Home / ಕವನ / ಅನುವಾದ / ಕಂಚಿನ ಶಿರ

ಕಂಚಿನ ಶಿರ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ;
ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು
ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ.
ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ
(ಉಳಿದೆಲ್ಲ ಅಳಿದರೂ ಬೇರೆ ಏನೋ ಸುಳಿಯಬಹುದು ಅಲ್ಲಿ);
ತನ್ನ ಶೂನ್ಯತೆಯರಿವು ತರುವ ಸನ್ನಿಯ ಭಾವೋದ್ವೇಗದುಗ್ರತೆಯನ್ನು
ಶಮನವಾಗಿಸುವಂಥದೇನೂ ಅಲ್ಲಿಲ್ಲ.

ಗೋರಿಯಲೆದವಳಲ್ಲ ಹಿಂದೆ. ಇಡಿ ವ್ಯಕ್ತಿತ್ವ
ಘನ ಉದಾತ್ತತೆಯ ಪ್ರಭೆಯಿಂದ ತುಂಬಿದ ಹಾಗೆ.
ಬಲು ಸಭ್ಯ ಮಹಿಳೆ; ಹೇಳಬಲ್ಲರು ಯಾರು,
ವ್ಯಕ್ತಿತ್ವವೊಂದರ ಯಾವ ಮುಖ ಅದರ ನಿಜ ಸಾರ ತೋರೀತೆಂದು?
ಸಾರವೂ ಭಿನ್ನ ಮೂಲಾಂಶಗಳ ಮಿಶ್ರಣ
ಇದ್ದೀತು ಎಂದ ಮೇಧಾವಿ ಮೆಕ್ ಟ್ಯಾಗರ್‍ಟ್.
ಅಷ್ಟು ಸ್ವಲ್ಪದರಲ್ಲೆ ಉಸಿರು ಕಟ್ಟಿಸುವಂತೆ
ಬಾಳು ಸಾವುಗಳ ವಿರುದ್ಧ ತುದಿಯೆರಡನ್ನೂ ಬೆರಸಿ ಕಡೆದಂಥ ಮುಖ.

ಆರಂಭದಲ್ಲಿ ಇನ್ನೂ ಎಲ್ಲ ಹೊಸತು, ನಯ,
ಆ ದಿನಗಳಲ್ಲಿ ಕಂಡಿದ್ದೆ ಅವಳಲ್ಲೊಂದು
ವನ್ಯ ಉಚ್ಛೃಂಖಲತೆ, ನನಗೆ ಅನಿಸಿತ್ತಂದು
ಬಾಳು ಮುಂದೆಂದೊ ತಪ್ಪದೆ ಹಾಯಬೇಕಾದ
ಘೋರದರ್‍ಶನವೊಂದು ಅವಳಂತರಾತ್ಮವನ್ನೆ ಸಿಡಿಸಿಬಿಟ್ಟಿತೆಂದು.
ತನ್ನದಲ್ಲದ್ದೆಲ್ಲವನ್ನೂ ತನ್ನಾಚೆಗೆ ಕೊಡವಿ ನಡೆಯುವ ನೆಲೆಗೆ
ಸ್ನೇಹ ಕಲ್ಪನೆಯನ್ನು ನಡೆಸಿಬಿಟ್ಟಿತು; ನಾನು ಉದ್ವೇಗಗೊಂಡಿದ್ದೆ,
ನನ್ನ ಮಗುವೇ, ನನ್ನ ಮಗುವೆ ಎಂದಲ್ಲ ಕಡೆ ಉದ್ಗರಿಸಿ ತೊಳಲಿದ್ದೆ.

ಅಥವಾ ಅವಳನ್ನೊಂದು ಅಲೌಕಿಕ ಶಕ್ತಿಯೆಂದು ಬಗೆದೆ ನಾನು
ಕಠೋರ ನೇತ್ರವೊಂದು ಅವಳ ಕಣ್ಣನ್ನು ಹಾದು
ಈ ಕೀಳುಲೋಕದ ಪತನ ಕ್ಷತಿಗಳನ್ನು ನೋಡಿತೆಂಬಂತೆ;
ಕ್ಷುದ್ರಮೂಲಗಳು ಉನ್ನತಿಗೆ ಏರಿದ್ದನ್ನು
ಹಿರಿಮೂಲಗಳ ಸಾರ ಆರಿಹೋದದ್ದನ್ನು
ಪರಂಪರಾರ್‍ಜಿತ ಮುತ್ತನ್ನೆತ್ತಿ ಹಂದಿಗಳತ್ತ ಬೀಸಿ ಒಗೆದದ್ದನ್ನು
ಕೋಡಂಗಿ ಕೇಡಿಗರು ಭವ್ಯ ಕಣಸುಗಳನ್ನು
ಗೇಲಿಮಾಡಿದ್ದನ್ನು ಕಂಡಿತೆಂಬಂತೆ,
ಏನುಳಿಯಿತಿನ್ನು ತಪ್ಪಿಸಲು ನರಮೇಧಕ್ಕೆ ಎಂದು ಬೆರಗಾದಂತೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...