Home / ಕವನ / ಕವಿತೆ / ಬಸವಣ್ಣನವರಿಗೆ

ಬಸವಣ್ಣನವರಿಗೆ

ನೀನೇನೊ ನಿಜವಾಗಿ ಮಂತ್ರಿ.
ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು,
ಕಂತ್ರಿಜನಗಳ ಬಿಡು,
“ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ
ಸುಟ್ಟರೆ ನೊಸಲಿಗೆ ವಿಭೂತಿಯಾಗಿ
ತಟ್ಟದೇ ಹಾಕಿದರೆ” ಕೊಳವೆ ಗೊಬ್ಬರವಾಗಿ
ನಾರಿದರು ಬೀಗಿ ಮೆರೆಯುವ ಭಂಡರನು ಸುಡು.
ತಂತ್ರಗಳ ಮರೆಯಿರದೆ ಮಂತ್ರವಾಯಿತು ಮಾತು ನಿನ್ನಲ್ಲಿ;
ಎಸೆದ ಮಾತೆಲ್ಲ ಮಸೆದಲುಗಾಗಿ ಇಂದಿಗೂ
ಆಡುತಿದೆ ದಟ್ಟೈಸಿ ಬೆಳೆದ ಕಗ್ಗಾಡಲ್ಲಿ.

ಲಿಂಗಕಲ್ಲಿನ ಮೇಲೆ ಬದುಕ ಒಗೆಯಲು ಹೊರಟ
ರಜಕ ನಿನಗೆ
ಎಲ್ಲರೂ ಬಳಗ, ನಾಟಕದ ಜಗಲಿಯ ಮೇಲೆ
ಲೋಕಸಂವಾದ, ಕಟ್ಟೀಕಾಂತ ಒಳಗೆ.
ಬಾಳಬಲ್ಲದೆ ಸಂತೆಯಲಿ ಸಲಗ? ಆದರೂ
ಸಿಕ್ಕಿಬಿದ್ದಿದೆ ಕಡೆಗೆ ದೊಂಬಿದಾಸರ ಕೈಗೆ!
ಗಂಟೆ, ಮಂಟಪ, ಭಾರಿ ಬೆಳ್ಳಿ ಸಂಪುಟದಲ್ಲಿ
ಅದಕ್ಕೆ ಊರಿನ ನಡುವೆ ಮೆರವಣಿಗೆ.
(ನಾ ಬಲ್ಲೆ ಒಳಗೊಳಗೆ ನಗು ನಿನಗೆ)
ನಿನ್ನೆ ಪಟದೆದುರಿಗೇ
ತಲೆವಾಗುತಿದೆ ಏತ,
ಕೈಮುಗಿದು ಇಕ್ಕುಳ
ಗಿಳಿಯ ಹಿಂಡೇ ನೆರೆದು ಕಲಿತಿದ್ದ ಒದರುತಿದೆ.
ಅಯ್ಯಾ
ನಾವು ಗಳಿಸಿದ್ದೆಲ್ಲ
ನೀ ಕೊಟ್ಟ ದ್ರಾಕ್ಷಿಗಳ ಹುಳಿಸಿ
ಮದ್ಯವ ಇಳಿಸಿ
ಕುಡಿವ ಕಲೆಯ,
ಓಡೆತ್ತ ಬಲ್ಲುದೊ ಅವಲಕ್ಕಿಯ ಸವಿಯ?
ಕತ್ತೆ ತಿಳಿದೀತೆ ಹೊತ್ತಿರುವ ಗಂಧದ ಬೆಲೆಯ?
ಜನ ಬಾಳಲೆಂದು ದುಡಿದವ ನೀನು ಉತ್ಸವದ ಚಿತ್ರವಾಗಿ
ನಿನ್ನ ನುಡಿ ಅಚ್ಚಾಗಿ ಬೈಂಡಾಗಿ
ಬೀರುವಿಗೆ ಸಿಂಗಾರವಾಗಿ,
ಸಂದ ಗೌರವಕಾಗಿ
ನಗು ನಿನಗೆ,
ಕಣ್ಣೀರು ನನಗೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...