Home / ಕಥೆ / ಸಣ್ಣ ಕಥೆ / ಮಾರನಾಯಕನ ವಧೆ

ಮಾರನಾಯಕನ ವಧೆ

ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟೆಯ ಸಮೀಪಕ್ಕೆ ಅವರು ಬಂದರು. ಅಲ್ಲಿ ಕರೆಕಟ್ಟೆಯ ಮೇಲೆ ಅವರು ಇರುತ್ತಿರಲು, ವೀರಶೈವ ಕುಲದ ಕೆಲವು ಹೆಂಗಸರು ನೀರಿಗಾಗಿ ಅಲ್ಲಿಗೆ ಬಂದಿದ್ದು ಮಾತನಾಡಿಕೊಳ್ಳುತ್ತಿತ್ತುದನ್ನು ಕಿವಿಗೊಟ್ಟು ಕೇಳಿದರು. ಅವರ ಮಾತುಗಳಿಂದ ಅವರ ಕುಲದಲ್ಲಿ ಹುಟ್ಟಿ, ಶ್ರೇಷ್ಠವೆನಿಸಿದ್ದ ಕನ್ನಿಕೆಯೊಬ್ಬಳು ನೀಚಕುಲದವನೊಬ್ಬನನ್ನು ಮದುವೆ ಮಾಡಿಕೊಳ್ಳುವ ಸಂದರ್ಭವೊದಗಿತ್ತೆಂದು ತಿಳಿಯ ಬಂತು. ಸೋದರರು ಕುತೂಹಲದಿಂದ ಏನೆಂದು ವಿವರವನ್ನು ಕೇಳಿದರು; ಆ ಹೆಂಗಸರನ್ನು ಸಮಾಧಾನ ಮಾಡಿ ತಾವು ಸಹಾಯ ಮಾಡುವುದಾಗಿ ಮಾತು ಕೊಟ್ಟರು. ಮಾಡಿದ ವಿಚಾರದಲ್ಲಿ ಈ ವಿವರವು ತಿಳಿಬಂದಿತು.

ಆ ಪ್ರದೇಶದ ಒಡೆಯನಿಗೆ ಚಿತ್ತಸ್ವಾಸ್ಥ್ಯ ತಪ್ಪಿತ್ತು; ಆತನಿಗೆ ಒಬ್ಬಳೇ ಮಗಳಿದ್ದಳು. ಈ ಸ್ಥಿತಿಯನ್ನು ಕಂಡು ನರೆಯಲ್ಲಿದ್ದ ಕಾರುಗಹಳ್ಳಿಯ ಪಾಳಯಗಾರನಾಗಿದ್ದ ಮಾರನಾಯಕನೆಂಬ ದೂತನು “ಆ ಕುಮಾರಿಯನ್ನು ನನಗೆ ವಿವಾಹಮಾಡಿಕೊಟ್ಟು ಹದನಾರನ್ನು ಬಿಟ್ಟು ಕೊಡಲಿ; ಇಲ್ಲವಾದರೆ ಯುದ್ಧಕ್ಕೆ ಸಿದ್ಧನಾಗಲಿ” ಎಂದು ಹೇಳಿಕಳುಹಿಸಿದ್ದನು. ಬೇರೆ ಗತಿಯಿಲ್ಲದ ಹದನಾರಿನವರು ವಿವಾಹಕ್ಕೆ ಸಮ್ಮತಿ ಕೊಟ್ಟಿದ್ದರು. ಹೀಗಿರಲು ವಿಜಯ ಕೃಷ್ಣರ ಉತ್ಸುಕತೆಯ ಮಾತು ತಿಳಿಯಿತು. ಆಗ ಅರಮನೆಯವರು ಅವಮಾನವನ್ನು ತಪ್ಪಿಸಿಕೊಳ್ಳುವ ಆಸೆಯಿಂದ ಆ ರಾಜಕುವರರನ್ನು ಕರೆಸಿ ಎಲ್ಲವನ್ನೂ ತಿಳಿಸಿದರು. ಸೋದರರಿಬ್ಬರು ಎಲ್ಲವನ್ನೂ ಅರಿತು ಕೋಟೆಯನ್ನು ರಕ್ಷಿಸಲು ಇದ್ದ ಅನುಕೂಲಗಳನ್ನೆಲ್ಲ ಪರೀಕ್ಷಿಸಿದರು ಕಡೆಗೆ ಹೊರಗಡೆ ಏನನ್ನೂ ತೋರ್ಪಡಿಸದೆ ವಿವಾಹದ ಕೆಲಸವನ್ನು ಎಂದಿನಂತೆ ನಡೆಸುವ ಹಾಗೆ ನಟಿಸುತ್ತಿರಬೇಕೆಂದು ಹೇಳಿಕೊಟ್ಟರು.

ವಿವಾಹದ ದಿನವು ಸಮೀಪವಾಯಿತು. ಮಾರನಾಯಕನ ಅಟ್ಟಹಾಸದಿಂದಲೂ ಗರ್ವದಿಂದ ಒಂದು ಅರಮನೆಯನ್ನು ಹೊಕ್ಕು, ಮದುವೆಯ ಔತಣಕ್ಕೆ ಸಿದ್ಧನಾದನು. ಮಾರನಾಯಕನೂ ಆತನ ಮುಖ್ಯಾಧಿಕಾರಿಗಳೂ ಒಂದು ತೊಟ್ಟಿಯಲ್ಲಿ ಊಟಕ್ಕೆ ಕುಳಿತರು. ಆತನ ಅನುಚರರಿಗೆ ಬೇರೊಂದು ತೊಟ್ಟಿಯಲ್ಲಿ ಅಣಿ ಮಾಡಿತ್ತು. ಅದೇ ವೇಳೆಯಲ್ಲಿ ಹದನಾರಿನ ಶೂರರನ್ನಾರಿಸಿಕೊಂಡು ಗೋಪ್ಯವಾಗಿ ಹೊಂಚುಹಾಕುತ್ತಿದ್ದ ವಿಜಯ ಕೃಷ್ಣರಿಬ್ಬರೂ ಒಳ್ಳೆ ಸಮಯ ಬಂದಕೂಡಲೆ ಅಕಸ್ಮಾತ್ತಾಗಿ ನುಗ್ಗಿ, ಮಾರನಾಯಕನ ಮೇಲೂ ಆತನ ಮುಖ್ಯಾಧಿಕಾರಿಗಳ ಮೇಲೂ ಹಾರಿಬಿದ್ದು ಇರಿದು ಕೊಂದುಬಿಟ್ಟರು. ಮಾರನಾಯಕನ ಇತರ ಅನುಚರರು ತಮ್ಮ ಧಣಿಯು ಹತನಾದುದನ್ನು ತಿಳಿದು ದಿಕ್ಕು ತೋಚದವರಾಗಿ ನಿರ್ಬಂಧಕ್ಕೆ ಸಿಕ್ಕಿದರು.

ಕೂಡಲೆ ವಿಜಯ ಕೃಷ್ಣರಿಬ್ಬರು ಹದನಾರಿನ ಸೈನ್ಯವನ್ನು ಸಿದ್ದಮಾಡಿಕೊಂಡು ಕಾರುಗಹಳ್ಳಿಯ ಕಡೆಗೆ ಹೊರಟು ಸುಲಭವಾಗಿ ಆ ಕೋಟೆಯನ್ನು ಹಿಡಿದುಕೊಂಡರು. ಏಕೆಂದರೆ ಅಲ್ಲಿದ್ದವರು ಹಟಾತ್ತಾಗಿ ಬಂದೊದಗಿದ ಈ ವಿಪತ್ತನ್ನು ಎದುರಿಸಲಾರದಿದ್ದುದಲ್ಲದೆ ಮಾರನಾಯಕನು ಮೃತನಾದನೆಂದು ತಿಳಿದು ಖಿನ್ನರಾಗಿದ್ದರು. ಕಾರುಗಹಳ್ಳಿಯನ್ನು ವಶಪಡಿಸಿಕೊಂಡ ಕೂಡಲೆ ರಾಜಕುವರರಿಬ್ಬರೂ ಹದನಾರಿಗೆ ಹಿಂತಿರುಗಿದರು. ಅಲ್ಲಿಯ ರಾಜಕುಮಾರಿಯು ಸಂತೋಷದಿಂದ ವಿಜಯನ ಕೊರಳಿಗೆ ಹೂಮಾಲೆಯನ್ನು ಹಾಕಿ ವರಿಸಿ ಮದುವೆಯಾದಳು. ಈ ವಿಜಯನೇ ಒಡೆಯರ ವಂಶದ ಮೂಲಪುರುಷನಾದ ಯದುಒಡೆಯರು.
*****
[ಮಿಲ್ಕ್ಸ್ ಸಾಹೇಬಕ ಗ್ರಂಥದಾಧಾರ; ಈ ವೃತ್ತಾಂತದಲ್ಲಿ ವಂಶರತ್ನಾಕರ, ವಂಶಾವಳಿಗಳಿಗಿಂತಲೂ ವಿಲ್ಕ್ಸ್ ರವರ ಲೇಖನದಲ್ಲಿಯೇ ಹೆಚ್ಚು ಸತ್ಯಾಂಶವಿರಬಹುದನ್ನುವುದಕ್ಕೆ ಕಾರಣವುಂಟು. ಇದರ ವಿಮರ್ಶೆಗೆ ಹೊಸ ಗೆಜೆಟಿಯರ್ ೨ನೇ ಸಂಪುಟದ ಕಡೆಯ ಭಾಗವು ಉಪಯುಕ್ತವಾದುದು.]

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...