Home / ಕಥೆ / ಆತ್ಮ ಕಥೆ / ಕಾಡುತಾವ ನೆನಪುಗಳು – ೧೪

ಕಾಡುತಾವ ನೆನಪುಗಳು – ೧೪

“ನೀವೇನೂ ಹೆದರೋದು ಬೇಡಾ. Stomach Wash ಕೊಟ್ಟಿದ್ದೇವೆ. ಎಲ್ಲಾ ಮಾತ್ರೆಗಳು ಹೊರಬಂದಿವೆ…”

“ನಮ್ಮ ಹುಡುಗ ಆಗ ಹೋಗಿರದಿದ್ದರೆ ಅಪಾಯವಾಗುತ್ತಿತ್ತು”.

“ಮುಂದಿನ ವಾರ Tubetemy Camp ಇತ್ತು. ಅದಕ್ಕೆ ಇವರ ಸಹಿ ಮಾಡಿಸಿಕೊಳ್ಳಲು ಹೋಗಿದ್ದ. ಹೀಗಾಗಿ ಈ ವಿಷಯ ತಿಳಿದಿತ್ತು. ಡ್ರಿಪ್ಸ್ ಮುಗಿದ ನಂತರ ಮನೆಗೆ ಕರೆದುಕೊಂಡು ಹೋಗಿ… ಒಂದೆರಡು ದಿನ ವಿಶ್ರಾಂತಿ ತೆಗೆದುಕೊಂಡರೆ ಸಾಕು…”

ಎನ್ನುತ್ತಾ ಹಣೆಯನ್ನು ತಟ್ಟಿ ನನ್ನನ್ನು ಮಾತನಾಡಿಸುವ ಪ್ರಯತ್ನ ನಡೆಸಿದ್ದರು. ನಾನು “ಆಂ…? ಹೂಂ…” ಎಂದು ಪ್ರತಿಕ್ರಿಯೆ ನೀಡುತ್ತಿದ್ದೆ. ನಂತರ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಮನೆ ತಲುಪಿಸಿದ್ದರು. ನಾನು ಸತ್ತಿರಲಿಲ್ಲವೆಂಬುದು ತಿಳಿದಿತ್ತು…!

ಅವ್ವನಿಗೆ ಹೇಳಿ ಕಳುಹಿಸಿದ್ದರೂಂತ ಕಾಣುತ್ತೆ. ಅವ್ವ ನನ್ನ ಆರೈಕೆಗೆ ಪಕ್ಕದಲ್ಲಿಯೇ ಇದ್ದಳು. ಅರ್ಧ ನಿದ್ದೆ ಅರ್ಧಮಂಪರು. ಗಂಜಿ ಕುಡಿಸುತ್ತಿದ್ದಳು, ಎಳೆನೀರು ಕುಡಿಸುತ್ತಿದ್ದಳು. ನನಗೆ ಪೂರ್ತಿ ಎಚ್ಚರವಾಗಿದ್ದು ರಾತ್ರಿಯೇ. ಅವ್ವ ಗಂಭೀರವಾಗಿ ನನ್ನ ಪಕ್ಕದಲ್ಲಿ ಕುಳಿತಿದ್ದಳು. ಊರಿಗೆ ಕರೆದುಕೊಂಡು ಹೋಗಿರಲಿಲ್ಲ. ಮರುದಿನ ಬೆಳಿಗ್ಗೆ ಸಂಪೂರ್ಣವಾಗಿ ಎಚ್ಚರವಾಗಿತ್ತು.

“ಯಾಕೆ ಹೀಗ್ ಮಾಡ್ಕೊಂಡೆ?” ಅವ್ವನ ಗಂಭೀರ ಪ್ರಶ್ನೆ.

“…..”

“ನಂಗೆ ನಿನ್ನಾಟ ಅರ್ಥವಾಗ್ತಿದೆ”.

“ಯಾರವನು? ಎರಡು ತಿಂಗಳಿಂದ ಓಡಾಟ, ಚೆಲ್ಲಾಟ ನಡೆಸಿದ್ದು ನನಗೆ ತಿಳಿದಿದೆ…”

“…..”

“ಹೀಗೆ ಮಾಡೋ ಬದ್ಲು ಮದ್ದೇನೇ ಮಾಡೋಬಹುದಿತ್ತು…

“…..”

“ನಿನ್ನನ್ನು ಗಂಡು ಹುಡುಗಾಂತ ಅಂದ್ಕೊಂಡ್ ತಪ್ಪು ಮಾಡಿಬಿಟ್ಟೆ, ಎಲ್ಲಾ ನನ್ನ ಕರ್ಮ. ಆಡ್ಕೊಳ್ಳರ ಮುಂದೆ ಹಡೆದ ಹಾಗಾಗಿದೆ ನಮ್ಮ ಪರಿಸ್ಥಿತಿ…”

ನನ್ನ ಕಣ್ಣುಗಳಿಂದ ನೀರು ಹರಿಯತೊಡಗಿತ್ತು.

“ಈ ಸ್ಥಿತೀನಾ ಮನೆ ಮಕ್ಕಳು ನೋಡ್ತಾರ್ದೂಂತ ಇಲ್ಲಿಗೇ ಕಕ್ಕೊಂಡು ಬಂದೆ. ನನ್ನ ಕನಸುಗಳನ್ನು ನೀರಿನಲ್ಲಿ ಕದಡಿ ರಾಡಿ ಮಾಡ್ಬಿಟ್ಟೆ. ನೀನಿದ್ದರೂ ಒಂದೇ ಸತ್ತರೂ ಒಂದೇ…” ಅವ್ವನ ಕಂಠ ಗದ್ಗದವಾಗಿತ್ತೆನಿಸಿತ್ತು. ಅವ್ವನತ್ತ ನೋಡಿದ್ದೆ.

“ನೀನು ಈಗ ಸತ್ತು ಹೋಗದೇ ಇರಬಹುದು. ನನ್ನ ಪಾಲಿಗೆ ಇವತ್ತಿನಿಂದ ನೀನು ಸತ್ತು ಹೋದೇಂತಾ ಅಂದ್ಕೋ…”

ಅಲ್ಲಿಗೆ ನನ್ನ ತವರು ಮನೆಯ, ಅವ್ವನ ಸಂಬಂಧ ಕಡಿದ ಹಾಗೇ ಆಗಿತ್ತು. ಅವ್ವ ಹಠಮಾರಿ ಹೆಣ್ಣಾಗಿದ್ದಳು. ಆಕೆಗೆ ‘Will Power’ ಜಾಸ್ತಿಯಿತ್ತು. ಆದರೆ Reasoning ಅಂದರೆ ‘ಅರ್ಥೈಸಿಕೊಳ್ಳುವ ಬಗ್ಗೆ’ ಅರಿವಿರಲಿಲ್ಲ. ತಿಳಿದವರು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ತನ್ನದೇ ಸರಿ ಎನ್ನುವ ಮೊಂಡುವಾದ, ಹಠಮಾರಿತನ. ಇದೆಲ್ಲವೂ ನನಗೆ ಗೊತ್ತಿತ್ತಾದುದರಿಂದ ಏನೂ ಮಾತನಾಡದೇನೇ ಮೌನವಹಿಸಿಬಿಟ್ಟಿದ್ದೆ.

ನೋಡು, ಸಾವಿಗೂ ನನ್ನಂತಹ ಅಪವಿತ್ರಳ ಬಳಿಗೆ ಬರಲು ಅಸಹ್ಯವಾಗಿತ್ತು ಎಂದುಕೊಂಡು ಅತ್ತಿದ್ದೆ. ಅಷ್ಟು ಹೆಚ್ಚು ಜನರಿಗೆ ನನ್ನ ಆತ್ಮಹತ್ಯೆಯ ಯತ್ನ ಮತ್ತು ಅದಕ್ಕೇ ಕಾರಣದ ಬಗ್ಗೆ ಗೊತ್ತಾಗಿರಲಿಲ್ಲವೆಂದು ಕೊಂಡಿದ್ದೆ. ಆದರೆ, ನಾನು ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿ ಕೆಲವು ದಿನಗಳು ‘ಗುಸು…’ ‘ಗುಸು…’ ಮಾತನಾಡಿ ಸುಮ್ಮನಾಗಿಬಿಟ್ಟಿದ್ದರು. ಅಲ್ಲಿ ನನಗಾಗುತ್ತಿದ್ದ ಅವಮಾನ, ನೋವುಗಳಿಗೆ ನೊಂದು ಆ ರೀತಿ ಮಾಡಿಕೊಂಡಿದ್ದೆ ಎಂದು ಭಾವಿಸಿದ್ದರು. ಆದರೂ ಕೆಲವರಿಗೆ ‘ಆ ವ್ಯಕ್ತಿ…’ಯೊಡನೆಯಿದ್ದ ಸಂಪರ್ಕ ತಿಳಿದಿತ್ತು. ಅವಮಾನಗಳಿಗೆಲ್ಲಾ ಹೀಗೆ ಮಾಡಿಕೊಳ್ಳುವ ಪ್ರಾಣಿ ಇದಲ್ಲವೆಂದು ಗೊತ್ತಿತ್ತು…!

ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಕ್ಯಾಂಪ್‌ಗಳಿಗೆ ಹೋಗಿ ಶಸ್ತ್ರ ಕ್ರಿಯೆಗಳನ್ನು ಮಾಡಿಬರುತ್ತಿದ್ದೆ. ಹೆಚ್ಚಿನ ಕೆಲಸಗಳನ್ನು ಮೈಗಚ್ಚಿಕೊಂಡಿದ್ದೆ. ಆದರೆ ಮನೆಗೆ ಬಂದ ನಂತರ, ಆ ರಾತ್ರಿಗಳು ನನ್ನ ಬದುಕನ್ನು ‘ಅಸಹ್ಯ…’ಗೊಳಿಸಿದ ದಿನಗಳಿಂದ ಮನ ನೋಯುವಂತೆ ಮಾಡುತ್ತಿದ್ದವು. ಹೀಗಿರಲೊಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ನನ್ನನ್ನು ಸುಮ್ಮನೆ ಬಿಡಬಾರದೆಂದು ‘ವಿಧಿ’ ಸಂಚು ಹೂಡಿತ್ತು. ನಾನು ಯಾರ ನೆನಪು ಬೇಡವೆಂದುಕೊಂಡು ಮರೆಯಲು ಪ್ರಯತ್ನಿಸುತ್ತಿದ್ದೆನೋ ಆ ವ್ಯಕ್ತಿಯ ಅಣ್ಣ ಅತ್ತಿಗೆ, ಜೊತೆಗೆ ಅವನ ತಮ್ಮನನ್ನು ನನ್ನ ಬಳಿಗೆ ಕಳುಹಿಸಿತ್ತು. ಆತನ ಅಣ್ಣ ಆಯುರ್ವೇದದಲ್ಲಿ ವೈದ್ಯಕೀಯ ಶಾಸ್ತ್ರ ಮುಗಿಸಿದ್ದ. ಆತನ ಊರಿನಲ್ಲಿ Practice ಮಾಡಲು, ಹಣ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲವಂತೆ, ದೂರದೂರಿನಲ್ಲಿ ‘ಕ್ಲಿನಿಕ್’ ತೆಗೆದು ಹಣ ಸಂಪಾದಿಸಲು ಬಂದಿದ್ದರು. ಅದಕ್ಕೆ ನನ್ನ ಸಹಾಯ ಕೋರಿದ್ದರು. ಹತ್ತಿರದ ಯಾವುದಾದರೊಂದು ಹಳ್ಳಿಯಲ್ಲಿ ‘ಕ್ಲಿನಿಕ್’ ತೆರೆಯಲು ಸಹಾಯ ಕೇಳಿದ್ದರು. ನನಗೆ ನಿರಾಕರಿಸಲಾಗಿರಲಿಲ್ಲ. ಪಕ್ಕದ ಹಳ್ಳಿಯೊಂದರ ಊರ ಗೌಡರ ಬಳಿ ಮಾತನಾಡಿ ಅಲ್ಲಿಯೇ ಕ್ಲಿನಿಕ್ ಮತ್ತು ವಾಸವಾಗಿರಲು ಮನೆಯೊಂದನ್ನು ಕೊಡುವಂತೆ ಕೇಳಿಕೊಂಡಿದ್ದೆ. ತಮ್ಮ ಹಳ್ಳಿಗೊಬ್ಬ ವೈದ್ಯ ಬರುತ್ತಾನೆಂದು ಅವರಿಗೂ ಸಂತೋಷವಾಗಿತ್ತು. ಆಗಾಗ್ಗೆ ನಾನೂ ಸಹ ‘Consultant’ ಆಗಿ ಬರುತ್ತೇನೆಂದು ಹೇಳಿದ ನಂತರ ಅವರಿಗೆ ಸಮಾಧಾನವಾಗಿತ್ತು. ಹಾಗೆಯೇ ಮೊದಲು ಹೋಗಿಬರುತ್ತಿದ್ದೆ ಕೂಡಾ. ನಂತರದ ದಿನಗಳಲ್ಲಿ ಸಾಧ್ಯವಾಗದೇ ಬಿಟ್ಟುಬಿಟ್ಟೆ. ಆಸ್ಪತ್ರೆಯ ಕೆಲಸಗಳು ಹೆಚ್ಚಾಗಿದ್ದವು ಮತ್ತು ಅವರಿಗೂ ಆ ಹಳ್ಳಿಯಲ್ಲಿ ‘Practice’ ಸುಗಮವಾಗಿ ಮುಂದುವರೆದಿತ್ತು. ಅತಿ ಹೆಚ್ಚಿನ ಕೆಲಸಗಳಿಂದ ನಾನು ಒಮ್ಮೊಮ್ಮೆ ಬಳಲುತ್ತಿದ್ದೆ. ಆದರೆ ಆ ಬಳಲಿಕೆಯಿಂದ ನನಗೆ ನಿದ್ದೆ ಬರುತ್ತಿತ್ತು ಎಂಬುದನ್ನು ಮನಗಂಡಿದ್ದೆ. ತಮಗೆ ತಿಳಿಯದ ರೋಗಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದರು… ಹೀಗಾಗಿ ಅವರಿಗೆ ಆ ಹಳ್ಳಿಯಲ್ಲಿ ಒಳ್ಳೆಯ ಹೆಸರೂ ಬಂದಿತ್ತು. ನಾನು ಹೆಚ್ಚಿನದೇನನ್ನು ಕೇಳುತ್ತಿರಲಿಲ್ಲ. ವೃತ್ತಿ ಬದುಕಿನಲ್ಲಿ ಎಷ್ಟು ಬೇಕೋ ಅಷ್ಟು ಎಂಬಂತಿದ್ದೆವು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...