ವೇದಾಂತ

ವೇದಾಂತ ಹೇಳಬಹುದು
ಎಲ್ಲರೂ ಕೇಳಬಹುದು
ಶಾಲನ್ನು ಸುತ್ತಿಕೊಂಡು
ಬಿರುದನ್ನು ಧರಿಸಿಕೊಂಡು
ವ್ಯಾಖ್ಯಾನ ಮಾಡಬಹುದು
ಪುಸ್ತಕವ ಬರೆಯಬಹುದು
ವೇದಾಂತ ಸಮಯಕ್ಕೆ ಬರುವುದೇನು ?
ಕರುಳನ್ನು ಸಂತವಿಡಲಪ್ಪುದೇನು ?

ಕಷ್ಟಗಳು ಬಂದು ಮುತ್ತಿ
ದುಃಖಗಳು ಬಂದು ಒತ್ತಿ
ರೋಗಗಳು ಬಂದು ಹತ್ತಿ
ಸಾಲಗಳು ಬಂದು ಸುತ್ತಿ
ಕಣ್ಕಣು ಬಿಡುತಲಾಗ
ಮತಿಗೆಟ್ಟು ಹೋಗುವಾಗ
ವೇದಾಂತ ಬರುವುದನ್ನು ನೋಡಬೇಕು
ವೇದಾಂತ ನುಡಿವುದನು ಕೇಳಬೇಕು.
ತಾನಿದ್ದು ಮುದುಕನಾಗಿ
ಬೆಳೆದ ಮಗ ತೀರಿಹೋಗಿ
ಮೊಮ್ಮಗನು ಬಳಿಗೆ ಬಂದು
ಬೆಪ್ಪಾಗಿಯಳುತ ನಿಂದು
ಬಸಿರೆಲ್ಲ ಕುದಿಯುವಾಗ
ಕೊರಳ ಸೆರೆ ಬಿಗಿಯುವಾಗ
ಹೆಣವನ್ನು ಸುಡುಗಾಡಿಗೊಯ್ಯುವಾಗ
ಚಿಕ್ಕ ಸೊಸೆ ಮುಸುಕಿಟ್ಟು ಕೊರಗುವಾಗ;

ಮುಡುಪನ್ನು ಕಟ್ಟಿ ತಂದು
ಮುದ್ದು ಮಗಳಳುತ ನಿಂದು
ಪತಿಭಿಕ್ಷೆ ಬೇಡಲಾಗಿ
ಕಡೆಗೆಲ್ಲ ತೀರಲಾಗಿ
ತನ್ನ ಪತಿ ಹೋದನೆಂದು
ತನ್ನ ಬಾಳ್ ಮುಗಿಯಿತೆಂದು
ನೆಲದಲ್ಲಿ ಮೈಮರೆದು ಬೀಳುವಾಗ
ಕಣ್ಣೊಡೆದು ಎದೆಬಿಚ್ಚಿ ನೋಡುವಾಗ;

ಮುದ್ದಾಡಿ ಬೆಳಸಿದಂಥ
ಮನೆಯೆಲ್ಲ ಬೆಳಗಿದಂಥ
ಮಗುವನ್ನು ಮೃತ್ಯು ಹಿಡಿದು
ಹೆತ್ತವಳು ಬಸಿರು ಹಿಡಿದು
“ಎನ್ನ ಕಂದನ್ನ ಕೊಡಿರಿ
ಎನ್ನ ರತ್ನನ್ನ ಕೊಡಿರಿ”
ಎಂದಂದು ಬಿಕ್ಕುತ್ತ ಕೇಳುವಾಗ
ತೊಡೆ ಮೇಲೆ ಜೀವವದು ನಂದುವಾಗ;

ಊರಾಚೆ ಗುಣಿಯ ತೊಡಿ
ಇಡಲಲ್ಲಿ ಅಣಿಯ ಮಾಡಿ
‘ಬದುಕಿದೆಯೊ ಏನೋ!’ ಎಂದು
ಭ್ರಮೆಯಿಂದ ಆಸೆ ಬಂದು
ಮತ್ತೊಮ್ಮೆ ಮುಟ್ಟಿ ನೋಡಿ
ಕಡೆಗೊಮ್ಮೆ ಮುಖವ ನೋಡಿ
ಮಣ್ಣಿಂದ ಕಂದನ್ನ ಮುಚ್ಚುವಾಗ
ಜಗವೆಲ್ಲ ಕಣ್ಗಂದು ಸುತ್ತುವಾಗ;

ಇವರಾರ ಮಕ್ಕಳೆಂದು
ಅವರಾರ ನೆಂಟರೆಂದು
ಋಣ ಶೇಷ ತೀರಿತೆಂದು
ಸಾಲಿಗರು ಹೋದರೆಂದು
ಕಣ್ಣೀರು ಬತ್ತಿಸುತ್ತ
ಎದೆ ಕಲ್ಲು ಮಾಡಿಸುತ್ತ
ವೇದಾಂತ ! ವೇದಾಂತ ! ಇರುವುದೇನು
ಇದ್ದರೂ ಅದರಿಂದ ಬಂದುದೇನು ?

ಕಲ್ಲೆದೆಯ ನೀರುಮಾಡಿ
ಕಣ್ಣೀರು ಹರಿದು ಕೋಡಿ
ಮಾಲಿನ್ಯ ಹೋಗುತಿರಲು
ಕರುಣ ರಸ ತುಂಬುತಿರಲು
ಆರ್ತರಿಗೆ ಮರುಗುವಂತೆ
ಕೈನೀಡಿ ಸಲಹುವಂತೆ
ವೇದಾಂತ ನಮಗೆಲ್ಲ ತಿಳಿವ ತರಲಿ
ಶುದ್ಧಾತ್ಮ ಮಾನವರ ಮಾಡುತಿರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಲಡಾಯಿ

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…