Home / ಕವನ / ಕವಿತೆ / ಬಸವಣ್ಣನವರಿಗೆ

ಬಸವಣ್ಣನವರಿಗೆ

ನೀನೇನೊ ನಿಜವಾಗಿ ಮಂತ್ರಿ.
ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು,
ಕಂತ್ರಿಜನಗಳ ಬಿಡು,
“ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ
ಸುಟ್ಟರೆ ನೊಸಲಿಗೆ ವಿಭೂತಿಯಾಗಿ
ತಟ್ಟದೇ ಹಾಕಿದರೆ” ಕೊಳವೆ ಗೊಬ್ಬರವಾಗಿ
ನಾರಿದರು ಬೀಗಿ ಮೆರೆಯುವ ಭಂಡರನು ಸುಡು.
ತಂತ್ರಗಳ ಮರೆಯಿರದೆ ಮಂತ್ರವಾಯಿತು ಮಾತು ನಿನ್ನಲ್ಲಿ;
ಎಸೆದ ಮಾತೆಲ್ಲ ಮಸೆದಲುಗಾಗಿ ಇಂದಿಗೂ
ಆಡುತಿದೆ ದಟ್ಟೈಸಿ ಬೆಳೆದ ಕಗ್ಗಾಡಲ್ಲಿ.

ಲಿಂಗಕಲ್ಲಿನ ಮೇಲೆ ಬದುಕ ಒಗೆಯಲು ಹೊರಟ
ರಜಕ ನಿನಗೆ
ಎಲ್ಲರೂ ಬಳಗ, ನಾಟಕದ ಜಗಲಿಯ ಮೇಲೆ
ಲೋಕಸಂವಾದ, ಕಟ್ಟೀಕಾಂತ ಒಳಗೆ.
ಬಾಳಬಲ್ಲದೆ ಸಂತೆಯಲಿ ಸಲಗ? ಆದರೂ
ಸಿಕ್ಕಿಬಿದ್ದಿದೆ ಕಡೆಗೆ ದೊಂಬಿದಾಸರ ಕೈಗೆ!
ಗಂಟೆ, ಮಂಟಪ, ಭಾರಿ ಬೆಳ್ಳಿ ಸಂಪುಟದಲ್ಲಿ
ಅದಕ್ಕೆ ಊರಿನ ನಡುವೆ ಮೆರವಣಿಗೆ.
(ನಾ ಬಲ್ಲೆ ಒಳಗೊಳಗೆ ನಗು ನಿನಗೆ)
ನಿನ್ನೆ ಪಟದೆದುರಿಗೇ
ತಲೆವಾಗುತಿದೆ ಏತ,
ಕೈಮುಗಿದು ಇಕ್ಕುಳ
ಗಿಳಿಯ ಹಿಂಡೇ ನೆರೆದು ಕಲಿತಿದ್ದ ಒದರುತಿದೆ.
ಅಯ್ಯಾ
ನಾವು ಗಳಿಸಿದ್ದೆಲ್ಲ
ನೀ ಕೊಟ್ಟ ದ್ರಾಕ್ಷಿಗಳ ಹುಳಿಸಿ
ಮದ್ಯವ ಇಳಿಸಿ
ಕುಡಿವ ಕಲೆಯ,
ಓಡೆತ್ತ ಬಲ್ಲುದೊ ಅವಲಕ್ಕಿಯ ಸವಿಯ?
ಕತ್ತೆ ತಿಳಿದೀತೆ ಹೊತ್ತಿರುವ ಗಂಧದ ಬೆಲೆಯ?
ಜನ ಬಾಳಲೆಂದು ದುಡಿದವ ನೀನು ಉತ್ಸವದ ಚಿತ್ರವಾಗಿ
ನಿನ್ನ ನುಡಿ ಅಚ್ಚಾಗಿ ಬೈಂಡಾಗಿ
ಬೀರುವಿಗೆ ಸಿಂಗಾರವಾಗಿ,
ಸಂದ ಗೌರವಕಾಗಿ
ನಗು ನಿನಗೆ,
ಕಣ್ಣೀರು ನನಗೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...