Home / ಕವನ / ಕವಿತೆ / ಪುಣ್ಯಶಾಲಿ

ಪುಣ್ಯಶಾಲಿ

ನೀವೆಲ್ಲ ಪುಣ್ಯಶಾಲಿಗಳಮ್ಮ
ಹಠತೊಟ್ಟು ಬೈಗಳಿಂ ಕೋಪದಿಂ
ಕೋರಿಕೆಯ ಸಾಧಿಪಿರಿ, ಸುಖಿಸುವಿರಿ
ಒಡವೆ ವಸ್ತುವ ಪಡೆದು ಮೆರೆಯುವಿರಿ.
ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ
ಬೈಗಳಂ ಮುನ್ನ ನಾ ಕಲಿತಿಲ್ಲ
ಅಸುವೊಂದು ದೇಹವೆರಡಾಗಿಹುದು
ಎಂದು ಸಂಸಾರ ನಡೆಸುವೆನಮ್ಮ.

ಎನ್ನ ಪತಿ ಮನೆಗೆ ಬರೆ ಮುಗುಳು ನಗೆ ಸೂಸುವೆನು
ಬಂದವರನುಪಚರಿಸಿ ನಲ್ನುಡಿಯ ನುಡಿಯುವೆನು
ಏಕಾಂತದಲ್ಲಿ ಮೆಲ್ಲನವರ ಬಳಿ ಸಾರುವೆನು
ತನಿವಣ್ಣು ಕೆನೆವಾಲು ತಾಂಬೂಲ ನೀಡುವೆನು.
ವಿನಯದಿಂ ಮೃದು ಮಧುರವಾಣಿಯಂ
“ಎಲೆ ನಲ್ಲ! ಮಾತೊಂದು ನಡೆಸುವೆಯ
ಕೇಳಲೋ ಬೇಡವೋ” ಎನ್ನುವೆನು.

ಒಡನವರು ನಗುನಗುತ
ಬರ ಸೆಳೆದು ಬಿಗಿದಪ್ಪಿ
“ಎಲೆ ದೇವಿ! ಎನ್ನುವರು
ಹೂಮಳೆಯ ಸುರಿಯುವರು
ಜಡೆ ಮುಡಿಯ ನೇವರಿಸಿ
ಬಳಿಯಲ್ಲಿ ಕುಳ್ಳಿರಿಸಿ
ತಂದೆತಾಯ್ಗಳ ಬಿಟ್ಟು ಬಂದಿರುವೆ
ಒಡಹುಟ್ಟಿದರ ಬಿಟ್ಟು ಬಂದಿರುವೆ
ನಾನೆ ಪರಮಾರಾಧ್ಯನೆಂದೆಂದು
ಕನಸಿನಲಿ ನೆನೆಸಿನಲಿ ತಿಳಿದಿರುವೆ
ಕುಸುಮ ಕೋಮಲ ಹೃದಯದಲಿ ಬಯಕೆ ಏನಿಹುದೊ
ಏನಿಹುದೊ ಈ ಎನ್ನ ಗೃಹಲಕ್ಷ್ಮಿ ಹೃದಯದಲಿ !
ರಾಣಿಯಲ್ಲವೆ ನೀನು
ನಾನು ನಿನ್ನಯ ತೊತ್ತು
ಸರ್ವಸ್ವ ನಿನಗಿರಲು
ಸರ್ವಾಧಿಕಾರಮಂ
ನಿನಗೆ ನಾ ಕೊಟ್ಟಿರಲು
ಎನ್ನ ಬೇಡಲದೇಕೆ ?”
ಎಂದೆನ್ನ ಆದರಿಸಿ ನುಡಿಯುವರು
ಕೊರಳ ಸರಿಗೆಯ ಕೀಲಿ ತೋರುವರು.

ಪ್ರೇಮ ಭಾಂಡಾಗಾರ ಎನಗಿರಲು
ಕನಕ ಭಾಂಡಾಗಾರ ಎನಗಿರಲು
ಎಲ್ಲವುಂ ಎನ್ನ ಕೈಯೊಳಗಿರಲು
ಒಪ್ಪದಲ್ಲಿ ಸಂಸಾರ ನಡೆಸುತಿರೆ
ಶಾಂತಿ ಸುಖ ನಗುವೆಲ್ಲ ತುಂಬುತಿರೆ
ಒಡವೆ ವಸ್ತುವನಿಟ್ಟು ಮೆರೆಯದಿರೆ
ಏನು ಕುಂದಪ್ಪುದೋ ನಾನರಿಯೆನಮ್ಮ ;
ನೀವೆಲ್ಲ ಪುಣ್ಯಶಾಲಿಗಳಮ್ಮ
ಎನಗೇನು ಆ ಪುಣ್ಯ ಬೇಡಮ್ಮ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...