ಹೇಗೆ ತಿಳಿವೆ ನೀ ಹೇಳೆ ಸಖೀ
ಒಲಿದ ನನ್ನ ಪಾಡು?
ಲೋಕದ ಕಣ್ಣಿಗೆ ನನ್ನೀ ಪ್ರೇಮ
ಶ್ರುತಿಮೀರಿದ ಹಾಡು
ಹಿರಿಯರ ಮೀರಿ ಕೃಷ್ಣನ ಕಂಡೆ
ಕೊಟ್ಟೆ ಬೆಣ್ಣೆ ಹಾಲು
ಸವಿದನು ಎಲ್ಲ ನುಡಿಸಿದ ಕೊಳಲ
ಜುಮ್ಮೆಂದಿತು ಕಾಡು
ಒಂದೇ ಸಮನೆ ಹಳಿವರು ಹಿರಿಯರು
ಪ್ರಾಯದ ಮದ ಎಂದು
ಗಡಿ ಮಡಿ ಲಜ್ಜೆಯ ಹಂಗೇ ಇರದ
ನಡತೆಗೇಡಿ ಎಂದು
ಮಡಿಗಳ ಮೀರದ ಆ ಮೋಹನನ
ಕಾಣಬಹುದು ಹೇಗೆ?
ಗಡಿಗಳ ದಾಟದೆ ನದಿ ಸಾಗರವನು
ಕೂಡಬಹುದು ಹೇಗೆ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.