Home / ಕವನ / ಅನುವಾದ / ಕಂಚಿನ ಶಿರ

ಕಂಚಿನ ಶಿರ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ;
ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು
ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ.
ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ
(ಉಳಿದೆಲ್ಲ ಅಳಿದರೂ ಬೇರೆ ಏನೋ ಸುಳಿಯಬಹುದು ಅಲ್ಲಿ);
ತನ್ನ ಶೂನ್ಯತೆಯರಿವು ತರುವ ಸನ್ನಿಯ ಭಾವೋದ್ವೇಗದುಗ್ರತೆಯನ್ನು
ಶಮನವಾಗಿಸುವಂಥದೇನೂ ಅಲ್ಲಿಲ್ಲ.

ಗೋರಿಯಲೆದವಳಲ್ಲ ಹಿಂದೆ. ಇಡಿ ವ್ಯಕ್ತಿತ್ವ
ಘನ ಉದಾತ್ತತೆಯ ಪ್ರಭೆಯಿಂದ ತುಂಬಿದ ಹಾಗೆ.
ಬಲು ಸಭ್ಯ ಮಹಿಳೆ; ಹೇಳಬಲ್ಲರು ಯಾರು,
ವ್ಯಕ್ತಿತ್ವವೊಂದರ ಯಾವ ಮುಖ ಅದರ ನಿಜ ಸಾರ ತೋರೀತೆಂದು?
ಸಾರವೂ ಭಿನ್ನ ಮೂಲಾಂಶಗಳ ಮಿಶ್ರಣ
ಇದ್ದೀತು ಎಂದ ಮೇಧಾವಿ ಮೆಕ್ ಟ್ಯಾಗರ್‍ಟ್.
ಅಷ್ಟು ಸ್ವಲ್ಪದರಲ್ಲೆ ಉಸಿರು ಕಟ್ಟಿಸುವಂತೆ
ಬಾಳು ಸಾವುಗಳ ವಿರುದ್ಧ ತುದಿಯೆರಡನ್ನೂ ಬೆರಸಿ ಕಡೆದಂಥ ಮುಖ.

ಆರಂಭದಲ್ಲಿ ಇನ್ನೂ ಎಲ್ಲ ಹೊಸತು, ನಯ,
ಆ ದಿನಗಳಲ್ಲಿ ಕಂಡಿದ್ದೆ ಅವಳಲ್ಲೊಂದು
ವನ್ಯ ಉಚ್ಛೃಂಖಲತೆ, ನನಗೆ ಅನಿಸಿತ್ತಂದು
ಬಾಳು ಮುಂದೆಂದೊ ತಪ್ಪದೆ ಹಾಯಬೇಕಾದ
ಘೋರದರ್‍ಶನವೊಂದು ಅವಳಂತರಾತ್ಮವನ್ನೆ ಸಿಡಿಸಿಬಿಟ್ಟಿತೆಂದು.
ತನ್ನದಲ್ಲದ್ದೆಲ್ಲವನ್ನೂ ತನ್ನಾಚೆಗೆ ಕೊಡವಿ ನಡೆಯುವ ನೆಲೆಗೆ
ಸ್ನೇಹ ಕಲ್ಪನೆಯನ್ನು ನಡೆಸಿಬಿಟ್ಟಿತು; ನಾನು ಉದ್ವೇಗಗೊಂಡಿದ್ದೆ,
ನನ್ನ ಮಗುವೇ, ನನ್ನ ಮಗುವೆ ಎಂದಲ್ಲ ಕಡೆ ಉದ್ಗರಿಸಿ ತೊಳಲಿದ್ದೆ.

ಅಥವಾ ಅವಳನ್ನೊಂದು ಅಲೌಕಿಕ ಶಕ್ತಿಯೆಂದು ಬಗೆದೆ ನಾನು
ಕಠೋರ ನೇತ್ರವೊಂದು ಅವಳ ಕಣ್ಣನ್ನು ಹಾದು
ಈ ಕೀಳುಲೋಕದ ಪತನ ಕ್ಷತಿಗಳನ್ನು ನೋಡಿತೆಂಬಂತೆ;
ಕ್ಷುದ್ರಮೂಲಗಳು ಉನ್ನತಿಗೆ ಏರಿದ್ದನ್ನು
ಹಿರಿಮೂಲಗಳ ಸಾರ ಆರಿಹೋದದ್ದನ್ನು
ಪರಂಪರಾರ್‍ಜಿತ ಮುತ್ತನ್ನೆತ್ತಿ ಹಂದಿಗಳತ್ತ ಬೀಸಿ ಒಗೆದದ್ದನ್ನು
ಕೋಡಂಗಿ ಕೇಡಿಗರು ಭವ್ಯ ಕಣಸುಗಳನ್ನು
ಗೇಲಿಮಾಡಿದ್ದನ್ನು ಕಂಡಿತೆಂಬಂತೆ,
ಏನುಳಿಯಿತಿನ್ನು ತಪ್ಪಿಸಲು ನರಮೇಧಕ್ಕೆ ಎಂದು ಬೆರಗಾದಂತೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...