Home / ಕವನ / ಕವಿತೆ / ಒಂದು ಸ್ವಪ್ನ

ಒಂದು ಸ್ವಪ್ನ

ಸ್ವಪ್ನರಾಜ್ಯದ ಭಾವದೋಜೆಯ
ನಡುವೆ ನಡೆದೆನು ತೆಪ್ಪಗೆ,
ಮನೋಭೂಮಿಯನುತ್ತು ಅಗಿಯಿತು
ತೇಜಪೂರಿತ ಘಟನೆಯು!
ಮೆತ್ತಗಾಸಿದ ತಲ್ಪತಳವೇ
ನನ್ನ ಯಾತ್ರೆಯ ಭೂಮಿಯು!!

ಮೇಲೆ ಭಾನುವು ಬಿಳಿಯ ಮುಗಿಲು
ಕೆಳಗೆ ಕೊರಕಲು ದಾರಿಯು;
ಹಾದು ನಡೆದೆನು ಏಳುಬೀಳುತ
ಏರಿದೆನು ಗಿರಿ ಮೇಲಕೆ!
ಬೆಟ್ಟತಪ್ಪಲು ಜಾರುಕಲ್ಗಳು
ಬೀಳುವೆನೊ ಎಂಬೆದರಿಕೆ!!

ಅಮರಲೋಕದ ಹೂವುತೋಟದ
ನೆನಪು ಸುಳಿಯಿತು ಮನದಲಿ
ಮಂದಮಾರುತ ಎತ್ತಿತಂದಾ
ಅಮರ ಗಾನವ ಕೇಳಿದೆ,
ಕೇಳಪೋದೆನು-ಶೂನ್ಯಲೋಕವು
ಗಾಳಿ, ಗಿರಿದುದಿ, ಮರಗಳೆ!

ಐಂದ್ರಜಾಲಿಕ ದೃಶ್ಯದಂತೆಯೆ
ಬೆಟ್ಟಗವಿಯಿಂ ಪಕ್ಕನೆ
ಇಂಪುಗಾನದ ದನಿಯ ಅಲೆಯೊಳು
ತನ್ನ ರೂಪನು ಸೇರಿಸಿ
ಬಂದಳೊರ್ವಳು ಇಂದುವದನೆಯು
ಇಂದು ರೂಪವ ಹಳಿಯಿಸಿ.

ಸುಳಿದಳೀಚೆಗೆ ಬೆಟ್ಟದುದಿಯಲಿ
ನಿಂತ ನಾನು ನನ್ನನು!
ಮರೆತು ನೋಡಿದೆ ವಿಶ್ವನಿರ್ಮಿತ
ಮಾಯೆ ರೂಪವ ನೆನೆದೆನೊ;
ರೂಪ ನೋಡುತ ನೀಲ ಬಾನಿನ
ಸ್ವಚ್ಚ ಶೀಲವ ಹಳಿದೆನೊ!

ಹೆರಳ ಕುರುಳು ಮುಡಿಯ ಮುಗುಳು
ಕಾಂತಿ ಬೀರುವ ಕಂಗಳು
ಬಾಲೆ ಸದ್ಗುಣೆ ಹಂಸಯಾನೆಯು
ಜಾಣೆ ನೋಟಕೆ-ಕೆನ್ನೆಯು
ಒಂಟಿಸರವನು ರತ್ನಮಾಲೆಯ
ಕಟ್ಟಿ ನೂಪುರ ರನ್ನೆಯು!

ನೋಡಿ ಹಿಗ್ಗಿದೆ ವನವು ಗಾಳಿಯು
ಹಿಗ್ಗಿತೆನ್ನೊಡೆ ಬೀಸುತ
ದೂರ ಸರಿದುವು ಸುತ್ತು ಸೇರಿದ
ಹಕ್ಕಿಮಿಗಗಳು ಭ್ರಮರವು;
ಒಬ್ಬನಾದೆನು ಮುಂದೆ ಸರಿದೆನು
ಪೋದ ಧೈರ್ಯವ ಕರೆದೆನು!

ಹೂವು ಎಲೆಗಳು ಎಲ್ಲಿ ಅಣಿಕಿಪು-
ವೆಂದು ನಾಚುಗೆಪಟ್ಟನೊ!
ಗಿರಿಯ ಮೇಲ್ಗಡೆ ಚೆನ್ನಕಾಣುವ
ಮುಗಿಲು ನಗುವುದೊ ಎಂದು ನಾ
ಭಾವಿಸುತ್ತಲಿ, ‘ಯಾರ ನೋಡುವಿ’
ಎಂದು ಕೇಳಿದೆನವಳನು.

‘ಯಾರ ಇಲ್ಲವು ಹಣ್ಣು ಹೂಗಳ-
ನಾಯ್ದು ಪೋಗಲು ಬಂದೆನೊ!
ಕಂಡು ಸೋತೆನು ಮನವು ಬಿಮ್ಮನೆ
ಎನ್ನ ನಿಲಿಸಿತು-ಇಲ್ಲಿಯೆ’
ಎಂದು ಹೇಳಲು, ‘ರಮಣಿ ಹೆದರದಿ
ರೆ’ಂದು ಪಕ್ಕದಲಿರಿತೆನೊ!

ಸರಸವಾಟದಲೊತ್ತು ಕಳೆಯುತ
ಮಾತುಮಾತಲಿ ಮುಳುಗುತ;
ನೋಟ ಬಿಂಬಾಧರವ ಹೊಕ್ಕಿತು,
ಕಣ್ಣು ಕಣ್ಣನು ನುಂಗಿತು!
ದೃಷ್ಠಿಹೊರಳಿತು-ತನುವು ಕೊಂಕಿತು;
ಕೈಯು ಎದೆಯಲಿ ನುಸುಳಿತು!!

ಮುದ್ದು ಮಾತಿನ ಮುದ್ರೆ ಕೆನ್ನೆಲಿ,
ಅಭಯ ಸೂಚನೆ ಬಾಯಲಿ-
ಜಾಣೆ ನಾಚುತಲಂಜಿ ಅಪ್ಪಿತು,
ಬಿಗಿದ ಅಪ್ಪಗೆ ಸುಖದಲಿ
ಇರಲು-ಪಾಪೀ ನಿದ್ದೆವಂಚನೆ
ಮಾಡಿ ಕೆಡಿಸಿತು ಸುಖವನು!!!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...