬಿದ್ದೋಡಿ” ಎಂದು ಚೇಷ್ಟೆಯಿಂದಾಡಿದ ಲಲ್ಲೆಯನ್ನು ಕೇಳಿ ಹೆಂಡತಿ ಕಕ್ಕಾ ವಿಕ್ಕಿಯಾದಳು. “ಇವನಿಗೆ ಗೊತ್ತಾಗದಂತೆ ಮಾಡಿದ್ದೆಲ್ಲ ತಿಳಿದೇ ಬಿಟ್ಟಿದೆಯಲ್ಲ” ಎನ್ನುತ್ತ ತಾನು ಮಾಡಿದ್ದನ್ನೆಲ್ಲ ವಿವರಿಸಿದಳು-

“ಸುಳ್ಳೇಕೆ ಹೇಳಲಿ ? ಭಜನೆ ಕೇಳಬೇಕೆಂದರೆ ಹಸಿವೆ ಮನೆಯತ್ತ ಎಳೆದುತಂದು ಸಜ್ಜಿಗೆ ಮಾಡಿಸಿತು. ನೀವು ಬರುವಷ್ಟರಲ್ಲಿ ತಿಂದುಮುಗಿಸಿ, ಉಪವಾಸ ಮಾಡಿದವರಂತೆಯೇ ಮಲಗಿಬಿಟ್ಟು, ನೀವು ಬಂದಾಗ ಬಾಗಿಲು ತೆರೆಯಬೇಕೆಂದು ಯೋಚಿಸಿದ್ದೆ. ಆದರೆ ನಾನು ತಾಬಾಣ ಸಾವರಿಸುವಷ್ಟರಲ್ಲಿ ನೀವು ಬಂದೇ ಬಿಟ್ಟಿದ್ದರಿಂದ, ಮಾಡಿದ್ದನ್ನೆಲ್ಲ ಮುಚ್ಚಿಟ್ಟು ಓಡಿಬಂದು ಬಾಗಿಲು ತೆರೆದೆ, ನನ್ನದೇನಿದೆ ತಪ್ಪು ? ಹಸಿವೆ ತಾಳದೆ ಹೀಗೆ ಮಾಡಿದೆ. ನಿಮಗೆಲ್ಲ ತಿಳಿದೇ ಬಿಟ್ಟಿದೆಯಲ್ಲ ? ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ” ಎಂದು ವಿನಯದಿಂದ ಕೇಳಿಕೊಂಡಳು.

ಗಂಡನು, ಅಂದು ರಾತ್ರಿ ಹೆಂಡತಿಯು ಮಾಡಿದ ಅಚಾತುರ್ಯವನ್ನೂ, ಮರುದಿನ ಬೆಳಗಾದ ಬಳಿಕ ಆಕೆ ಮಾಡಿದ ಸಜ್ಜಗೆಯನ್ನೂ ಆಕೆಯ ವಿನಂತಿಯನ್ನು ಮನ್ನಿಸಿ ಹೊಟ್ಟೆಯಲ್ಲಿ ಹಾಕಿಕೊಂಡನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾರ್ಥಿಗಳು
Next post ಮಿಂಚುಳ್ಳಿ ಬೆಳಕಿಂಡಿ – ೨೮

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…