Home / ಕವನ / ಕವಿತೆ / ಸೂರ್‍ಯನಿಗೆ

ಸೂರ್‍ಯನಿಗೆ

ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ
ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ,
ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ,
ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು-

ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು
ಬೆಳಗು ಸಂಜೆಗಳ ನಿರಂತರ ಪರ್ಯಾಯದಲ್ಲಿ
ಹುಟ್ಟಿ ಸತ್ತರೆ ಅಕ್ಷಯ ಪುನರ್ಜನ್ಮ ನಿನಗೆ. ನಿನ್ನ
ಅಹರ್ನಿಶೆಯ ಬಂಧ ನಮ್ಮ ಮೋಕ್ಷದ ಕಬಂಧ

ಜ್ವಲಿಸುವಗ್ನಿಗೆ ಆಜ್ಯ ಮೇದಸ್ಸು ಹೋಮಹವನ
ಯಾವ ಪೂರ್ವಜರ ರೇತಸ್ಸು ಸಂಯಮನ
ನಿನಗದೆಲ್ಲವು ಆಪೋಶನ-ಮನೆಯೊಳಗೆ ಹೊರಗೆ
ಬೀದಿಯಲಿ ಮಣ್ಣಿನಲಿ ಕಡಲ ತೀರದಲಿ

ಸೆರೆಹಿಡಿದು ಹಿಡಿದ ಬೆಂಕಿ ಪ್ರಕೃತಿಪೌರುಷ
ಕಾಮದಲಿ ಹರಿದು ಸೇರಿದ ಅಂಥ ತೇಜಸ್ಸು
ಇಲ್ಲಿ ಮೊದಲು ಏನೂ ಇರದಲ್ಲಿ ನೀನುಂಟಾದೆ
ನಿನ್ನ ಪ್ರಭಾವಲಯದಲ್ಲಿ ಅದೆಷ್ಟೋ ಜೀವಿಗಳು

ದೀಪದಿಂದ ದೀಪಗಳು-ಬೆಳಕಿನ ಹಿಂದು ಮುಂದು
ಕಂಡವರು ನಾವಲ್ಲ. ಸಾಲು ದೀಪಗಳಲ್ಲಿ ಒಂದು
ಎಂದು ಅರಿತೊ ಏನೊ. ಬೆಳಕಿನಿಂದ ಬೆಳಕಿನೆಡೆಗೆ
ಸಾಗುವುದು ದೀಪಾವಳಿ ಮರಳಿ ಮರಳಿ

ಕಣ್ಣುಗಳು ಕಣ್ಣುಗಳ ನೋಡುವಾಗ ಮಾತು
ಬೆರಳುಗಳು ಬೆರಳುಗಳ ಮಿಳಿಸಿದಾಗ ಶಾಖ
ಮಾತು ಮಂತ್ರವಾದಾಗ ಪ್ರಾರ್ಥನೆ ಅಂತೆಯೇ
ಶಾಖ ದೀಪವಾದಾಗ ಪೂಜೆ. ಮೌನದಲಿ ಧ್ಯಾನ

ನಮ್ಮ ಕರ್ಮಗಳ ಹೊರ ಪರಿಧಿ ಹರಿದು
ನಿನ್ನ ವಿಸ್ತಾರಕ್ಕೆ ಎಳೆದುಕೊಂಡರೆ
ನಮ್ಮ ಭಾಷೆಗಳ ಒಳ ಅರ್ಥ ಅರಳಿ
ನಿನ್ನ ಚೈತನ್ಯಕ್ಕೆ ಸೆಳದುಕೊಂಡರೆ

ಹಗಲಿರುಳ ವರ್ಣಮಯ ಬೆಳಕು ಪಸರಿಸಿ
ಮಣ್ಣುಮರಗಿಡ ಜೀವರಾಶಿಗಳೊಂದಿಗೆ ನಾವು
ಗುರುತು ಪಡೆದಾಗ ನಿನ್ನ ಅಖಂಡ ಕಾಲದಲಿ
ಸದಾ ವರ್ತಮಾನವಾಗುವಂತೆ ಭೂತ ಭವಿಷ್ಯ

ನಿನ್ನ ಮುಖದಿಂದ ಶಕ್ತಿ ಹರಿಯಲಿ ನಮ್ಮ ಕಡೆಗೆ
ನಿನ್ನ ಮುಖದಿಂದ ಜ್ಞಾನ ಹರಿಯಲಿ ನಮ್ಮ ಕಡೆಗೆ
ನಿನ್ನ ಓಜಸ್ಸು ಬರಲಿ ನಮಗೆ
ನಿನ್ನ ಆಯಸ್ಸು ಬರಲಿ ನಮಗೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...