ತಟ್ಟಿಯಲ್ಲಿ ಕಟ್ಟಿದ ಸಣ್ಣ ಕರು ಒಂದೇ ಸಮನೇ ಅಂಬಾ.. ಕೂಗುತ್ತಲೇ ಇತ್ತು. ತಾಯಿಯನ್ನು ಮೇಯಲು ಬಿಟ್ಟು ಕರುವನ್ನು ಕಟ್ಟಿ ಹಾಕಲು ಮಗಳು ಸಣ್ಣುಗೆ ಹೇಳಿ ಕುಸಲಿ ಕೆಲಸಕ್ಕೆ ಹೋಗಿದ್ದಾಳೆ. ಉಗಾದಿ ಆಗಿಂದ ಏನಾದರೊಂದು ನೆವ ತೆಗೆದು ತಕರಾರು ಮಾಡುತ್ತಲೇ ಇದ್ದಾನೆ. ಆತನಿಗೆ ನಾಲ್ಕೇಟು ಬಾರಿಸಲೇ ಎನ್ನುವಷ್ಟು ಕೋಪ ಬಂದರೂ ಸಣ್ಣು ತಡೆದುಕೊಂಡೇ ಆತನನ್ನು ಓಲೈಸುತ್ತಿದ್ದಾಳೆ. ’ಅಂವ ಸಣ್ಣವ,ಅರಿಯದ ಕೂಸು’ ಆಗಾಗ ಅವ್ವ ಹೇಳುತ್ತಲೇ ಇರುತ್ತಾಳೆ.

ಅವ್ವ ಬರುವ ಮುನ್ನ ಅಂಗಳವನ್ನೆಲ್ಲಾ ಸಾರಿಸಿ ಇಡಬೇಕು. ’ಇಂವನ ಕಾಟ ಬ್ಯಾರೆ’. ಗಂಜಿ ಬೇಯಿಸಲಿಕ್ಕೆ ಇಟ್ಟಿದ್ದು ಇನ್ನು ಹದ ಬೆಂದಿಲ್ಲ. ಅದಾದ್ರೂ ಆಗಿದ್ರೆ ಉಗಾದಿಗೆ ಬಡಿಸಿ ಆತನ ಮಲಗಿಸಬಹುದಿತ್ತು. ಸಣ್ಣುವಿನ ಯೋಚನೆಯ ಜೊತೆ ಆಕೆಯ ಸಣ್ಣ ಕೈಗಳು ಎಡಬಿಡದೇ ಕೆಲಸ ಮಾಡುತ್ತಲೇ ಇವೆ. ಸಣ್ಣ ಮನೆಯಲ್ಲಿ ಎರಡೇ ಕೋಣೆ. ಒಂದು ಅಡುಗೆಯ ಕೋಣೆ. ಇನ್ನೊಂದು ಮಲಗುವ ಕೋಣೆ. ಬಿಟ್ಟರೆ ಮುಂದಿನ ಚಿಕ್ಕ ಜಗುಲಿ. ಮತ್ತೆ ಹೊರಗಿನ ತೆಣೆ.

“ಅಕ್ಕಾ ಬಡಸಡ್ತಿಯೇನೇ? ಹಚಿವ್ಯಾತಿದೆ. ತಿನ್ನುಕೆ ಏನಾರು ಕುಡೇ” ನಾಲ್ಕರ ಪೋರ ಪದೇ ಪದೇ ಆಕೆಯ ಪೀಡಿಸುತ್ತಿದ್ದರೆ, ಹನ್ನೆರಡರ ಬಾಲೆ ಸರಿಯಾಗಿ ಹೊತ್ತದ ಒಲೆಯನ್ನು ಪುರ್.. ಪುರ್.. ಎಂದು ಒಂದೇ ಸಮನೆ ಊದುತ್ತ, ಸ್ವಲ್ಪ ಹೊತ್ತಿದೊಡನೆ ಚರಿಗೆ ಹಿಡಿದು ಬಾವಿಯಿಂದ ಒಂದೊಂದೆ ಕೊಡ ನೀರು ಸೇದು ತಂದು ಕಲ್ಲಿನ ಬಾನಿ ತುಂಬಿಸುತ್ತಿದ್ದಾಳೆ.

ಉಗಾದಿ ಹೊಟ್ಟೆ ಹಿಡಿದು ಪದೇ ಪದೇ ಹಸಿವೆಂದು ಗೊಣಗುತ್ತ, ಅಳಲು ಶುರು ಮಾಡಿದ. ಆಕೆಗೆ ಬೇರೆ ಉಪಾಯ ಕಾಣಲಿಲ್ಲ. ಅರೆಬರೆ ಬೆಂದ ಗಂಜಿಯ ತಟ್ಟೆಗೆ ಸುರಿದು ಉಪ್ಪು ಮೆಣಸು ನುರಿದು ಕೊಟ್ಟಳು. ಉಗಾದಿ ಅದನ್ನೆ ಮೃಷ್ಟಾನ್ನದಂತೆ ಚಪ್ಪರಿಸುತ್ತಿದ್ದ.

“ಮಗಾ, ಬೈಸರಿಗೆ ದ್ಯಾವ್ರ ಮೆರವಣಿಗೆ ಬರುದು, ಆಂಗಳಾ ಚೆಗಣಿ ಹಾಕ್ ಬಗೀಲೆ ಸಾರ್‍ಸಿಡು ಆಗಾ.. ಎಂದು ಅವ್ವ ಹೇಳಿದ್ದು ಮತ್ತೊಮ್ಮೆ ನೆನಪಾಯ್ತು ಆಕೆಗೆ.

“ಉಗಾದಿ ಇಕಾ ಇಲ್ಲೆ ಉಣ್ತೆ ಕುತ್ಕಂಡಿರು, ನಾ ಅಂಗ್ಳಾ ಸಾರ್‍ಸುಕೆ ಸೆಗಣಿ ತಗಂಬತ್ತಿ, ಏನಾ? ಮತ್ತಿಲ್ಲರೂ ಹೋಗ್ವೆ ಮತ್ತೇ? ಆವ್ವಿಗೆ ಹೇಳ್ತಿ ನೋಡು! ಸಣ್ಣು ಸಣ್ಣಗೆ ಆತನಿಗೆ ಹೆದರಿಸಿ ಸೆಗಣಿ ಬುಟ್ಟಿ ಹಿಡಿದು ತಟ್ಟಿ ಕಡೆ ನಡೆದಳು. ನೋಡಿದರೆ ತಟ್ಟಿಯಲ್ಲಿ ಸೆಗಣಿ ಇಲ್ಲ. ಗೊಬ್ಬರ ಕುಳಿ[ಗುಂಡಿ] ಕೆದಕುವುದೆಂದರೆ ಆಕೆಗೆ ಹೇಸಿಗೆ. ಇಷ್ಟುದ್ದದ್ದ ಗೊಬ್ಬರ ಹುಳುಗಳು ಅದರಲ್ಲೆಲ್ಲಾ ಮಿಡುಕಾಡುವುದನ್ನು ಕಂಡರೆ ಆಕೆಗೆ ಮೈಮೇಲೆಲ್ಲಾ ಮುಳ್ಳುಗಳೇಳುತ್ತವೆ. ಹಂಗೇ ಬಯಲಿಗೆ ಹೋದರೆ ಅಷ್ಟುದ್ದಕ್ಕೂ ಸಾಕಷ್ಟು ಕೊಂಚ ಒಣಗಿದ ಸೆಗಣಿ ಸಿಗುವುದು.

ಸಣ್ಣು ತಡಮಾಡಲಿಲ್ಲ. ತನ್ನ ಮಾಸಿದ ಲಂಗವ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಕಳೆ ಬೆಳೆದ ಬಯಲಿನ ಗುಂಟ ನಡೆದಳು. ಅಲ್ಲಲ್ಲಿ ಬಿದ್ದ ಸೆಗಣಿ ಉಂಡೆಗಳ ಎತ್ತಿ ಬುಟ್ಟಿಗೇರಿಸಿದಳು. ಹೋಗುವಾಗ ಲಂಗ ಎತ್ತಿ ಕಟ್ಟಿದ್ದರಿಂದ ಹತ್ತದ ಕಳೆಗಿಡದ ಚುಂಗುಗಳು ಬರುವಾಗ ಲಂಗಕ್ಕೆ ಅಂಟಿಕೊಂಡವು. ಬರುವಾಗ ಸೆಗಣಿಯ ಹೊರೆ ತಲೆ ಏರಿತ್ತು. ಲಂಗ ಎತ್ತಿ ಕಟ್ಟಿದ್ದರೂ ಬೆನ್ನಿಗೆ ಹತ್ತಿದ ಹೊಟ್ಟೆ, ಎತ್ತಿದ ಕೈಗಳ ಭಾರಕ್ಕೆ ಲಂಗ ಜಾರಿ ಜಾರಿ ಹೋಗುತ್ತಲೇ ಗಿಡದ ಚುಂಗುಗಳು ಚಿತ್ರದಂತೆ ಅಂಟಿಕೊಂಡೇ ಬಿಟ್ಟವು. ದಾರಿಯುದ್ದಕ್ಕೂ ಆಗಾಗ ಮೊಣಕಾಲಿನ ಕೆಳಗೆ ಸಣ್ಣಗೆ ಅದೇನೋ ಚುಚ್ಚುವ ಅನುಭವ ಕೊಡುತ್ತಲೇ ಇತ್ತು. ತಮ್ಮನೊಬ್ಬನನ್ನೆ ಬಿಟ್ಟು ಹೊರಟಿದ್ದಕ್ಕೋ, ಮನೆಯಲ್ಲಿ ಯಾರಿಲ್ಲ ಎಂಬ ಕಾರಣಕ್ಕೋ ಸಣ್ಣು ಅದನ್ನೆಲ್ಲಾ ನೋಡುತ್ತ ಕೂರಲಿಲ್ಲ. ಮತ್ತಾಕೆಗೆ ಅವೆಲ್ಲ ಹೊಸದೂ ಅಲ್ಲ. ಮನೆಗೆ ಹೋಗಿ ನೋಡಿದರಾಯ್ತೆಂದು ಕೊಂಡಳು.

“ಅಕ್ಕೋ, ಬ್ಯಾಗೇ ಬಾರೇ…ಮನಿಕಡೆ ಯಾರೋ ಬಂದಿರು ಉಗಾದಿ ಕರೆಯುತ್ತಿದ್ದ. ಮನೆ ಹೊರಗಿನ ಕಲ್ಲುಮರಿಗೆಯ ನೀರಲ್ಲಿ ಕೈಕಾಲು ತೊಳೆದು ಬಂದವಳಿಗೆ ಒಮ್ಮೆಲೆ ಆತನ ಕಂಡು ನಾಚಿಕೆಯಾಯ್ತು. ತನ್ನ ವೇಷ ನೋಡಿ ಅವನೇನೆಂದುಕೊಳ್ಳುವನೋ! ಎಂಬ ಹಳಹಳಿಕೆ. ಅವ ಆಕೆಯ ಶಾಲೆಯ ಗೆಳತಿ ಸುವರ್ಣಳ ಅಣ್ಣ. ಸುವರ್ಣಳ ಅಕ್ಕನ ಮದುವೆ ಗೊತ್ತಾಗಿದೆ ಎಂದು ಸುವರ್ಣ ಹೇಳಿದ್ದು ನೆನಪಾಯ್ತು. ಸಣ್ಣುವಿಗೆ ಆಗಷ್ಟೇ ಎದೆಯರಳಿ ಮೂಡುವ ಹೊತ್ತು. ನಾಚಿಕೆಯ ಹೊದಿಕೆ ಮನದಲ್ಲಿ ತಾನೇ ತಾನೇ ಅರಳುವ ಹೊತ್ತು. ಆತ ಚಿಗುರುಮೀಸೆಯ ತರುಣ. ಬೇಗ ಬೇಗ ಬುಟ್ಟಿ ಮನೆ ಹಿಂದೆ ಇಟ್ಟು ಬಂದವಳಿಗೆ, ಆ ಹುಡುಗ ಲಗ್ನ ಪತ್ರಿಕೆ ಕೊಟ್ಟು ಒಂದು ಮುದ್ದಾದ ನಗುವನ್ನೆಸೆದು ಮದುವೆಗೆ ಬರುವಂತೆ ಸಹಜವಾಗಿ ಹೇಳಿ ಹೋದ. ಸಣ್ಣುವಿನ ಕಣ್ಣುಗಳಲ್ಲೋ ಮಾಯಕದ ಪೊರೆ ಅವಳಿಗರಿವಿಲ್ಲದೇ ಕಟ್ಟಿಕೊಂಡಿತು. ಮದುವೆಗೆ ಹೋಗೇ ಹೋಗುವ ಆಸೆ ಬೆಟ್ಟದಂತೆ ಬೆಳೆಯತೊಡಗಿತು.

“ಉಗಾದಿ ಉಂಡ್ಕಂಡೀ ಮಲಿಕಾ, ಹಾ ಏನಾ…. ಅಲ್ಲಿ ಕಂಬಳಿ ಇತ್ತ ನೋಡಾ. ಚಾಪೆ ಹಾಕಂಡಿ ಮಲಿಕಣೋ, ಚುರುಕ ಇಂವಾ ಅಂದ ಹೇಳ್ಬೇಕ್ ನೋಡು ಯಾರರೂವಾ. ನಾ ಸೆಗಣಿ ಹಾಕಿ ಬತ್ತಿ. ಅವ್ವಿ ತಾ ಬರುವಂಕ್ರಿಗೆ ಸೆಗಣಿ ಸಾರ್‍ಸಿಡುಕೆ ಹೇಳಿದು, ನಾ ಸಾರ್‍ಸಕಂಡೇ ಬರ್‍ವೆ. ಕಡೀಗೀ ಮಿಂದ್ಕಂಡೇ ಬಂದ್ ಉಣ್ವೇ, ಮೈಯೆಲ್ಲಾ ಗಲೀಜಾಗೀದು. ಎನ್ನುತ್ತಾ ಸಣ್ಣು ಅಂಗಳಕ್ಕಿಳಿದಳು.

ಬುಟ್ಟಿಯಿಂದ ತೊಪ್ಪನೆ ಅಂಗಳಕ್ಕೆ ಸೆಗಣಿ ಸುರಿದ ರಭಸಕ್ಕೆ ಬಾಯಿವರೆಗೂ ಹಾರಿದ ಸೆಗಣಿಯನ್ನು ಕೈಯಿಂದ ಒರೆಸಿಕೊಂಡು, ಸೆಗಣಿ ಕಲಿಸತೊಡಗಿದಳು. ನೀರು ಹಾಕಿ ಕಾಲಿನಿಂದ ತೊಪತೊಪನೆ ಗುದ್ದಿ ಸೆಗಣಿಯನ್ನು ತೆಳ್ಳಗೆ ಪಾಯಸದಂತೆ ಹದ ಮಾಡಿದಳು. ಕೈಯಲ್ಲಿ ಹಿಡಿಸೂಡಿ ಹಿಡಿದು ಮಣ್ಣು ಎದ್ದಲ್ಲೆಲ್ಲಾ ಮೆತ್ತಿ ಮತ್ತಿ ಹಾಕತೊಡಗಿದಳು. ಸೆಗಣಿ ಹಾಕುವುದೆಂದರೆ ತನಗೆ ಯಾಕಿಷ್ಟು ಇಷ್ಟ?. ಅವ್ವ ಬೇರೇನಾದರೂ ಕೆಲಸ ಹೇಳಿದರೆ ಅಸಡ್ಡೆ ಮಾಡುವ ತಾನು ಈ ಕೆಲಸವನ್ನು ಮಾತ್ರ ತಪ್ಪದೇ ಮಾಡುತ್ತೇನೆ ಎಂಬುದನ್ನು ನೆನೆದಾಗ ಆಕೆಗೆ ನಗು ಬಂತು. ಕಪ್ಪು ಸೆಗಣಿಯ ಕಡೆ ಕಣ್ಣು ಹೊರಳಿತಷ್ಟೇ! ಮತ್ತೆ ಖುಷಿಯಾದಳು. ಕರಿ ಸೆಗಣಿಯಲ್ಲಿ ಅದ್ದಿ ನಿಂತ ತನ್ನ ಕಪ್ಪು ಕಾಲುಗಳು ಇಂದೇಕೋ ಬೆಳ್ಳಬೆಳ್ಳಗೆ ಕಾಣುತ್ತಿರುವುದು ಸೆಗಣಿಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿತು. ಆ ತನ್ಮಯತೆಗೆ ಒಳಗಾದರೂ ಇಂದು ಮನದ ತುಂಬಾ ಆ ಹುಡುಗ ಬೇರೆ ತುಂಬಿಕೊಂಡಿದ್ದ. ಮತ್ತೊಮ್ಮೆ ಮದುವೆಗೆ ಹೋಗುವುದಕ್ಕಾಗಿ ಮನ ಕುಣಿಯಿತು. ಆದರೆ ಮದುವೆಗೆ ಹೋಗಲು ತನ್ನ ಬಳಿ ಯಾವ ಬಟ್ಟೆಯೂ ಇಲ್ಲ. ಇರುವುದೆಲ್ಲ ಅಲ್ಲಲ್ಲಿ ತೇಪೆ ಬಿದ್ದ ಅಂಗಿಗಳೇ. ಮತ್ತೀಗ ತಾನು ದೊಡ್ಡವಳಾಗಿರುವೆ. ಲಂಗ ರವಿಕೆ ಇದ್ದರೆಷ್ಟು ಚೆನ್ನಾಗಿರುತ್ತಿತ್ತು. ಏನು ಮಾಡಲಿ ಎನ್ನುವ ಯೋಚನೆಗೆ ಆಕೆಗೆ ತಟ್ಟನೇ ಹೊಳೆದದ್ದು ಅಮೋಘಳ ಜರಿ ಲಂಗ ರವಿಕೆ.

ಅಷ್ಟು ದೂರಕ್ಕೆ ಕಣ್ಣು ಹಾಯಿಸಿದಳು. ರಾಮದಾಸ ನಾಯಕರ ಮನೆ ಕಿಬಳಿಗೆ ತಂತಿ ಮೇಲೆ ಹರಹಿದ ರಾಶಿ ಬಟ್ಟೆಗಳು ಕಣ್ಣು ಕುಕ್ಕಿದವು. ಬಣ್ಣಬಣ್ಣದ ಹೊಸ ಹೊಸ ನಮೂನೆಯ ಆ ಎಲ್ಲ ಬಟ್ಟೆಗಳು ತನ್ನಲ್ಲಿದ್ದರೆ ಎನ್ನುತ್ತ ಸೆಗಣಿ ಕೈಯ ಮೇಲೆತ್ತಿ ಒಮ್ಮೆ ಆ ಕಡೆ ನೋಟ ಕೀಲಿಸಿದಳು. ಆ ಎಲ್ಲ ಬಟ್ಟೆಗಳ ನಡುವೆ ಅದೊಂದು ಮೊನ್ನೆ ಮೊನ್ನೆ ಗಣಪತಿ ಹಬ್ಬದ ಮಾರನೆ ದಿನ ನಾಯಕರ ಒಬ್ಬಳೇ ಮಗಳು ಅಮೋಘ ಹಾಕಿಕೊಂಡು ಬಂದಿದ್ದಳು. ಆಕೆ ಪಕ್ಕದೂರಿನಲ್ಲಿ ಕಲಿಯುತ್ತಿದ್ದಾಳೆ. ತನ್ನಷ್ಟೇ ಕ್ಲಾಸು. ಆದರೆ ಆಕೆ ಇಂಗ್ಲಿಷು ಶಾಲೆಗೆ ಹೋಗುವುದು. ಟುಸ್ ಪುಸ್ ಅಂತೆಲ್ಲ ತನ್ನ ಮುಂದೇ ಬೇಕೆಂತಲೇ ಆಡಿ ಕಾಡುವುದು ಇದೆ. ತನ್ನಮ್ಮ ಆಕೆಯನ್ನು ನೋಡಿ ಮೆಚ್ಚಿ ಹೇಳುತ್ತಿದ್ದ ಮಾತು ಕಿವಿಯಲ್ಲಿ ಊದಿದಂತಾಗುತ್ತಲೇ ಇರುತ್ತದೆ. ಆತಕಾಲಕ್ಕೆ ಬೋತಕಾಲಕ್ಕೆ [ಆಗೊಮ್ಮೆ ಈಗೊಮ್ಮೆ] ಬತ್ತೀದು ಮಗಾ. ಪಾಪ. ಅದೆಂಥಕೇ ಹಾಕಿರೇನೋ? ಬ್ಯಾರೇ ಕಡೀಗೆ ಕಲಿಯುಕೆ? ಇಲ್ಲಿ ಇಲ್ಲೂ ಇಲ್ಲಾಗೀತೇ ಶಾಲಿ? ಆ ಮಗಾ ಪಾಪ ಇಡೀ ದೀನೇ ಓದ್ತೇ ಇರ್‍ತೀದು. ಇಲ್ಲಿಗೇ ಬಂದ್ರೂವಾ.. ಹಾ.. ಎಂದು ಕೊಂಡಾಡಿದಾಗೆಲ್ಲ ತನಗೇಕೆ ಕೋಪಬರುವುದು ಎಂಬುದು ಆಕೆಗೆ ಗೊತ್ತಿಲ್ಲ. ಆದರೂ ಆ ಬಟ್ಟೆ ತೊಟ್ಟ ದಿನ ಆಕೆ ಎಷ್ಟೊಂದು ಕಳೆ ಕಳೆಯಾಗಿ ಕಾಣುತ್ತಿದ್ದಳು. ಕುಂಕುಮ ಬಣ್ಣದ ಜರಿ ಲಂಗ, ತೆಳು ಬಂಗಾರದ ಬಣ್ಣದ ರವಿಕೆ ಮೇಲೊಂದು ಸೆರಗು, ಹೊದ್ದ ಆಕೆ ಆ ದಿನ ಥೇಟ್ ಸಿನಿಮಾ ಹಿರೋಯಿನ್ ಹಾಗೆ ಕಂಡಿದ್ದಳು. ಲಂಗ ತುಸು ಎತ್ತಿ ಹಿಡಿದು ಆಕೆ ನಡೆಯುತ್ತಿದ್ದರೆ ಜರಿ ಲಂಗದ ಸುತ್ತ ಇದ್ದ ನವಿಲುಗಳ ಚಿತ್ತಾರ ತಾನಾಗಿಯೇ ಎದ್ದು ಆಡಿದಂತೆ ಕಾಣಿಸುತ್ತಿತ್ತು.

ಆ ಲಂಗ ರವಿಕೆ ನನ್ನದಾಗಿದ್ದರೆ,ನಾನೂ ಹಾಗೇ…..

“ಅಕ್ಕೋ. ಯಾಕೇನೋ ಹೊಟ್ಟೀಲಿ ಕಲಸದಂಗ್ಹೆ ಆತೀದೂ. ಬಯಲಕಡಿಗೆ ಹೋತಿನೇ. ಎನ್ನುತ್ತಾ ಉಗಾದಿ ಚೆಂಬು ಹಿಡಿದು ಹೊರಟೇ ಬಿಟ್ಟ. ಸಣ್ಣು ಬೇಗ ಬೇಗನೇ ಸೆಗಣಿ ಹಾಕತೊಡಗಿದಳು. ಸೆಗಣಿ ಹಾಕಿದ ದಿನವೆಲ್ಲ ಮಳೆಗೆ ಹೊಟ್ಟೆಕಿಚ್ಚು ಬಂದಂತೆ ಒಮ್ಮೆ ಹನಿಸಿ ಹೋಗುವುದು ಸಾಮಾನ್ಯ ಅನುಭವ ಆಗಿತ್ತವಳಿಗೆ. ಆಗಲೇ ಕರಿ ಮೋಡಗಳು ಬಾನಲ್ಲಿ ಒಟ್ಟಾಗತೊಡಗಿದ್ದವು.

ಮತ್ತೆ ಸಣ್ಣು ಆ ವಠಾರದೆಡೆಗೆ ದೃಷ್ಟಿ ಬಿಟ್ಟಳು. ಆ ಲಂಗ ಕಾಣುತ್ತ ಬೇಗುದಿಯ ಬೆಂಕಿ ಮತ್ತೆ ಒಡಲಲ್ಲಿ ಹೊತ್ತಿಕೊಂಡಿತು. ಹೇಗಾದರೂ ಸರಿ. ಒಮ್ಮೆ ತೊಟ್ಟುಕೊಳ್ಳದೇ ಇರಲಾರೆ. ಲಂಗ ಆಕೆಯದ್ದಾದರೇನು? ಅದೆಷ್ಟು ಸಲ ಆಕೆಯ ಅಮ್ಮ ನನ್ನವ್ವ ತಂದ ಪಳದಿಗೆ ಹಾಕುವ ಜುಮ್ಮನಕಾಯಿಯನ್ನು ಬೇಡಿ ಪಡೆದುಕೊಂಡಿಲ್ಲ. ತಾನು ಬೇಡಿ ಪಡೆದುಕೊಂಡರಾಯಿತು. ಎಂದುಕೊಂಡಳು. ಆದರೆ ಆಕೆ ಕೊಡದೇ ಹೋದರೆ? ಆಕೆಯ ಅಪ್ಪ ಬೈದು ಹಂಗಿಸಿದರೆ? ಬೇಡ. ಎಂದುಕೊಂಡಳು.

ಕಣ್ಣು ಸರಿಸಿದರೂ ಅದರ ಚಿತ್ರ ಕಣ್ಣ ಕುಕ್ಕತೊಡಗಿದಂತೆಲ್ಲಾ ಸಣ್ಣುವಿನ ಮನಸ್ಸಿನಲ್ಲಿ ಅದೊಂದೇ ಮಾಯೆ ಹರಿದಾಡಲಾರಂಭಿಸಿತು. ಸೆಗಣಿ ಹಾಕಿ ಮುಗಿದಿತ್ತು. ಕೈಕಾಲು ತೊಳೆದುಕೊಂಡಳು. ಹಪ್ಪುನಾತದಂತಹ ಹಳೇ ಪಂಜೆ ತೆಣೆಯ ಮೇಲಿತ್ತು. ಒರೆಸಿಕೊಂಡಳು. ನಿಧಾನವಾಗಿ ತಮ್ಮ ಮನೆಯ ಪಕ್ಕಕ್ಕೇ ಇರುವ ರಾಮದಾಸ ನಾಯಕರ ಮನೆ ಕಡೆ ಪಾಗಾರದ ಹತ್ತಿರ ಬಂದಳು. ರಜಾ ದಿನವಾದ ಕಾರಣ ದೊಡ್ಡ ಮನೆಯ ಜನವೆಲ್ಲ ಟಿ. ವ್ಹಿ ನೋಡುತ್ತಲೋ, ಅಥವಾ ಗಡದ್ದಾಗಿ ನಿದ್ರಿಸುತ್ತಲೋ ಇರುವುದು ಆಕೆಗೆ ಗೊತ್ತು. ಕೆಲವೊಮ್ಮೆ ಸಿನೇಮಾ ನೋಡಲು, ಧಾರವಾಹಿ ನೋಡಲು ಆಗಾಗ ಹೋಗುತ್ತಿದ್ದ ಮನೆ ಅದು.

ತಮ್ಮ ವಠಾರದ ಮೂಲೆಯಲ್ಲಿ ಗೇರು ಗಿಡಕ್ಕೆ ತಗುಲಿಸಿಟ್ಟ ಕೊಕ್ಕೆ ತೆಗೆದುಕೊಂಡಳು. ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆ ಆರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇ ಬಿಟ್ಟಿತು. ಈಗ ಆಚೀಚೆ ನೋಡಿದಳು. ತೆರೆದೆ ಇರುವ ಕಿಟಕಿಗಳಿಗೇನಾದರೂ ಕಣ್ಣಿವೆಯಾ? ಇಲ್ಲ… ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೆ ಲಂಗವನ್ನು ಎಳೆದು ಕೊಂಡಳು. ಈಗ ಆಚೆ ಇಚೆ ನೋಡುವ ಗೋಜಿಗೆ ಹೋಗದೆ ದಡಬಡನೆ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು. ಕೊಕ್ಕೆಯನ್ನು ಯಥಾವತ್ತಾಗಿ ಮೊದಲಿದ್ದ ಜಾಗೆಗೆ ಮುಟ್ಟಿಸಿ, ಓಡೋಡಿ ಮನೆಗೆ ಬಂದಳು.

ಎದೆಯೊಳಗೆ ಗುಟುಕು ನೀರಿರಲಿಲ್ಲ. ಏ ಸಣ್ಣು ಇದೇನೇ ಮಾಡ್ತೀಂವೆ, ಯಾರಾರೂ ನೋಡಿ ಹೇಳಕುಟ್ರೇ ಏನ ಮಾಡ್ವೇ? ಮಳ್ಳ ಹಿಡದಿದೆಯೇನೇ? ಒಳಮನಸ್ಸು ನುಡಿಗೊಡುತ್ತಿದ್ದರೂ ಆಕೆ ಕೇಳುವ ಸ್ಥಿತಿಯಲ್ಲಿರಲಿಲ್ಲ. ಮನೆಯೊಳಗೆ ಹೋಗಲು ಇಷ್ಟವಾಗಲಿಲ್ಲ. ಜೋಪಡಪಟ್ಟಿ ಮನೆಯ ಮುಂದೆ ತೆಂಗಿನ ಗಿಡದ ಬುಡದಲ್ಲಿ ಹಳ್ಳದಿಂದ ತಂದ ಹಾಸುಗಲ್ಲು ಹಾಸಿ ಸುತ್ತೆಲ್ಲಾ ತೆಂಗಿನ ಸೋಗೆ ಹೆಣೆದು ಕಟ್ಟಿದ ಬಡವರ ಮನೆಯ ನಾಣಿಗೆ ಮನೆ. ಆ ಕಡೆ ಹೋದಳು. ಅದರ ಪಕ್ಕಕ್ಕೆ ಇರುವ ತಟ್ಟಿ [ಕೊಟ್ಟಿಗೆ]ಯಲ್ಲಿ ಕಟ್ಟಿದ ಕರುವನ್ನು ನೋಡುತ್ತಲೆ ತನ್ನ ಕಳ್ಳತನಕ್ಕೆ ಸಾಕ್ಷಿಯಾದಂತೆನ್ನಿಸಿ ಅದರ ಕಡೆ ನೋಡದೆ ನಾಣಿಗೆ ಕಲ್ಲಿನ ಮೇಲೆ ಬಂದು ನಿಂತು ಸಮಾಧಾನಿಸಿಕೊಂಡಳು. ಒಲೆ ಉರಿಯುತ್ತಿತ್ತು. ಆದರೆ ಮೈಯೆಲ್ಲಾ ಸೆಗಣಿಯ ವಾಸನೆ ಬಡಿಯುತ್ತಿದೆ. ಏನು ಮಾಡೋಣ? ಮಿಂದು ಆಮೇಲೆ ಹಾಕಿನೋಡಬೇಕು ಎಂದೆನ್ನಿಸಿತು. ಆದರೆ ಅಷ್ಟರಲ್ಲಾಗಲೇ ತಡವಾಗಿದೆ. ತಂದೆ ತಾಯಿ ಬರುವ ಹೊತ್ತು. ಒಮ್ಮೆ ಹೀಗೆ ಹಾಕಿಕೊಂಡು ನೋಡುವೆ ಎನ್ನುತ್ತಾ ತನ್ನ ಹಳೆಯ ಲಂಗ ಬಿಚ್ಚಿ ಜರಿ ಲಂಗ ತೊಟ್ಟಳು. ಆನಂದ ಉಮ್ಮಳಿಸಿ ಬರುತ್ತಿತ್ತು. ಅಯ್ಯೋ.. ಒಂದ ಕನ್ನಡಿನರೂ ಇದ್ರೇ, ನೋಡ್ಕಂತಿದ್ದೇ. ಎನ್ನುತ್ತಾ ಒಮ್ಮೆ ಸುತ್ತ ಜೋರಾಗಿ ತಿರುಗಿದಳು. ನವಿಲುಗಳು ತನ್ನ ಮೊಣಕಾಲ ಮೇಲೆ ಕುಣಿದಂತೆ ಅನ್ನಿಸಿತು.

ಆದರೆ ಆ ಜೋರಿಗೆ ಕಾಲು ನಾಣಿಗೆಗೆ ಹಾಸಿದ ಎರಡು ಹಾಸುಗಲ್ಲಿನ ನಡುವಿನ ಸಂದಿನಲ್ಲಿ ಸಿಕ್ಕೇ ಬಿಟ್ಟಿತು. ವಿಪರೀತ ಗಾಬರಿಯಾಗಿ ಉಲ್ಟಾ ತಿರುಗಿದಳು. ಕಾಲು ಒಳಗೆ ಮುರಿದಂತೆ ಅನ್ನಿಸಿತು, ಹೊರಬರುತ್ತಿಲ್ಲವೆಂದು ಜೋರಾಗಿ ಎಳೆದ ರಭಸಕ್ಕೆ ಎಳೆ ಎಲುಬು ಲಟಕ್ ಎಂದಿತು. ಶರೀರವೀಡಿ ನೋವು ಸಂಚರಿಸಿದಂತೆ ಸಣ್ಣು ನೋವು ತಾಳದೇ ಅಯ್ಯೋ ಅವ್ವಾ.. ಸತ್ತ್ನೇ.. ಎಂದು ಬೊಬ್ಬಿರಿಯುವಂತೆ ಕೂಗಬೇಕೆಂದುಕೊಂಡವಳು ಮೈಮೇಲಿನ ಲಂಗದ ನೆನಪಾಗಿ ಬಾಯಿ ತೆರೆದರೂ ಸದ್ದು ಹೊರಬಿಡಲಿಲ್ಲ. ಕಣ್ಣುಗಳಿಂದ ಧಾರಾಕಾರ ನೀರು ಸುರಿಯುತ್ತಿತ್ತು. ಹಾಗೆ ಲಗುಬಗೆಯಿಂದ ಲಂಗವನ್ನು ಹೇಗೊ ಮಾಡಿ ಕಳೆದಳು. ಹಳೆಯ ಲಂಗ ತೊಟ್ಟುಕೊಳ್ಳುತ್ತಿದ್ದಂತೆ ಅವ್ವನ ದನಿ ಕೇಳಿಬಂತು.. ಇಬೂ, ಸಣ್ಣುನೇಯಾ ಇಟ್ ಚೆಂದಾಗಿ ಸೆಗಣಿ ಹಾಕೀದು. ಇಳಗುತ್ತಿ ಅಂದ್ಕಂಡ್ರೇ ನನ್ನ ಮಗಳು ಈಗೇ ಹುಷಾರಾಗಿದು. ಮಗಾ ಎಲ್ಲಿಂವ್ಯೇ? ಎಂದು ಕರೆಯುತ್ತಿದ್ದರೆ, ಸಣ್ಣು ಓಗೊಡಲಿಲ್ಲ.

ಅಪ್ಪನ ದನಿ ಇಲ್ಲೆ ಎಲ್ಲೋ ಆಡುಕೇ ಹೋಗಿರೇನಾ..ಉಗಾದಿನೂ ಕಾಣುಕಲಾ ಎನ್ನುತ್ತಿದ್ದರೆ ನಾಣಿಗೆಯ ಕಡೆಯೆ ದ್ವನಿ ಹತ್ತಿರವಾದಂತೆ ಅನ್ನಿಸಿತು. ನಾಣಿಗೆಗೆ ಮರೆಮಾಡಲೆಂದು ಕಟ್ಟಿದ ತೆಂಗಿನ ಸೋಗೆಯ ತೂತುಗಳಿಂದ ಕಣ್ಣು ಹಾಯಿಸಿದಳು. ಆತ ನಾಣಿಗೆ ಕಡೆಗೆ ಬರುತ್ತಿದ್ದ. ಆಕೆ ತಡಮಾಡಲಿಲ್ಲ. ನೋವಿನ ಉಸಿರಿಗೆ ಕೈ‌ಅದುಮಿ ಹಿಡಿದುಕೊಂಡು ಒಂದೇ ಗುಪ್ಪಿಗೆ ಬಚ್ಚಲಿಂದ ಕೊಟ್ಟಿಗೆ ಹಿಂದಿನ ಗೊಬ್ಬರ ಕುಳಿಯ ಹತ್ತಿರ ಬಂದಿದ್ದಳು. ಬಾಯಿ ಮುಚ್ಚಿ ಅಳುತ್ತಲೇ ಗೊಬ್ಬರ ಕುಳಿಯಲ್ಲಿ ಕೈಯಿಂದಲೇ ಬೆದಕಿ ಕೆದರಿ ಸಣ್ಣಹೊಂಡ ಮಾಡಿದಳು. ಗೊಬ್ಬರ ಹುಳುಗಳು ಮಿಡುಕಾಡಿ ಹೊರಬರುತ್ತಿದ್ದರೆ ಬೆಳಿಗ್ಗೆ ಚಾ ಜೊತೆ ತಿಂದ ಬಟರು ಹೊರಬರುವಂತೆ ವಾಕರಿಕೆ ಬರುತ್ತಿತ್ತು. ಆದರೆ ಅದನ್ನು ನೋಡುತ್ತಾ ಕುಳಿತರೆ ಆಗದೆಂದು ಕೈತಾಗುತ್ತಲೆ ಮಿಣಿಮಿಣಿ ಎನ್ನುವ ದಪ್ಪಹುಳುಗಳ ಮುಟ್ಟಿಮುಟ್ಟಿಯೇ ಅದೆಷ್ಟು ಬೇಗ ಹೊಂಡ ಬಗೆದಳೆಂದರೆ ನಿಮಿಷಾರ್ಧದಲ್ಲಿ ಚೆಂದದ ಜರಿ ಹೊತ್ತ ಲಂಗ ಆ ಹೊಂಡದಲ್ಲಿ ಮುದುರಿ ಕುಳಿತಿತು. ಅದರ ಮೇಲೆ ಯಾರಿಗೂ ಊಹೆ ಬರದಂತೆ ಪುನಃ ಕೊಳೆತ ಗೊಬ್ಬರದ ಉಂಡೆಗಳು ಪೇರಿಸಲ್ಪಟ್ಟವು. ಎದೆಯಲ್ಲಿ ಹನಿ ನೀರು ಇರಲಿಲ್ಲ. ಪಸೆಯಾರಿದ ನಾಲಗೆಯನ್ನು ತುಟಿಯಿಂದ ಸವರಿತ್ತಾ, ನೋವಿಗೆ ಉಕ್ಕುತ್ತಿರುವ ಕಣ್ಣೀರು ಒರೆಸಿಕೊಳ್ಳುತ್ತಾ ಈಗ ಪುನಃ ಕುಂಟುತ್ತಾ ನಾಣಿಗೆಗೆ ಬಂದಳು. ನಾಣಿಗೆ ಕಡೆಯೇ ಬರುತ್ತಿದ್ದ ಅಪ್ಪ ಮಳೆಯ ಸುಣುಕು ಸಿಕ್ಕಂತಾಗಿ ಮನೆ ಕಿಬಳಿಗೆ ಸೌದೆ ಜೋಡಿಸತೊಡಗಿದ್ದನ್ನು ನೋಡಿದಳು. ಈಗ ಆಪಾದಮಸ್ತಕ ನೋವು ಹಿಂಡಲಾರಂಭಿಸಿದಂತೆ ತಡೆಯಲಾಗಲಿಲ್ಲ.

“ಅವ್ವಾ … ನಾ ಸತ್ನೇ..ಅವ್ವಾ.. ಕಾಲು ಉರಿಯಾತೀದೆ.. ಅವ್ವೋ..” ಅನ್ನುತ್ತಾ ಬಚ್ಚಲಿನ ಕಲ್ಲಿನ ಮೇಲೆ ಕುಸಿದು ಕುಳಿತಳು. ಮಕ್ಕಳಿಬ್ಬರೂ ಆಡಲು ಹೋಗಿರಬಹುದೆಂದು ಗೃಹಿಸಿದ ಹೆತ್ತವರು ಒಮ್ಮೇಲೆ ಎದ್ದ ಪ್ರಲಾಪಕ್ಕೆ ಬೆಚ್ಚಿಬಿದ್ದರು. ಓಡೋಡಿ ಬಂದರು. ಆಕೆಯ ಎತ್ತಿ ಉಪಚರಿಸತೊಡಗಿದರು. ಉಗಾದಿಯೂ ಖಾಲಿತಂಬಿಗೆ ಹಿಡಿದು ಬಂದವನು ಅಕ್ಕನ ಆರ್ತನಾದ ನೋಡಿ ಜೋರಾಗಿ ಅಳತೊಡಗಿದ.

ಗೊಬ್ಬರ ಗುಂಡಿಯಲ್ಲಿ ಚೆಂದದ ಲಂಗದ ಒಳಗೆ ಗೊಬ್ಬರ ಹುಳುಗಳು ಗೂಡುಕಟ್ಟುತ್ತಿದ್ದರೆ, ಸಣ್ಣುವಿನ ಹಿಮ್ಮಡಿಯ ಗಂಟು ಊದುತ್ತಾ ಹೋಗುತ್ತಿತ್ತು.
*****