Home / ಕವನ / ಕವಿತೆ / ವೇದಾಂತ

ವೇದಾಂತ

ವೇದಾಂತ ಹೇಳಬಹುದು
ಎಲ್ಲರೂ ಕೇಳಬಹುದು
ಶಾಲನ್ನು ಸುತ್ತಿಕೊಂಡು
ಬಿರುದನ್ನು ಧರಿಸಿಕೊಂಡು
ವ್ಯಾಖ್ಯಾನ ಮಾಡಬಹುದು
ಪುಸ್ತಕವ ಬರೆಯಬಹುದು
ವೇದಾಂತ ಸಮಯಕ್ಕೆ ಬರುವುದೇನು ?
ಕರುಳನ್ನು ಸಂತವಿಡಲಪ್ಪುದೇನು ?

ಕಷ್ಟಗಳು ಬಂದು ಮುತ್ತಿ
ದುಃಖಗಳು ಬಂದು ಒತ್ತಿ
ರೋಗಗಳು ಬಂದು ಹತ್ತಿ
ಸಾಲಗಳು ಬಂದು ಸುತ್ತಿ
ಕಣ್ಕಣು ಬಿಡುತಲಾಗ
ಮತಿಗೆಟ್ಟು ಹೋಗುವಾಗ
ವೇದಾಂತ ಬರುವುದನ್ನು ನೋಡಬೇಕು
ವೇದಾಂತ ನುಡಿವುದನು ಕೇಳಬೇಕು.
ತಾನಿದ್ದು ಮುದುಕನಾಗಿ
ಬೆಳೆದ ಮಗ ತೀರಿಹೋಗಿ
ಮೊಮ್ಮಗನು ಬಳಿಗೆ ಬಂದು
ಬೆಪ್ಪಾಗಿಯಳುತ ನಿಂದು
ಬಸಿರೆಲ್ಲ ಕುದಿಯುವಾಗ
ಕೊರಳ ಸೆರೆ ಬಿಗಿಯುವಾಗ
ಹೆಣವನ್ನು ಸುಡುಗಾಡಿಗೊಯ್ಯುವಾಗ
ಚಿಕ್ಕ ಸೊಸೆ ಮುಸುಕಿಟ್ಟು ಕೊರಗುವಾಗ;

ಮುಡುಪನ್ನು ಕಟ್ಟಿ ತಂದು
ಮುದ್ದು ಮಗಳಳುತ ನಿಂದು
ಪತಿಭಿಕ್ಷೆ ಬೇಡಲಾಗಿ
ಕಡೆಗೆಲ್ಲ ತೀರಲಾಗಿ
ತನ್ನ ಪತಿ ಹೋದನೆಂದು
ತನ್ನ ಬಾಳ್ ಮುಗಿಯಿತೆಂದು
ನೆಲದಲ್ಲಿ ಮೈಮರೆದು ಬೀಳುವಾಗ
ಕಣ್ಣೊಡೆದು ಎದೆಬಿಚ್ಚಿ ನೋಡುವಾಗ;

ಮುದ್ದಾಡಿ ಬೆಳಸಿದಂಥ
ಮನೆಯೆಲ್ಲ ಬೆಳಗಿದಂಥ
ಮಗುವನ್ನು ಮೃತ್ಯು ಹಿಡಿದು
ಹೆತ್ತವಳು ಬಸಿರು ಹಿಡಿದು
“ಎನ್ನ ಕಂದನ್ನ ಕೊಡಿರಿ
ಎನ್ನ ರತ್ನನ್ನ ಕೊಡಿರಿ”
ಎಂದಂದು ಬಿಕ್ಕುತ್ತ ಕೇಳುವಾಗ
ತೊಡೆ ಮೇಲೆ ಜೀವವದು ನಂದುವಾಗ;

ಊರಾಚೆ ಗುಣಿಯ ತೊಡಿ
ಇಡಲಲ್ಲಿ ಅಣಿಯ ಮಾಡಿ
‘ಬದುಕಿದೆಯೊ ಏನೋ!’ ಎಂದು
ಭ್ರಮೆಯಿಂದ ಆಸೆ ಬಂದು
ಮತ್ತೊಮ್ಮೆ ಮುಟ್ಟಿ ನೋಡಿ
ಕಡೆಗೊಮ್ಮೆ ಮುಖವ ನೋಡಿ
ಮಣ್ಣಿಂದ ಕಂದನ್ನ ಮುಚ್ಚುವಾಗ
ಜಗವೆಲ್ಲ ಕಣ್ಗಂದು ಸುತ್ತುವಾಗ;

ಇವರಾರ ಮಕ್ಕಳೆಂದು
ಅವರಾರ ನೆಂಟರೆಂದು
ಋಣ ಶೇಷ ತೀರಿತೆಂದು
ಸಾಲಿಗರು ಹೋದರೆಂದು
ಕಣ್ಣೀರು ಬತ್ತಿಸುತ್ತ
ಎದೆ ಕಲ್ಲು ಮಾಡಿಸುತ್ತ
ವೇದಾಂತ ! ವೇದಾಂತ ! ಇರುವುದೇನು
ಇದ್ದರೂ ಅದರಿಂದ ಬಂದುದೇನು ?

ಕಲ್ಲೆದೆಯ ನೀರುಮಾಡಿ
ಕಣ್ಣೀರು ಹರಿದು ಕೋಡಿ
ಮಾಲಿನ್ಯ ಹೋಗುತಿರಲು
ಕರುಣ ರಸ ತುಂಬುತಿರಲು
ಆರ್ತರಿಗೆ ಮರುಗುವಂತೆ
ಕೈನೀಡಿ ಸಲಹುವಂತೆ
ವೇದಾಂತ ನಮಗೆಲ್ಲ ತಿಳಿವ ತರಲಿ
ಶುದ್ಧಾತ್ಮ ಮಾನವರ ಮಾಡುತಿರಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...