Home / ಕವನ / ಕವಿತೆ / ಬರಡು

ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ
ಫಲ ಸುರಿಸಲು ಬಯಸಿ,
ಮೊಳಕೆ ಒಡೆಯುತಿರುವಾಗಲೆ ಯಾವುದೊ
ನಂಜು ಗಾಳಿ ಬೀಸಿ,
ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ
ಎಲೆಯುದುರಿವೆ ಕೆಳಗೆ;
ಪ್ರಾಯದ ಗಿಡ ಆಯ ತಪ್ಪಿದಂತಿದೆ
ಈ ರೂಪವೆ ಇದಕೆ?
ಮೂಳೆಗೈಯಾಗಿ ಮುಗಿಲಿಗೆ ಚಾಚಿದ
ಬರದ ಭಿಕ್ಷಹಸ್ತ.
ಸತ್ತ ಸಿರಿಯನ್ನು ಎತ್ತಲು ನಿಲುಕದೆ
ಅಳುತಲಿರುವ ತ್ರಸ್ತ;
ಕಾಣುವ ಕಣ್ಣಿನ ಶಾಪ,
ಬಾಳಿನ ಹಾಳಿಗೆ ರೂಪ,
ಬೋಳು ಬಯಲಲ್ಲಿ, ಬೆಂಕಿ ಬಿಸಿಲಲ್ಲಿ
ಸ್ತಬ್ಧವಾದಂತೆ ಮಾರಿಗುಡಿಯಲ್ಲಿ
ಹೊಗೆಯಾಗೇಳುವ ಧೂಪ;
ಗಾಳಿಮೈಯ ಸೀಳುತ ನಿಂತಿರುವ
ಒರೆಗಳಚಿದ ಬಾಳು,
ಗತಿಸಿದ ಬದುಕಿಗೆ ತಪಿಸುತಿರುವ ಈ
ಮರದ ರೋಗಿಬಾಳು.
* * *

ಟೊಂಗೆಯೊಡೆದ ದಿನದಿಂದಲು ಗಿಡಕೆ
ಪಡೆಯಬೇಕು ಎಂಬುದೊಂದೆ ಬಯಕೆ
ತಿಳಿಯದಂತೆ ತಳದಿಂದಲೆ ಬೆಳೆದು
ಮೈಯೆಲ್ಲಾ ಹಸಿರ ವಸ್ತ್ರ ತಳೆದು,
ತುಳುಕಬೇಕು ಮೈ ತುಂಬಾ ಹಣ್ಣು
ತಣಿಯುವಂತೆ ಬೆಳೆಸಿದವನ ಕಣ್ಣು;
ಬಯಲಲೆಲ್ಲ ತನ್ನ ಕುಲವ ನಿಲಿಸಿ
ಬಾಳಬೇಕು ಎಂದು ಬೇರನಿಳಿಸಿ,
ಮಂತ್ರ ಜಲವ ಸಿಡಿಸಿದಂತೆ ಈ ಗಿಡ
ಭರ ಭರ ಬೆಳೆದಾಯಿತು ಪುಟ್ಟ ಮರ.
* * *

ರಸವತಿಯಾದರು ತನ್ನೊಡಲು
ಗುರಿಯೋ ತಳಕಾಣದ ಕಡಲು.
ಫಲ ಬಿಡದಿದ್ದರೆ ಏನಿದ್ದೇನು
ಮುಗಿಯಿತೆ ಬರಿ ಸುಖಪಡಲು?
ಕರಿಮುಗಿಲಿನ ಸಂತತ ರಸಧಾರೆಗು
ಮೊಗ್ಗನು ತಳೆಯದು ಮಡಿಲು :
ಗಂಗೆಗನಸ ಕಟ್ಟಿದ ಹೊಳೆ ಇಂಗಿದೆ
ಸುಡುಹೆಂಚಾಗಿದೆ ಒಡಲು ;
ಇಡಿ ಜಗ ಫಲವತಿಯಾದರು ನಿಯಮಕೆ
ಹೊರತಾಗಿದೆ ಈ ಗಿಡ,
ಎಷ್ಟೆ ನುಡಿಸಿದರು ಸುಸ್ವರ ಬರದಿದೆ
ಒಡೆದ ಮಡಕೆ ಈ ಘಟ.
ಗುಡಿಯನು ಬೆಳಗಲು ಬಯಸಿದ ಸೊಡರು
ಉರಿಯುತ್ತಿದೆ ಚಿತೆ ಸುಡಲು;
ಚಾಮರವಾಗುವ ಕನಸ ಕಂಡ ಗಿಡ
ಆಯಿತೆ ಕಸಗುಡಿಸುವ ಬರಲು?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...