Home / ಕವನ / ಕವಿತೆ / ಬಿಂದು

ಬಿಂದು

ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು
ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು

ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ
ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ

ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹನಿಯು
ತಲೆಯ ತುಂಬ ಸವಿಗನಸ ತುಂಬಿ ತುಂಬಿಗಳ ರಸದ ಗನಿಯು

ಅದರ ಇದರ ಬಾಯಿಯಲಿ ಜೊಲ್ಲು ಹನಿ ಬೀಳೆ ಅಮೃತವೆಂದು
ಉದರ ಭರಿಸಿ ನಾಲಗೆಯ ಚಲಿಸಿ ಕಹಿಗೊಲಿದು ಸಿಹಿಯದೆಂದು

ನೀಲಿ ಮೈಯನಲೆದಾಡಿ ದುಡಿಯುತಿಹ ಬಿಂದು ಬಿಂದು ಕರೆಗೆ
ಸಾಲು ಪುಳಕ ಮೈಗಾಗೆ ತಿರೆಯ ಹನಿ ಒಳಗೆ ಒಳಗೆ ಕೊರಗೆ

ಬಿಂದು ಕರಗಿ ಹೊರನೋಟದಲ್ಲಿ ಬರಿಗುಳ್ಳೆಯಾಗಿ ಹೊಳೆದು
ಅಂದವೆಂದು ಬಂಧಿಸಲು ಅದನು ಏನೇನೊ ಕವಚ ತಳೆದು

ಬಿಂದುವೊಂದು ಇದು ಅಂದಗುಂದಿ ಕಳೆಗುಂದುತಿಹುದು ಇಲ್ಲಿ
ಚೆಂದ ಚೆಲುವುಗಳು ಕಂದಿ ಕರಗಿರಲು ಕರೆಯು ಮಾತ್ರದಲ್ಲಿ

ಒಂದು ಬಿಂದು ನೂರೊಂದು ವೇಷಗಳ ಅಂಗ ಅಂಗಿಯಾಯ್ತ
ಚೆಂದ ಚೆಂದವೆಂದಂದಗೆಟ್ಟರೂ ಅದುವೆ ದೊಂದಿಯಾಯ್ತು

ಹನಿಯ ಮೋಹ ಹನಿಗೂಡಿ ಹಳ್ಳದಲಿ ಬಿರಿದು ಮುಚ್ಚಿ ಹೋಯ್ತು
ತನಗೆ ತಾನೆ ಕಂದಕದಿ ಧುಮುಕಿ ಆ ರೂಪ ಕೊಚ್ಚಿ ಹೋಯ್ತು

ನುಚ್ಚು ನೂರು ಛಿದ್ರಗಳ ತಾಳಿ ಬಂಡೆಗಳ ಮೇಲೆ ಢಿಕ್ಕಿ
ಹುಚ್ಚು ಹಿಡಿದು ಎಳೆ‌ಎಳೆಯ ನಾಡಿ ಕೂದಲಲೆ ಹರಣಸಿಕ್ಕಿ

ಉಬ್ಬಿ ಒಡೆದು ಮತ್ತುಬ್ಬಿಯುಬ್ಬಿ ಉದರಕ್ಕೆ ಬರಿಯ ಬೇನೆ
ಹಬ್ಬಿ ಬೆಳೆವ ಹಂದರದ ಮೇಲೆ ಬೀಳುತಿರೆ ಬೆಂಕಿ ಸೋನೆ

ಬಿದ್ದ ಅಗುಳ ನನ ನನಗೆ ಎಂದು ಮುಗಿಬಿದ್ದವೆಷ್ಟೊ ಮೀನು
ಹದ್ದು ಕಚ್ಚಿ ಕಣ ಕಣವನೆಲ್ಲ ಬರುಸೂರೆ ಗೈಯೆ ತಾನು

ಎಲ್ಲ ಮೀನುಗಳು ಕಿತ್ತು ತಿಂದರೂ ನೀರಿನೊಡನೆ ಬೆರೆತು
ಇಲ್ಲವಾದರೂ ಇರುವ ಛಲದ ಸೂತ್ರವನೆ ಅರಿತು ಕುರಿತು

ಚಿಮ್ಮಿ ಚೀರುತಿಹ ಛಿದ್ರ ತುಂತರಲೆ ಅಯಸ್ಕಾಂತ ಸೆಳೆತ
ಹೊಮ್ಮಿ ತೋರಿತಿದೆ ಕಂಡು ಕಾಣದೆಯೆ ರೂಹುಗೊಡುವ ಹರಿತ

ಬಿಂದು ಅಳಿಯಿತೋ ಬಿಂದು ಬೆಳೆಯಿತೋ ಅಂತು ರೂಪ ಹೋಯ್ತು
ತಿಂದು ಕಳೆಯಿತೋ ಕೊಂದು ನರಳಿತೋ ಬಿಕ್ಕು ಬೀಗಿ ಹೋಯ್ತು

ಕಣ್ಣಿನಂಚಿನಲಿ ಉರುಳಿ ಬೀಳ್ವ ಕರುಳುಗಳ ಬಿಂದು ಮಾಲೆ
ಹಣ್ಣಿನಲ್ಲಿ ಹರಿದು ಕಾಣದೆಯೆ ಉಳಿದ ಬೀಜಕ್ಕೆ ಭವ್ಯ ಲೀಲೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...