೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ…. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ… ಹರ್ಷದಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವರದಿ ಮಾಡಿಕೊಂಡೆ.
ಹುಬ್ಬಳ್ಳಿ ಜೈಲಿನಲ್ಲಿ ಮೂರು ವರ್ಷವಿದ್ದು ಬಿಡುಗಡೆ ಹೊಂದಿದ್ದ ಜೈಲು ಪಕ್ಷಿಯಂತೆ ಸಂತಸದಲ್ಲಿದ್ದೆ! ಆಹಾ… ಪುಟಿ ಪುಟಿವ ಚೆಂಡಿನಂತೇ… ಹುರುಪು, ಉತ್ಸಾಹ, ಉಲ್ಲಾಸದಲ್ಲಿದ್ದೆ. ಕನಿಷ್ಠ ಎರಡು ವರ್ಷ ಇಲ್ಲಿರಲು ಸಾಧ್ಯವಾದರೆ ಇಲ್ಲೇ ಬಡ್ತಿ ಹೊಂದಿ ಮುಂದುವರೆಯಲು ಏನೆಲ್ಲ… ಆಶಿಸಿದೆ. ಅದು ಸಹಜವಾದುದ್ದು… ಬಯಕೆ ಬದುಕಿನ ಮಧ್ಯೆ ಸಾಮರಸ್ಯವಿತ್ತು. ಹೀಗಾಗಿ ಕನಸು ಕಂಡೆ. ಕನಸು ಕಾಣುವುದಕ್ಕೂ ಯೋಗ್ಯತೆ, ಅರ್ಹತೆಬೇಕಿಲ್ಲ. ಇಲ್ಲವಾದರೆ ತಿರುಕನ ಕನಸ್ಸಾಗುವುದು.
ನಾ… ವರದಿ ಮಾಡಿಕೊಂಡ ದಿನವೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ಒಂದು ನೆಲಬಾಂಬೊಂದು ಮೆಲ್ಲಗೆ ನಗು ನಗುತ್ತಾ… ‘ನೀವಿನ್ನು ಇಲ್ಲಿಗೆ ಬಂದು ವರದಿ ಮಾಡಿಕೊಂಡಿಲ್ಲ! ಆಗ್ಲೆ ಬೆಂಗಳೂರಿನ ಕೇಂದ್ರ ಕಛೇರಿಯ ಉನ್ನತಾಧಿಕಾರಿಗಳು ಯಲ್ಲಪ್ಪ ಎಲ್ಲದರಲ್ಲಿ ಓಕೇ… ಪುಸ್ತಕ, ಚಿತ್ರಲೇಖನ, ಕತೆ, ಕಾದಂಬರಿ, ಕವಿತೆ… ಬರೆಯುವುದು ಯಾಕೆ? ಒಂದ್ ಕಣ್ ಇಡಿ’ ಎಂದು ನಿಮ್ಮ ಬಗ್ಗೆ ಆಕ್ಷೇಪಣೆ ಎತ್ತಿದ್ದಾರೆಂದು ನನ್ನ ಅಲ್ಲೇ ಚುಚ್ಚಿದರು. ಮಾತಿನಲ್ಲೇ ಕೊಲ್ಲುವ ವೀರರೂ ಶೂರರೂ ನಮ್ಮಲ್ಲಿ ಬಹಳಿಲ್ಲಿ. ಯಿಡೀ ವಿಭಾಗದ ಗುತ್ತಿಗೆದಾರರಂಗೆ ವಾರಸುದಾರರಂಗೆ ಇದ್ದರು!
ನಾನೀಗಾಗ್ಲೆ ಬಡ್ತಿ ಹೊಂದಿ ೨-೩ ವರ್ಷ ಹರ್ಷದಿ ಕಾಲ ಕಳೆಯಬೇಕಾಗಿತ್ತು! ಆದರೆ ನನ್ನ ತಿಥಿ ಕಾಣಿಸಲು ಸಂಚು, ಹೊಂಚು ಹಾಕಿರುವುದು ನನಗೆ ಖೇದ ತಂತು! ಇಲ್ಲಿಗೆ ಅರಬ್ಬಿ ಸಮುದ್ರಕ್ಕೆ ಬಂದು ಬಿದ್ದರೂ ಮೊಣಕಾಲುದ್ದ ನೀರು ಎಂದು ಲೋಚಗುಟ್ಟಿದೆ. ಆದರೂ ನನ್ ಧೈರ್ಯ ನನಗೆ. ಅದೇ ಈಗ ಇಲ್ಲಿವರೆಗೆ ತೇಲಿಸಿರುವುದು!
ಹೌದು… ನಾ ಹೊಗಳಿಕೆಗೆ ಉಬ್ಬಲ್ಲ! ತೆಗಳಿಕೆಗೆ ಕುಗ್ಗಲ್ಲ. ನನ್ನ ಕೆಲಸ ನಾ ಬಿಡಲ್ಲ…. ದಟ್ಸ್ ಯಲ್ಲಪ್ಪ ಕೆಕೆ ಪುರ! ಹೀಗೆ… ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಗಾಡ್ಫಾದರ್ ಯಿಲ್ಲವೆಂದು ಎಂದೂ ಕೊರಗಲಿಲ್ಲ….
ಅಂದು-ಮಂಗಳೂರಿನಲ್ಲಿರುವ ಮಂಗಳದೇವಿ ದೇವಸ್ಥಾನಕ್ಕೆ ಭೇಟಿ ನೀಡಿದೆ ಅಲ್ಲಿ ನನ್ನಮ್ಮ ದುರುಗಮ್ಮನ ಕಂಡೆ… ಭಯ ಭಕ್ತಿಲಿ ಪೂಜೆ ಸಲ್ಲಿಸಿದೆ.
ನಂತರ ಹಂತ ಹಂತವಾಗಿ ಬಿಡುವು ಮಾಡಿಕೊಂಡು… ಕದ್ರಿ… ಮಂಜುನಾಥ ಟೆಂಪಲ್, ಕುದ್ರೋಳಿ ಗೋಕರ್ಣನಾಥ ಟೆಂಪಲ್, ಸಂತ ಅಲೋಶಿಯಸ್ ಚರ್ಚ್, ಕಟೀಲು ಶ್ರೀ ದುರ್ಗಪರಮೇಶ್ವರಿ ಟೆಂಪಲ್, ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಮಿಲಗ್ರಸ್ ಚರ್ಚ್, ಶರವೋ ಮಹಾಗಣಪತಿ ಟೆಂಪಲ್, ಸಂತ ಮೇರಿಯಾಸ್, ಪಿಲಿಕುಳ ನಿಸರ್ಗಧಾಮ, ಸೂರತ್ಕಲ್, ಮಲ್ಪೆ ಸುಂದರ ಬಂದರು… ಮಂಗಳೂರು ಬೀಚ್, ಮರವಂತೆ ಬೀಚ್, ರೋಚೋರಾಯ ಚರ್ಚ್, ಪೊಳಲಿ ರಾಜರಾಜೇಶ್ವರಿ ಟೆಂಪಲ್, ಮಾನಸ ಅಮ್ಹಜ್ಮೆಂಟ್ ವಾಟರ್ ಪಾರ್ಕ್, ಕುಡುಪು ಅನಂತ ಪದ್ಮನಾಭ ಟೆಂಪಲ್, ಮಹಾತ್ಮಗಾಂಧಿ ಮ್ಯೂಸಿಯಂ, ಬಿಜೈ ಮ್ಯೂಸಿಯಂ, ನ್ಯೂ ಮಂಗಳೂರು ಫೋರ್ಟ್, ಇತ್ಯಾದಿ ಇತ್ಯಾದಿ… ಸ್ಥಳಗಳನ್ನು ಪ್ರತಿ ರವಿವಾರ, ಸಾರ್ವತ್ರಿಕ ರಜೆ, ಹಬ್ಬಗಳ ದಿನಗಳಂದು ಹೆಂಡತಿ ಮಕ್ಕಳೊಟ್ಟಿಗೆ ಭೇಟಿ ನೀಡಿ ಅಮಿತಾನಂದವನ್ನು ಹೊಂದಿದೆ.
ಪ್ರಾಮಾಣಿಕರಿಗೆ ಸೂಕ್ಷ್ಮ ಮನಸ್ಸಿಗರಿಗೆ ಇವೇ ಆಸ್ತಿ ಪಾಸ್ತಿ. ಇವುಗಳಲ್ಲಿ ಅಪ್ಪ ಅಮ್ಮರ ಕಾಣುವುದು ಇವೆಲ್ಲವುಗಳನ್ನು ನೋಡಲು ಎರಡು ಕಣ್ಣು ಸಾಲವಲ್ಲೋ ಎಂದು ಅದೆಷ್ಟೋ ಸಲ ಅಂದುಕೊಂಡಿದ್ದುಂಟು. ಇಲ್ಲಿ ದೇವರಿದ್ದಾನೆ. ಅದಕ್ಕೆ ನಾನು ದೇವರನಾಡೆಂದು ಕರೆಯುವುದು. ಜಲ ನೆಲ ಜನ ಮಾತು, ಕ್ರ್ತಿ ಎಲ್ಲ ದೇವರ ರೂಪ. ಇಲ್ಲಿ ನೋಡುವುದು, ಕಲಿಯುವುದು ಬಹಳಿದೆ ಅನಿಸಿತು. ಇಲ್ಲೆಲ್ಲ ದೇವರಿರುವುದರಿಂದ ಇವರಿಗೆಲ್ಲ ಕೊಟ್ಟು ಇವರ ಮೂಲಕ ಧಾನ, ಧರ್ಮ, ಪೂಜೆ, ಪ್ರಸಾದದ ಆಟ ಆಡುತ್ತಿದ್ದಾನೆ ಅನಿಸಿತು.
ಅಬ್ಬಾ! ಹುಟ್ಟಿದರೆ ಮಂಗಳೂರಿನಲ್ಲಿ ಹುಟ್ಟಬೇಕೆನಿಸಿತು. ಎಷ್ಟೊಂದು ಸುಂದರವಾದ ನಾಡು! ಯಿಲ್ಲಿ ಹೆಜ್ಜೆ ಹೆಜ್ಜೆಗೂ ಕಣ್ಣು ಹಾಯಿಸಿದಷ್ಟು ಪ್ರಕೃತಿ ಸಂಪತ್ತು! ಗೆಜ್ಜೆ ಕಟ್ಟಿಕೊಂಡು ಲಜ್ಜೆಯಲ್ಲಿ ಹೆಜ್ಜೆ ಹಾಕುವ ಹಚ್ಚ ಹಸಿರಿನ ಸಿರಿ. ನೆಲ, ಜಲ, ಜನ ನಯ ನಾಜೂಕಿನವರು, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತು-ಕತೆ-ಜನ ನೋಡಲು ತುಂಬಾ ವಿಶಿಷ್ಟ ಬಲು ಬುದ್ಧಿವಂತರೆನಿಸಿದರು. ಯಿಲ್ಲಿ ಏನೆಲ್ಲ ಇದೆ ಅನಿಸಿತು. ಸೃಷ್ಟಿಯ ವೈಚಿತ್ರವಿಲ್ಲಿ ನಿತ್ಯ ಹೊಸ ರೂಪು, ಹೊಸತಾನ… ನವಗಾನ, ಸರ್ವಋತು ವಸಂತ ಮೇಳವೆನಿಸಿತು. ದೇವರನಾಡು ಎನಿಸಿತು! ಆಹಾ!… ಅರಬ್ಬಿ ಸಮುದ್ರದ ಕೆನ್ನೀರಿನ ಮೈಸಿರಿ… ಭಟ್ಕಳ, ಹೊನ್ನಾವರ, ಉಡುಪಿ, ಕುಂದಾಪುರ, ಮಲ್ಪೆ, ಮರವಂತೆ, ಮಂಗಳೂರು… ಹೀಗೆ ಕಡಲ ಸುಂದರಿಯರ ತೋಳತೆಕ್ಕೆಯಲಿ ಕಂಗೊಳಿಸುವ ಸ್ಥಳ ನಾಮಗಳು ಸೌಂದರ್ಯದ ಖಣಿಗಳಂತೆ ನನಗೆ ಕಂಡುಬಂದವು! ಇಲ್ಲೆಲ್ಲ ದೇವರ ಕಂಡೆ…
ಮುಂದುವರೆಯುವುದು