Home / ಕಥೆ / ಜನಪದ / ಗರತಿ ಸಂಗವ್ವ

ಗರತಿ ಸಂಗವ್ವ

ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು –
“ಹತ್ತೂರು ಕೊಡುತ್ತೇನೆ, ಮುಖತೋರಿಸು.”

“ಹತ್ತೂರು ಕೊಟ್ಟರೂ ನನ್ನ ನತ್ತಿನ ಬೆಲೆಯಾಗುವುದಿಲ್ಲ.  ಅತ್ತೆಯ ಹೊಟ್ಟೆಯಲ್ಲಿ ಹುಟ್ಟಿದವನು ಪ್ರತ್ಯಕ್ಷ ಅರ್ಜುನನೇ ಆಗಿದ್ದಾನೆ. ಆತನ ಕಾಲಕೆರವಿನ ಬೆಲೆ ನಿನಗಿಲ್ಲ” ಎಂದು ಖಂಡತುಂಡವಾಗಿ ನುಡಿದಳು ಸಂಗಮ್ಮ.  ಆದರೇನು, ಹಸಿದ ಹುಲಿಯನ್ನು ಕೆಣಕಿದೆನಲ್ಲ ಎಂದು ಎದೆಗುದಿ ಉಂಟಾಗದೆ ಇರಲಿಲ್ಲ ಆಕೆಗೆ.

ಹೊಳೆಗೆ ಹೇಗೆ ಹೋದಳೋ ನೀರು ಹೇಗೆ ತುಂಬಿದಳೋ ಆಕೆಗೆ ತಿಳಿಯಲಿಲ್ಲ. ತುಂಬಿದ ಕೊಡವನ್ನು ತಲೆಯಮೇಲೆ ಹೊತ್ತುದೇ ತಡ, ಗಾಳಿವೇಗದಿಂದ ಬಂದು ಮನೆಯನ್ನು ಸೇರಿದಳು. ಹೊಟ್ಟೆಯಲ್ಲಿ ಸಾಸಿವೆಯೆಣ್ಣೆ ಕಲೆಸುತ್ತಿತ್ತು.

ಮನೆಗೆ ಬಂದು ನೀರುಕೊಡವನ್ನು ಇಳುಹಿದವಳೇ ತಲೆಕಟ್ಟಿಕೊಂಡು ಸಂಗವ್ವ ಮಲಗಿಯೇಬಿಟ್ಟಳು.

ಕೆಲಸಕ್ಕೆ ಹೋದ ಮಾವಯ್ಯನು ಮನೆಗೆ ಬಂದು, ಸಂಗವ್ವ ಮಲಗಿದ್ದನ್ನು ಕಂಡನು. ತಲೆದಿಂಬಿನ ಬಳಿ ನಿಂತುಕೊಂಡು – “ಯಾಕೆ ಸಂಗಮ್ಮ ಮಲಗಿರುವೆಯಲ್ಲ” ಎಂದನು.

“ಕೈನೋವು, ಕಾಲುನೋವು. ವಿಚಿತ್ರವಾದ ಹಲವು ನೋವು ಮಾವಯ್ಯ.  ಸಾಯುತ್ತೇನೆ, ನೋವು ತಾಳಲಾಸಲ್ಲ – ತವರವರಿಗೆ ಹೇಳಿಕಳಿಸಿರಿ” ವಿನಯದಿಂದ ಸಂಗವ್ವ ನುಡಿದಳು.

ಕೈಹಿಡಿದ ಪತಿದೇವರು ಹೊರಗಿನಿಂದ ಬಂದು ಮಂಚದ ಬಳಿ ನಿಂತು ಕೇಳುತ್ತಾನೆ – “ಯಾಕೆ, ಮಲಗಿಕೊಂಡೆ ಕೆಳದಿ ?”

ಏನು ಹೇಳಲಿ, ಸಂದುಸಂದಿನ ನೋವು. ಸೂಜಿಯೂರುವಸ್ಟು ಸಹ ಸ್ಥಳ ನೋವಿಲ್ಲದಿಲ್ಲ. ಸಾಯುತ್ತೇನೆ ನನ್ನ ದೊರೆಯೇ ಹೆಚ್ಚಿನ ನೋವು !

ಹಾದಿಬೀದಿ ಉಡುಗಿಸಿ, ಹಾಲಿನ ಚಳಿಕೊಡಿರಿ. ಹಾದಿಯಲ್ಲಿ ನಿಂತವರೆಲ್ಲ ಬದಿಗಾಗಿರಿ. ಸಂಗಮ್ಮನ ತಾಯಿ ಅಳುತ್ತ ಬರುತ್ತಿದ್ದಾಳೆ.

ತಿಪ್ಪೆಯನ್ನು ಉಡುಗಿಸಿರಿ, ತುಪ್ಪದ ಚಳಿಕೊಡಿರಿ. ತಿಪ್ಪೆಯೊಳಗಿನ ಮಂದಿಯೆಲ್ಲ ಬದಿಗಾಗಿರಿ. ಸಂಗಮ್ಮನ ತಂದೆ ಅಳುತ್ತ ಬರುತ್ತಿದ್ದಾನೆ.

ಸಂಜ್ಞೆಯಿಂದ ತಾಯಿತಂದೆಗಳನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಹೇಳಿದಳು – ತಾನು ಹೇಳಬೇಕಾದುದನ್ನು. ಆ ಜೀವಬಿಟ್ಟು ಮೃತ್ಯುವನ್ನು ಗೆದ್ದಳು. ಮುಗಿಲ ದಾರಿಯಲ್ಲಿ ನಿಂತು ಕಿತ್ತೂರದೊರೆಯನ್ನು ಈಡಾಡಿದಳು.

ತಲೆಯಲ್ಲಿ ಚಂಡುಹೂವಿನ ದಂಡೆಯಿಂದ ಶೋಭಿಸುತ್ತಿರುವ ಸಂಗಮ್ಮನನ್ನು ಬಾಳೆಯ ಬನದಲ್ಲಿ ಬಯತಿರಿಸಿದರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...