Home / ಕವನ / ಕವಿತೆ / ಪುಣ್ಯಶಾಲಿ

ಪುಣ್ಯಶಾಲಿ

ನೀವೆಲ್ಲ ಪುಣ್ಯಶಾಲಿಗಳಮ್ಮ
ಹಠತೊಟ್ಟು ಬೈಗಳಿಂ ಕೋಪದಿಂ
ಕೋರಿಕೆಯ ಸಾಧಿಪಿರಿ, ಸುಖಿಸುವಿರಿ
ಒಡವೆ ವಸ್ತುವ ಪಡೆದು ಮೆರೆಯುವಿರಿ.
ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ
ಬೈಗಳಂ ಮುನ್ನ ನಾ ಕಲಿತಿಲ್ಲ
ಅಸುವೊಂದು ದೇಹವೆರಡಾಗಿಹುದು
ಎಂದು ಸಂಸಾರ ನಡೆಸುವೆನಮ್ಮ.

ಎನ್ನ ಪತಿ ಮನೆಗೆ ಬರೆ ಮುಗುಳು ನಗೆ ಸೂಸುವೆನು
ಬಂದವರನುಪಚರಿಸಿ ನಲ್ನುಡಿಯ ನುಡಿಯುವೆನು
ಏಕಾಂತದಲ್ಲಿ ಮೆಲ್ಲನವರ ಬಳಿ ಸಾರುವೆನು
ತನಿವಣ್ಣು ಕೆನೆವಾಲು ತಾಂಬೂಲ ನೀಡುವೆನು.
ವಿನಯದಿಂ ಮೃದು ಮಧುರವಾಣಿಯಂ
“ಎಲೆ ನಲ್ಲ! ಮಾತೊಂದು ನಡೆಸುವೆಯ
ಕೇಳಲೋ ಬೇಡವೋ” ಎನ್ನುವೆನು.

ಒಡನವರು ನಗುನಗುತ
ಬರ ಸೆಳೆದು ಬಿಗಿದಪ್ಪಿ
“ಎಲೆ ದೇವಿ! ಎನ್ನುವರು
ಹೂಮಳೆಯ ಸುರಿಯುವರು
ಜಡೆ ಮುಡಿಯ ನೇವರಿಸಿ
ಬಳಿಯಲ್ಲಿ ಕುಳ್ಳಿರಿಸಿ
ತಂದೆತಾಯ್ಗಳ ಬಿಟ್ಟು ಬಂದಿರುವೆ
ಒಡಹುಟ್ಟಿದರ ಬಿಟ್ಟು ಬಂದಿರುವೆ
ನಾನೆ ಪರಮಾರಾಧ್ಯನೆಂದೆಂದು
ಕನಸಿನಲಿ ನೆನೆಸಿನಲಿ ತಿಳಿದಿರುವೆ
ಕುಸುಮ ಕೋಮಲ ಹೃದಯದಲಿ ಬಯಕೆ ಏನಿಹುದೊ
ಏನಿಹುದೊ ಈ ಎನ್ನ ಗೃಹಲಕ್ಷ್ಮಿ ಹೃದಯದಲಿ !
ರಾಣಿಯಲ್ಲವೆ ನೀನು
ನಾನು ನಿನ್ನಯ ತೊತ್ತು
ಸರ್ವಸ್ವ ನಿನಗಿರಲು
ಸರ್ವಾಧಿಕಾರಮಂ
ನಿನಗೆ ನಾ ಕೊಟ್ಟಿರಲು
ಎನ್ನ ಬೇಡಲದೇಕೆ ?”
ಎಂದೆನ್ನ ಆದರಿಸಿ ನುಡಿಯುವರು
ಕೊರಳ ಸರಿಗೆಯ ಕೀಲಿ ತೋರುವರು.

ಪ್ರೇಮ ಭಾಂಡಾಗಾರ ಎನಗಿರಲು
ಕನಕ ಭಾಂಡಾಗಾರ ಎನಗಿರಲು
ಎಲ್ಲವುಂ ಎನ್ನ ಕೈಯೊಳಗಿರಲು
ಒಪ್ಪದಲ್ಲಿ ಸಂಸಾರ ನಡೆಸುತಿರೆ
ಶಾಂತಿ ಸುಖ ನಗುವೆಲ್ಲ ತುಂಬುತಿರೆ
ಒಡವೆ ವಸ್ತುವನಿಟ್ಟು ಮೆರೆಯದಿರೆ
ಏನು ಕುಂದಪ್ಪುದೋ ನಾನರಿಯೆನಮ್ಮ ;
ನೀವೆಲ್ಲ ಪುಣ್ಯಶಾಲಿಗಳಮ್ಮ
ಎನಗೇನು ಆ ಪುಣ್ಯ ಬೇಡಮ್ಮ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...