Home / ಲೇಖನ / ಇತರೆ / ಗೀಜಗನ ಗೂಡೊಳಗೆ

ಗೀಜಗನ ಗೂಡೊಳಗೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಮನೆಯ ಪಕ್ಕದ ಮುಳ್ಳು ಕಂಠಿಗಿಡದ ಎತ್ತರದ ಕೊಂಬೆಯಲ್ಲಿ ಗೀಜಗವೊಂದು ಗೂಡು ಕಟ್ಟಲಾರಂಭಿಸಿದೆ. ಮೊದಲಿಗೆ ಎಲ್ಲಿಂದಲೋ ಒಂದಿಷ್ಟು ಹುಲ್ಲು, ನಾರು ತಂದು ಹಾಕಿಕೊಳ್ಳುತ್ತದೆ. ನಿಧಾನಕ್ಕೆ ಗೂಡು ನಿರ್ಮಾಣಗೊಳ್ಳಲಾರಂಭಿಸುತ್ತದೆ.

ಗೀಜಗಕ್ಕೆ “ಇಂಜಿನೀಯರ್ ಹಕ್ಕಿ” ಎಂದೂ ಹೆಸರಿದೆಯಂತೆ. ನಿಜಕ್ಕೂ ಒಂದೊಂದು ಹುಲ್ಲು ಎಳಸನ್ನೂ ಸೂಕ್ಷ್ಮವಾಗಿ ಹೆಣೆಯುವ ಅದರ ಕಲೆಗಾರಿಕೆಗೆ ಗೀಜಗವೇ ಸಾಟಿ. ಚಾಪೆ ಹೆಣೆದಂತೆ ಒತ್ತೊತ್ತಾಗಿ ಪದರಗಳಮ್ನ ಹೆಣೆದು ಗೋಡೆಗಳನ್ನು ಸೃಷ್ಟಿಸಿ ಗಿಡಕ್ಕೆ ತೂಗುಬಿದ್ದಂತೆ ಗೂಡು ತಯಾರಾಗುತ್ತದೆ. ಗೂಡಿನ ಕೆಳಭಾಗದಲ್ಲಿ ಒಳಹೋಗಲೆಂದು ಪುಟ್ಟ ಪ್ರವೇಶದ್ವಾರ. ಉದ್ದಕ್ಕೆ ಕೊಳವೆಯಾಕಾರಕ್ಕೆ ಮೂಡಿದ ಆ ಪ್ರವೇಶದ್ವಾರದಿಂದ ಗೂಡಿನೊಳಗೆ ಒಂದೂ ಗುಟ್ಟು ಹೊರಬರುವಂತಿಲ್ಲ! ಗೂಡು ಕಟ್ಟಿದ ಮಾರನೇ ದಿನವೆಲ್ಲಾ ಗೀಜಗ ತನ್ನ ಕೊಕ್ಕಿನಿಂದ ಎಲ್ಲಿಂದಲೋ ಹಸಿಮಣ್ಣು ತಂದು ಗೂಡಿನೊಳಗೆ ಹೋಗುತ್ತಿತ್ತು. ಮಣ್ಣು ಏಕಿರಬಹುದು? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಒಂದೆರಡು ಮಿಂಚು ಹುಳುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಗೀಜಗ ಗೂಡು ಹೊಕ್ಕಿದ್ದು ಕಂಡಿತು. ಇದೂ ಯಾತಕ್ಕೆಂದು ತಿಳಿಯಲಿಲ್ಲ. ಅದರ ಆಹಾರವಿರಬಹುದೇನೋ ಎಂದುಕೊಂಡರೂ, ಅದರ ಆಹಾರವಾಗಿದ್ದರೆ ಸಿಕ್ಕಲ್ಲೇ ತಿಂದು
ಮುಗಿಸಿಬಿಡುತ್ತಿತ್ತು. ಮಾನವರಂತೆ ಮನೆಗೆ ತಂದು ಪರಿಷ್ಕರಿಸಿ ತಿನ್ನಬೇಕೆಂದೇನಿಲ್ಲವಲ್ಲಾ ಎಂದೂ ಅನ್ನಿಸಿತು.

ಮಾರನೆಯ ದಿನ ಬೆಳಗಾಗುವುದರಲ್ಲಿ ಒಂದಿದ್ದ ಗೀಜಗ ಎರಡಾಗಿವೆ. ಇನ್ನೊಂದು ಗೀಜಗ ಹೆಣ್ಣಿರಬಹುದೆಂದು ಊಹಿಸಿದೆ. ಸ್ವಲ್ಪದಿನಗಳವರೆಗೂ ಹೆಣ್ಣು ಗೀಜಗ ಗೂಡಿನಿಂದ ಹೊರಗೇ ಬರಲಿಲ್ಲ. ಗಂಡು ಗೀಜಗವೇ ಹೆಣ್ಣಿಗೂ ಆಹಾರ ತಂದುಕೊಡುತ್ತಿತ್ತೇನೋ?  ಬಹುಶಃ ಹೆಣ್ಣು ಗೀಜಗ ಮೊಟ್ಟೆ ಇಟ್ಟಿರಬಹುದೇ? ಊಹೆ ನಿಜವಾಗಿತ್ತು. ಒಂದು ಬೆಳಗ್ಗೆ ಗೂಡಿನಿಂದ ಮರಿ ಗೀಜಗಗಳ ಕಿಚಿಪಿಚಿ ಕೇಳಲಾರಂಭಿಸಿತ್ತು. ಗಂಡು ಹೆಣ್ಣು ಗೀಜಗಗಳೆರಡು ಎಲ್ಲಿಗೆಲ್ಲಿಗೋ ಹಾರಿ ಹೋಗಿ ಆಹಾರ ತಂದು ಮರಿ ಗೀಜಗಗಳಿಗೆ ತುತ್ತುಣಿಸುವ ದೃಶ್ಯ ಮನೋಹರವಾಗಿತ್ತು. ತಿಂದಷ್ಟು ಆಹಾರಕ್ಕಾಗಿ ಅರಚುವ ಅವುಗಳ ಹೊಟ್ಟೆ ಬಾಕತನ ಆಶ್ಚರ್ಯ ತರಿಸುತ್ತಿತ್ತು.

ಕೆಲ ದಿನಗಳ ನಂತರ, ಸಂಸಾರ ಸಮೇತ ಗೀಜಗ ಅದೆಲ್ಲಿಗೆ ಹಾರಿ ಹೋಯ್ತೋ! ಮತ್ತೆ ಹಿಂದಿರುಗಬಹುದೆಂದು ಕೆಲ ದಿನ ಕಾಯ್ದು ಕೊನೆಗೊಮ್ಮೆ ಗೀಜಗನ ಗೂಡಿನ ಒಳಗನ್ನು ನೋಡುವ ಕುತೂಹಲದಿಂದ ಗೂಡು ಕಿತ್ತು ತಂದು ಒಳಗೆಲ್ಲಾ ಪರೀಕ್ಷಿಸಿದರೆ ಗೂಡಿನ ಒಳಭಾಗದಲ್ಲಿ ಮೆತ್ತಿದ್ದ ಹಸಿಮಣ್ಣು ಒಣಗಿ ನಿಂತಿದೆ. ಜೊತೆಗೆ ಆ ಮಣ್ಣಿನ ಮೇಲೆ ಮೆತ್ತಿಕೊಂಡು ಸತ್ತ ಮಿಂಚಿನ ಹುಳುಗಳು! ಅಬ್ಬಾ ಗೀಜಗನ ಜಾಣ್ಮೆಯೇ! ತನ್ನ ಮನೆಗೆ ಬೆಳಕು ಮಾಡಿಕೊಳ್ಳಲು ದಿನವೂ ಒಂದೊಂದು ಜೀವಂತ ಮಿಂಚು ಹುಳ ತಂದು ಅಂಟಿಸಿ ಅದು ಸತ್ತರೆ ಇನ್ನೊಂದು ಅಂಟಿಸಿಕೊಳ್ಳುವ ಈ ಜಾಣ್ಮೆ ಗೀಜಗಕ್ಕೆ ಯಾರು ಕಲಿಸಿದರು? ಅಪಾರ ಜೀವರಾಶಿಯ ಆಗರವಾಗಿರುವ ಈ ಸೃಷ್ಟಿಯಲ್ಲಿ ಯಾವ ಜೀವಿಗೆ ಯಾವ ಜಾಣ್ಮೆಯಿದೆಯೋ ತಿಳಿದುಕೊಳ್ಳುವ ಕುತೂಹಲ, ವ್ಯವಧಾನ, ಸಮಯ ನಮಗಿರಬೇಕಲ್ಲವೇ ಸಖೀ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...