Home / ಲೇಖನ / ಇತರೆ / ಆ ಘಳಿಗೆಗಾಗಿ ಎಷ್ಟೆಲ್ಲಾ….?

ಆ ಘಳಿಗೆಗಾಗಿ ಎಷ್ಟೆಲ್ಲಾ….?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಆ ಮನೆಯಲ್ಲಿ ನಿತ್ಯದಂತೆ ಆ ರಾತ್ರಿಯೂ ತನ್ನ ಕರಾಳ ಹಸ್ತ ಚಾಚಿದೆ. ಕಂಠಪೂರ್ತಿ ಕುಡಿದು ಬಂದ ಅವನು, ತನ್ನ ಪತ್ನಿ ದಿನವಿಡೀ ಬೆವರು ಹರಿಸಿ ದುಡಿವ ಹಣವನ್ನು ಕೊಡುವಂತೆ ಪೀಡಿಸುತ್ತಾ ಹೊಡೆಯುತ್ತಿದ್ದಾನೆ. ಅವಳು ನಿರಾಕರಿಸಿದಷ್ಟೂ ಇವನ ರೋಷ ಉಕ್ಕುತ್ತದೆ. ಮುಖ ಮೂತಿ ನೋಡದೇ ಅವಳನ್ನು ಚಚ್ಚುತ್ತಾನೆ. ಕೊನೆಗೊಮ್ಮೆ ಅವಳು ಸೋತು ಒಂದಿಷ್ಟು ಪುಡಿಗಾಸು ಅವನಿಗೆ ನೀಡುತ್ತಾಳೆ. ಅವನು ಮತ್ತೂ ಹಣ ಕೊಡುವಂತೆ ದಬಾಯಿಸುತ್ತಾನೆ. ಮತ್ತೆ….  ಅದೇ ಅದೇ ಘಟನೆಗಳು, ಮತ್ತೆ ಮತ್ತೆ ಅದೆಷ್ಟು ವರ್ಷಗಳಿಂದ ಪುನರಾವರ್ತನೆಯೋ ಲೆಕ್ಕವಿಟ್ಟವರಾರು ? ಆದರೆ ಆ ದಿನ ಮಾತ್ರ ಅವಳ ಹದಿನಾರು ವರ್ಷದ ಮಗಳು ಒಂದು ಪ್ರಶ್ನೆ ಕೇಳುತ್ತಾಳೆ. ಆ ಪ್ರಶ್ನೆ ತಾಯಿಯ ಬದುಕಿನ ಇಷ್ಟು ದಿನದ ಗೋಳಿಗೆ ಇತಿಶ್ರೀ ಹಾಡುತ್ತದೆ. ಬುದ್ಧಿ ತಿಳಿದಂದಿನಿಂದ
ಆ ಹುಡುಗಿ ದಿನ ರಾತ್ರಿ ಇದೇ ದೃಶ್ಯಗಳನ್ನು ತಪ್ಪದೇ ನೋಡುತ್ತಾ ಬಂದಿದ್ದಾಳೆ. ತಾಯಿಯನ್ನು ಅಪ್ಪನಿಂದ ಬಿಡಿಸಿಕೊಳ್ಳಲು ಹೋಗಿ ತಾನು ಹೊಡೆತ ತಿಂದಿದ್ದಾಳೆ, ಅತ್ತಿದ್ದಾಳೆ, ನೋವನುಭವಿಸಿದ್ದಾಳೆ. ಮತ್ತೆ ಎಲ್ಲಾ ಮರೆತು ನಿದ್ದೆ ಹೋಗಿದ್ದಾಳೆ.

ಆದರೆ ಅಂದು ಮಾತ್ರ ಅವಳಿಗೆ ಜ್ಞಾನೋದಯವಾದಂತಿದೆ. ಅಮ್ಮನನ್ನು ಪ್ರಶ್ನಿಸುತ್ತಾಳೆ. ಅಮ್ಮ ನಮ್ಮ ಸಂಸಾರ ಸಾಗ್ತಾ ಇರೋದೇ ನಿನ್ನ ದುಡಿಮೆಯಿಂದ, ನಿನ್ನ ಪ್ರೀತಿಯಿಂದ, ಬುದ್ಧಿವಂತಿಕೆಯಿಂದ. ಅಪ್ಪ ಈ ಸಂಸಾರಕ್ಕೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಅಂದ ಮೇಲೆ ನೀನ್ಯಾಕೆ ದಿನಾ ಈ ನರಕವನ್ನು, ನೋವನ್ನು ಅನುಭವಿಸ್ಬೇಕು? ಅವನನ್ನು ಬಿಟ್ಟು ಬಿಡೋದಕ್ಕಾಗಲ್ವಾ ?

ಸಖಿ, ಈ ಪ್ರಶ್ನೆಗೆ ಅಮ್ಮ ಅಯ್ಯೋ ಅವನು ನನ್ನ ಗಂಡ. ಅವನು ಹೊಡೀಲಿ, ಬಡೀಲಿ ಸಾಯೋವರೆಗೂ ಅವನೊಂದಿಗೇ ಬದುಕಬೇಕಿರುವುದು ನನ್ನ ಧರ್ಮ-ಕರ್ಮ. ಗಂಡನ್ನ ಬಿಟ್ರೆ ಸಮಾಜ ಏನನ್ನುತ್ತೆ ? ಜನ ಏನನ್ತಾರೆ ?…ಇತ್ಯಾದಿ ಹೇಳ್ತಾಳೆ ಎಂದು ನಿನ್ನ ಊಹೆಯಾಗಿದ್ದರೆ, ಅದು ತಪ್ಪು. ಅಮ್ಮ ಹೇಳ್ತಾಳೆ, ಮಗಳೇ ಇವತ್ತು ನಿಜಕ್ಕೂ ನನಗೆ ಸಂತೋಷವಾಗಿದೆ. ಜನ, ಸಮಾಜ ಅನ್ನಲಿ. ನಿನಗೆ ನಿಜ ಏನು ಅನ್ನೋದು ಗೊತ್ತಿರಬೇಕು. ನಾನು ಯಾವತ್ತೋ ಈ ಗಂಡನ್ನ ಬಿಟ್ಟು ಹೋಗಬಹುದಿತ್ತು. ಆದರೆ ಆಗ ನಾನು ನಿನ್ನ ದೃಷ್ಟಿಯಲ್ಲೂ ಕೀಳಾಗಿಬಿಡ್ತಿದ್ದೆ. ಈಗ ನಿನಗೆ ಅಪ್ಪನ ಅವಶ್ಯಕತೆ ನಮಗಿಲ್ಲ ಅನ್ನೋ ತಿಳಿವಳಿಕೆ ಬಂದಿದೆ. ಅವನು ಮಾಡ್ತಾ ಇರೋದು ತಪ್ಪು, ನಾನು ಸರಿ ಅನ್ನೋ ನಂಬಿಕೆ ಬಂದಿದೆ. ಇನ್ನು ನಾನು ಯಾವುದಕ್ಕೂ ಹೆದರಬೇಕಿಲ್ಲ. ಇಂದಿಗೆ ನನಗೆ ಈ ನರಕದಿಂದಲೂ ಮುಕ್ತಿ ಸಿಕ್ಕಿದೆ. ನಾಳೇನೇ ಇಲ್ಲಿಂದ ದೂರ ಹೊರಟು ಹೋಗೋಣ ಎನ್ನುತ್ತಾ ಬುಡ್ಡಿಗೆ ಇನ್ನಷ್ಟು ಎಣ್ಣೆ ಸುರಿದು ಬೆಳಕು ಹೆಚ್ಚಿಸುತ್ತಾಳೆ.

ರಾತ್ರಿಯಿಡೀ ತಾಯಿ ಮಗಳು ಸೇರಿ ತಮ್ಮ ಸಾಮಾನು ಗಂಟು ಕಟ್ಟುತ್ತಾರೆ. ಆ ದಿನ ಸೂರ್ಯನಿಗೂ ಅವಸರ. ಬೇಗನೇ ಉದಯಿಸಿಬಿಟ್ಟಿದ್ದಾನೆ. ಇವರು ಗಂಟು ಮೂಟೆ
ಹಿಡಿದು ಮುಂದೆ ನಡೆದಂತೆಲ್ಲಾ ಸೂರ್ಯ ಅವರಿಗೆ ದಾರಿ ತೋರುತ್ತಾ ಮುನ್ನಡೆಯುತ್ತಾನೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...