Home / ಕಥೆ / ಜನಪದ / ಒಂಟೆಯ ಮೇಲಿನ ಶಾಹಣೆ

ಒಂಟೆಯ ಮೇಲಿನ ಶಾಹಣೆ

ಚಿತ್ರ: ಪಿಕ್ಸಾಬೇ

ಹಳ್ಳಿಯಲ್ಲಿ ಒಕ್ಕಲಿಗರ ಮನೆ. ದನಗಳ ಕೊಟ್ಟಿಗೆಯಲ್ಲಿಯೇ ಅವರು ಬಚ್ಚಲಮಾಡಿ ಕೊಂಡಿದ್ದರು. ಎಮ್ಮೆಯ ಕರು ಒಂದು ದಿನ ನೀರಡಿಸಿ, ಕಟ್ಟಿಹಾಕಿದ ಕಣ್ಣಿಯನ್ನು ಹರಿದುಕೊಂಡು ಬಚ್ಚಲುಮನೆಗೆ ನೀರು ಕುಡಿಯಲು ಹೊಕ್ಕಿತು. ಜಳಕದ ಹಂಡೆಯಲ್ಲಿ ಬಾಯಿಹಾಕಿತು.

ಚಿಕ್ಕದಾದ ಹಂಡೆಯ ಬಾಯಿಗಿಂತ ದೊಡ್ಡದಾದ ಕೋಣನ ತಲೆಯು ಹಂಡೆಯಲ್ಲಿ ಸಿಕ್ಕುಕೊಂಡಿತು. ಜಗ್ಗಾಡಿತು. ಎಳೆದಾಡಿತು. ಬಗೆ ಹರಿಯಲಿಲ್ಲ. ಮನೆಯವರು; ಓಡಿಬಂದರು ಒಬ್ಬಿಬ್ಬರು ಹಂಡೆ ಹಿಡಿದರು. ಒಬ್ಬಿಬ್ಬರು ಕೋಣಕರುವನ್ನು ಹಿಡಿದೆಳೆದರು. ಏನುಮಾಡಿದರೂ ಕೋಣನ ತಲೆ ಹಂಡೆಯಿಂದ ಹೊರಬರಲಿಲ್ಲ. ಕೊನೆಗೆ ಊರಲ್ಲಿರುವ ಶಾಹಣೆನನ್ನು ಕರೆಯಕಳಿಸಿದರು.

ಬಹಳ ಶಾಹಣೆ ಎಂದು ಆತನು ಆ ಭಾಗದ ಹಳ್ಳಿಗಳಿಗೆಲ್ಲ ಹೆಸರಾಗಿದ್ದನು. ಎಲ್ಲಿಗೆ ಹೋದರೂ ಆತನು ಒಂಟೆಯ ಮೇಲೆ ಕುಳಿತುಕೊಂಡೇ ಹೋಗುತ್ತಿದ್ದನು. ಹೋದಲ್ಲಿ ಅವನು ಯುಕ್ತಿ ಹೇಳುವಾಗ ಸಹ ಒಂಟೆಯ ಮೇಲಿಂದ ಕೆಳಗಿಳಿಯುತ್ತಿದ್ದಿಲ್ಲ. ಒಂಟೆಯ ಮೇಲೆ ಕುಳಿತುಕೊಂಡೇ ಬುದ್ದಿ ಹೇಳುತ್ತಿದ್ದುದರಿಂದ ಅವನನ್ನು ಒಂಟೆಯ ಮೇಲಿನ ಶಾಹಣೆ ಎಂದು ಕರೆಯುತ್ತಿದ್ದರು.

ಆ ಒಂಟೆಯಮೇಲಿನ ಶಾಹಣೆ ಬಂದನು. ಆದರೆ ಆ ರೈತನ ಮನೆಯ ಒಳಗೆ ಬರುವುದು ಹೇಗೆ ? ಆತನಂತೂ ಒಂಟೆಯ ಮೇಲೆ ಕುಳಿತುಕೊಂಡೇ ಬರತಕ್ಕವನು.

ಮನೆಯೊಳಗೆ ಬರುವದಕ್ಕೆ ಯುಕ್ತಿಯನ್ನೂ ಅವನೇ ಹೇಳಿಕೊಟ್ಟನು. ಆ ಪ್ರಕಾರ ತಲೆಬಾಗಿಲನ್ನು ಕಿತ್ತಿಡಬೇಕಾಯಿತು. ಆಗ ಒಳಗೆ ಬಂದು ಇದ್ದ ತೊಡಕನ್ನು ನಿರೀಕ್ಷಿಸಿದನು – “ಇದೇನು ಮಹಾ” ಎಂದನು.

ಕೋಣನ ಕುತ್ತಿಗೆ ಕಡೆಯಲು ಹೇಳಿದನು.
ಹಂಡೆಯನ್ನು ಒಡೆಯಲು ಸಲಹೆಯಿತ್ತನು.

ಅವನು ಹೇಳಿದಂತೆ ಎಲ್ಲವೂ ನಡೆದುಹೋಯಿತು. “ನೋಡಿರಿ, ಕೋಣನ ರುಂಡವು ಹಂಡೆಯಿಂದ ಹೊರಟಿತಲ್ಲವೇ” ಎಂದು ನುಡಿದು. ಒಂಟೆಯನ್ನು ಹೊರಳಿಸಿಕೊಂಡು ತನ್ನ ಮನೆಯ ಹಾದಿ ಹಿಡಿದನು. ನೆರೆದ ಜನರು ಬೆಪ್ಪಾಗಿ ನಿಂತರು. ಒಂಟೆಯ ಮೇಲಿನ ಶಾಹಣೇನ ಯುಕ್ತಿ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...