Home / ಕಥೆ / ಜನಪದ / ಕಾಳಿನ ಮೇಲೆ ಹೆಸರು

ಕಾಳಿನ ಮೇಲೆ ಹೆಸರು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಸಾಹುಕಾರನು ನೆಲಗಡಲೆ ತಿನ್ನುತ್ತ ತನ್ನ ಮನೆಯ ತಲೆವಾಗಿಲ ಮುಂದೆ ಕುಳಿತಿದ್ದನು. ಅತ್ತಕಡೆಯಿಂದ ಒಬ್ಬ ಸಾಧು ಬಂದು ಭಿಕ್ಷೆ ಬೇಡಿದನು. “ಮುಂದಿನ ಮನೆಗೆ ಹೋಗು’” ಎಂದು ಸಾಹುಕಾರನು ನುಡಿದನು.

“ತಿನ್ನಲು -ನಾಲ್ಕು ಕಾಯಿಗಳನ್ನಾದರೂ ಕೊಡಿರಿ” ಎಂದನು ಸಾಧು.

“ಅವು ಪುಕ್ಕಟೆ ಬಂದಿಲ್ಲ. ನಮಗೆ ಸಾಕಾಗಿ ಉಳಿದರೆ, ನಿನ್ನನ್ನು ಕರೆದು ಕೊಡುವೆನು. ಆಯಿತೇ ?” ಎಂದು ಸಾಹುಕಾರನು ಹೀಯಾಳಿಸಿದನು.

“ಎಲ್ಲವನ್ನೂ ನಾನೇ ತಿನ್ನುವೆನೆಂದರೆ ಸಾಧ್ಯವೇ ? ಪ್ರತಿಯೊಂದು ಕಾಳಿನ ಮೇಲೆ ಅದು ಹುಟ್ಟುವಾಗಲೇ ಅದನ್ನು ಯಾರು ತಿನ್ನಬೇಕಾಗಿದೆಯೋ ಅವರ ಹೆಸರು ಬರೆದಿರುತ್ತದೆ.”

ಸಾಹುಕಾರನ ತಲೆ ತಿರುಗಿತು – ಸಾಧುವಿನ ಬ್ರಹ್ಮಜ್ಞಾನವನ್ನು ಕೇಳಿ. ಕೇಳಿದನು – “ನೀನೊಬ್ಬ ಒಂಟೆಯ ಮೇಲಿನ ಜಾಣನೇ ಬಂದಿರುವೆಯಲ್ಲ ! ಇಲ್ಲಿ ನೋಡು ನನ್ನ ಕೈ ಬೆರಳಿನಲ್ಲಿ ಹಿಡಿದ ಕಾಳು ! ಇದರ ಮೇಲೆ ಯಾರ ಹೆಸರು ಬರೆದಿದೆ ಹೇಳು ನೋಡುವಾ.”

“ಅದರ ಮೇಲೆ ಒಂದು ಕಾಗೆಯ ಹೆಸರಿದೆ. ಆ ಕಾಳು ಅದರ ಆಹಾರ” ಎಂದನು ಸಾಧು.

ಸಾಹುಕಾರನು ಈರ್ಷೆಯಿಂದ – “ಇದೋ ನಾನಿದನ್ನು ತಿಂದುಬಿಡುವೆ. ಎಲ್ಲಿದೆ ನಿನ್ನ ಆ ಕಾಗೆ ?” ಎನ್ನುತ್ತ ಆ ಕಾಳನ್ನು ಬಾಯಲ್ಲಿ ಒಗೆದುಕೊಳ್ಳಹೋದನು. ಅದು ತಪ್ಪಿ ಅವನ ಮೂಗಿನ ಹೊರಳೆಯಲ್ಲಿ ಸೇರಿಬಿಟ್ಟಿತು.

ನೆಲಗಡಲೆಯಕಾಳು ಮೂಗಿನ ಹೊರಳೆಯಲ್ಲಿ ಸೇರಿಬಿಟ್ಟಿದ್ದರಿಂದ ಸಾಹುಕಾರನ ಉಸಿರಾಟಕ್ಕೆ ತಡೆಯಾಯಿತು. ಕೂಗಾಡತೊಡಗಿದನು. ಆ ಗಲವಿಲಿಗೆ ನೆರೆಹೊರೆಯವರು ನೆರೆದರು. ಆತನನ್ನು ಹೊತ್ತುಕೊಂಡು ಕ್ಷೌರಿಕನ ಮನೆಗೆ ಹೋದರು.

ತನ್ನಲ್ಲಿರುವ ಚಿಮಟಿಗೆಯಿಂದ ಹಡಪಿಗನು, ಸಾಹುಕಾರನ ಮೂಗಿನೊಳಗಿನ ಆ ಕಾಳನ್ನು ತೆಗೆದು ಬೀಸಿ ಅಂಗಳಕ್ಕೆ ಒಗೆದನು. ಕೂಡಲೇ ಬದಿಯ ಗಿಡದಲ್ಲಿ ಕುಳಿತ ಕಾಗೆ ಹಾರಿಬಂದು ಆ ಕಾಳನ್ನು ಕಟ್ಟಿಕೊಂಡು ಹೋಯಿತು.

“ಕಾಗೆಗೆಂದು ಹುಟ್ಟಿದ ಕಾಳು ಕಾಗೆಗೆ ಸಂದಿತು” ಎಂದನು ಆ ಸಾಧು. ಆ ಬಳಿಕ ಸಾಧುವನ್ನು ಕರೆದು ಸಾಹುಕಾರನು ಸತ್ಕರಿಸಿ ಕಳಿಸಿದನು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...