Home / ಕವನ / ಕವಿತೆ / ಪ್ರೇಮ ದೂತ

ಪ್ರೇಮ ದೂತ

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ
ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ

ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು
ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು

ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ
ಮನೋಲೋಕದಲಿ ಬರೀ ಭಾವ ಬೆಳದಿಂಗಳ ಪ್ರಭಾವ

ಭಾವ ಲೋಕದಲಿ ವಿಹರಿಸುವುದು ಕೆಲ ಭಾವುಕರಿಗೆ ಸಾಧ್ಯ
ದೇಹತೃಷೆಯ ಮೀರಿರುವ ಬಂಧನವು ಸವೆಯದಂಥ ಖಾದ್ಯ

ನಿನ್ನ ಹೃದಯ ದೇಗುಲವ ಸಿಂಗರಿಪ ಭಾಗ್ಯವಂತ ನಾನು
ನನ್ನ ಮನವ ಸಿಂಗರಿಪ ಮಾನಿನಿಯೆ ಚಿಂತೆ ಬೇಡವೇನು

ದೂರ ದೂರದಲಿ ಕಾಂಬ ಗುಡ್ಡವದು ಮಾಲೆಮಾಲೆ ನೀಲಿ
ಮುಳ್ಳುಕಲ್ಲುಗಳು ಅಲ್ಲಿ ಬಹಳ ಇವೆ ನಡೆಯಬೇಕು ತೇಲಿ

ಚೆಲುವೊ ಒಲವೊ ಬಾಳೆಲ್ಲ ಭವ್ಯತೆಗೆ ಏರೆ ಮಾತ್ರ ಯೋಗ್ಯ
ಬಣ್ಣ ಬದುಕು ಬರಡಾದ ಮೇಲು ಉಳಿಯುವುದು ಪ್ರೇಮ ಭಾಗ್ಯ

ಕೂಡುವಂಥ ಸುಖಕಿಂತ ಕೂಟ ಹಾರೈಕೆ ಸೊಗಸು ಏನೊ
ತಿನ್ನುವಂಥ ಸವಿಗಿಂತ ತಿನ್ನಲಿಹ ಬಯಕೆ ರುಚಿಯೊ ಏನೊ

ತನುವು ಹುಟ್ಟಿ ಬೆಳೆದಾಡಿ ಅಳಿಯುವುದು ನಿತ್ಯಜೀವ ಯಾತ್ರೆ
ಮನದ ಭಾವ ಶ್ರೀಮಂತ ಲೀಲೆಯದು ಸತ್ಯ ಚೈತ್ಯ ಯಾತ್ರೆ

ನಮ್ಮ ಜನ್ಮಗಳ ಗಂಟು ಎನ್ನುವರು ಗಂಡು ಹೆಣ್ಣು ಜೋಡಿ
ಜೋಡಿ ಜೋಡಿಗಳು ಒಂದೆ ಎಂದರೇಕಿಷ್ಟು ಹೆಚ್ಚು ರಾಡಿ

ಹಿಂದು ಮುಂದು ಜನುಮಗಳ ಕಂಡವರು ಯಾರೊ ಎಲ್ಲೋ ಏನೊ
ಇಂದು ನಾಳೆಗಳು ನಮ್ಮ ಕೈಯಲಿವೆ ಕೂಡಿ ಬಾಳೆ ಜೇನೊ

ಏನೂ ಅಳಿಯುವುದು ಏನೊ ಉಳಿಯುವುದು ಉಳಿವುದೊಂದೆ ಗುರಿಯು
ಇಹವು ಕಳೆದರೂ ಪರವು ಉಳಿಯುವುದು ಜೀವಿಗದುವೆ ಗುರಿಯು

ಅಂದು ಕೊಳ್ಳುವುದು ಆಡಿಕೊಳ್ಳುವುದು ಮಾತು ಬರಹವೊಂದು
ಮಾಡಿಕೊಳ್ಳುವುದು ಕಂಡು ಕೊಳ್ಳುವುದು ನಡತೆ ಬೇರೆಯೊಂದು

ಉದ್ದ ಉದ್ದ ಮೈಲುದ್ದ ಬರೆದರೇನೊಂದು ಮಾಡದಲ್ಲೆ
ಮೆರಗು ಬೆರಗು ಬುರುಗೆಲ್ಲ ಹೋಗಿರಲು ಪ್ರೇಮ ನೋಡೆ ನಲ್ಲೆ

ಏನು ಬಯಸದೆಯೆ ಬಂದುದನ್ನು ವರವೆಂದು ತಿಳಿಯೆ ಸುಖವು
ಗುಡ್ಡದಾಸೆ ಬರಿಕಡ್ಡಿಯಾಗಿ ಹೋದೀತು ಗುಳ್ಳೆ ಮುಖವು

ನನಗೆ ನೀನು ನಾ ನಿನಗೆ ಎನ್ನುವುದು ಕೆಲವು ದಿನದ ಸೆಳೆತ
ನೀನು ನಾನು ಬೇರೊಬ್ಬಗಾಗಿ ಎನ್ನುವುದು ಕೊನೆಯ ಎಳೆತ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...