Home / ಲೇಖನ / ಇತರೆ / ಗೀಜಗನ ಗೂಡೊಳಗೆ

ಗೀಜಗನ ಗೂಡೊಳಗೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಮನೆಯ ಪಕ್ಕದ ಮುಳ್ಳು ಕಂಠಿಗಿಡದ ಎತ್ತರದ ಕೊಂಬೆಯಲ್ಲಿ ಗೀಜಗವೊಂದು ಗೂಡು ಕಟ್ಟಲಾರಂಭಿಸಿದೆ. ಮೊದಲಿಗೆ ಎಲ್ಲಿಂದಲೋ ಒಂದಿಷ್ಟು ಹುಲ್ಲು, ನಾರು ತಂದು ಹಾಕಿಕೊಳ್ಳುತ್ತದೆ. ನಿಧಾನಕ್ಕೆ ಗೂಡು ನಿರ್ಮಾಣಗೊಳ್ಳಲಾರಂಭಿಸುತ್ತದೆ.

ಗೀಜಗಕ್ಕೆ “ಇಂಜಿನೀಯರ್ ಹಕ್ಕಿ” ಎಂದೂ ಹೆಸರಿದೆಯಂತೆ. ನಿಜಕ್ಕೂ ಒಂದೊಂದು ಹುಲ್ಲು ಎಳಸನ್ನೂ ಸೂಕ್ಷ್ಮವಾಗಿ ಹೆಣೆಯುವ ಅದರ ಕಲೆಗಾರಿಕೆಗೆ ಗೀಜಗವೇ ಸಾಟಿ. ಚಾಪೆ ಹೆಣೆದಂತೆ ಒತ್ತೊತ್ತಾಗಿ ಪದರಗಳಮ್ನ ಹೆಣೆದು ಗೋಡೆಗಳನ್ನು ಸೃಷ್ಟಿಸಿ ಗಿಡಕ್ಕೆ ತೂಗುಬಿದ್ದಂತೆ ಗೂಡು ತಯಾರಾಗುತ್ತದೆ. ಗೂಡಿನ ಕೆಳಭಾಗದಲ್ಲಿ ಒಳಹೋಗಲೆಂದು ಪುಟ್ಟ ಪ್ರವೇಶದ್ವಾರ. ಉದ್ದಕ್ಕೆ ಕೊಳವೆಯಾಕಾರಕ್ಕೆ ಮೂಡಿದ ಆ ಪ್ರವೇಶದ್ವಾರದಿಂದ ಗೂಡಿನೊಳಗೆ ಒಂದೂ ಗುಟ್ಟು ಹೊರಬರುವಂತಿಲ್ಲ! ಗೂಡು ಕಟ್ಟಿದ ಮಾರನೇ ದಿನವೆಲ್ಲಾ ಗೀಜಗ ತನ್ನ ಕೊಕ್ಕಿನಿಂದ ಎಲ್ಲಿಂದಲೋ ಹಸಿಮಣ್ಣು ತಂದು ಗೂಡಿನೊಳಗೆ ಹೋಗುತ್ತಿತ್ತು. ಮಣ್ಣು ಏಕಿರಬಹುದು? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಒಂದೆರಡು ಮಿಂಚು ಹುಳುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಗೀಜಗ ಗೂಡು ಹೊಕ್ಕಿದ್ದು ಕಂಡಿತು. ಇದೂ ಯಾತಕ್ಕೆಂದು ತಿಳಿಯಲಿಲ್ಲ. ಅದರ ಆಹಾರವಿರಬಹುದೇನೋ ಎಂದುಕೊಂಡರೂ, ಅದರ ಆಹಾರವಾಗಿದ್ದರೆ ಸಿಕ್ಕಲ್ಲೇ ತಿಂದು
ಮುಗಿಸಿಬಿಡುತ್ತಿತ್ತು. ಮಾನವರಂತೆ ಮನೆಗೆ ತಂದು ಪರಿಷ್ಕರಿಸಿ ತಿನ್ನಬೇಕೆಂದೇನಿಲ್ಲವಲ್ಲಾ ಎಂದೂ ಅನ್ನಿಸಿತು.

ಮಾರನೆಯ ದಿನ ಬೆಳಗಾಗುವುದರಲ್ಲಿ ಒಂದಿದ್ದ ಗೀಜಗ ಎರಡಾಗಿವೆ. ಇನ್ನೊಂದು ಗೀಜಗ ಹೆಣ್ಣಿರಬಹುದೆಂದು ಊಹಿಸಿದೆ. ಸ್ವಲ್ಪದಿನಗಳವರೆಗೂ ಹೆಣ್ಣು ಗೀಜಗ ಗೂಡಿನಿಂದ ಹೊರಗೇ ಬರಲಿಲ್ಲ. ಗಂಡು ಗೀಜಗವೇ ಹೆಣ್ಣಿಗೂ ಆಹಾರ ತಂದುಕೊಡುತ್ತಿತ್ತೇನೋ?  ಬಹುಶಃ ಹೆಣ್ಣು ಗೀಜಗ ಮೊಟ್ಟೆ ಇಟ್ಟಿರಬಹುದೇ? ಊಹೆ ನಿಜವಾಗಿತ್ತು. ಒಂದು ಬೆಳಗ್ಗೆ ಗೂಡಿನಿಂದ ಮರಿ ಗೀಜಗಗಳ ಕಿಚಿಪಿಚಿ ಕೇಳಲಾರಂಭಿಸಿತ್ತು. ಗಂಡು ಹೆಣ್ಣು ಗೀಜಗಗಳೆರಡು ಎಲ್ಲಿಗೆಲ್ಲಿಗೋ ಹಾರಿ ಹೋಗಿ ಆಹಾರ ತಂದು ಮರಿ ಗೀಜಗಗಳಿಗೆ ತುತ್ತುಣಿಸುವ ದೃಶ್ಯ ಮನೋಹರವಾಗಿತ್ತು. ತಿಂದಷ್ಟು ಆಹಾರಕ್ಕಾಗಿ ಅರಚುವ ಅವುಗಳ ಹೊಟ್ಟೆ ಬಾಕತನ ಆಶ್ಚರ್ಯ ತರಿಸುತ್ತಿತ್ತು.

ಕೆಲ ದಿನಗಳ ನಂತರ, ಸಂಸಾರ ಸಮೇತ ಗೀಜಗ ಅದೆಲ್ಲಿಗೆ ಹಾರಿ ಹೋಯ್ತೋ! ಮತ್ತೆ ಹಿಂದಿರುಗಬಹುದೆಂದು ಕೆಲ ದಿನ ಕಾಯ್ದು ಕೊನೆಗೊಮ್ಮೆ ಗೀಜಗನ ಗೂಡಿನ ಒಳಗನ್ನು ನೋಡುವ ಕುತೂಹಲದಿಂದ ಗೂಡು ಕಿತ್ತು ತಂದು ಒಳಗೆಲ್ಲಾ ಪರೀಕ್ಷಿಸಿದರೆ ಗೂಡಿನ ಒಳಭಾಗದಲ್ಲಿ ಮೆತ್ತಿದ್ದ ಹಸಿಮಣ್ಣು ಒಣಗಿ ನಿಂತಿದೆ. ಜೊತೆಗೆ ಆ ಮಣ್ಣಿನ ಮೇಲೆ ಮೆತ್ತಿಕೊಂಡು ಸತ್ತ ಮಿಂಚಿನ ಹುಳುಗಳು! ಅಬ್ಬಾ ಗೀಜಗನ ಜಾಣ್ಮೆಯೇ! ತನ್ನ ಮನೆಗೆ ಬೆಳಕು ಮಾಡಿಕೊಳ್ಳಲು ದಿನವೂ ಒಂದೊಂದು ಜೀವಂತ ಮಿಂಚು ಹುಳ ತಂದು ಅಂಟಿಸಿ ಅದು ಸತ್ತರೆ ಇನ್ನೊಂದು ಅಂಟಿಸಿಕೊಳ್ಳುವ ಈ ಜಾಣ್ಮೆ ಗೀಜಗಕ್ಕೆ ಯಾರು ಕಲಿಸಿದರು? ಅಪಾರ ಜೀವರಾಶಿಯ ಆಗರವಾಗಿರುವ ಈ ಸೃಷ್ಟಿಯಲ್ಲಿ ಯಾವ ಜೀವಿಗೆ ಯಾವ ಜಾಣ್ಮೆಯಿದೆಯೋ ತಿಳಿದುಕೊಳ್ಳುವ ಕುತೂಹಲ, ವ್ಯವಧಾನ, ಸಮಯ ನಮಗಿರಬೇಕಲ್ಲವೇ ಸಖೀ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...