Home / ಲೇಖನ / ಇತರೆ / ಇಕ್ಕಳ

ಇಕ್ಕಳ

ಪ್ರಿಯ ಸಖಿ,
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲೆಂ’ದರು
ಮಳೆ ಬಿತ್ತೋ ‘ಬಿಡದಲ್ಲ ಶನಿ’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
ಕವಿ ಕೆ. ಎಸ್. ನರಸಿಂಹಸ್ವಾಮಿಯವರ ‘ಇಕ್ಕಳ’ ಕವನದ ಈ ಸಾಲುಗಳು ವಿಕ್ಷಿಪ್ತ ಮನೋಭಾವದ ವ್ಯಕ್ತಿಗಳ ಮನೋಭಾವವನ್ನು ಕುರಿತ ಚಿತ್ರಣವನ್ನು ನೀಡುತ್ತದೆ. ಸದಾ ಟೀಕಿಸುವುದನ್ನೇ ಗುರಿಯಾಗಿ ಇಟ್ಟುಕೊಂಡ ಇಂತವರಿಗೆ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ಪ್ರವೃತ್ತಿ, ಟೀಕೆ ಮಾಡಿ ಗೊಣಗಾಡದಿದ್ದರೆ ಇವರಿಗೆ ಸಮಾಧಾನವೇ ಇಲ್ಲ. ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲದರ ಬಗೆಗೂ ಇವರಿಗೆ ಅಸಮಾಧಾನವೇ. ಕವನವಮ್ನ ಮುಂದುವರೆಸುತ್ತಾ ಕವಿ
ನಿಂತವರ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು. ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ!
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಯಾವುದನ್ನೂ ಒಪ್ಪದ ಇವರಿಗೆ ನಿಂತರೂ ತಪ್ಪು ಮಲಗಿದರೂ ತಪ್ಪು, ಓಡಿದರೂ ತಪ್ಪು! ಒಟ್ಟಿನಲ್ಲಿ ಯಾವ ವಸ್ತುವನ್ನೇ ಆಗಲಿ ಪರಿಸ್ಥಿತಿಯನ್ನೇ ಆಗಲಿ, ಕಾಲವನ್ನೇ ಆಗಲಿ, ವ್ಯಕ್ತಿಯನ್ನೇ ಆಗಲಿ ಟೇಕಿಸುತ್ತಲೇ ಇರುವುದು ಇವರ ಸ್ವಭಾವ. ಇದೊಂದು ರೀತಿಯ ಮನೋರೋಗವೂ ಹೌದು. ಅತೃಪ್ತ ಮನಸ್ಸಿಗೆ ಸದಾಲೋಕವೇ ಡೊಂಕಾಗಿ ಕಾಣುತ್ತದೆ. ಯಾವುದರಿಂದಲೂ ತೃಪ್ತಿ ಹೊಂದದ ವಿಲಕ್ಷಣ ವ್ಯಕ್ತಿಗಳೊಂದಗಿನ ಬಾಳೂ ಅಸಹನೀಯವೇ.

ಇಂತಹವರ ಕೈಗಳಿಗೆ ಸಿಕ್ಕಿಕೊಂಡ ವ್ಯಕ್ತಿ ಇಕ್ಕಳದ ಮಧ್ಯೆ ಸಿಕ್ಕಂತೆ ಚಡಪಡಿಸ ಬೇಕಾಗುತ್ತದೆ. ಯಾವುದು ಸರಿಯೋ? ಯಾವುದು ತಪ್ಪೋ? ಯಾವುದನ್ನು ಮಾಡಬೇಕು? ಯಾವುದನ್ನು ಬಿಡಬೇಕು? ಹೇಗೆ ನಡೆದುಕೊಂಡರೆ ಸರಿ? ಎಂದು ಅರಿಯದೇ ಚಡಪಡಿಸಿ, ಗೊಂದಲಕ್ಕೊಳಗಾಗುತ್ತಾನೆ. ಆದರೆ ಇಂತಹ ಅತೃಪ್ತ ಮನಸ್ಸಿನವರ ಟೀಕೆಗೆ ಕಿವಿಗೊಟ್ಟು ಮಾನಸಿಕ ಕ್ಷೋಭೆಗೊಳಗಾಗುವುದಕ್ಕಿಂತಾ, ಅವರನ್ನು ಅವರ ಪಾಡಿಗೆ ಟೀಕಿಸಲು ಬಿಟ್ಟು, ನಮ್ಮ ವಿವೇಚನೆಯಿಂದ ಸರಿ ತಪ್ಪನ್ನು ತಿಳಿದುಕೊಂಡು ಅವರ ಮಾತುಗಳಿಗೆ ಜಾಣ ಕಿವುಡು ನಟಿಸುವುದೇ ಉತ್ತಮವಾದ ಮಾರ್ಗ ಎಂದು ನನಗನ್ನಿಸುತ್ತದೆ. ನಿನ್ನ ಅಭಿಪ್ರಾಯವೇನು ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...