Home / ಕಥೆ / ಜನಪದ / ಜಾತ್ರೆಯ ಗದ್ದಲ

ಜಾತ್ರೆಯ ಗದ್ದಲ

ಚಿತ್ರ: ಪಿಕ್ಸಾಬೇ

ಬಯಲಾಟದ ಒಂದು ಮೇಳದಲ್ಲಿ ಸಂಕಣ್ಣ, ಹುಣಸಿಕ್ಕ ಹಿಮ್ಮೇಳದ ಹಾಡುಗಾರರಾಗಿದ್ದರು. ಸಂಕಣ್ಣ ಅಸಾಧ್ಯ ಸಿಂಬಳ ಬುರಕನಾಗಿದ್ದರೆ, ಹುಣಸಿಕ್ಕ ತಡೆಯಿಲ್ಲದೆ ತುರಿಸುವ ಹುರುಕಲಿಯಾಗಿದ್ದನು. ಸಿಂಬಳ ಹಣಿಕೆ ಹಾಕಿದಾಗೊಮ್ಮೆ ಸಂಕಣ್ಣ ಸರಕ್ಕನೇ ಮೂಗೇರಿಸಿ, ಅಂಗಿಯ ತೋಳಿನಿಂದ ಒರೆಸಿಕೊಳ್ಳುವನು.

ಬಲಧಾರೆಯನ್ನು ಬಲತೋಳಿನಿಂದ, ಎಡಧಾರೆಯನ್ನು ಎಡತೋಳಿನಿಂದ ಒರೆಸಿಕೊಂಡು ಅಂಗಿಯ ತೋಳತುದಿಗಳೆರಡೂ ಕಟುರಾಗಿದ್ದವು. ಅದರಂತೆ ಹುಣಸಿಕ್ಕನು ಕೈಬೆರಳ ಸಂದುಗಳಲ್ಲಿ ತುರಿಕೆಯೆದ್ದರೆ ಕೈಗೆ ಕತ್ತರಿ ಮಾಡಿ ತಿಕ್ಕಾಡುವದರಿಂದ ತೊಗಲೆಲ್ಲ ಕೆತ್ತಿಹೋಗಿ ನೆತ್ತರು ಸುರಿಯುವದು.

ಮೇಳದವರು ಅಟ್ಟಹೂಡಿ ತಾವು ಕಲಿತ ಬಯಲಾಟವನ್ನು ಆಡುವದಕ್ಕೆ ಅಣಿಯಾದರು. ಸಂಕಣ್ಣ – ಹುಣಿಸಿಕ್ಕರನ್ನು ಕರೆದು, ಇಂದಿನ ರಾತ್ರಿಯಾದರೂ ಹೇಸಿತನಕ್ಕೆ ಆಸ್ಪದ ಕೊಡದೆ, ಚೊಕ್ಕಾಗಿರಬೇಕೆಂದು ಅವರಿಗೆ ಕಟ್ಟಪ್ಪಣೆ ಮಾಡಿದರು. ನಿಮ್ಮ ಹೇಸಿತನ ಕಂಡುಬಂದರೆ, ನಿಂತಕಾಲಮೇಲೆ ಅಟ್ಟದಿಂದ ಇಳಿಸಿ ನಿಮ್ಮನ್ನು ಮನೆಗೆ ಕಳಿಸುವೆವು ಎಂದು ಹೆದರಿಕೆ ಹಾಕಿದರು. ಆ ಲಕ್ಷ್ಮಣರೇಖೆಯಲ್ಲಿಯೇ ಅಂದಿನ ಇರುಳನ್ನು ಕಳೆಯುವೆವೆಂದು ಅವರಿಬ್ಬರೂ ಮಾತುಕೊಟ್ಟರು.

ಹಳ್ಳಿಯವರೆಲ್ಲ ಉಂಡುಂಡುಬಂದು ಬಯಲಲ್ಲಿ ಸೇರಿದರು. ತಡಮಾಡಿದರೆ ದೂರದಲ್ಲಿಯೇ ಕುಳಿತುಕೊಳ್ಳಬೇಕಾಗುವದೆಂದು ಜನರು ಬೇಗಬೇಗನೆ ಬಂದರು.

ಬಯಲು ತುಂಬುವ ಹೊತ್ತಿಗೆ ಗಣಪತಿ ಸ್ತೋತ್ರವು ಆರಂಭವಾಯಿತು. ಅರ್ಧ ರಾತ್ರಿ ಕಳೆಯುವ ಹೊತ್ತಿಗೆ ಕಥೆ ಭರತಿಗೆ ಬಂತು. ಜನರೆಲ್ಲ ನಿಸ್ತಬ್ಬರಾಗಿ, ಬಿಟ್ಟ ಕಣ್ಣುಗಳಿಂದ ನೋಡುತ್ತ ಕುಳಿತುಕೊಂಡಿದ್ದರು. ಪಾತ್ರಧಾರಿಗಳಿಗೆ ತುಸು ವಿಶ್ರಾಂತಿಯೂ ಬೇಕಾಗಿತ್ತು. ಆ ಸಂದರ್ಭದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಕಣ್ಣ ಹುಣಸಿಕ್ಕ ಮಾತಾಡಿಕೊಂಡು ಒಂದು ಅಡ್ಡಸೋಗು ತರುವುದಕ್ಕೆ ಸಿದ್ಧತೆ ಮಾಡಿದರು.

“ಏನು ಯಮನೂರು ಜಾತ್ರೆಯೋ ಸಂಕಾ ! ಜನದಟ್ಟಣೆ ಏನು ಹೇಳಲಿ?”

“ಬನಶಂಕರಿ ಜಾತ್ರೆ ಅದಕ್ಕೂ ಗಡಚು. ಆ ನುಗ್ಗಾಟದಲ್ಲಿ ಒಳ್ಳೊಳ್ಳೆಯವರು ಜಬ್ಬಾಗಿ ಹೋಗುತ್ತಿದ್ದರು.”

“ಅಷ್ಟೊಂದು ಜನ ಸುಮ್ಮನೆ ಒಂದೆಡೆಗೇ ನಿಂತಿರಲಿಲ್ಲ. ಅತ್ತಿಂದ ಇತ್ತ, ಇತ್ತಿಂದ ಅತ್ತ ಬರುತ್ತಲೇ ಇತ್ತು; ಹೋಗುತ್ತಲೇ ಇತ್ತು” ಎಂದು ಹೇಳುವ
ಸಮಯದಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಅಂಗಿಯ ತೋಳುಗಳಿಂದ ಒಳಿತಾಗಿ ಮೂಗು ಒರೆಸಿಕೊಂಡನು ಸಂಕಣ್ಣ.

ಥೂ ಥೂ ಥೂ ! ಒಂದು ಹೆಜ್ಜೆ ಮುಂದೆ ಸಾಗೇನೆಂದರೆ ತಿಕ್ಕಾಟ ಮುಕ್ಕಾಟ ! ತಿಕ್ಕಾಟ ಮುಕ್ಕಾಟ !” ಎನುತ್ತ ಕೈ ಬೆರಳುಗಳ ಕತ್ತರಿಮಾಡಿ ತಿಕ್ಕಿ ತಿಕ್ಕಿ ಹುರುಕಿನ ತುರಿಕೆಯನ್ನು ತಮ್ಮಣಿಗೊಳಿಸಿಕೊಂಡನು ಹುಣಸಿಕ್ಕ.

ಈ ರೀತಿ ಅಡ್ಡಸೋಗು ಮುಗಿಸಿ ಅವರಿಬ್ಬರೂ ಒಳಗೆ ಬಂದು ಹಿಮ್ಮೇಳದವರನ್ನು ಕೂಡಿಕೊಂಡರು. ಮುಂದಿನ ಅರ್ಧರಾತ್ರಿಯನ್ನು ಅವನು ಮಾತುಕೊಟ್ಟಂತೆ ಕಳೆಯುವುದಕ್ಕೆ ಸಾಧ್ಯವಾಯಿತು. ಮೇಳದವರಿಗೆ ಜಾತ್ರೆಯ ಗದ್ದಲದ ಅರ್ಥವಾಗದೆ ಇರಲಿಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...