ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ
ಫಲ ಸುರಿಸಲು ಬಯಸಿ,
ಮೊಳಕೆ ಒಡೆಯುತಿರುವಾಗಲೆ ಯಾವುದೊ
ನಂಜು ಗಾಳಿ ಬೀಸಿ,
ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ
ಎಲೆಯುದುರಿವೆ ಕೆಳಗೆ;
ಪ್ರಾಯದ ಗಿಡ ಆಯ ತಪ್ಪಿದಂತಿದೆ
ಈ ರೂಪವೆ ಇದಕೆ?
ಮೂಳೆಗೈಯಾಗಿ ಮುಗಿಲಿಗೆ ಚಾಚಿದ
ಬರದ ಭಿಕ್ಷಹಸ್ತ.
ಸತ್ತ ಸಿರಿಯನ್ನು ಎತ್ತಲು ನಿಲುಕದೆ
ಅಳುತಲಿರುವ ತ್ರಸ್ತ;
ಕಾಣುವ ಕಣ್ಣಿನ ಶಾಪ,
ಬಾಳಿನ ಹಾಳಿಗೆ ರೂಪ,
ಬೋಳು ಬಯಲಲ್ಲಿ, ಬೆಂಕಿ ಬಿಸಿಲಲ್ಲಿ
ಸ್ತಬ್ಧವಾದಂತೆ ಮಾರಿಗುಡಿಯಲ್ಲಿ
ಹೊಗೆಯಾಗೇಳುವ ಧೂಪ;
ಗಾಳಿಮೈಯ ಸೀಳುತ ನಿಂತಿರುವ
ಒರೆಗಳಚಿದ ಬಾಳು,
ಗತಿಸಿದ ಬದುಕಿಗೆ ತಪಿಸುತಿರುವ ಈ
ಮರದ ರೋಗಿಬಾಳು.
* * *

ಟೊಂಗೆಯೊಡೆದ ದಿನದಿಂದಲು ಗಿಡಕೆ
ಪಡೆಯಬೇಕು ಎಂಬುದೊಂದೆ ಬಯಕೆ
ತಿಳಿಯದಂತೆ ತಳದಿಂದಲೆ ಬೆಳೆದು
ಮೈಯೆಲ್ಲಾ ಹಸಿರ ವಸ್ತ್ರ ತಳೆದು,
ತುಳುಕಬೇಕು ಮೈ ತುಂಬಾ ಹಣ್ಣು
ತಣಿಯುವಂತೆ ಬೆಳೆಸಿದವನ ಕಣ್ಣು;
ಬಯಲಲೆಲ್ಲ ತನ್ನ ಕುಲವ ನಿಲಿಸಿ
ಬಾಳಬೇಕು ಎಂದು ಬೇರನಿಳಿಸಿ,
ಮಂತ್ರ ಜಲವ ಸಿಡಿಸಿದಂತೆ ಈ ಗಿಡ
ಭರ ಭರ ಬೆಳೆದಾಯಿತು ಪುಟ್ಟ ಮರ.
* * *

ರಸವತಿಯಾದರು ತನ್ನೊಡಲು
ಗುರಿಯೋ ತಳಕಾಣದ ಕಡಲು.
ಫಲ ಬಿಡದಿದ್ದರೆ ಏನಿದ್ದೇನು
ಮುಗಿಯಿತೆ ಬರಿ ಸುಖಪಡಲು?
ಕರಿಮುಗಿಲಿನ ಸಂತತ ರಸಧಾರೆಗು
ಮೊಗ್ಗನು ತಳೆಯದು ಮಡಿಲು :
ಗಂಗೆಗನಸ ಕಟ್ಟಿದ ಹೊಳೆ ಇಂಗಿದೆ
ಸುಡುಹೆಂಚಾಗಿದೆ ಒಡಲು ;
ಇಡಿ ಜಗ ಫಲವತಿಯಾದರು ನಿಯಮಕೆ
ಹೊರತಾಗಿದೆ ಈ ಗಿಡ,
ಎಷ್ಟೆ ನುಡಿಸಿದರು ಸುಸ್ವರ ಬರದಿದೆ
ಒಡೆದ ಮಡಕೆ ಈ ಘಟ.
ಗುಡಿಯನು ಬೆಳಗಲು ಬಯಸಿದ ಸೊಡರು
ಉರಿಯುತ್ತಿದೆ ಚಿತೆ ಸುಡಲು;
ಚಾಮರವಾಗುವ ಕನಸ ಕಂಡ ಗಿಡ
ಆಯಿತೆ ಕಸಗುಡಿಸುವ ಬರಲು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಂಬರ
Next post ದೀಪ ಆರಿದೆ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys