Home / ಕವನ / ಕವಿತೆ / ಪ್ರೇಮ ದೂತ

ಪ್ರೇಮ ದೂತ

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ
ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ

ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು
ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು

ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ
ಮನೋಲೋಕದಲಿ ಬರೀ ಭಾವ ಬೆಳದಿಂಗಳ ಪ್ರಭಾವ

ಭಾವ ಲೋಕದಲಿ ವಿಹರಿಸುವುದು ಕೆಲ ಭಾವುಕರಿಗೆ ಸಾಧ್ಯ
ದೇಹತೃಷೆಯ ಮೀರಿರುವ ಬಂಧನವು ಸವೆಯದಂಥ ಖಾದ್ಯ

ನಿನ್ನ ಹೃದಯ ದೇಗುಲವ ಸಿಂಗರಿಪ ಭಾಗ್ಯವಂತ ನಾನು
ನನ್ನ ಮನವ ಸಿಂಗರಿಪ ಮಾನಿನಿಯೆ ಚಿಂತೆ ಬೇಡವೇನು

ದೂರ ದೂರದಲಿ ಕಾಂಬ ಗುಡ್ಡವದು ಮಾಲೆಮಾಲೆ ನೀಲಿ
ಮುಳ್ಳುಕಲ್ಲುಗಳು ಅಲ್ಲಿ ಬಹಳ ಇವೆ ನಡೆಯಬೇಕು ತೇಲಿ

ಚೆಲುವೊ ಒಲವೊ ಬಾಳೆಲ್ಲ ಭವ್ಯತೆಗೆ ಏರೆ ಮಾತ್ರ ಯೋಗ್ಯ
ಬಣ್ಣ ಬದುಕು ಬರಡಾದ ಮೇಲು ಉಳಿಯುವುದು ಪ್ರೇಮ ಭಾಗ್ಯ

ಕೂಡುವಂಥ ಸುಖಕಿಂತ ಕೂಟ ಹಾರೈಕೆ ಸೊಗಸು ಏನೊ
ತಿನ್ನುವಂಥ ಸವಿಗಿಂತ ತಿನ್ನಲಿಹ ಬಯಕೆ ರುಚಿಯೊ ಏನೊ

ತನುವು ಹುಟ್ಟಿ ಬೆಳೆದಾಡಿ ಅಳಿಯುವುದು ನಿತ್ಯಜೀವ ಯಾತ್ರೆ
ಮನದ ಭಾವ ಶ್ರೀಮಂತ ಲೀಲೆಯದು ಸತ್ಯ ಚೈತ್ಯ ಯಾತ್ರೆ

ನಮ್ಮ ಜನ್ಮಗಳ ಗಂಟು ಎನ್ನುವರು ಗಂಡು ಹೆಣ್ಣು ಜೋಡಿ
ಜೋಡಿ ಜೋಡಿಗಳು ಒಂದೆ ಎಂದರೇಕಿಷ್ಟು ಹೆಚ್ಚು ರಾಡಿ

ಹಿಂದು ಮುಂದು ಜನುಮಗಳ ಕಂಡವರು ಯಾರೊ ಎಲ್ಲೋ ಏನೊ
ಇಂದು ನಾಳೆಗಳು ನಮ್ಮ ಕೈಯಲಿವೆ ಕೂಡಿ ಬಾಳೆ ಜೇನೊ

ಏನೂ ಅಳಿಯುವುದು ಏನೊ ಉಳಿಯುವುದು ಉಳಿವುದೊಂದೆ ಗುರಿಯು
ಇಹವು ಕಳೆದರೂ ಪರವು ಉಳಿಯುವುದು ಜೀವಿಗದುವೆ ಗುರಿಯು

ಅಂದು ಕೊಳ್ಳುವುದು ಆಡಿಕೊಳ್ಳುವುದು ಮಾತು ಬರಹವೊಂದು
ಮಾಡಿಕೊಳ್ಳುವುದು ಕಂಡು ಕೊಳ್ಳುವುದು ನಡತೆ ಬೇರೆಯೊಂದು

ಉದ್ದ ಉದ್ದ ಮೈಲುದ್ದ ಬರೆದರೇನೊಂದು ಮಾಡದಲ್ಲೆ
ಮೆರಗು ಬೆರಗು ಬುರುಗೆಲ್ಲ ಹೋಗಿರಲು ಪ್ರೇಮ ನೋಡೆ ನಲ್ಲೆ

ಏನು ಬಯಸದೆಯೆ ಬಂದುದನ್ನು ವರವೆಂದು ತಿಳಿಯೆ ಸುಖವು
ಗುಡ್ಡದಾಸೆ ಬರಿಕಡ್ಡಿಯಾಗಿ ಹೋದೀತು ಗುಳ್ಳೆ ಮುಖವು

ನನಗೆ ನೀನು ನಾ ನಿನಗೆ ಎನ್ನುವುದು ಕೆಲವು ದಿನದ ಸೆಳೆತ
ನೀನು ನಾನು ಬೇರೊಬ್ಬಗಾಗಿ ಎನ್ನುವುದು ಕೊನೆಯ ಎಳೆತ
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...