Home / ಬಾಲ ಚಿಲುಮೆ / ಕವಿತೆ / ನಾನೇ ಅಪ್ಪ ಆಗ್ತೀನಿ

ನಾನೇ ಅಪ್ಪ ಆಗ್ತೀನಿ

ಅಪ್ಪ ಹೊರಗಡೆ ಹೋದಾಗ
ಕೋಟು ಬೂಟು ಹಾಕ್ಕೊಂಡು
ಅಪ್ಪನ ಕಪ್ಪನೆ ಕನ್ನಡಕ
ಕಣ್ಣಿಗೆ ಸರಿಯಾಗ್ ಇಟ್ಕೊಂಡು
ನಾನೇ ಅಪ್ಪ ಆಗ್ತೀನಿ
ದಪ್ಪನೆ ದನೀಲಿ ಕೂಗ್ತೀನಿ
ಅಣ್ಣ ಅಕ್ಕ ಎಲ್ಲರಿಗೂ
ಸಖತ್ತು ರೋಪು ಹಾಕ್ತೀನಿ!

ಅಣ್ಣನ್ ಕರೆದು ಕೇಳ್ತೀನಿ:
“ಯಾಕೋ ಸ್ಕೂಲಿಗೆ ಹೋಗ್ಲಿಲ್ಲ?
ತಮ್ಮನ್ ಬಯ್ತೀಯಂತಲ್ಲೋ
ಪೆದ್ದ, ನಾಚಿಕೆ ಆಗೊಲ್ವ?
ನಿನ್ನಲ್ಲಿರೋ ಚೆಂಡನ್ನ
ಬ್ಯಾಟು ಬಳಪ ಗೋಲೀನ
ತೆಪ್ಪಗೆ ಅವ್ನಿಗೆ ಕೊಟ್ಟು ಬಿಡು
ಇಲ್ಲವೆ, ತಿನ್ತೀ ಒದೆಯನ್ನ.”

ಅಕ್ಕನ್ ಕರೆದು ಕೇಳ್ತೀನಿ:
“ಎಲ್ಲಿದ್ದಾನೇ ನಿನ್ ತಮ್ಮ?
ಅಂಥಾ ಮುದ್ದಿನ ಹುಡುಗನ್ನ
ಓದಿಸಿ ದಣಿಸೋದೇನಮ್ಮ,
ಚಿಕ್ಕವನಾದ್ರೂ ಏನ್ ಬುದ್ದಿ
ಅವನ್ಯಾಕ್ ಪಾಠ ಓದ್ಬೇಕು?
ಪಾಠ ಬೇಡ ಅವನನ್ನು
ಆಟಕ್ ಕರ್‍ಕೊಂಡು ಹೋಗ್ಬೇಕು.”

ಅಮ್ಮನ್ ಕರೆದು ಕೇಳ್ತೀನಿ:
“ತಿಂಡಿ ತುಂಬಿದ ಡಬ್ಬಾನ
ಗೂಡಿನ ಒಳಗಡೆ ಮುಚ್ಚಿಟ್ಟು
ಯಾಕೇ ಬೀಗ ಹಾಕ್ತೀಯ?
ತಿಂಡಿ ಇರೋದು ಚಿಕ್ ಮಕ್ಳು
ತಿನ್ನೋದಕ್ಕೇ ಅಲ್ವೇನೇ?
ಮಗೂಗೆ ಎಲ್ಲಾ ಕೊಟ್ಟುಬಿಡೆ
ನಾವ್ ತಿಂದಿದ್ದು ಸಾಲ್ದೇನೇ?”

ಅಜ್ಜೀನ್ ಕರೆದು ಕೇಳ್ತೀನಿ:
“ಯಾಕೇ ಮಗೂನ ಬಯ್ತೀಯ?
ಉಸ್ಮಾನ್ ಜೊತೆಗೆ ಆಡಿದರೆ
ಯಾತಕ್ ಸಿಡಿ ಸಿಡಿ ಮಾಡ್ತೀಯ?
ಬೇರೆ ಜಾತಿ ಆದ್ರೇನು
ಅವನೂ ಮನುಷ್ಯ ಅಲ್ವೇನೆ?
ಜಾತಿ ಮತದ ಭೇದ ಮಾಡೋದ್
ಯಾರೇ ಆದ್ರೂ ಸರಿಯೇನೇ?”

ಅಕ್ಕನ ಪಾಠ ತಪ್ಪತ್ತೆ
ಅಣ್ಣಂಗ್ ಲಾತ ಬೀಳತ್ತೆ!
ಅವನ ಆಟದ ಸಾಮಾನು
ಎಲ್ಲಾ ನಂಗೇ ಸಿಕ್ಕತ್ತೆ!
ಎಲ್ಲಾ ತಿಂಡಿ ಬಾಚ್ಕೊಂಡು
ಅಟ್ಟದ ಮೇಲೆ ಇಟ್ಕೊಂಡು
ಖರಮ್ ಖುರಮ್ ತಿಂತೀನಿ
ಟೀಪೂ ಬಿರ್ಜು ಕರ್‍ಕೊಂಡು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...