Home / ಕವನ / ಕವಿತೆ / ಹಾಡಬೇಕು

ಹಾಡಬೇಕು

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು
ಮನಸಿನ ಮೂಸೆಯ ಭಾವದ ಕುದಿಗಳು
ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ||

ಅಂತರಂಗದಲಿ ರಿಂಗಣಗುಣಿಯುತ
ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು
ಒಳ ತಲ್ಲಣಗಳ ಪಲ್ಲವಿ ನರಳುತ
ಹೂವು ಅರಳಬೇಕು ಸುಗಂಧ ಸುತ್ತ ಹರಡಬೇಕು        ||೧||

ಎಲ್ಲ ದಿಕ್ಕುಗಳ ಎಲೆ ಕಡ್ಡಿಗಳನು
ತಂದು ಹೆಣೆಯಬೇಕು ಕನಸಿನ ಗೂಡು ಕಟ್ಟಬೇಕು
ಆಶೆಯ ಮರಿಗಳ ಹಸಿವು ನೋವುಗಳ
ಅಳುವು ನಿಲ್ಲಬೇಕು ನಗುವಿನ ಹಕ್ಕಿ ಹಾಡಬೇಕು          ||೨||

ಛಿದ್ರ ಭಿದ್ರ ತುಂಡುಗಳ ಜೋಡಿಸುತ
ಕನ್ನಡಿ ನಗಬೇಕು ತಿಳಿವಿನ ಬಿಂಬ ಕಾಣಬೇಕು
ಸಂದು ಗೊಂದುಗಳ ಕಂದಕ ಸೆರೆಗಳ
ತೂರಿ ಚಿಮ್ಮಬೇಕು ಹಾಡಿನ ಹೊಳೆಯು ಹೊಮ್ಮಬೇಕು  ||೩||

ಹರಿದು ಕೊಳೆಯುವೀ ಎಳೆಗಳ ಕಲೆಸುತ
ಬಟ್ಟೆ ನೇಯಬೇಕು ಬಾಳಿಗೆ ಬಟ್ಟೆದೋರಬೇಕು
ಗೊಬ್ಬರ ಕೊಳೆಗಳ ಈ ನೆಲದಿಂದಲೆ
ಗಿಡವು ಮೂಡಬೇಕು ಜೀವನ ರಸಫಲ ಬಿಡಬೇಕು       ||೪||

ದಿನ ದಿನ ಸಾಗುವ ಸಂಜೆ ಬೆಳಗುಗಳ
ಬಣ್ಣ ಬಳಸಬೇಕು ಸಂಧ್ಯಾ ರಾಗ ಹರಿಯಬೇಕು
ಮುದಿ ಸಂಜೆಗೆ ಹಸುಗಂದನ ಎಳೆ ನಗೆ
ಬೆಸುಗೆಯಾಗಬೇಕು ಚೇತನ ಸೆಲೆಯು ಸದಾ ಬೇಕು    ||೫||

ಹೇಡಿತನದ ಹುಳು ಹತ್ತಿದ ಜೀವಕೆ
ಜೀವ ಸತ್ವ ಬೇಕು ಹಾಡಿನ ಶಕ್ತಿ ತುಂಬಬೇಕು
ದೇಶದ ಹೃದಯವು ದುಡಿಯುವ ಕೈಗಳ
ನಾಡಿ ಹಿಡಿಯಬೇಕು, ಜನಮನದಾಳ ಮಿಡಿಯಬೇಕು   ||೬||

ಕಣ್ಣೀರಿನ ಧಾರೆಗಳನು ಒರೆಸುವ
ಕೈಯಿದಾಗಬೇಕು ದುಡಿಯುವ ಕೈಗೆ ಬಾಗಬೇಕು
ಒಣಗಿದ ಮರುಭೂಮಿಗಳೆದೆಯೊಳಗಡೆ
ಒಲವು ಹರಿಯಬೇಕು ಹಿಗ್ಗಿನ ತೋಟವರಳಬೇಕು         ||೭||

ದುಷ್ಟ ಶಕ್ತಿಗಳ ಮುಳ್ಳುಕಳ್ಳಿಗಳ
ಕೊಚ್ಚಿ ಹಾಕಬೇಕು ಹಾಡಿದು ಕತ್ತಿಯಾಗಬೇಕು
ಮೋಸ ವಂಚನೆಯ ಸ್ವಾರ್ಥ ಚಿಂತನೆಯ
ಕಸವ ಸುಡಲು ಬೇಕು ಬೆಂಕಿಯು ಹಾಡಿದಾಗಬೇಕು       ||೮||

ದುರ್ಬಲರಿಗೆ ಬಲವೀಯುತ ಕೊಬ್ಬಿದ
ಖೂಳರೆದೆಗೆ ಬಾಣಾ ಸಾರ್ಥಕ ಹಾಡಿನ ಪರಿ ಕಾಣಾ
ದಿನ ದಿನ ಹೊಸ ಹೊಸ ಚೆಲುವನು ತಾಳುತ
ಹಾಡು ಕುಣಿಯಬೇಕು ಕಾಲದ ಹೆಜ್ಜೆ ಮೇಳಬೇಕು
*****************

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...