Home / ಕವನ / ಕವಿತೆ / ವೇದಾಂತ

ವೇದಾಂತ

ವೇದಾಂತ ಹೇಳಬಹುದು
ಎಲ್ಲರೂ ಕೇಳಬಹುದು
ಶಾಲನ್ನು ಸುತ್ತಿಕೊಂಡು
ಬಿರುದನ್ನು ಧರಿಸಿಕೊಂಡು
ವ್ಯಾಖ್ಯಾನ ಮಾಡಬಹುದು
ಪುಸ್ತಕವ ಬರೆಯಬಹುದು
ವೇದಾಂತ ಸಮಯಕ್ಕೆ ಬರುವುದೇನು ?
ಕರುಳನ್ನು ಸಂತವಿಡಲಪ್ಪುದೇನು ?

ಕಷ್ಟಗಳು ಬಂದು ಮುತ್ತಿ
ದುಃಖಗಳು ಬಂದು ಒತ್ತಿ
ರೋಗಗಳು ಬಂದು ಹತ್ತಿ
ಸಾಲಗಳು ಬಂದು ಸುತ್ತಿ
ಕಣ್ಕಣು ಬಿಡುತಲಾಗ
ಮತಿಗೆಟ್ಟು ಹೋಗುವಾಗ
ವೇದಾಂತ ಬರುವುದನ್ನು ನೋಡಬೇಕು
ವೇದಾಂತ ನುಡಿವುದನು ಕೇಳಬೇಕು.
ತಾನಿದ್ದು ಮುದುಕನಾಗಿ
ಬೆಳೆದ ಮಗ ತೀರಿಹೋಗಿ
ಮೊಮ್ಮಗನು ಬಳಿಗೆ ಬಂದು
ಬೆಪ್ಪಾಗಿಯಳುತ ನಿಂದು
ಬಸಿರೆಲ್ಲ ಕುದಿಯುವಾಗ
ಕೊರಳ ಸೆರೆ ಬಿಗಿಯುವಾಗ
ಹೆಣವನ್ನು ಸುಡುಗಾಡಿಗೊಯ್ಯುವಾಗ
ಚಿಕ್ಕ ಸೊಸೆ ಮುಸುಕಿಟ್ಟು ಕೊರಗುವಾಗ;

ಮುಡುಪನ್ನು ಕಟ್ಟಿ ತಂದು
ಮುದ್ದು ಮಗಳಳುತ ನಿಂದು
ಪತಿಭಿಕ್ಷೆ ಬೇಡಲಾಗಿ
ಕಡೆಗೆಲ್ಲ ತೀರಲಾಗಿ
ತನ್ನ ಪತಿ ಹೋದನೆಂದು
ತನ್ನ ಬಾಳ್ ಮುಗಿಯಿತೆಂದು
ನೆಲದಲ್ಲಿ ಮೈಮರೆದು ಬೀಳುವಾಗ
ಕಣ್ಣೊಡೆದು ಎದೆಬಿಚ್ಚಿ ನೋಡುವಾಗ;

ಮುದ್ದಾಡಿ ಬೆಳಸಿದಂಥ
ಮನೆಯೆಲ್ಲ ಬೆಳಗಿದಂಥ
ಮಗುವನ್ನು ಮೃತ್ಯು ಹಿಡಿದು
ಹೆತ್ತವಳು ಬಸಿರು ಹಿಡಿದು
“ಎನ್ನ ಕಂದನ್ನ ಕೊಡಿರಿ
ಎನ್ನ ರತ್ನನ್ನ ಕೊಡಿರಿ”
ಎಂದಂದು ಬಿಕ್ಕುತ್ತ ಕೇಳುವಾಗ
ತೊಡೆ ಮೇಲೆ ಜೀವವದು ನಂದುವಾಗ;

ಊರಾಚೆ ಗುಣಿಯ ತೊಡಿ
ಇಡಲಲ್ಲಿ ಅಣಿಯ ಮಾಡಿ
‘ಬದುಕಿದೆಯೊ ಏನೋ!’ ಎಂದು
ಭ್ರಮೆಯಿಂದ ಆಸೆ ಬಂದು
ಮತ್ತೊಮ್ಮೆ ಮುಟ್ಟಿ ನೋಡಿ
ಕಡೆಗೊಮ್ಮೆ ಮುಖವ ನೋಡಿ
ಮಣ್ಣಿಂದ ಕಂದನ್ನ ಮುಚ್ಚುವಾಗ
ಜಗವೆಲ್ಲ ಕಣ್ಗಂದು ಸುತ್ತುವಾಗ;

ಇವರಾರ ಮಕ್ಕಳೆಂದು
ಅವರಾರ ನೆಂಟರೆಂದು
ಋಣ ಶೇಷ ತೀರಿತೆಂದು
ಸಾಲಿಗರು ಹೋದರೆಂದು
ಕಣ್ಣೀರು ಬತ್ತಿಸುತ್ತ
ಎದೆ ಕಲ್ಲು ಮಾಡಿಸುತ್ತ
ವೇದಾಂತ ! ವೇದಾಂತ ! ಇರುವುದೇನು
ಇದ್ದರೂ ಅದರಿಂದ ಬಂದುದೇನು ?

ಕಲ್ಲೆದೆಯ ನೀರುಮಾಡಿ
ಕಣ್ಣೀರು ಹರಿದು ಕೋಡಿ
ಮಾಲಿನ್ಯ ಹೋಗುತಿರಲು
ಕರುಣ ರಸ ತುಂಬುತಿರಲು
ಆರ್ತರಿಗೆ ಮರುಗುವಂತೆ
ಕೈನೀಡಿ ಸಲಹುವಂತೆ
ವೇದಾಂತ ನಮಗೆಲ್ಲ ತಿಳಿವ ತರಲಿ
ಶುದ್ಧಾತ್ಮ ಮಾನವರ ಮಾಡುತಿರಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...