Home / ಲೇಖನ / ಇತರೆ / ಕೊಳಕರ್ಯಾರು

ಕೊಳಕರ್ಯಾರು

ಚಿತ್ರ: ಗರ್ಡ್ ಆಲ್ಟಮನ್
ಚಿತ್ರ: ಗರ್ಡ್ ಆಲ್ಟಮನ್

ಪ್ರಿಯ ಸಖಿ,
ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು ವಿಶಾಲವಾಗಿ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ತನ್ನಪ್ಪನೊಡನೆ ಬಸ್ಸು ಹತ್ತಿ ಬಂದ ೧೦-೧೨ ವರ್ಷದ ಹಳ್ಳಿ ಹುಡುಗ ತನ್ನಪ್ಪ ಕೂತ ಜಾಗದಲ್ಲಿ ಸ್ಥಳವಿರದೇ ಇವಳ ಪಕ್ಕದಲ್ಲಿ ಕೂತಾಗ ಇವಳು ಮನಸ್ಸಿನಲ್ಲೇ ಸಿಡಿಮಿಡಿಗುಟ್ಟುತ್ತಲೇ ಬದಿಗೆ ಸರಿದು ಕುಳಿತುಕೊಳ್ಳುತ್ತಾಳೆ. ಆ ಹುಡುಗನ ಕೊಳೆಯಾದ ಬಟ್ಟೆಗಳು, ಹರಳೆಣ್ಣೆ ಮೆತ್ತಿದ ತಲೆ, ಗಲೀಜು ಚೀಲಗಳನ್ನು ಕಂಡು ಮತ್ತಷ್ಟು ಮುದುಡಿ ಆ ಹುಡುಗನಿಗೆ ತಾಕದಂತೆ ಕುಳಿತುಕೊಳ್ಳುತ್ತಾಳೆ. ಬಸ್ಸುಸಾಗಿದಂತೆಲ್ಲಾ ತನ್ನ ಬ್ಯಾಗಿನಿಂದ ಬಿಸ್ಕತ್ತು. ಹಣ್ಣು, ಕುರಕಲನ್ನು ತಾನೊಬ್ಬಳೇ ನಿಧಾನಕ್ಕೆ ಮೇಯುತ್ತಾಳೆ. ಪಕ್ಕದಲ್ಲಿದ್ದ ಹುಡುಗನ ಆಸೆಗಣ್ಣನ್ನು ಕಂಡೇ ಇಲ್ಲವೆಂಬಂತೆ ಕಿಟಕಿಗೆ ಮುಖಮಾಡಿ ಕುಳಿತುಕೊಳ್ಳುತ್ತಾಳೆ. ಬಸ್ಸಿನ ವೇಗಕ್ಕೋ, ವಯೋ ಸಹಜವಾಗಿಯೋ ಹುಡುಗನಿಗೆ ಈಗ ತೂಕಡಿಕೆ ಪ್ರಾರಂಭವಾಗಿದೆ. ಇವಳು ಎಷ್ಟೇ ಬದಿಗೆ ಸರಿದು ಕುಳಿತುಕೊಳ್ಳುತ್ತಿದ್ದರೂ ಹುಡುಗ ಅವಳ ತೋಳಿನ ಮೇಲೆ ತನಗರಿವಿಲ್ಲದೇ ವರಗುತ್ತಿದ್ದಾನೆ. ಹುಡುಗನ ಎಣ್ಣೆ ತಲೆ ತನ್ನ ಬಟ್ಟೆಯನ್ನೆಲ್ಲಾ ಗಲೀಜು ಮಾಡುತ್ತಿದೆಯಲ್ಲಾ ಎಂದವಳಗೆ ಕೋಪ, ಸಿಡಿಮಿಡಿ. ಕೆಲಬಾರಿ ಅವನ ತಲೆಯನ್ನು ಪಕ್ಕಕ್ಕೆ ನೂಕಿದರೂ ಆ ಕ್ಷಣಕ್ಕೆ ಹುಡುಗ ನೆಟ್ಟಗೆ ಕುಳಿತರೂ ಮತ್ತೆ ಇವಳ ಮೇಲೇ ತೂಕಡಿಸುತ್ತಾನೆ!

ಈ ಫಜೀತಿಯೇ ಬೇಡ ಎಂದುಕೊಂಡವಳು ಮುಂದೆ ಯಾವುದೋ ಊರಿನಲ್ಲಿ ಮುಂದಿನ ಸೀಟು ಖಾಲಿಯಾದಾಗ ಎದ್ದು ಮುಂದಿನ ಸೀಟಿಗೆ ಹೋಗಿ ಕುಳಿತು ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾಳೆ. ಕಿಟಕಿಯಿಂದ ದೃಷ್ಟಿ ಹಾಯಿಸಿ ಕುಳಿತವಳಿಗೆ ಪಕ್ಕದಲ್ಲೇ ಅಕ್ಕ ಎಂಬ ಧ್ವನಿ ಕೇಳಿದಾಗ ಆ ಕೊಳಕ ಇಲ್ಲಿಗೂ ಬಂದನೇ ಎಂದು ನಿದ್ದೆ ಬಂದವಳಂತೆ ಗಟ್ಟಿಯಾಗಿ ಕಣ್ಣು ಮುಚ್ಚುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಇವಳ ಕೈಯನ್ನು ಅಲುಗಿಸಿದ್ದರ ಅರಿವಾಗಿ ಮೈಯಿಡೀ ಉರಿದಂತಾಗಿ ಕೋಪದಿಂದ ಕೆಂಗಣ್ಣು ಮಾಡಿ, ಬೈಯಲು ಬಾಯಿ ತೆರೆಯುವಷ್ಟರಲ್ಲಿ ಹುಡುಗನ ಕೈಯಲ್ಲಿ ತನ್ನ ಪರ್ಸನ್ನು ಕಂಡು ತಣ್ಣಗಾಗುತ್ತಾಳೆ.

ಹುಡುಗ ಅವಳ ಕೈಗೆ ಪರ್ಸು ನೀಡಿ, ನಿಮ್ಮ ಬ್ಯಾಗಿಂದ ಕೆಳಗೆ ಬಿದ್ದಿತ್ತೇನೋ ಅಕ್ಕ ತಗೊಳ್ಳಿ ಎಂದಾಗ ಪರ್ಸು ತೆಗೆದುಕೊಳ್ಳಲು ಹೋದ ಇವಳ ಕೈ ನಡುಗುತ್ತದೆ.

ನಾಚಿಕೆಯಿಂದ ತಲೆ ಎತ್ತಲೂ ಸಾಧ್ಯವಾಗುವುದಿಲ್ಲ. ಪರ್ಸು ತೆಗೆದು ನೋಡಿದವಳಿಗೆ ನೂರರ ನೋಟುಗಳು ತಣ್ಣಗೆ ಮಲಗಿರುವುದು ಕಂಡಾಗ ಸಮಾಧಾನವಾದರೂ ಎದೆಯೊಳಗೆಲ್ಲಾ ಏನೋ ಕಸಿವಿಸಿ, ಸಂಕಟ. ಆ ಕೊಳಕು ಹುಡುಗ ತನ್ನ ಪ್ರಾಮಾಣಿಕತೆಯಿಂದ ಎತ್ತರೆತ್ತರಕ್ಕೆ ಏರಿ ನಿಂತಂತೆ. ತಾನು ಅವನ ಬಾಹ್ಯ ಕೊಳಕನ್ನು ಕೆಲಹೊತ್ತು ಸಹಿಸಲಾಗದೇ ಕುಬ್ಜಳಾಗುತ್ತಾ ಹೋಗಿ ಅವನ ಕಾಲಕಸವಾದಂತೆ. ಮನಃಪಟಲದಲ್ಲಿ ಚಿತ್ರ ಮೂಡಿಬಂದಾಗ, ಅವನಿಗೆ ಥ್ಯಾಂಕ್ಸ್ ಹೇಳಲೂ ತಾನು ಅರ್ಹಳಲ್ಲ ಎನ್ನಿಸಿ ಪಶ್ಚಾತ್ತಾಪದಿಂದ ತಲೆತಗ್ಗಿಸುತ್ತಾಳೆ. ಸಖಿ, ಕೊಳಕರ್ಯಾರು? ಎಂದು ತಿಳಿಯಲಿಲ್ಲವೇ? ಬಾಹ್ಯದಲ್ಲಿ ಎಷ್ಟೇ ಸ್ವಚ್ಚವಾಗಿದ್ದರೂ ಇಂತಹ ಅಂತರಂಗದ ಕೊಳಕುಗಳಿದ್ದಾಗ ವ್ಯಕ್ತಿ ಕುಬ್ಜನಾಗಿಬಿಡುವುದು ಸಹಜ ತಾನೇ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...