ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡಳಿತದಲ್ಲಿ ಬಿಗಿತಪ್ಪಿತು. ಮೂಕರಸರು ಆಳುತ್ತಿರುವಲ್ಲಿ ಅಧಿಕಾರಿಗಳಿಗೆ ಹಿಂದಿನಷ್ಟು ನಯಭಯಗಳಿರಲಿಲ್ಲ. ಆದರೂ ಚಿಕ್ಕದೇವರಾಜ ಒಡೆಯರ ನೆನಪು ಇನ್ನೂ ಬಲವಾಗಿತ್ತು. ಮೂಕರಸರು ಹತ್ತು ವರ್ಷಕಾಲ ಅನುಭವಿಸಿದರು.
ಮೂಕರಸರ ತರುವಾಯ ದೊಡ್ಡ ಕೃಷ್ಣರಾಜ ಒಡೆಯರೆಂಬ ಅವರ ಮಕ್ಕಳು ದೊರೆಗಳಾದರು. ಇವರಿಗೆ ಕೋಪವು ಬಲು ಬೇಗ ಬರುತ್ತಿತ್ತು; ಕೋಪ ಬಂದಾಗ ನ್ಯಾಯಾನ್ಯಾಯಗಳನ್ನು ನೋಡದೆ ಎದುರಾದವರನ್ನು ಅತಿಯಾಗಿ ಹಿಂಸೆಗೆ ಗುರಿಮಾಡಿ ಕ್ರೌರ್ಯವನ್ನು ತೋರುತ್ತಿದ್ದರು; ಆದರೆ ಪರಕ್ಷಣವೇ ಅವರನ್ನು ಕರೆಸಿ ಬಹುಮಾನವನ್ನು ಮಾಡುತ್ತಿದ್ದರು. ಸ್ಥಿರಬುದ್ದಿಯು ಈ ದೊರೆಗಿರಲಿಲ್ಲ; ಹೆಮ್ಮೆಯೂ ಲೋಲುಪ್ತಿಯ ಇದ್ದವು. ಹತ್ತೊಂಭತ್ತು ವರ್ಷಕಾಲ ರಾಜರಾಗಿದ್ದರೂ ಆಡಳಿತದ ವಿಚಾರಗಳನ್ನು ತಿಳಿಯಲು ಪ್ರಯತ್ನಿಸದ ಅವುಗಳೆಲ್ಲವನ್ನೂ ಮಂತ್ರಿಗಳಿಗೆ ಬಿಟ್ಟು ಕೊಟ್ಟು ತಾವು ಸುಖಗಳಲ್ಲಿ ಮಗ್ನರಾಗಿ ತಮ್ಮ ಸಮಾನರೇ ಇಲ್ಲವೆಂದು ತಿಳಿದಿದ್ದರು. ಅಧಿಕಾರಿಗಳೂ ರಾಜರಿಗೆ ಬೇಕಾದ ಸುಖಗಳನ್ನೊದಗಿಸುತ್ತ ಅವರಿಗೆ ರಾಜಕಾರ್ಯಗಳ ತೊಂದರೆಕೊಡದೆ ತಾವೇ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ರಾಜರು ಕೇಳಿದಷ್ಟು ಹಣ ಬೊಕ್ಕಸದಿಂದ ಬರುತ್ತಿತ್ತು. ಆದ್ದರಿಂದ ಈ ರಾಜರು ಸಂಗೀತ, ಸಾಹಿತ್ಯ, ನಾಚು, ರಂಗು ಮುಂತಾದುವುಗಳಲ್ಲಿಯೇ ಆಸಕ್ತರಾಗಿದ್ದರು. ಮೃಗಶಾಲೆಗೇ ವರ್ಷಕ್ಕೆ ಒಂದು ಲಕ್ಷ ವರಹಗಳನ್ನು ಇವರು ವೆಚ್ಚ ಮಾಡುತ್ತಿದ್ದರು. ಆ ಮೃಗ ಶಾಲೆಯಲ್ಲಿ ಹುಲಿ, ಕರಡಿ, ಸಿವಂಗಿ, ಕಾಡೆಮ್ಮೆ, ಹುಲ್ಲೆ ಕರು, ಕಡವೆ, ಸಾರಂಗ, ಕಪಿ, ಗಿಣಿ, ಮಲೆಸೇನ, ಕಾಳಿಂಗ, ನವಿಲು, ಪುನುಗಿನಬೆಕ್ಕು, ಪಾರಿವಾಳ, ಗೌಜಹಕ್ಕಿ, ಲಾವಕನಹಕ್ಕಿ, ಗಿಡಗ, ಭೈರಿ ಮುಂತಾದ ನಾನಾ ಬಗೆಯ ಮೃಗಗಳಿದ್ದವು. ಈ ರಾಜರು ಈ ಮೃಗಗಳ ಸಹವಾಸದಲ್ಲಿಯೂ ತಮ್ಮ ಸುಖವಿನೋದಗಳಲ್ಲಿಯೈ ಕಾಲ ಕಳೆಯುತ್ತ ಬೊಕ್ಕಸದ ಹಣವನ್ನು ವೆಚ್ಚ ಮಾಡಿದರು.
ಈ ದೊಡ್ಡ ಕೃಷ್ಣರಾಜ ಒಡೆಯರವರಿಗೆ ಮಕ್ಕಳಿರಲಿಲ್ಲ. ಅವರ ಹಿರಿಯ ಕುಟುಂಬ ದೇವಾಜಮ್ಮಣ್ಣಿಯವರು ರಾಜ್ಯದ ಸೂತ್ರಗಳನ್ನು ಕೈಹಿಡಿದು ದತ್ತುಮಾಡಿಕೊಳ್ಳುವ ಯೋಚನೆಮಾಡಿದರು. ಮುಂದೆ ಆಳಿದ ಚಾಮರಾಜ ಒಡೆಯರೆಂಬವರೂ ಚಿಕ್ಕ ಕೃಷ್ಣರಾಜ ರೆಂಬವರೂ ಗೊಂಬೆಗಳಂತಾದರು.
*****


















