Home / ಕಥೆ / ಸಣ್ಣ ಕಥೆ / ಮುದಿ ಕಪ್ಪೆ

ಮುದಿ ಕಪ್ಪೆ

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ.

ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿದ. ಕಪ್ಪೆ ಕದಲಲಿಲ್ಲ. ಅವನ ಹೆಂಡತಿಯೇ ಅವನಿಗೆ ಹೆದರುವದಿಲ್ಲ. ಅಂದ ಮೇಲೆ ಕಪ್ಪೆ ಬೆದರುತ್ತದೆಯೇ? ಕಪ್ಪೆಗೇ ಹೊಡೆಯಲು ಅವನ ಮನಸ್ಸಾಗಲಿಲ್ಲ. ಈ ಕಪ್ಪೆಯನ್ನೋಡಿಸಲು ಹಿಂದೆ ಮುಂದೆ ನೋಡುವವರು ಯುದ್ಧಗಿದ್ದಕ್ಕೆ ಹೋದರೆ….” ಎಂದು ಉಮೆ ಚುಚ್ಚಿದಳು. ತನಗೆ ಕಪ್ಪೆಯೆನ್ನೊಡಿಸುವ ಧೈರವೂ ಇಲ್ಲವೆಂದು ಮಡದಿ ತೀರ್ಮಾನಿಸಿ ಕೊಂಡಳಲ್ಲ ಎಂದು ಉಮೇಶನಿಗೆ ನಾಚಿಕೆಯಾಯಿತು. ಆದರೆ ಅವನ ಸಂಕಟ ಅವಳಿಗೆಲ್ಲಿ ತಿಳಿಯಬೇಕು? ಕುರುಕ್ಷೇತ್ರದಲ್ಲಿ ಬಿಲ್ಲು ಬಾಣ ಬಿಸಾಡಿ ನಿಂತ ಅರ್ಜುನನಂತಾಗಿದ್ದ ಉಮೇಶ ಅವನ ತಲೆತುಂಬ ವಿಚಾರ.

ಪಾಪ, ಈ ಕಪ್ಪೆ ಕಚ್ಚುವದಿಲ್ಲ. ಏನೂ ಕದ್ದು ತಿನ್ನುವದಿಲ್ಲಸುಮ್ಮನೆ ನೀರಿನ ತಂಪಿಗಾಗಿ ಕೊಡದ ಬಳಿಗೆ ಕುಳಿತಿದೆ. ಹೊಡೆದರೆ
ಸಾಯುವದು. ನನ್ನ ಮೇಲೆ ತಿರುಗಿ ಬೀಳುವ ಪಾಶ್ವೀವೃತ್ತಿಯದಲ್ಲ. ಇಂಥ ಪ್ರಾಣಿಯನ್ನು ಓಡಿಸಬೇಕೇ? ಏಕೆ? ನನ್ನ ಮನೆಯೊಳಗೆ ಬಂದಿತೆಂದೇ? ಹೆಂಡತಿ ಹೇಳುತ್ತಾಳೆಂದೇ? ನನಗೆ ಈ ಕಪ್ಪೆಯನ್ನು ಹೊಡೆಯಲು ಯಾವ ಅಧಿಕಾರವಿದೆ? ನನ್ನ ಮನೆಯೊಳಗೆ ಬಂದಿತೆಂದು…ನಿಜ. ಆದರೆ ಈ ಮನೆ ನನ್ನದು ಎಷ್ಟರ ಮಟ್ಟಿಗೆ? ಬಾಡಿಗೆ ಕೊಟ್ಟು ಬಿಟ್ಟರೆ ಮನೆ ನನ್ನದಾಗಲಿಲ್ಲ. ನಾಳೆ ಮಾಲಿಕನು ಬಂದು ಹೊರಡಿರಿ ಎಂದರೆ ನಾನು- ನಾವು- ಕಪ್ಪೆಯಂತೆ ಕುಳಿತುಕೊಳ್ಳುತ್ತೇವೆ! ಇನ್ನು ನಾನು…. ಎಂದರೆ ಹತ್ತುವರುಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಎಲ್ಲಿಯೋ ಹೇಗೋ ದಿನ ಕಳೆಯುತ್ತಿದ್ದಾಗ ಜ್ವರ ಬಂದು ನರಳುತ್ತಿದ್ದಾಗ ಈ ಕಪ್ಪೆಯಂತೆ ಒಂದು ಮೂಲೆಯಲ್ಲಿ ಬಿದ್ದಿದ್ದಾಗ ಯಾರೋ ತಾಯಿಯಂತೆ ಆರೈಕೆ ಮಾಡಿ ಬದುಕಿಸದಿದ್ದರೆ….

“ಬೇಗ ಓಡಿಸಿ ಅಂದ್ರೆ” ಎಂದು ಉಮೆಯು ತನ್ನ ‘ಗೀತೆ’ಯನ್ನು ನುಡಿದಳು. ಉಮೇಶನು ತನ್ನ ಹತ್ತರ ಸಾಧ್ಯವಿಲ್ಲವೆಂದು ಸೌದೆಯನ್ನು ಬಿಸಾಡಿ ಕೋಣೆಯೊಳಗೆ ನಡೆದನು. ಅವಳು ನಕ್ಕು, ತನ್ನ ಅತ್ತೆಯನ್ನು ಕರೆದು ಹೇಳಿ ಚೇಷ್ಟೆ ಮಾಡಿದಳು. “ಕಲಿತವರೆಲ್ಲಾ ಹೀಗೇ, ಪುಕ್ಕರು. ಕಪ್ಪೆ ಓಡಿಸಲಿಕ್ಕೂ ಬರುವದಿಲ್ಲ!” ಎಂದು ಅತ್ತೆ ಸೊಸೆಯರಿಬ್ಬರೂ ಕೂಡಿ ಟೀಕಿಸಿದರು. ಉಮೇಶ ಕೇಳಿಯೂ ಕೇಳದವನಂತೆ ಮಲಗಿದ.

ಹೊರಗೆ ಮಲಗಿದ ಆಳನ್ನು ಕರೆದು ಒಂದೇ ನಿಮಿಷದೊಳಗೆ ಓಡಿಸಿ ಬಂದು ಗಂಡನಿಗೆ “ನಿಮ್ಮ ಹತ್ತಿರ ಆಗದಿದ್ದರೇನು? ಸುಬ್ಬ ಒಂದೇ ಪೆಟ್ಟಿಗೆ ಓಡಿಸಿಬಿಟ್ಟ, ಓಹೋ!” ಅಂದಳು ಉಮೆ.

ಉಮೇಶನಿಗೆ ನಿದ್ದೆಯೇ ಹತ್ತಲಿಲ್ಲ. ತಾನು ಹೇಡಿಯೇ? ಎಂದು ತನ್ನನ್ನೇ ಕೇಳಿಕೊಂಡ. ಹೇಡಿಯಾಗಿದ್ದರೆ ದಾರಿದ್ರದ ದಿನಗಳನ್ನು ದಾಟಿ ಊರೂರಲೆದು ಕಲಿಯಲು ಸಮರ್ಥನಾಗುತ್ತಿದ್ದಿಲ್ಲ. ಆದರೆ ಸಾಹಸಕ್ಕೂ ಕಪ್ಪೆಯನ್ನು ಹೊಡೆದೋಡಿಸುವದಕ್ಕೂ ಯಾವ ಸಂಬಂಧ? ಈ ಕೆಲಸದಲ್ಲಿ ಹೇಡಿಯೇ ಆದೆ. ಆಗಲಿ, ಅಡ್ಡಿಯಿಲ್ಲ. ಆದರೆ ಹೆಂಡತಿಯೂ ಚೇಷ್ಟೆ ಮಾಡುವಂತಾಯಿತಲ್ಲ.

ಬದಿಗೆ ಉಮೆಯು ನಿದ್ದೆ ಹೋಗಿದ್ದಳು. ಉಮೇಶನು ಎದ್ದು ಆ ಕಪ್ಪೆಯನ್ನು ಹೊರಗೆ ಹಾಕಿ ಮುಚ್ಚಿದ ಬಾಗಿಲನ್ನೇ ತೆರೆದ. ಬೇಟ್ರಿ ಹಿಡಿದು ನೋಡಿದ. ಅಲ್ಲೇ ಇತ್ತು ಆ ಮುದಿಕಪ್ಪೆ! ಅದು ಉಬ್ಬಸಬಿಡುವದೂ ಅವನಿಗೆ ಕಂಡಿತು. ಅದಕ್ಕೆ ಮಾತಾಡಲು ಬರುತ್ತಿದ್ದರೆ ಎನೆಲ್ಲ ಹೇಳುತ್ತಿತ್ತೋ! ಉಮೇಶ ಎನೇನು ಹೇಳುತ್ತಿದ್ದನೋ! ಒಂದೆರಡು ನಿಮಿಷ ಅವನು ಏನೋ ವಿಚಾರಿಸಿದ. ಮೂರು ನಾಲ್ಕು ಸಲ ಬೇಟ್ರಿಯ ಬೆಳಕು ಬಿಟ್ಟು ನೋಡಿದ. ಕೊನೆಗೆ ಒಂದು ತಂಬಿಗೆ ನೀರು ತಂದು ಅದರ ಬಳಿಗೆ ಸುರಿದು ಬಾಗಿಲ ಹಾಕಿಕೊಂಡು ಬಂದ.

“ಎಲ್ಲಿಗೆ ಹೋಗಿದ್ದಿರಿ?” ಉಮೆಗೆ ಎಚ್ಚರವಾಗಿಬಿಟ್ಟಿತ್ತು!

“ನಿತ್ಯದಂತೆ ಹೊರಗೆ ಹೋಗಿದ್ದೆ” ಎಂದು ಮಲಗಿದ. ಅವನಿಗೆ ಹಿಂದಿನ ದಾರಿದ್ರ್ಯವೆಲ್ಲ ನೆನಪಾಗಿ ಕನಸಿನಲ್ಲಿಯೂ ತೋರಿಸಿಕೊಂಡವು. ಹೀಗೆ ಸ್ಮೃತಿ ಪಟಲವನ್ನು ತಟ್ಟಿದವರು ಯಾರು? ಮುದಿಕಪ್ಪೆಯೋ ಮಡದಿಯೋ ಎಂಬುದು ಮಾತ್ರ ಅವನಿಗೆ ತಿಳಿಯಲಿಲ್ಲ.
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...