Home / ಕಥೆ / ಜನಪದ / ಶಿವರಾತ್ರಿ – ಪಾರಣೆ

ಶಿವರಾತ್ರಿ – ಪಾರಣೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಗಂಡನು ಶಿವರಾತ್ರಿಯ ದಿನ ಉಪವಾಸ ಮಾಡುವನೆಂದು ತಿಳಿದು ಹೆಂಡತಿ ತಾನೂ ಉಪವಾಸ ಮಾಡುವುದನ್ನು ನಿರ್ಧರಿಸಿದಳು. ಉಪವಾಸವೆಂದರೂ ಹಳ್ಳಿಯಲ್ಲಿ ಗೆಣಸು, ಬಾಳೆಹಣ್ಣು, ಕಜ್ಜೂರಿ, ಸೇಂಗಾ ತಿನ್ನುವುದು ವಾಡಿಕೆಯಾಗಿದೆ. ಆ ಪ್ರಕಾರ ಗಂಡ ಹೆಂಡಿರು ಸಾಯಂಕಾಲದಲ್ಲಿ ಫಲಾಹಾರ ಮಾಡಿದರು. ಮರುದಿನ ಹೊತ್ತು ಹೊರಡುವ ವೇಳೆಗೆ ಪಾರಣೆ. ಅದಕ್ಕಾಗಿ ಹಿಟ್ಟು, ಬೇಳೆ, ಬೆಲ್ಲ, ಅಕ್ಕಿಗಳನ್ನು ಸಾವರಿಸಿಟ್ಟಳು.

ಶಿವರಾತ್ರಿಯದಿನ ಇಡಿಯರಾತ್ರಿ ಮಹಾದೇವನ ಗುಡಿಯಲ್ಲಿ ನಡೆಯುವ ಭಜನೆಯಲ್ಲಿ ಭಾಗವಹಿಸಿಲು ಗಂಡನು ಹೊರಟನು “ನೀನೂ ಗುಡಿಗೆ ಬಂದುಬಿಡು ನನ್ನೊಡನೆ. ಭಜನೆ ಕೇಳುವಿಯಂತೆ. ಸಾಕಷ್ಟು ಹೆಣ್ಣು ಮಕ್ಕಳು ಬಂದಿರುತ್ತಾರೆ” ಎಂದು ಹೆಂಡತಿಗೆ ಹೇಳಲು, ಆಕೆ ಗಂಡನ ಬಿಡೆಯಕ್ಕಾಗಿ ಗುಡಿಗೆ ಹೋದಳು.

ಭಜನೆ ಆರಂಭವಾಗಿ ಒಳ್ಳೆಯ ಭರಕ್ಕೆ ಬರತೊಡಗಿತ್ತು. ಅಂಥ ಪ್ರಸಂಗದಲ್ಲಿ ಆಕೆಯ ಮನಸ್ಸು ಮನೆಯತ್ತ ಎಳೆಯತೊಡಗಿತು. ಬೇಕಾದಷ್ಟು ಫಲಾಹಾರ ಮಾಡಿದ್ದರೂ ಆಕೆಗೆ ಉಂಡಷ್ಟು ತೃಪ್ತಿಯಾಗಿರಲಿಲ್ಲ. ಹಸಿವೆಯೆನಿಸಹತ್ತಿದ್ದರಿಂದ ಮನೆಗೆ ಹೋಗಿ, ಏನಾದರೂ ಮಾಡಿಕೊಂಡು ತಿಂದು ಮಲಗಬೇಕೆಂದು ಯೋಚಿಸಿದಳು. “ಗಂಡನಂತೂ ಭಜನೆಯಲ್ಲಿ ಭಾಗಿಯಾಗಿದ್ದರಿಂದ ಅಡ್ಡಹೊತ್ತಿನಲ್ಲಿ ಮನೆಗೆ ಬರುವಂತಿಲ್ಲ. ಆದ್ದರಿಂದ ನನ್ನ ಉದ್ದೇಶವು ನಿರ್ಬಾಧವಾಗಿ ನೆರವೇರುತ್ತದೆ” – ಎಂದು ಎದ್ದು ಮನೆಯ ಹಾದಿ ಹಿಡಿದಳು. ಮನೆಗೆ ಬಂದವಳೇ ಒಲೆಹೊತ್ತಿಸಿ, ಭಾಂಡೆಯಲ್ಲಿ ಸಟ್ಟುಗವನ್ನು ಅಟ್ಟು, ಕೋಣಮಗಿಯಲ್ಲಿ ಆರಹಾಕಿದಳು. ತಾಬಾಣದಲ್ಲಿ ಅಷ್ಟಷ್ಟು ತೆಗೆದುಕೊಂಡು ತಿಂದರಾಯಿತೆಂದು. ತಾಬಾಣ ತೆಗೆದುಕೊಳ್ಳುವಷ್ಟರಲ್ಲಿ ಗುಡಿಯಿಂದ ಗಂಡ ಬಂದು. ಬಾಗಿಲು ತೆಗೆಯೆಂದು ಕೂಗಿದನು. ಹೆಂಡತಿ ಲಗುಬಗೆಯಿಂದ ಅದೆಲ್ಲವನ್ನೂ ಮುಚ್ಚಿಟ್ಟು ದಡದಡನೆ ಬಾಗಿಲಿಗೆ ಬಂದು ಕದ ತೆರೆದಳು.

“ಗುಡಿಯಿಂದ ತೀವ್ರವೇ ಬಂದುಬಿಟ್ಟೆಯಲ್ಲ ! ಏಕೆ ?” ಎಂದು ಕೇಳಿದನು ಗಂಡ.

ನನಗೇನು ತಿಳಿಯುವದೇ – ಹೊಳೆಯುವದೇ ? ಆದ್ದರಿಂದ ಬೇಸರವೆನಿಸಿತು. ಓಡಿ ಮನೆಗೆ ಬಂದೆ.”

“ಒಳ್ಳೆಯದೇ ಆಯಿತು. ಮಲಗಿಕೊಂಡುಬಿಡೋಣ ಹಾಗಾದರೆ” ಎಂದು ಗಂಡನು ಮಲಗುವದಕ್ಕೆ ಅಣಿಯಾದನು.

“ಅನಕಾ ಒಂದು ಕಥೇಯನ್ನಾದರೂ ಹೇಳಿರಿ” ಎಂದಳು ಹೆಂಡತಿ.

“ನಿದ್ದೆಯ ಹೊತ್ತಿನಲ್ಲಿ ಕಥೆ ಕೇಳಬೇಕನ್ನುವಳಲ್ಲ” ಎಂದು, ಬೇಸರದಿಂದ ಎಂಥದೋ ಕತೆಯನ್ನು ಹೇಳಲು ಆರಂಭಿಸಿದನು ಗಂಡ.

“ಕತ್ತಲದಾಗ ಕಡೋಡಿ, ಕೊಣಮಗ್ಯಾಗ ತೊಡೋಡಿ, ಸುಮ್ಮನೆ ಮನಗ ಬಿದ್ದೋಡಿ” ಎಂದು ಚೇಷ್ಟೆಯಿಂದಾಡಿದ ಲಲ್ಲೆಯನ್ನು ಕೇಳಿ ಹೆಂಡತಿ ಕಕ್ಕಾ ವಿಕ್ಕಿಯಾದಳು. “ಇವನಿಗೆ ಗೊತ್ತಾಗದಂತೆ ಮಾಡಿದ್ದೆಲ್ಲ ತಿಳಿದೇ ಬಿಟ್ಟಿದೆಯಲ್ಲ” ಎನ್ನುತ್ತ ತಾನು ಮಾಡಿದ್ದನ್ನೆಲ್ಲ ವಿವರಿಸಿದಳು-

“ಸುಳ್ಳೇಕೆ ಹೇಳಲಿ ? ಭಜನೆ ಕೇಳಬೇಕೆಂದರೆ ಹಸಿವೆ ಮನೆಯತ್ತ ಎಳೆದುತಂದು ಸಜ್ಜಿಗೆ ಮಾಡಿಸಿತು. ನೀವು ಬರುವಷ್ಟರಲ್ಲಿ ತಿಂದುಮುಗಿಸಿ, ಉಪವಾಸ ಮಾಡಿದವರಂತೆಯೇ ಮಲಗಿಬಿಟ್ಟು, ನೀವು ಬಂದಾಗ ಬಾಗಿಲು ತೆರೆಯಬೇಕೆಂದು ಯೋಚಿಸಿದ್ದೆ. ಆದರೆ ನಾನು ತಾಬಾಣ ಸಾವರಿಸುವಷ್ಟರಲ್ಲಿ ನೀವು ಬಂದೇ ಬಿಟ್ಟಿದ್ದರಿಂದ, ಮಾಡಿದ್ದನ್ನೆಲ್ಲ ಮುಚ್ಚಿಟ್ಟು ಓಡಿಬಂದು ಬಾಗಿಲು ತೆರೆದೆ, ನನ್ನದೇನಿದೆ ತಪ್ಪು ? ಹಸಿವೆ ತಾಳದೆ ಹೀಗೆ ಮಾಡಿದೆ. ನಿಮಗೆಲ್ಲ ತಿಳಿದೇ ಬಿಟ್ಟಿದೆಯಲ್ಲ ? ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ” ಎಂದು ವಿನಯದಿಂದ ಕೇಳಿಕೊಂಡಳು.

ಗಂಡನು, ಅಂದು ರಾತ್ರಿ ಹೆಂಡತಿಯು ಮಾಡಿದ ಅಚಾತುರ್ಯವನ್ನೂ, ಮರುದಿನ ಬೆಳಗಾದ ಬಳಿಕ ಆಕೆ ಮಾಡಿದ ಸಜ್ಜಗೆಯನ್ನೂ ಆಕೆಯ ವಿನಂತಿಯನ್ನು ಮನ್ನಿಸಿ ಹೊಟ್ಟೆಯಲ್ಲಿ ಹಾಕಿಕೊಂಡನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...