Home / ಕವನ / ಕವಿತೆ / ಒಂದು ಸ್ವಪ್ನ

ಒಂದು ಸ್ವಪ್ನ

ಸ್ವಪ್ನರಾಜ್ಯದ ಭಾವದೋಜೆಯ
ನಡುವೆ ನಡೆದೆನು ತೆಪ್ಪಗೆ,
ಮನೋಭೂಮಿಯನುತ್ತು ಅಗಿಯಿತು
ತೇಜಪೂರಿತ ಘಟನೆಯು!
ಮೆತ್ತಗಾಸಿದ ತಲ್ಪತಳವೇ
ನನ್ನ ಯಾತ್ರೆಯ ಭೂಮಿಯು!!

ಮೇಲೆ ಭಾನುವು ಬಿಳಿಯ ಮುಗಿಲು
ಕೆಳಗೆ ಕೊರಕಲು ದಾರಿಯು;
ಹಾದು ನಡೆದೆನು ಏಳುಬೀಳುತ
ಏರಿದೆನು ಗಿರಿ ಮೇಲಕೆ!
ಬೆಟ್ಟತಪ್ಪಲು ಜಾರುಕಲ್ಗಳು
ಬೀಳುವೆನೊ ಎಂಬೆದರಿಕೆ!!

ಅಮರಲೋಕದ ಹೂವುತೋಟದ
ನೆನಪು ಸುಳಿಯಿತು ಮನದಲಿ
ಮಂದಮಾರುತ ಎತ್ತಿತಂದಾ
ಅಮರ ಗಾನವ ಕೇಳಿದೆ,
ಕೇಳಪೋದೆನು-ಶೂನ್ಯಲೋಕವು
ಗಾಳಿ, ಗಿರಿದುದಿ, ಮರಗಳೆ!

ಐಂದ್ರಜಾಲಿಕ ದೃಶ್ಯದಂತೆಯೆ
ಬೆಟ್ಟಗವಿಯಿಂ ಪಕ್ಕನೆ
ಇಂಪುಗಾನದ ದನಿಯ ಅಲೆಯೊಳು
ತನ್ನ ರೂಪನು ಸೇರಿಸಿ
ಬಂದಳೊರ್ವಳು ಇಂದುವದನೆಯು
ಇಂದು ರೂಪವ ಹಳಿಯಿಸಿ.

ಸುಳಿದಳೀಚೆಗೆ ಬೆಟ್ಟದುದಿಯಲಿ
ನಿಂತ ನಾನು ನನ್ನನು!
ಮರೆತು ನೋಡಿದೆ ವಿಶ್ವನಿರ್ಮಿತ
ಮಾಯೆ ರೂಪವ ನೆನೆದೆನೊ;
ರೂಪ ನೋಡುತ ನೀಲ ಬಾನಿನ
ಸ್ವಚ್ಚ ಶೀಲವ ಹಳಿದೆನೊ!

ಹೆರಳ ಕುರುಳು ಮುಡಿಯ ಮುಗುಳು
ಕಾಂತಿ ಬೀರುವ ಕಂಗಳು
ಬಾಲೆ ಸದ್ಗುಣೆ ಹಂಸಯಾನೆಯು
ಜಾಣೆ ನೋಟಕೆ-ಕೆನ್ನೆಯು
ಒಂಟಿಸರವನು ರತ್ನಮಾಲೆಯ
ಕಟ್ಟಿ ನೂಪುರ ರನ್ನೆಯು!

ನೋಡಿ ಹಿಗ್ಗಿದೆ ವನವು ಗಾಳಿಯು
ಹಿಗ್ಗಿತೆನ್ನೊಡೆ ಬೀಸುತ
ದೂರ ಸರಿದುವು ಸುತ್ತು ಸೇರಿದ
ಹಕ್ಕಿಮಿಗಗಳು ಭ್ರಮರವು;
ಒಬ್ಬನಾದೆನು ಮುಂದೆ ಸರಿದೆನು
ಪೋದ ಧೈರ್ಯವ ಕರೆದೆನು!

ಹೂವು ಎಲೆಗಳು ಎಲ್ಲಿ ಅಣಿಕಿಪು-
ವೆಂದು ನಾಚುಗೆಪಟ್ಟನೊ!
ಗಿರಿಯ ಮೇಲ್ಗಡೆ ಚೆನ್ನಕಾಣುವ
ಮುಗಿಲು ನಗುವುದೊ ಎಂದು ನಾ
ಭಾವಿಸುತ್ತಲಿ, ‘ಯಾರ ನೋಡುವಿ’
ಎಂದು ಕೇಳಿದೆನವಳನು.

‘ಯಾರ ಇಲ್ಲವು ಹಣ್ಣು ಹೂಗಳ-
ನಾಯ್ದು ಪೋಗಲು ಬಂದೆನೊ!
ಕಂಡು ಸೋತೆನು ಮನವು ಬಿಮ್ಮನೆ
ಎನ್ನ ನಿಲಿಸಿತು-ಇಲ್ಲಿಯೆ’
ಎಂದು ಹೇಳಲು, ‘ರಮಣಿ ಹೆದರದಿ
ರೆ’ಂದು ಪಕ್ಕದಲಿರಿತೆನೊ!

ಸರಸವಾಟದಲೊತ್ತು ಕಳೆಯುತ
ಮಾತುಮಾತಲಿ ಮುಳುಗುತ;
ನೋಟ ಬಿಂಬಾಧರವ ಹೊಕ್ಕಿತು,
ಕಣ್ಣು ಕಣ್ಣನು ನುಂಗಿತು!
ದೃಷ್ಠಿಹೊರಳಿತು-ತನುವು ಕೊಂಕಿತು;
ಕೈಯು ಎದೆಯಲಿ ನುಸುಳಿತು!!

ಮುದ್ದು ಮಾತಿನ ಮುದ್ರೆ ಕೆನ್ನೆಲಿ,
ಅಭಯ ಸೂಚನೆ ಬಾಯಲಿ-
ಜಾಣೆ ನಾಚುತಲಂಜಿ ಅಪ್ಪಿತು,
ಬಿಗಿದ ಅಪ್ಪಗೆ ಸುಖದಲಿ
ಇರಲು-ಪಾಪೀ ನಿದ್ದೆವಂಚನೆ
ಮಾಡಿ ಕೆಡಿಸಿತು ಸುಖವನು!!!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...