
ಹುಲಿಯಣ್ಣಾ ಹುಲಿಯಣ್ಣಾ
ಕಾಡಿಗೆ ನೀನೇ ಹಿರಿಯಣ್ಣ!
ಆದರು ನೀನು ಕಾಡಲ್ಲೇ ಇರು
ಊರಿನೊಳಗೆ ಬರಬೇಡಣ್ಣ!
ಹುಲಿಯಣ್ಣಾ ಹುಲಿಯಣ್ಣಾ
ಎಂಥಾ ಮೀಸೆ ನಿನಗಣ್ಣ!
ಎಂಥಾ ಬಾಯಿ ಎಂಥಾ ಹಲ್ಲು
ಎಂಥಾ ಗರ್ಜನೆ ನಿನದಣ್ಣ!
ಹುಲಿಯಣ್ಣಾ ಹುಲಿಯಣ್ಣಾ
ಫಳ ಫಳ ಗಾಜಿನ ಕಣ್ಣಣ್ಣ!
ಚೂರಿಗಿಂತಲೂ ಚೂಪು ಉಗುರು
ಬಣ್ಣದ ಪಟ್ಟಿಯ ಮೈಯಣ್ಣ!
ಹುಲಿಯಣ್ಣಾ ಹುಲಿಯಣ್ಣಾ
ಹತ್ತಿರ ನೀ ಬರಬೇಡಣ್ಣ!
ಹತ್ತಿರ ಬಂದರೆ ನಾಲಿಗೆ ಒಣಗಿ
ಚಡ್ಡೀ ಒದ್ದೆ ತಿಳಿಯಣ್ಣ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.