Home / ಕವನ / ಕವಿತೆ / ಸೂರ್‍ಯನಿಗೆ

ಸೂರ್‍ಯನಿಗೆ

ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ
ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ,
ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ,
ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು-

ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು
ಬೆಳಗು ಸಂಜೆಗಳ ನಿರಂತರ ಪರ್ಯಾಯದಲ್ಲಿ
ಹುಟ್ಟಿ ಸತ್ತರೆ ಅಕ್ಷಯ ಪುನರ್ಜನ್ಮ ನಿನಗೆ. ನಿನ್ನ
ಅಹರ್ನಿಶೆಯ ಬಂಧ ನಮ್ಮ ಮೋಕ್ಷದ ಕಬಂಧ

ಜ್ವಲಿಸುವಗ್ನಿಗೆ ಆಜ್ಯ ಮೇದಸ್ಸು ಹೋಮಹವನ
ಯಾವ ಪೂರ್ವಜರ ರೇತಸ್ಸು ಸಂಯಮನ
ನಿನಗದೆಲ್ಲವು ಆಪೋಶನ-ಮನೆಯೊಳಗೆ ಹೊರಗೆ
ಬೀದಿಯಲಿ ಮಣ್ಣಿನಲಿ ಕಡಲ ತೀರದಲಿ

ಸೆರೆಹಿಡಿದು ಹಿಡಿದ ಬೆಂಕಿ ಪ್ರಕೃತಿಪೌರುಷ
ಕಾಮದಲಿ ಹರಿದು ಸೇರಿದ ಅಂಥ ತೇಜಸ್ಸು
ಇಲ್ಲಿ ಮೊದಲು ಏನೂ ಇರದಲ್ಲಿ ನೀನುಂಟಾದೆ
ನಿನ್ನ ಪ್ರಭಾವಲಯದಲ್ಲಿ ಅದೆಷ್ಟೋ ಜೀವಿಗಳು

ದೀಪದಿಂದ ದೀಪಗಳು-ಬೆಳಕಿನ ಹಿಂದು ಮುಂದು
ಕಂಡವರು ನಾವಲ್ಲ. ಸಾಲು ದೀಪಗಳಲ್ಲಿ ಒಂದು
ಎಂದು ಅರಿತೊ ಏನೊ. ಬೆಳಕಿನಿಂದ ಬೆಳಕಿನೆಡೆಗೆ
ಸಾಗುವುದು ದೀಪಾವಳಿ ಮರಳಿ ಮರಳಿ

ಕಣ್ಣುಗಳು ಕಣ್ಣುಗಳ ನೋಡುವಾಗ ಮಾತು
ಬೆರಳುಗಳು ಬೆರಳುಗಳ ಮಿಳಿಸಿದಾಗ ಶಾಖ
ಮಾತು ಮಂತ್ರವಾದಾಗ ಪ್ರಾರ್ಥನೆ ಅಂತೆಯೇ
ಶಾಖ ದೀಪವಾದಾಗ ಪೂಜೆ. ಮೌನದಲಿ ಧ್ಯಾನ

ನಮ್ಮ ಕರ್ಮಗಳ ಹೊರ ಪರಿಧಿ ಹರಿದು
ನಿನ್ನ ವಿಸ್ತಾರಕ್ಕೆ ಎಳೆದುಕೊಂಡರೆ
ನಮ್ಮ ಭಾಷೆಗಳ ಒಳ ಅರ್ಥ ಅರಳಿ
ನಿನ್ನ ಚೈತನ್ಯಕ್ಕೆ ಸೆಳದುಕೊಂಡರೆ

ಹಗಲಿರುಳ ವರ್ಣಮಯ ಬೆಳಕು ಪಸರಿಸಿ
ಮಣ್ಣುಮರಗಿಡ ಜೀವರಾಶಿಗಳೊಂದಿಗೆ ನಾವು
ಗುರುತು ಪಡೆದಾಗ ನಿನ್ನ ಅಖಂಡ ಕಾಲದಲಿ
ಸದಾ ವರ್ತಮಾನವಾಗುವಂತೆ ಭೂತ ಭವಿಷ್ಯ

ನಿನ್ನ ಮುಖದಿಂದ ಶಕ್ತಿ ಹರಿಯಲಿ ನಮ್ಮ ಕಡೆಗೆ
ನಿನ್ನ ಮುಖದಿಂದ ಜ್ಞಾನ ಹರಿಯಲಿ ನಮ್ಮ ಕಡೆಗೆ
ನಿನ್ನ ಓಜಸ್ಸು ಬರಲಿ ನಮಗೆ
ನಿನ್ನ ಆಯಸ್ಸು ಬರಲಿ ನಮಗೆ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...