Home / ಲೇಖನ / ಇತರೆ / ಗೀಜಗನ ಗೂಡೊಳಗೆ

ಗೀಜಗನ ಗೂಡೊಳಗೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಮನೆಯ ಪಕ್ಕದ ಮುಳ್ಳು ಕಂಠಿಗಿಡದ ಎತ್ತರದ ಕೊಂಬೆಯಲ್ಲಿ ಗೀಜಗವೊಂದು ಗೂಡು ಕಟ್ಟಲಾರಂಭಿಸಿದೆ. ಮೊದಲಿಗೆ ಎಲ್ಲಿಂದಲೋ ಒಂದಿಷ್ಟು ಹುಲ್ಲು, ನಾರು ತಂದು ಹಾಕಿಕೊಳ್ಳುತ್ತದೆ. ನಿಧಾನಕ್ಕೆ ಗೂಡು ನಿರ್ಮಾಣಗೊಳ್ಳಲಾರಂಭಿಸುತ್ತದೆ.

ಗೀಜಗಕ್ಕೆ “ಇಂಜಿನೀಯರ್ ಹಕ್ಕಿ” ಎಂದೂ ಹೆಸರಿದೆಯಂತೆ. ನಿಜಕ್ಕೂ ಒಂದೊಂದು ಹುಲ್ಲು ಎಳಸನ್ನೂ ಸೂಕ್ಷ್ಮವಾಗಿ ಹೆಣೆಯುವ ಅದರ ಕಲೆಗಾರಿಕೆಗೆ ಗೀಜಗವೇ ಸಾಟಿ. ಚಾಪೆ ಹೆಣೆದಂತೆ ಒತ್ತೊತ್ತಾಗಿ ಪದರಗಳಮ್ನ ಹೆಣೆದು ಗೋಡೆಗಳನ್ನು ಸೃಷ್ಟಿಸಿ ಗಿಡಕ್ಕೆ ತೂಗುಬಿದ್ದಂತೆ ಗೂಡು ತಯಾರಾಗುತ್ತದೆ. ಗೂಡಿನ ಕೆಳಭಾಗದಲ್ಲಿ ಒಳಹೋಗಲೆಂದು ಪುಟ್ಟ ಪ್ರವೇಶದ್ವಾರ. ಉದ್ದಕ್ಕೆ ಕೊಳವೆಯಾಕಾರಕ್ಕೆ ಮೂಡಿದ ಆ ಪ್ರವೇಶದ್ವಾರದಿಂದ ಗೂಡಿನೊಳಗೆ ಒಂದೂ ಗುಟ್ಟು ಹೊರಬರುವಂತಿಲ್ಲ! ಗೂಡು ಕಟ್ಟಿದ ಮಾರನೇ ದಿನವೆಲ್ಲಾ ಗೀಜಗ ತನ್ನ ಕೊಕ್ಕಿನಿಂದ ಎಲ್ಲಿಂದಲೋ ಹಸಿಮಣ್ಣು ತಂದು ಗೂಡಿನೊಳಗೆ ಹೋಗುತ್ತಿತ್ತು. ಮಣ್ಣು ಏಕಿರಬಹುದು? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಒಂದೆರಡು ಮಿಂಚು ಹುಳುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಗೀಜಗ ಗೂಡು ಹೊಕ್ಕಿದ್ದು ಕಂಡಿತು. ಇದೂ ಯಾತಕ್ಕೆಂದು ತಿಳಿಯಲಿಲ್ಲ. ಅದರ ಆಹಾರವಿರಬಹುದೇನೋ ಎಂದುಕೊಂಡರೂ, ಅದರ ಆಹಾರವಾಗಿದ್ದರೆ ಸಿಕ್ಕಲ್ಲೇ ತಿಂದು
ಮುಗಿಸಿಬಿಡುತ್ತಿತ್ತು. ಮಾನವರಂತೆ ಮನೆಗೆ ತಂದು ಪರಿಷ್ಕರಿಸಿ ತಿನ್ನಬೇಕೆಂದೇನಿಲ್ಲವಲ್ಲಾ ಎಂದೂ ಅನ್ನಿಸಿತು.

ಮಾರನೆಯ ದಿನ ಬೆಳಗಾಗುವುದರಲ್ಲಿ ಒಂದಿದ್ದ ಗೀಜಗ ಎರಡಾಗಿವೆ. ಇನ್ನೊಂದು ಗೀಜಗ ಹೆಣ್ಣಿರಬಹುದೆಂದು ಊಹಿಸಿದೆ. ಸ್ವಲ್ಪದಿನಗಳವರೆಗೂ ಹೆಣ್ಣು ಗೀಜಗ ಗೂಡಿನಿಂದ ಹೊರಗೇ ಬರಲಿಲ್ಲ. ಗಂಡು ಗೀಜಗವೇ ಹೆಣ್ಣಿಗೂ ಆಹಾರ ತಂದುಕೊಡುತ್ತಿತ್ತೇನೋ?  ಬಹುಶಃ ಹೆಣ್ಣು ಗೀಜಗ ಮೊಟ್ಟೆ ಇಟ್ಟಿರಬಹುದೇ? ಊಹೆ ನಿಜವಾಗಿತ್ತು. ಒಂದು ಬೆಳಗ್ಗೆ ಗೂಡಿನಿಂದ ಮರಿ ಗೀಜಗಗಳ ಕಿಚಿಪಿಚಿ ಕೇಳಲಾರಂಭಿಸಿತ್ತು. ಗಂಡು ಹೆಣ್ಣು ಗೀಜಗಗಳೆರಡು ಎಲ್ಲಿಗೆಲ್ಲಿಗೋ ಹಾರಿ ಹೋಗಿ ಆಹಾರ ತಂದು ಮರಿ ಗೀಜಗಗಳಿಗೆ ತುತ್ತುಣಿಸುವ ದೃಶ್ಯ ಮನೋಹರವಾಗಿತ್ತು. ತಿಂದಷ್ಟು ಆಹಾರಕ್ಕಾಗಿ ಅರಚುವ ಅವುಗಳ ಹೊಟ್ಟೆ ಬಾಕತನ ಆಶ್ಚರ್ಯ ತರಿಸುತ್ತಿತ್ತು.

ಕೆಲ ದಿನಗಳ ನಂತರ, ಸಂಸಾರ ಸಮೇತ ಗೀಜಗ ಅದೆಲ್ಲಿಗೆ ಹಾರಿ ಹೋಯ್ತೋ! ಮತ್ತೆ ಹಿಂದಿರುಗಬಹುದೆಂದು ಕೆಲ ದಿನ ಕಾಯ್ದು ಕೊನೆಗೊಮ್ಮೆ ಗೀಜಗನ ಗೂಡಿನ ಒಳಗನ್ನು ನೋಡುವ ಕುತೂಹಲದಿಂದ ಗೂಡು ಕಿತ್ತು ತಂದು ಒಳಗೆಲ್ಲಾ ಪರೀಕ್ಷಿಸಿದರೆ ಗೂಡಿನ ಒಳಭಾಗದಲ್ಲಿ ಮೆತ್ತಿದ್ದ ಹಸಿಮಣ್ಣು ಒಣಗಿ ನಿಂತಿದೆ. ಜೊತೆಗೆ ಆ ಮಣ್ಣಿನ ಮೇಲೆ ಮೆತ್ತಿಕೊಂಡು ಸತ್ತ ಮಿಂಚಿನ ಹುಳುಗಳು! ಅಬ್ಬಾ ಗೀಜಗನ ಜಾಣ್ಮೆಯೇ! ತನ್ನ ಮನೆಗೆ ಬೆಳಕು ಮಾಡಿಕೊಳ್ಳಲು ದಿನವೂ ಒಂದೊಂದು ಜೀವಂತ ಮಿಂಚು ಹುಳ ತಂದು ಅಂಟಿಸಿ ಅದು ಸತ್ತರೆ ಇನ್ನೊಂದು ಅಂಟಿಸಿಕೊಳ್ಳುವ ಈ ಜಾಣ್ಮೆ ಗೀಜಗಕ್ಕೆ ಯಾರು ಕಲಿಸಿದರು? ಅಪಾರ ಜೀವರಾಶಿಯ ಆಗರವಾಗಿರುವ ಈ ಸೃಷ್ಟಿಯಲ್ಲಿ ಯಾವ ಜೀವಿಗೆ ಯಾವ ಜಾಣ್ಮೆಯಿದೆಯೋ ತಿಳಿದುಕೊಳ್ಳುವ ಕುತೂಹಲ, ವ್ಯವಧಾನ, ಸಮಯ ನಮಗಿರಬೇಕಲ್ಲವೇ ಸಖೀ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...