ಘಟ್ಟದ ಮೇಲೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದ ಪರಮ ಏಳೆಂಟು ವರ್ಷಗಳ ನಂತರ ತಿರುಗಿ ಬರುತ್ತಾನೆಂದು ಯಾರು ಅಂದುಕೊಂಡಿದ್ದರು? ಅವನ ಹೆಂಡತಿಯಂತೂ ಖಂಡಿತಾ ಹಾಗೆ ಅಂದುಕೊಂಡಿರಲಿಲ್ಲ. ಪರಮ ಹೋದ ಕೆಲವು ತಿಂಗಳು ಇಪ್ಪತ್ತೋ ಮೂವತ್ತೋ ರೂಪಾಯಿಗಳನ್ನು ಅಂಚೆಯ ಮೂಲಕ ಮನೆಗೆ ಕಳುಹಿಸುತ್ತಿದ್ದ. ನಂತರ ಹಣ ಬರುವುದು ನಿಂತಿತು. ಮಳೆಗಾಲ ಮುಗಿದ ಮೇಲೆ ಬರುತ್ತೇನೆಂದವನು ಬರಲೇ ಇಲ್ಲ. ಘಟ್ಟದ ಮೇಲಿನ ಕಾಫ಼ಿ ಮತ್ತು ಯಾಲಕ್ಕಿ ತೋಟಗಳಲ್ಲಿ ಯಾವತ್ತೂ ಮನೆ ಮಾಡಿರುವ ಚಳಿಜ್ವರದಿಂದ ಅವನು ಸತ್ತು ಹೋಗಿರಬಹುದೆಂದು ಊರವರು ಹೇಳಿದರು. ಕಾವೇರಿ ಅವರ ಮಾತನ್ನು ನಂಬಿದಳು.

ಒಂದು ಸಂಜೆ ಸಣ್ಣದೊಂದು ಕೈಚೀಲದೊಂದಿಗೆ ಬಸ್ಸಿಳಿದ ಪರಮ ನೇರವಾಗಿ ಮನೆಗೆ ಹೋಗಿ ಕದ ತಟ್ಟಿದ. ಕಾವೇರಿಗೆ ದುಃಖ ಆಶ್ಚರ್ಯಗಳು ಒಮ್ಮೆಲೇ ಆಗಿ ಏನು ಹೇಳಲೂ ತೋಚದೆ ಕೈಯನ್ನು ಬಾಯ ಮೇಲಿರಿಸಿ ಬೆರಗಿನಿಂದ ನೋಡುತ್ತ ನಿಂತಳು. ಪರಮ ಅವಳನ್ನು ಸರಿಸಿಕೊಂಡು ಒಳಗೆ ಪ್ರವೇಶಿಸಿ ತಾನು ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಕುರ್ಚಿಗಾಗಿ ಹುಡುಕಿದ. ಇದನ್ನರಿತ ಕಾವೇರಿ ಕುರ್ಚಿಯನ್ನು ಎತ್ತಿ ತಂದು ಅವನ ಮುಂದಿರಿಸಿದಳು. ಪರಮ ಮನೆ ಬಿಟ್ಟ ಕಾಲದಲ್ಲಿ ಆ ಮನೆ ಯಲ್ಲಿದ್ದುದು ಒಂದೇ ಮಗು-ಆನಂದ. ಈಗ ಇನ್ನೊಂದು ಮಗು ಇರುವುದನ್ನು ಅವನು ಗಮನಿಸಿದ. ಎರಡೂ ಮಕ್ಕಳು ಭಯದಿಂದ ತಾಯಿಯ ಹಿಂದೆ ನಿಂತು ಅವನ ಕಡೆ ನೋಡುತ್ತಿದ್ದುವು. ಪರಮ ಒಂದು ಕ್ಷಣ ಗೊಂದಲದಲ್ಲಿ ಬಿದ್ದ. ನಂತರ ಕೈಚೀಲದಿಂದ ಒಂದು ಜತೆ ಅಂಗಿ ಚಡ್ಡಿಗಳನ್ನು ತೆಗೆದು “ಇದು ನಿನಗೆ” ಎಂದು ಆನಂದನ ಕೈಯಲ್ಲಿರಿಸಿದ. ಮಗು ಅನುಮಾನಿಸುತ್ತ ಉಡುಗೊರೆಯನ್ನು ಎತ್ತಿಕೊಂಡಿತು. ಪರಮ “ಆ ಇನ್ನೊಂದರ ಹೆಸರೇನು?” ಎಂದು ಕಾವೇರಿಯನ್ನು ಕೇಳಿದ. ಕಾವೇರಿ ಇದಕ್ಕುತ್ತರವಾಗಿ ಬಿಕ್ಕಿಬಿಕ್ಕಿ ಅಳತೊಡಗಿದಳು. ಪರಮ ಆ ಮಗುವಿನ ಕಡೆ ತಿರುಗಿ, “ನೀನು ಬೆಳ್ಳಿ, ಆಯ್ತ? ಬೆಳ್ಳಗಿದ್ದೀಯಲ್ಲ, ಅದಕ್ಕೆ” ಎಂದ. ಅದು ತಬ್ಬಿಬ್ಬಾಗಿ “ಸೀತ, ನಾನು ಸೀತ” ಎಂದಿತು.

ಪರಮ ಬಂದ ಸುದ್ದಿ ಊರಲ್ಲೆಲ್ಲ ಹರಡಿತು. ಆದರೆ ಅದಕ್ಕಿಂತಲೂ ಸುದ್ದಿ ಮಾಡಿದ ಸಂಗತಿಯೆಂದರೆ ಅವನು ತೊಟ್ಟುಕೊಂಡಿದ್ದ ಹಳದಿ ಕೋಟು. ಕಣ್ಣಿಗೆ ಹೊಡೆಯುವಂತಿದ್ದ ಹಳದಿ ಅದು-ಸುದ್ದಿ ಮಾಡದಿರುತ್ತದೆಯೆ? ಎಳೆ ಬಿಸಿಲಿಗಂತೂ ಅದು ತಳತಳನೆ ಹೊಳೆಯುತ್ತಿತ್ತು. ಈ ಹಳದಿ ಕೋಟಿಗೆ- ಕಡು ಕೆಂಪು ಬಣ್ಣದ ಗುಂಡಿಗಳಿದ್ದುವು. ಇಂಥ ಕೋಟನ್ನು ತೊಟ್ಟುಕೊಂಡು ಪರಮ ಬರುತ್ತಿರಬೇಕಾದರೆ ಅಷ್ಟು ದೂರದಿಂದಲೇ ಅವನು ಜನರಿಗೆ ಕಾಣಿಸುತ್ತಿದ್ದ. ಆದ್ದರಿಂದ ಜನರ ಕುತೂಹಲ ಪರಮನಿಗಿಂತಲೂ ಅವನ ಕೋಟಿನ ಮೇಲೆಯೇ ನೆಟ್ಟುದರಲ್ಲಿ ಆಶ್ಚರ್ಯವಿಲ್ಲ. ಅವರು ಪರಮನನ್ನು ನಕ್ಕು ಮಾತಾಡಿಸುತ್ತಿದ್ದರು. ಪರಮನೂ ಅವರಿಗೆ ನಗುತ್ತಲೇ ಉತ್ತರಿಸುತ್ತಿದ್ದ. ಹೀಗಿರುತ್ತ ಪರಮನ ಹಳದಿ ಕೋಟಿನ ಬಗ್ಗೆ ಅನೇಕ ವದಂತಿಗಳು ಹುಟ್ಟಿಕೊಂಡವು. ಕಾರಣ ಅವನು ಒಬ್ಬೊಬ್ಬರಿಗೆ ಒಂದೊಂದು ಜವಾಬು ಕೊಡುತ್ತಿದ್ದ.

ಒಂದು ವದಂತಿಯ ಪ್ರಕಾರ ಆ ಕೋಟನ್ನು ಬಿಳಿಯ ದೊರೆಯೊಬ್ಬ ಪರಮನಿಗೆ ಉಡುಗೊರೆಯಾಗಿ ಇತ್ತಿದ್ದ. ಈ ಬಿಳಿಯ ದೊರೆ ಬೇಟೆಯ ಮೋಜಿಗೆಂದು ಕೊಡಗಿಗೆ ಬಂದಿದ್ದುದು. ಪರಮ ಅವನ ಸಹಾಯಕನಾಗಿ ದುಡಿಯುತ್ತಿದ್ದ. ಒಮ್ಮೆ ಬೇಟೆಯಾಡುತ್ತ ಅವರು ಕಾಡಿನಲ್ಲಿ ಬಹುದೂರ ಹೋಗಿಬಿಟ್ಟಿದ್ದರು. ಅಲ್ಲಿ ಪಟ್ಟೆ ಹುಲಿಯೊಂದು ದೊರೆಯ ಮೇಲೆ ಎರಗುವುದರಲ್ಲಿದ್ದುದನ್ನು ಪರಮ ತಪ್ಪಿಸಿದ. ಹುಲಿ ಅವನ ಗುಂಡಿಗೆ ಈಡಾಯಿತು. ಇದರಿಂದ ಸಂತೋಷಗೊಂಡ ದೊರೆ ತಾನು ಧರಿಸುತ್ತಿದ್ದ ಕೋಟನ್ನು ಕೂಡಲೇ ಕಳಚಿ ಪರಮನಿಗೆ ತೊಡಿಸಿದ. ಅದು ಬಹಳ ಬೆಲೆ ಬಾಳುವ ಕೋಟು. ಲಂಡನ್ ನಗರದಲ್ಲಿ ಬ್ರಿಟಿಷ್ ರಾಜಮನೆತನಕ್ಕೆ ಕೆಲಸ ಮಾಡುವ ದರ್ಜಿಗಳು ಹೊಲಿದುದು.

ಇನ್ನೊಂದು ವದಂತಿ ಹೀಗಿತ್ತು. ಒಮ್ಮೆ ಉತ್ತರ ದೇಶದ ಅರಸು ಮನೆತನಕ್ಕೆ ಸೇರಿದ ದಂಪತಿಯೊಂದು ಕೊಡಗಿನಲ್ಲಿ ವಿಹಾರಕ್ಕೆಂದು ಬಂದಿತ್ತಂತೆ. ಗಂಡನಿಗೆ ಬೇಟೆಯ ಖಯಾಲಿ. ಹೆಂಡತಿಗೆ ಊರು ಸುತ್ತುವ ಹವ್ಯಾಸ. ಪರಮ ಇಬ್ಬರ ಸೇವೆಯನ್ನೂ ನಿರ್ವಹಿಸುತ್ತಿದ್ದವನು. ನಿಸರ್ಗಪ್ರಿಯೆಯಾದ ರಾಜಕುಮಾರಿ ಒಮ್ಮೆ ಗುಡ್ಡದ ಇಳಕಲೊಂದರಲ್ಲಿ ಬಿದ್ದು ಕಾಲು ನೋವು ಉಂಟುಮಾಡಿಕೊಂಡಳು. ಸಮೀಪದಲ್ಲೆಲ್ಲೂ ವೈದ್ಯರಿರಲಿಲ್ಲ. ಆಕೆ ನಡೆಯುವ ಸ್ಥಿತಿಯಲ್ಲೂ ಇರಲಿಲ್ಲ. ಆಗ ಎಣ್ಣೆ ಹಚ್ಚಿ ತಿಕ್ಕಿ ರಾಜಕುಮಾರಿಯ ಪಾದವನ್ನು ಮೊದಲಿನ ಸ್ಥಿತಿಗೆ ತಂದವನು ಪರಮ. ಇದಕ್ಕೆ ಪ್ರತಿಯಾಗಿ ತನಗೇನೂ ಬೇಡವೆಂದರೂ ಕೇಳದೆ ಅವಳು ಪರಮನಿಗೆ ತನ್ನ ಗಂಡನ ಕೋಟನ್ನೇ ಕದ್ದು ಕೊಟ್ಟು ಬಿಟ್ಟಿದ್ದಳು. ಅಲ್ಲದೆ ತನ್ನ ನೆನಪಿಗೆಂದು ನೀನಿದನ್ನು ಯಾವಾಗಲೂ ಧರಿಸುತ್ತಿರಬೇಕೆಂದು ಅವನಿಂದ ಮಾತು ತೆಗೆದುಕೊಂಡಿದ್ದಳು ರಾಜಕುಮಾರಿ.

ಇಂಥ ವದಂತಿಗಳನ್ನು ಯಾರು ನಂಬಿದರೊ ಬಿಟ್ಟರೊ. ಆದರೆ ಇದರಿಂದ ತೀರ ಕಂಗೆಟ್ಟ ವರೆಂದರೆ ಸುಬ್ರಾಯ ತಂತ್ರಿಗಳು. ಅವರು ಶ್ರೀಮಂತರು. ಹಲವು ಕಾಲ ಊರ ಪಠೇಲರಾಗಿದ್ದವರು. ಘಟ್ಟಕ್ಕೆ ಹೋಗುವ ಮೊದಲು ಸ್ವಲ್ಪ ಸಮಯ ಪರಮ ಅವರಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದವನು. ಕಾವೇರಿ ಕೂಡ ಆಗಾಗ್ಗೆ ತಂತ್ರಿಗಳಲ್ಲಿಗೆ ಮನೆಗೆಲಸಕ್ಕೆ ಹೋಗುವುದಿತ್ತು. ತಂತ್ರಿಗಳೂ ನಾಲ್ಕು ಊರು ಸುತ್ತಿದವರೇ. ಆದ್ದರಿಂದ ಜೀವನಾನುಭವವನ್ನು ಹೊಂದಿದವರಾಗಿದ್ದರು. ಪರಮನ ಕೋಟಿನ ಬಗ್ಗೆ ಕತೆಗಳು ಒಂದರಮೇಲೆ ಒಂದರಂತೆ ಕೇಳಿಸತೊಡಗಿದ ಮೇಲೆ ತಂತ್ರಿಗಳು ಅವನನ್ನು ಕರೆಸಿ:

“ಪರಮ, ಆದುದೆಲ್ಲ ಆಗಿಹೋಯಿತು. ಇನ್ನಾದರೂ ನಿನ್ನ ಬದುಕನ್ನು ಒಂದು ಹಾದಿಗೆ ತರಬಾರದೆ? ” ಎಂದು ಕೇಳಿದರು.

“ತರಬೇಕೆಂದಿದ್ದೇನೆ.” ಎಂದ ಪರಮ.

“ನೋಡು ಪರಮ, ಇಡೀ ಗ್ರಾಮ ಸುಳ್ಳಿನಿಂದ ನವೆಯುತ್ತಾ ಇದೆ. ಇದು ಸುಳ್ಳು ಹೇಳುವುದು, ಸುಳ್ಳನ್ನು ನಂಬುವುದು, ಸುಳ್ಳನ್ನು ಸತ್ಯದೊಂದಿಗೆ ಬೆರೆಸುವುದು ಸಾರ್ವತ್ರಿಕವಾಗಿ ಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸತ್ಯ ಹೇಳಿದರೂ ಯಾರೂ ನಂಬುವುದಿಲ್ಲ.”

“ನಿಜ”

“ಈ ಗ್ರಾಮದ ಭವಿಷ್ಯದ ಬಗ್ಗೆ ನನಗೆ ಚಿಂತೆಯಿದೆ. ಸತ್ಯವನ್ನು ಸುಳ್ಳಿನಿಂದ ಪ್ರತ್ಯೇಕಿಸಬೇಕಾದ್ದು ಮೊದಲು ಆಗಬೇಕಾದ ಕೆಲಸ. ಈಗ ನಿನ್ನ ಕೋಟಿನ ಬಗ್ಗೆ ನೋಡೋಣ. ನೀನು ನನಗೆ ಹೇಳಿದೆ? ಅದನ್ನು ಬ್ರಿಟಿಷ್ ದೊರೆಯೊಬ್ಬ ನಿನಗೆ ಕೊಟ್ಟ ಎಂದು ಹೇಳಿದೆ” ತಂತ್ರಿಗಳು ತಿವಿಯುವಂತೆ ಹೇಳಿದರು.

“ಹೌದು” ಎಂದ ಪರಮ.

“ಆತ ಬೇಟೆಯಾಡುವುದಕ್ಕೆ ಬಂದಿದ್ದ, ಬೇಟೆಯಾಡುತ್ತ ನೀವಿಬ್ಬರೂ ಕಾಡಿನ ಮಧ್ಯಕ್ಕೆ ಹೋದಿರಿ. ಅಲ್ಲಿ ಪಟ್ಟೆಹುಲಿಯೊಂದು ಅವನ ಮೇಲೆ ಎರಗಿತು.ಅದನ್ನು ತತ್ಕ್ಷಣ ನೀನು ಗುಂಡಿಟ್ಟು ಕೆಡವಿದೆ. ಇದರ ಸ್ಮರಣೆಗೆಂದು ಬಿಳಿಯನು ನಿನಗೆ ತನ್ನ ಕೋಟನ್ನು ಕಳಚಿಕೊಟ್ಟ – ಎಂದು.”

“ನಿಜ.”

“ಕಾಡಿನಲ್ಲಿ ಬೇಟೆಯಾಡಲು ಇಂಥ ಕೋಟನ್ನು ತೊಟ್ಟುಕೊಂಡು ಯಾರಾದರೂ ಹೋಗುತ್ತಾರೆಯೇ?”

“ಓ! ಅದೇ! ಆ ಸಂಜೆ ನಿಜಕ್ಕೂ ಬೇಟೆಗೆಂದು ನಾವು ಹೊರಟವರಲ್ಲ. ಸುತ್ತಾಡುವುದಕ್ಕೆಂದು ಹೊರಟೆದ್ದೆವು. ಕೈಯಲ್ಲಿ ಕೋವಿಯಿತ್ತು. ಅಷ್ಟೆ, ಸುತ್ತಾಡುತ್ತ ದಾರಿ ತಪ್ಪಿ ನಾವು ಕಾಡಿನೊಳಕ್ಕೆ ಬಂದು ಬಿಟ್ಟೆವು.”

“ಸರಿ ಸರಿ. ಆದರೆ ನೀನು ಕಾಮತರಲ್ಲಿ ಹೇಳಿದ್ದೇನು? ಉತ್ತರ ಭಾರತದ ಯಾವಳೋ ರಾಜಕುಮಾರಿಯೊಬ್ಬಳು ಕಾಲುಜಾರಿ ಬಿದ್ದಳಂತೆ. ಅಲ್ಲೆಲ್ಲೂ ವೈದ್ಯರಿರಲಿಲ್ಲವಂತೆ. ಆಕೆಗೆ ಎದ್ದು ನಡೆದಾಡಲೂ ಆಗುತ್ತಿರಲಿಲ್ಲವಂತೆ. ಅಂಥ ಸಮಯದಲ್ಲಿ ನೀನೇ ಗಿಡಮೂಲಿಕೆಗಳನ್ನು ತಂದು ಎಣ್ಣೆ ಕಾಯಿಸಿ, ಅವಳ ಸುಂದರವಾದ ಪಾದಗಳಿಗೆ ಹಚ್ಚಿ, ತಿಕ್ಕಿ ಅವಳನು ಗುಣಪಡಿಸಿದೆಯಂತೆ. ಅದಕ್ಕೆ ಉಡುಗೊರೆಯಾಗಿ ಅವಳು ತನ್ನ ಗಂಡನ ಕೋಟನ್ನು ನಿನಗೆ ಕದ್ದುಕೊಟ್ಟಳಂತೆ. ಅಲ್ಲದೆ ನೀನಿದನ್ನು ಯಾವಾಗಲೂ ಧರಿಸುತ್ತಿರಬೇಕೆಂದು ಮಾತು ಬೇರೆ ತೆಗೆದುಕೊಂಡಳಂತೆ.”

“ನಿಜ”

“ನಿಜ! ಅದೂ ನಿಜ ಇದೂ ನಿಜ! ಇವೆರಡೂ ನಿಜವಾಗುವುದು ಹೇಗೆ ಎಂತ?”

ಪರಮ ತುಸು ಯೋಚಿಸುತ್ತಿರುವಂತೆ ಕಂಡುಬಂದ. ಆದರೆ ಅವನು ನಿಜಕ್ಕೂ ಯೋಚನೆಯಲ್ಲಿ ತೊಡಗಿರಲಿಲ್ಲ. ಮುಗುಳು ನಗುತ್ತಿದ್ದ ಅಷ್ಟೆ. ನಗುತ್ತ ಹೇಳಿದ:

“ನನ್ನಲ್ಲಿ ಇಂಥದೇ ಇನ್ನೊಂದು ಕೋಟಿದೆ. ಕಾಮತರಿಗೆ ನಾನು ಹೇಳಿದ್ದು ಆ ಇನ್ನೊಂದರ ಬಗ್ಗೆ.”

“ಆಹಾ! ಎಂದರು ತಂತ್ರಿಗಳು. ಅವರಿಗೆ ಏನು ಹೇಳುವುದೆಂದೇ ತೋಚಲಿಲ್ಲ. ಅಂಗಳದ ತುದಿಗೆ ಹೋಗಿ ಕವಳ ಉಗಿದು ಬಂದರು. “ನೀನು ಕಾಫ಼ಿ ಕುಡಿಯುವುದೊ ಚಹಾವೋ? ಅಥವಾ ಕೊಡಗಿನಲ್ಲಿ ಇನ್ನು ಬೇರೇನಾದರೂ ಕುಡಿಯುವುದೋ?” ಎಂದು ಕೇಳಿದರು.

“ಏನೂ ಬೇಡ” ಎಂದ ಪರಮ. ತಂತ್ರಿಗಳು ಯಾರನ್ನೋ ಕೂಗಿ ಎರಡು ಗ್ಲಾಸು ಚಹಾ ಮಾಡಿ ತರುವಂತೆ ಹೇಳಿದರು. ಒಂದೈದು ನಿಮಿಷಗಳಲ್ಲಿ ಚಹಾ ಬಂತು.

“ಒಂದು ಕೆಲಸ ಮಾಡು” ಎಂದರು ತಂತ್ರಿಗಳು. ಪರಮ ಅವರ ಮೋರೆ ನೋಡಿದ. “ಈ ಕೋಟಿದೆಯಲ್ಲ ಇದನ್ನು ಇಲ್ಲಿಟ್ಟು ಹೋಗು. ಆ ಇನ್ನೊಂದು ಕೋಟನ್ನು ತೆಗೆದುಕೊಂಡು ಬಾ. ಅದನ್ನು ನಾನು ನೋಡಬೇಕು.”

ಪರಮ ನಕ್ಕ. ಚಹಾದ ಗ್ಲಾಸನ್ನು ತೊಳೆದಿಟ್ಟ. ನಂತರ ಕೋಟನ್ನು ಕಳಚಿ ಒಂದೆಡೆ ನೇತು ಹಾಕಿದ. ಹೋಗುತ್ತೇನೆ ಎಂದು ಅಂಗಳ ಇಳಿದು ಹೊರಟು ಹೋದ. ತಂತ್ರಿಗಳು ಕುಳಿತಲ್ಲೇ ಇದ್ದರು. ಅವರು ಹೇಳದ ಮಾತುಗಳು ಬಹಳಷ್ಟು ಇದ್ದುವು. ಮುಖ್ಯವಾಗಿ – ಎಲೈ ಪರಮ, ನೀನು ಹೆಂಡತಿಯನ್ನು ಅವಳ ಪಾಡಿಗೆ ಬಿಟ್ಟು ಹೋಗಬಾರದಿತ್ತು ನೋಡು. ಕಾವೇರಿ ಚೆಲುವೆ. ಅವಳ ವಯಸ್ಸು ಅಂಥದ್ದು. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನುವ ಮಾಟ. ಅವಳನ್ನು ಈ ಊರಲ್ಲಿ ಸಾರ್ವಜನಿಕ ಬಾವಿಯಂತೆ ಉಪಯೋಗಿಸಿದವರೇ ಹೆಚ್ಚು. ನನಗೂ ನನ್ನದೇ ಆದ ದಾಹವಿದೆ. ಆದರೆ ಅದು ನೀರು ಕಂಡರೆ ಆರುವಂಥದು. ನೀರು ಕುಡಿಯಲೇಬೇಕೆಂಬುದಲ್ಲ. ನಾನು ಕಾವೇರಿಯ ಬಳಿ ಹೋಗಿರಬಹುದು. ಹಾಗೆ ಹೋದುದನ್ನು ಕಂಡವರಿರಬಹುದು. ಆದರೆ ಖಂಡಿತಕ್ಕೂ ನಾನು ಆ ಮಗುವಿನ ತಂದೆ ಅಲ್ಲ ಕಣೋ. ಅದು ಆಕೆಗೂ ಗೊತ್ತು, ನನಗೂ ಗೊತ್ತು. ಆದರೆ ಯಾರೂ ನನ್ನನ್ನು ನಂಬುವುದಿಲ್ಲ. ಯಾಕೆಂದರೆ ಅವಳು ಊರಲ್ಲೆಲ್ಲ ಡಣಾಡಂಗುರ ಸಾರಿ ಬಿಟ್ಟಿದ್ದಾಳೆ. ಎಷ್ಟರತನಕ ಇದೆಲ್ಲ ಹೋಗಿದೆಯೆಂದರೆ ನೀನು ಊರುಬಿಟ್ಟು ಹೋಗಲು ನಾನೇ ಕಾರಣವೆಂದು ಕೆಲವರು ಆಡಿಕೊಳ್ಳುತ್ತಿದ್ದಾರೆ. ಆ ಮಗುವಿನ ತಂದೆ ಅದು ಯಾರೆಂತ ಯಾರಿಗೂ ಗೊತ್ತಿರಲಾರದು, ಸ್ವತಃ ಕಾವೇರಿಗೆ ಕೂಡ….

ಇತ್ಯಾದಿ ಇತ್ಯಾದಿ.

ಕೆಲವು ದಿನಗಳು ಕಳೆದವು. ಪರಮನ ಸುದ್ದಿ ಯಿಲ್ಲ. ಒಂದು ದಿನ ಪರಮ ಪ್ರತ್ಯಕ್ಷನಾದ. ತಂತ್ರಿಗಳು ಪೂಜೆ ಮಾಡುತ್ತ ದೇವರ ಕೋಣೆಯಲ್ಲಿದ್ದರು. ಬೇಕಂತಲೆ ತುಸು ನಿಧಾನಿಸಿ, ಗಂಭೀರವಾಗಿ ಅವರು ಹೊರಬಂದರು.

“ಯಾರು ಪರಮನೋ?” ಎಂದು ಕೇಳಿದರು.

“ಹೌದು” ಎಂದ ಪರಮ.

ಅಷ್ಟು ಬೇಗನೆ ವಿಷಯಕ್ಕೆ ಬರುವುದು ಅವರಿಗೆ ಇಷ್ಟವಿರದಿದ್ದರೂ ಬೇರೇನೂ ಹೇಳಲು ತೋಚದ್ದರಿಂದ “ಸುಳ್ಳು ಯಾವಾಗಲೂ ಸುಲಭ ಕಣೋ ಪರಮ. ಸತ್ಯವೇ ಕಷ್ಟ. ಸತ್ಯ ಯಾವಾಗಲೂ ಒಂದೇ. ಸುಳ್ಳು ಎಷ್ಟೂ ಇರಬಹುದು.” ಎಂದರು. ಪರಮ ತಬ್ಬಿಬ್ಬಾದ.

“ಎಲ್ಲಿ ನಿನ್ನ ಕೋಟು?” ಎಂದರು ತಂತ್ರಿಗಳು.

“ಕೋಟೇ? ಅದನ್ನೇ ಒಯ್ಯುವುದಕ್ಕೆ ಬಂದೆ – ನೀವು ಒಪ್ಪೋದಾದರೆ.”

ನಾನು ಕೇಳುತ್ತಿರುವುದು ಆ ಇನ್ನೊಂದು ಕೋಟಿನ ಬಗ್ಗೆ. ಉತ್ತರದೇಶದ ರಾಜಕುಮಾರಿ ಕೊಟ್ಟಿದ್ದಳಲ್ಲ ನಿನಗೆ – ಅದು.”

“ಓ! ಅದೇ?” ಪರಮ ಬುದ್ಧನಂತೆ ಮುಗುಳ್ನಕ್ಕ. “ಅದನ್ನು ನಿಮ್ಮಂತೆ ಇನ್ನೊಬ್ಬರು ಇರಿಸಿಕೊಂಡಿದ್ದಾರೆ ತಂತ್ರಿಗಳೆ.”

ತಂತ್ರಿಗಳು ಬೆರಗಾಗಿ ಅವನನ್ನೇ ನೋಡುತ್ತಿದ್ದರು. ಕೋಟನ್ನು ಎತ್ತಿಕೊಳ್ಳಲೇ ಎಂದು ಪರಮ ಕೇಳಿದ್ದಕ್ಕೂ ಅವರು ಉತ್ತರಿಸದೆ ಇದ್ದರು. ಪರಮ ತಲೆಯಾಡಿಸಿ ಕೋಟನ್ನು ಹೆಗಲಿಗೇರಿಸಿಕೊಂಡು ಹೊರಟು ಹೋದ.

೦ ೦ ೦

ಊರಮಧ್ಯೆ ಒಂದು ದೀಪದ ಕಂಭವಿದೆ. ಆಳೆತ್ತರದ ಈ ಕಂಭ ಯಾವ ರಾಯನ ಕಾಲದಲ್ಲಿ ನಿಲ್ಲಿಸಿದುದೋ. ಕಂಭಕ್ಕೆ ಬಳಿದ ಟಾರು, ಟಾರಿನ ಸಹಜವಾದ ಕಪ್ಪು ಬಣ್ಣವನ್ನುಕಳೆದುಕೊಂಡು ಬೂದು ಬಣ್ಣಕ್ಕೆ ತಿರುಗಿದೆ. ತುದಿಗಿರುವ ಗಾಜಿನ ಬುರುಡೆಯ ಗಾಜಿಗೆ ಪಾರದರ್ಶಕ ಗುಣವೂ ಇಲ್ಲ. ಹಿಂದೆ ದಾರಿ ಗುರುತಿಗೆಂದು ಇದರಲ್ಲಿ ದೀಪವುರಿಸುವ ಸಂಪ್ರದಾಯ ಇದ್ದಿರಬೇಕು. ಆದರೆ ಅದೆಲ್ಲ ಬಹಳ ಹಿಂದೆ. ಸದ್ಯವೇ ವಿದ್ಯುದ್ದೀಪಗಳು ಬರಲಿರುವ ಈ ಊರಿನಲ್ಲಿ ಈಗ ಈ ದೀಪದ ಕಂಭವನ್ನು ಗಮನಿಸುವರಾರು? ಅದು ಇದ್ದೂ ಇಲ್ಲದಂತೆಯೇ ಇದೆ.

ದೀಪದ ಕಂಭದ ಬಗ್ಗೆ ಯಾಕೆ ಹೇಳ ಹೊರಟೆನಂದರೆ, ಒಂದು ಮುಂಜಾನೆ ಈ ಕಂಭದ ಮೇಲೆ ಕೆಂಪು ಗುಂಡಿಗಳುಳ್ಳ ಹಳದಿ ಕೋಟೊಂದು ನೇತಾಡುತ್ತಿತ್ತು. ಅದು ಪರಮನ ಕೋಟೆಂಬುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಪರಮ ತಾನು ಪ್ರೀತಿಸುತ್ತಿದ್ದ ಕೋಟನ್ನು ಹೀಗೆ ಇಲ್ಲಿ ಯಾಕೆ ತೂಗಿ ಹಾಕಿದ? ಎಂಬ ಪ್ರಶ್ನೆ ಎಲ್ಲರನೂ ಕಾಡತೊಡಗಿತು. ಪರಮ ಊರಲ್ಲಿಲ್ಲವೆಂಬ ಸುದ್ದಿ ಕ್ಷಣಾರ್ಧದಲ್ಲಿ ಊರೆಲ್ಲ ಹಬ್ಬಿತು. ಎಲ್ಲರೂ ಬಂದು ಅವನ ಕೋಟನ್ನು ನೋಡಿ ಹೋಗುವವರೇ. ಮುಟ್ಟುವುದಕ್ಕೆ ಮಾತ್ರ ಯಾರೂ ಹೋಗಲಿಲ್ಲ. ಹೀಗೆ ಎರಡು ದಿನಗಳು ಕಳೆದವು. ಮೂರನೆ ದಿನ ಕೋಟು ಕೂಡ ಮಾಯವಾಗಿತ್ತು. ಇದರಿಂದ ಜನರ ಊಹಾಪೋಹಗಳು ಇನ್ನಷ್ಟು ಹೆಚ್ಚಿದವು. ಕೆಲವರೆಂದರು, ಪರಮನೇ ಕತ್ತಲಲಿ ಬಂದು ಕೋಟು ಎತ್ತಿಕೊಂಡು ಹೋದ ಎಂದು. ಇನ್ನು ಕೆಲವರು ಪಕ್ಕದ ಪೇಟೆಯ ದರ್ಜಿಯೊಬ್ಬ ಅದನ್ನು ಹಾರಿಸಿಕೊಂಡ ಎಂದರು. ಕೆಲವು ಜಾಣರು ಮಾತ್ರ ಅದು ಆ ಇನ್ನೊಂದು ಕೋಟನ್ನು ಹುಡುಕುತ್ತ ಹೊರಟು ಹೋಯಿತು- ಎಂಬ ಸುದ್ದಿ ಹಬ್ಬಿಸಿದರು.
*****
ಕೀಲಿಕರಣ ಮಾಡಿದವರು: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ