Home / ಕವನ / ಅನುವಾದ / ಸರ್‍ಕಸ್ ಕಂಪೆನಿ ಮುಚ್ಚಿದ್ದು

ಸರ್‍ಕಸ್ ಕಂಪೆನಿ ಮುಚ್ಚಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕವನಕ್ಕೆ ವಸ್ತು ಸಿಗಲಿಲ್ಲ, ವ್ಯರ್‍ಥ ಪ್ರಯತ್ನಿಸಿದ್ದೆಲ್ಲ
ಪ್ರತಿದಿನ ಪರದಾಟ, ಆರುವಾರ ಕಳೆದರೂ ಇಲ್ಲ,
ಶಾಂತನಾಗುವುದೆ ಉತ್ತಮ ಮುದುಕ ಅಲ್ಲಿಗೆ;
ವಯಸ್ಸಾಗುವ ಮುಂಚೆ ಪ್ರತಿ ಚಳಿಗಾಲ ಬೇಸಿಗೆ
ಆಟಕ್ಕಿದ್ದವು ನನ್ನ ಸರ್‍ಕಸ್ ಪ್ರಾಣಿಗಳೆಲ್ಲ
ಮೆಟ್ಟುಗಾಲನ್ನು ಕಟ್ಟಿಕೊಂಡ ಆ ಹುಡುಗರು,
ಕಣ್ಣು ಕುಕ್ಕುವ ಹಾಗೆ ಥಳಥಳಿಸುತ್ತಿದ್ದ ರಥ,
ಸಿಂಹಗಳು ಹೆಣ್ಣುಗಳು ಏನೆಲ್ಲ, ಎಲ್ಲ ಆ ದೇವರೇ ಬಲ್ಲ.

ಇನ್ನೇನಿದೆ ಹೊರಡುವುದೆ ಹಳೆವಸ್ತುಗಳ ಸ್ಮರಣೆಗೆ:
ಮೂಗುದಾರಕ್ಕೆ ಸಿಕ್ಕು ಮೂರುಮೋಹಕ ದ್ವೀಪಗಳಲ್ಲಿ
ವ್ಯರ್‍ಥ ಹರ್‍ಷ, ವ್ಯರ್‍ಥಯುದ್ಧ ವ್ಯರ್‍ಥ ಶಾಂತಿಗಳ
ರೂಪಕ ಸ್ವಪ್ನಗಳಲ್ಲಿ ನಡೆದ ಕಡಲ ಸವಾರ
ಉಷೀನ್ ಬರುತ್ತಾನೆ ಎಲ್ಲಕ್ಕೂ ಮೊದಲಲ್ಲಿ
ಕಹಿಯುಂಡ ಹೃದಯ ಆಯ್ದಂಥ ವಸ್ತುಗಳು,
ಗತಯುಗದ ಗೀತಕ್ಕೆ, ಆಸ್ಥಾನದಬ್ಬರಕ್ಕೆ ಹೇಳಿಸಿದ ವಿಷಯಗಳು.
ಅವನನ್ನಲೆಸಿದ ನಾನೇ ಎಷ್ಟು ಬೆಲೆ ಕೊಟ್ಟಿದ್ದೆ ಅವನ ಕಷ್ಟಕ್ಕೆ?
ಅವನ ಕನಸಿನ ಕನ್ನೆಯನ್ನು ನಾನೇ ಬಯಸಿ ಕಂಗಾಲಾಗಿದ್ದೆ.

ಮುಂದೆ ಆಟಕ್ಕಿಳಿದದ್ದು ಅದರ ವಿರೋಧೀ ಸತ್ಯ:
ನಾ ಕೊಟ್ಟ ಹೆಸರು ಕ್ಯಾಥಲೀನಿನ ರಾಣಿ, ಆ ಹೆಣ್ಣ ಚಿತ್ತ
ಮರುಕಕ್ಕೆ ತುತ್ತಾಗಿ, ತೆತ್ತುಕೊಂಡರೆ ತನ್ನಾತ್ಮವನ್ನೇ ಹುಚ್ಚಿಗೆ,
ಇಳಿದು ಬಂದಿತು ಸ್ವರ್‍ಗ ಅವಳನ್ನು ರಕ್ಷಿಸಲು ಪ್ರದರ್‍ಶಿಸುತ ಮೆಚ್ಚಿಗೆ.
ಆತ್ಮನಾಶದ ಕಡೆಗೆ ಸಾಗಿದ್ದಾಳೆ ಪ್ರಿಯ ಎಂದೇ ಅನಿಸಿತ್ತು.
ಮತ ಭ್ರಾಂತಿ ದ್ವೇಷಕ್ಕೆ ಸಿಕ್ಕು ಅವಳಾತ್ಮ ತುತ್ತಾಗಿ ಹೋಗಿತ್ತು.
ಮುಂದೆ ಹೊಸ ಕನಸೊಂದಕ್ಕೆ ಇದೇ ಎಡೆಮಾಡಿತು.
ನನ್ನ ಚಿಂತನೆ ಒಲವು ಅದಕ್ಕೇ ಮುಡಿಪಾಯಿತು.

ಆ ಮೂರ್‍ಖ ಕುರುಡರು ರೊಟ್ಟಿ ಕದ್ದಾಗ
ಅದಮ್ಯ ಸಾಗರದ ಜೊತೆ ಕುಹುಲೇನ್ ಹೋರಾಡಿದ.
ಹೃದಯ ರಹಸ್ಯಗಳೇ ಅಲ್ಲಿ ಎಲ್ಲೆಡೆಗೂ, ಆದರೂ
ಮರುಳುಮಾಡಿದ್ದು ಕನಸೇ ನನ್ನನ್ನು ಕಡೆಗೂ:
ಕೃತಿಯಿಂದ ಮುಕ್ತವಾದಂಥ ಪಾತ್ರಗಳೇ
ಪ್ರಸ್ತುತವನ್ನು ತುಂಬ ಸ್ಮೃತಿಯನ್ನು ಆಳಿದ್ದು.
ಬಣ್ಣದ ವೇದಿಕೆ, ನಟರೇ ನನ್ನೊಲವ ಗಳಿಸಿದ್ದು,
ಆಟ ಸಂಕೇತಿಸಿದ ವಿಷಯವಲ್ಲ.

ಸರ್‍ವ ಸ್ವತಂತ್ರ ಆ ಪರಿಪೂರ್‍ಣ ಪ್ರತಿಮೆಗಳು
ಪರಿಶುದ್ಧ ಮನದಲ್ಲಿ ಬೆಳೆದರೂ ಮೊದಲಲ್ಲಿ ಎಲ್ಲಿಂದ ಮೊಳೆತವು?
ಎಸೆದ ‘ಬಿಸಾಕು’ಗಳ ತಿಪ್ಪೆ, ರಸ್ತೆಯ ಕಸದ ಗುಪ್ಪೆ,
ಹಳೆಸೀಸ, ಹಳೆಕೆಟಲು, ಸುಲಿದ ಬಾಳೆಯ ಸಿಪ್ಪೆ,
ಹಳೆಜಂಕು, ಮೂಳೆ ಕೊಳೆಚಿಂದಿ, ಮುರುಕಲು ಗೊಂಬೆ,
ಅಂಗಡಿಗಲ್ಲಕ್ಕೆ ಕೂತು ಕೂಗುವ ಗಲ್ಲಿಯ ರಂಭೆ,
ಈಗ ಏಣಿಯೆ ಇಲ್ಲ, ಕೆಳಗೆ ಮಲಗುವುದಷ್ಟೆ ಎಲ್ಲ ಏಣಿಗಳು ಶುರುವಾಗುವಲ್ಲಿ
ಚಿಂದಿ, ಮೂಳೆಗಳು ತುಂಬಿರುವ ಹೃದಯದ ಕೊಳೆ ಕಿರಾಣಿಯಂಗಡಿಯಲ್ಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...