Home / ಕಥೆ / ಆತ್ಮ ಕಥೆ / ಕಾಡುತಾವ ನೆನಪುಗಳು – ೩೨

ಕಾಡುತಾವ ನೆನಪುಗಳು – ೩೨

ನನಗೂ ವಯಸ್ಸಾಯ್ತಲ್ಲ ಚಿನ್ನು… ಜೊತೆಗೆ ಈ ಮಾನಸಿಕ ‘ಖಿನ್ನತೆ’ ಬೇರೆ… ಹೀಗಾಗಿ ನಾನೆಲ್ಲೂ ಹೋಗುವುದೇ ಇಲ್ಲ. ಹೊರಗೊಂದು ಪ್ರಪಂಚವೊಂದಿದೆ ಎಂಬುದನ್ನು ಮರೆಯಲು ಯತ್ನಿಸುತ್ತಿದ್ದೇನೆ… ಯಾರಾದರೂ ನೋಡಲು ಮಾತನಾಡಲು ಬರುತ್ತಾರೆಂದರೆ, ನಾನು ಮುಖ ತಪ್ಪಿಸಿಕೊಳ್ಳುತ್ತೇನೆ. ಈಗ ನನಗೆ ಒಂಟಿತನದ ಭೂತದ ಭಯವಿಲ್ಲ… ನಾನೇ ಅದರೊಳಗೆ ಸೇರಿಕೊಂಡುಬಿಟ್ಟಿದ್ದೇನೆ. ಕೆಳಗಿನ ದೊಡ್ಡಮನೆ ಅವ್ವನ ನೆನಪುಗಳಿಂದ ತುಂಬಿರುವುದರಿಂದ, ತಾರಸಿಯ ಮೇಲೊಂದು ರೂಮು ಕಟ್ಟಿಸಿಕೊಂಡು, ನನ್ನ ಲೈಬ್ರರಿ, ಅವಶ್ಯಕತೆಗಳಿರುವ ಪಾತ್ರೆಗಳೊಂದಿಗೆ Shift ಆಗಿದ್ದೇನೆ. ನನಗೀಗ ಅರಮನೆಯೂ ಈ ಪುಟ್ಟ ಗೂಡು ಒಂದೇ ಆಗಿದೆ. ಆಮೆ ಚಿಪ್ಪಿನೊಳಗೆ ಅಡಗಿಕೊಳ್ಳುವಂತೆ ನನ್ನ ‘ಖಿನ್ನತೆ’ಯ ಚಿಪ್ಪಿನೊಳಗೆ ಅಡಗಿಕೊಂಡಿದ್ದೇನೆ.

ಇನ್ನೇನು ನಿನ್ನ ಮೆಡಿಕಲ್ ಕೋರ್ಸ್ ಮುಗಿಯುತ್ತಾ ಬಂದಿತಲ್ವಾ? ಡಾಕ್ಟರಾಗುವ ನಿನ್ನ ತಾಯಿ-ತಂದೆಯ ನಿನ್ನ ಕನಸು ನನಸಾಗಿದ್ದು, ನನಗೆ ನೆಮ್ಮದಿ, ಸಂತೋಷ ತಂದಿತೆ ಇಷ್ಟೆಲ್ಲಾ ಬರೆದು ತಲೆಕೆಡಿಸಿದೇಂತ ಭಾವಿಸಬೇಡಾ. ನೀನು ಪ್ರಬುದ್ಧ ಹುಡುಗಿ, ತರ್ಕಬದ್ಧವಾಗಿ ಯೋಚಿಸುತ್ತೀಯಾ… ಜಾಣೆ ಕೂಡಾ. ಸಾವು-ಹುಟ್ಟು ನಮ್ಮ ಕೈಲಿಲ್ಲ. ಆದರೆ ಬದುಕು ನಮ್ಮದು… ನಾವೇ ಕಟ್ಟಿಕೊಳ್ಳಬೇಕೆಂದು ಎಲ್ಲರೂ ಬುದ್ದಿ ಹೇಳುತ್ತಾರೆ. ಆದರದು ತುಂಬಾ ಕಷ್ಟ, ಕಠಿಣ ಕಣೆ…! ಬೇವಿನ ಮರದ ಬುಡಕ್ಕೆ ನೀನೂ ದಿನವೂ ಬೆಲ್ಲದ ನೀರು ಸುರಿದು ಬೆಳೆಸಿದರೂ, ದೊಡ್ಡದಾದ ಮೇಲೆ ಅದು ಕೊಡುವುದು, ಬೇವಿನ ಹಣ್ಣನ್ನೇ ಮಾವಿನ ಹಣ್ಣನಲ್ಲ. ನನ್ನನ್ನು ಕಾಡಿದ್ದು ನನ್ನ ವ್ಯಕ್ತಿತ್ವ, ಇದರಲ್ಲಿ ಆನುವಂಶೀಯತೆಯೂ ಕಾರಣವಾಗಿರುತ್ತದೆ. ಆದರೆ ನಾವುಗಳು ಶಿಲೆಯನ್ನು ಉಳಿಯಿಂದ ಕೆತ್ತಿ-ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅದೇ ಬದುಕು ಕಟ್ಟಿಕೊಳ್ಳುವ ರೀತಿ ಮಗಳೇ. ಕೆಟ್ಟವುಗಳನ್ನೆಲ್ಲಾ ವರ್ಜಿಸಿ, ಅಧ್ಯಯನ, ಒಳ್ಳೆಯ ಗೆಳತಿಯರು, ಸಜ್ಜನರ ಸಂಗದಿಂದ ನಮ್ಮ ವ್ಯಕ್ತಿತ್ವವನ್ನು ತಿದ್ದಿಕೊಳ್ಳಬಹುದು. ಆದರೆ ನಾನು ಹಾಗೆ ಮಾಡಲಿಲ್ಲ. ಆನೇ ನಡೆದಿದ್ದೇ ದಾರಿಯೆಂಬಂತೆ ನಡೆದಿದ್ದೇನೋ… ಏನೋ… ನಂಗೆ ಗೊತ್ತಿಲ್ಲ…!

ಒಳ್ಳೆಯ ಬದುಕು ಕಟ್ಟಿಕೊಳ್ಳಲು ‘ಡಿಗ್ರಿ’ಗಳು ಬೇಕಾಗಿಲ್ಲ ಚಿನ್ನು. ಜಾಣತನ, ಸಮಯಸ್ಫೂರ್ತಿ, ಸಂಯಮ, ಸಮತೋಲನ, ದೂರದೃಷ್ಟಿ ಮುಖ್ಯವಾಗುತ್ತದೆ. ಅರೇ ನನಗಿರಲಿಲ್ಲಾಂತ ಅನ್ನಿಸುತ್ತದೆ. ಭಾವನೆಗಳೊಂದಿಗೇ ಬದುಕಲು ಆಗದು ಎಂಬುದಕ್ಕೆ ನಾನೇ ಉದಾಹರಣೆ. ತಿರಸ್ಕೃತಳಾಗಿ, ಶಾಪಗ್ರಸ್ತಳಂತೆ, ಬದುಕಿದ ನನ್ನ ಬದುಕೂ ಒಂದು ಬದುಕೇ?

ಏನೂ ಬೇಕೆನ್ನಿಸುವುದಿಲ್ಲ. ಕಾಲನೇಮಿಯ ಕರೆಗಾಗಿ ಕಾಯುತ್ತಾ ಇದ್ದೇನೆ. ಹೋಗಲಿ ಬಿಡು… ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಾನು ನನ್ನಂತೆಯೇ ಆರಾಮವಾಗಿದ್ದೇನೆ. ನಿರ್ಭಾವುಕೆ, ನಿರ್ಲಿಪ್ತತೆಯ ಹೊದಿಕೆಯನ್ನು ಹೊದ್ದು ಬದುಕಿದ್ದೇನೆ. ಕಳೆದುಕೊಳ್ಳಲೂ ಏನೂ ಇಲ್ಲ. ಪಡೆದುಕೊಳ್ಳುವಂತಹುದೂ ಯಾವುದೂ ಇಲ್ಲ. ಅಂತಹ ನಿರೀಕ್ಷೆಗಳೂ ಉಳಿದಿಲ್ಲ ಮಗಳೇ.

ಇನ್ನು… ಸಾಕು… ನಿಲ್ಲಿಸುತ್ತೇನೆ. ಬದುಕಿನಲ್ಲಿ ಹೆಕ್ಕಿ ತೆಗೆದ ಕಾಡುತ್ತಿರುವ ನೆನಪುಗಳು. ಅವುಗಳು ನನ್ನವು… ನಿನ್ನವಾಗಬಾರದೆಂದು,

ಹಾರೈಸುವ…

ನಿನ್ನ ಅವ್ವಾ
ಮುಗಿಯಿತು

ಚಿತ್ರಗಳು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...