ಸೂರ್‍ಯನಿಗೆ

ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ
ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ,
ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ,
ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು-

ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು
ಬೆಳಗು ಸಂಜೆಗಳ ನಿರಂತರ ಪರ್ಯಾಯದಲ್ಲಿ
ಹುಟ್ಟಿ ಸತ್ತರೆ ಅಕ್ಷಯ ಪುನರ್ಜನ್ಮ ನಿನಗೆ. ನಿನ್ನ
ಅಹರ್ನಿಶೆಯ ಬಂಧ ನಮ್ಮ ಮೋಕ್ಷದ ಕಬಂಧ

ಜ್ವಲಿಸುವಗ್ನಿಗೆ ಆಜ್ಯ ಮೇದಸ್ಸು ಹೋಮಹವನ
ಯಾವ ಪೂರ್ವಜರ ರೇತಸ್ಸು ಸಂಯಮನ
ನಿನಗದೆಲ್ಲವು ಆಪೋಶನ-ಮನೆಯೊಳಗೆ ಹೊರಗೆ
ಬೀದಿಯಲಿ ಮಣ್ಣಿನಲಿ ಕಡಲ ತೀರದಲಿ

ಸೆರೆಹಿಡಿದು ಹಿಡಿದ ಬೆಂಕಿ ಪ್ರಕೃತಿಪೌರುಷ
ಕಾಮದಲಿ ಹರಿದು ಸೇರಿದ ಅಂಥ ತೇಜಸ್ಸು
ಇಲ್ಲಿ ಮೊದಲು ಏನೂ ಇರದಲ್ಲಿ ನೀನುಂಟಾದೆ
ನಿನ್ನ ಪ್ರಭಾವಲಯದಲ್ಲಿ ಅದೆಷ್ಟೋ ಜೀವಿಗಳು

ದೀಪದಿಂದ ದೀಪಗಳು-ಬೆಳಕಿನ ಹಿಂದು ಮುಂದು
ಕಂಡವರು ನಾವಲ್ಲ. ಸಾಲು ದೀಪಗಳಲ್ಲಿ ಒಂದು
ಎಂದು ಅರಿತೊ ಏನೊ. ಬೆಳಕಿನಿಂದ ಬೆಳಕಿನೆಡೆಗೆ
ಸಾಗುವುದು ದೀಪಾವಳಿ ಮರಳಿ ಮರಳಿ

ಕಣ್ಣುಗಳು ಕಣ್ಣುಗಳ ನೋಡುವಾಗ ಮಾತು
ಬೆರಳುಗಳು ಬೆರಳುಗಳ ಮಿಳಿಸಿದಾಗ ಶಾಖ
ಮಾತು ಮಂತ್ರವಾದಾಗ ಪ್ರಾರ್ಥನೆ ಅಂತೆಯೇ
ಶಾಖ ದೀಪವಾದಾಗ ಪೂಜೆ. ಮೌನದಲಿ ಧ್ಯಾನ

ನಮ್ಮ ಕರ್ಮಗಳ ಹೊರ ಪರಿಧಿ ಹರಿದು
ನಿನ್ನ ವಿಸ್ತಾರಕ್ಕೆ ಎಳೆದುಕೊಂಡರೆ
ನಮ್ಮ ಭಾಷೆಗಳ ಒಳ ಅರ್ಥ ಅರಳಿ
ನಿನ್ನ ಚೈತನ್ಯಕ್ಕೆ ಸೆಳದುಕೊಂಡರೆ

ಹಗಲಿರುಳ ವರ್ಣಮಯ ಬೆಳಕು ಪಸರಿಸಿ
ಮಣ್ಣುಮರಗಿಡ ಜೀವರಾಶಿಗಳೊಂದಿಗೆ ನಾವು
ಗುರುತು ಪಡೆದಾಗ ನಿನ್ನ ಅಖಂಡ ಕಾಲದಲಿ
ಸದಾ ವರ್ತಮಾನವಾಗುವಂತೆ ಭೂತ ಭವಿಷ್ಯ

ನಿನ್ನ ಮುಖದಿಂದ ಶಕ್ತಿ ಹರಿಯಲಿ ನಮ್ಮ ಕಡೆಗೆ
ನಿನ್ನ ಮುಖದಿಂದ ಜ್ಞಾನ ಹರಿಯಲಿ ನಮ್ಮ ಕಡೆಗೆ
ನಿನ್ನ ಓಜಸ್ಸು ಬರಲಿ ನಮಗೆ
ನಿನ್ನ ಆಯಸ್ಸು ಬರಲಿ ನಮಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜ್ಞಾನ ಮತ್ತು ಕೌಶಲ್ಯ
Next post ಮುರಿದ ವಾದ್ಯದ ರಾಗ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…