Home / ಕವನ / ಕವಿತೆ / ಬರಡು

ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ
ಫಲ ಸುರಿಸಲು ಬಯಸಿ,
ಮೊಳಕೆ ಒಡೆಯುತಿರುವಾಗಲೆ ಯಾವುದೊ
ನಂಜು ಗಾಳಿ ಬೀಸಿ,
ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ
ಎಲೆಯುದುರಿವೆ ಕೆಳಗೆ;
ಪ್ರಾಯದ ಗಿಡ ಆಯ ತಪ್ಪಿದಂತಿದೆ
ಈ ರೂಪವೆ ಇದಕೆ?
ಮೂಳೆಗೈಯಾಗಿ ಮುಗಿಲಿಗೆ ಚಾಚಿದ
ಬರದ ಭಿಕ್ಷಹಸ್ತ.
ಸತ್ತ ಸಿರಿಯನ್ನು ಎತ್ತಲು ನಿಲುಕದೆ
ಅಳುತಲಿರುವ ತ್ರಸ್ತ;
ಕಾಣುವ ಕಣ್ಣಿನ ಶಾಪ,
ಬಾಳಿನ ಹಾಳಿಗೆ ರೂಪ,
ಬೋಳು ಬಯಲಲ್ಲಿ, ಬೆಂಕಿ ಬಿಸಿಲಲ್ಲಿ
ಸ್ತಬ್ಧವಾದಂತೆ ಮಾರಿಗುಡಿಯಲ್ಲಿ
ಹೊಗೆಯಾಗೇಳುವ ಧೂಪ;
ಗಾಳಿಮೈಯ ಸೀಳುತ ನಿಂತಿರುವ
ಒರೆಗಳಚಿದ ಬಾಳು,
ಗತಿಸಿದ ಬದುಕಿಗೆ ತಪಿಸುತಿರುವ ಈ
ಮರದ ರೋಗಿಬಾಳು.
* * *

ಟೊಂಗೆಯೊಡೆದ ದಿನದಿಂದಲು ಗಿಡಕೆ
ಪಡೆಯಬೇಕು ಎಂಬುದೊಂದೆ ಬಯಕೆ
ತಿಳಿಯದಂತೆ ತಳದಿಂದಲೆ ಬೆಳೆದು
ಮೈಯೆಲ್ಲಾ ಹಸಿರ ವಸ್ತ್ರ ತಳೆದು,
ತುಳುಕಬೇಕು ಮೈ ತುಂಬಾ ಹಣ್ಣು
ತಣಿಯುವಂತೆ ಬೆಳೆಸಿದವನ ಕಣ್ಣು;
ಬಯಲಲೆಲ್ಲ ತನ್ನ ಕುಲವ ನಿಲಿಸಿ
ಬಾಳಬೇಕು ಎಂದು ಬೇರನಿಳಿಸಿ,
ಮಂತ್ರ ಜಲವ ಸಿಡಿಸಿದಂತೆ ಈ ಗಿಡ
ಭರ ಭರ ಬೆಳೆದಾಯಿತು ಪುಟ್ಟ ಮರ.
* * *

ರಸವತಿಯಾದರು ತನ್ನೊಡಲು
ಗುರಿಯೋ ತಳಕಾಣದ ಕಡಲು.
ಫಲ ಬಿಡದಿದ್ದರೆ ಏನಿದ್ದೇನು
ಮುಗಿಯಿತೆ ಬರಿ ಸುಖಪಡಲು?
ಕರಿಮುಗಿಲಿನ ಸಂತತ ರಸಧಾರೆಗು
ಮೊಗ್ಗನು ತಳೆಯದು ಮಡಿಲು :
ಗಂಗೆಗನಸ ಕಟ್ಟಿದ ಹೊಳೆ ಇಂಗಿದೆ
ಸುಡುಹೆಂಚಾಗಿದೆ ಒಡಲು ;
ಇಡಿ ಜಗ ಫಲವತಿಯಾದರು ನಿಯಮಕೆ
ಹೊರತಾಗಿದೆ ಈ ಗಿಡ,
ಎಷ್ಟೆ ನುಡಿಸಿದರು ಸುಸ್ವರ ಬರದಿದೆ
ಒಡೆದ ಮಡಕೆ ಈ ಘಟ.
ಗುಡಿಯನು ಬೆಳಗಲು ಬಯಸಿದ ಸೊಡರು
ಉರಿಯುತ್ತಿದೆ ಚಿತೆ ಸುಡಲು;
ಚಾಮರವಾಗುವ ಕನಸ ಕಂಡ ಗಿಡ
ಆಯಿತೆ ಕಸಗುಡಿಸುವ ಬರಲು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...