Home / ಕವನ / ಕವಿತೆ / ಜೇನು ನಾವು – ನೋವು ನಾವು…

ಜೇನು ನಾವು – ನೋವು ನಾವು…

ಜೇನು ನಾವು
ನೋವು ನಾವು
ಕೈಗೆ ಸಿಕ್ಕರೆ
ಒಸಗಿ ಹಾಕುವಿರೆಂಬಾ ಶಂಕೆ!
ಊದಿದಾ ಶಂಕು ಊದೂತ್ತಾ
ಗಿಳಿ ಪಾಠ ಒಪ್ಪಿಸುತ್ತಾ
ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ
ಏಳು ಕೆರೆ, ನೀರು ಕುಡಿದು
ಹೂವಿಂದಾ ಹೂವಿಗೇ ಹಾರಿ,
ನಿಮ್ಮ ಕಾಲ ಬಳಿ ಸಾರಿ,
ಮಕರಂದಾ ಹೀರಿ
ಜೇಡರದೀ…
ಪರಿಶ್ರಮದಿ…
ನಮ್ಮೀ ಜೀವನ!


ನಿತ್ಯ ದುಡಿಮೆ ಸದಾ ನೆಮ್ಮದಿ!
ದುರಾಸೆ ದುರುಳರೆ,
ನಮ್ಮ ಹುಟ್ಟಿಗೆ
ಕಲ್ಲು ಹೊಡೆವ ತುಡುಗರೆ,
ಶತ ಶತಮಾನದ ಸಿಹಿ ಸವಿ,
ಬಯಸಿ, ಬೊಗಸೆಗಟ್ಟಲೆ
ಜೇನು ಹೀರಿ ಹೀರಿ…
ರುಚಿ ಹತ್ತಿಸಿಕೊಂಡು,
ತೆವಲು ಹತ್ತಿಸಿಕೊಂಡು,
ಬೆನ್ನು ಅಟ್ಟಿಸಿಕೊಂಡು,
ಎಲ್ಲಿ ಅಡಗಿ ಕುಳಿತರೂ ಬಿಡದೆ,
ಹೊಡೆದಿರಿ
ಬಡೆದಿರಿ
ಭೋಗಿಸಿದಿರಿ
ಬಿಲ್ಲಿನಂತೆ ಬಗ್ಗಿಸಿದಿರಿ.


ನಿಮ್ಮೀತಾತ ಮುತ್ತಾತರು
ತುಪ್ಪಕ್ಕಾಗಿ ನಮ್ಮ ತೊತ್ತಾಗಿಸಿ,
ಹಗಲಿರುಳು ಗೇಯಿಸಿಕೊಂಡು
ಕದ್ದು ಕದ್ದು ಕೇಯಿಸಿಕೊಂಡು,
ಕೊಬ್ಬಿದಾ ಕುಣಿಗಲ್ ಕುದುರೆಗಳು ಕೆನೆಯುತ್ತೀರಿ,
ಕತ್ತಿ ಮಸೆಯುತ್ತೀರಿ,
ಅಟ್ಟಹಾಸದಿ ಕಿಸೆಯುತ್ತೀರಿ!
ಹಸಿ ಹಸಿ ರಕ್ತ ಹೀರುತ್ತೀರಿ
ಹದದ ಚರ್‍ಮಾ ಸುಖಕ್ಕಾಗಿ
ಜೊಲ್ಲು ಸುರಿಸುತ್ತೀರಿ!
ನಮ್ಮ ಹುಟ್ಟು ನಿಮಗೆ
ಶತ ಶತಮಾನದ ಪರಿತಾಪ
ಜನ್ಮ ಜನ್ಮಾದ ಶಾಪ!
ನಿತ್ಯ ದೀಪ ಉರಿ ಉರಿದು
ಬೆಳಕ ತಾ ಸುಟ್ಟು ನೀಡುವಂತೆ,
ನಮ್ಮೀ ಸಿಹಿ ಸಿಹಿ ಸವಿ ನಿಮಗೆ
ಎಂದೂ ತಪ್ಪದ ತುಪ್ಪ ನಿಮಗೆ!


ಅಯ್ಯೋ! ಹೆಪ್ಪಿಟ್ಟಿತು ರಕ್ತ
ತೃಪ್ತಿ ಪಡಿಸಲು ನಾವೇ ಶಕ್ತ
ಇಷ್ಟಾದರೂ ಬಹಿಷ್ಕಾರ, ಕೊಲ್ಲುವುದು, ಏಕೆ?!
ಬೆಂಕಿಯಿಟ್ಟು ನಮ್ಮನು
ಹೊಗೆಯೆಬ್ಬಿಸಿ
ಒಕ್ಕಲೆಬ್ಬಿಸಿ
ದಿಕ್ಕಾಪಾಲಾಗಿಸಿದ್ದು ಸುಮ್ಮನೆ!
ನಿಮ್ಮ ವಕ್ರ ಬುದ್ಧಿ ಬಿಮ್ಮನೆ!!
ನಮ್ಮ ಪಾಲಿಗೆ, ಬರೀ ನೋವು
ಕಣ್ಣು ಕೆಂಡ ಸಂಪಿಗೆ, ನಿಗಿ ನಿಗಿ
ಕಡು ತಲೆ ತಾಪ, ಕೋಪ…


ಸಾಕು! ಸಾಕು… ನಿಮ್ಮೀ ಹುಚ್ಚು ಹುಚ್ಚಾಟ!
ಕೆರಳಿ ಸಿಂಹಾಗಿದ್ದೇವೆ-
ಖಂಡಿತ ನಾವೀಗ ಕಚ್ಚುವೆವು…
ಹುಚ್ಚರಂತೆ ನಿಮ್ಮ ಓಡಿಸದೆ ಬಿಡೆವು!!
ಇನ್ನಿಮ್ಮ ಹುಟ್ಟಾಡಗಿಸದೆ ಬಿಡೆವು.
ಎಚ್ಚರ…
ಬಲು ಎಚ್ಚರ…
*****
(ಸ್ಫೂರ್ತಿ: ೧೯೯೮ರಲ್ಲಿ ನನ್ನ ಕವಿಮಿತ್ರ, ಮೈಸೂರು ಲೋಕೇಶ್‌ನೊಂದಿಗೆ, ಯಾಣಕ್ಕೆ ಭೇಟಿ ಮಾಡಿದ ರಾತ್ರಿ, ತಂಗುದಾಣದಲ್ಲಿ ರಚಿಸಿ, ವಾಚಿಸಿದ ಕವಿತೆಯಿದು…)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...