Home / ಕವನ / ಕವಿತೆ / ಸ್ನೇಹ-ಸಿಂಧು

ಸ್ನೇಹ-ಸಿಂಧು

ದೇವ ಹೃದಯದ ನೀಲದಾಳದಿ
ಮೊರೆವ ಸ್ನೇಹದ ಸಿಂಧುವೆ!
ಬೆಂದ ಬಾಳಿಗೆ ನೊಂದ ಜೀವಿಗೆ
ನೀನೆ ಸರುವರ ಬಂಧುವೆ!

ಇಳೆಯ ಕುದಿಯನು ಕಳೆಯಲೋಸುಗ
ಹಸಿರ ಸಿರಿಯನು ಹೊದಿಸಿದೆ
ಏಳು ಕಡಲುಗಳನ್ನೆ ಹರಿಯಿಸಿ
ಪ್ರಾಣಪವನವ ಸುತ್ತಿದೆ.
ಹಗಲಿನುರಿ ನಂದಿಸಲು ಸಂಧ್ಯಾ-
ಮೋಹ ಕಂಕಣ ಕಟ್ಟಿದೆ
ಇರುಳಿನೆದೆಯಲಿ ಚೆಲುವ ಚಂದ್ರನ
ಬಿಂಬವನ್ನೇ ಬಿತ್ತಿದೆ.

ಸೂರ್ಯ ಲೋಕದ ಸುತ್ತು ಭ್ರಮಿಸುವ
ನಿಖಿಲ ಗ್ರಹಗಳ ರತಿಯಲಿ
ಕಾಲಚಕ್ರದ ವಕ್ರಗತಿಯಲಿ
ಜನ್ಮ ಮರಣದ ಜೊತೆಯಲಿ
ದಿವ್ಯ ಪ್ರೀತಿಯ ಭವ್ಯ ಗೀತವ
ಮಿಡಿಡು ವಿಶ್ವವ ತುಂಬಿದೆ
ಪಂಚ ಭೂತಗಳನ್ನು ಬೆರೆಯಿಸಿ
ಬಣ್ಣದಾಟವ ನಾಡಿದೆ

ಚೆಲುವಿನಲಿ ಸೆಳೆ ಆಳಲಿನಲಿಯ-
ಕ್ಕರತೆ ನೆಲದಲಿ ಕಂಪನು
ಆಸೆಗನಸುಗಳರಳ ಹೃದಯದಿ
ಬೆಳೆದೆ ಇಹದಲಿ ಸಿರಿಯನು
ನಿನ್ನ ತೆರೆಗಳು ತಟ್ಟಿದೆಡೆಯಲಿ
ಸ್ವರ್ಗಲೋಕವು ಬೆಳೆವುದು
ನಿನ್ನ ಮೊಳಗೂ ಕೇಳದಾಕಡೆ
ನರಕಕಲ್ಲವೆ ನೆಲೆಯದು.

ನಿನ್ನ ದಂಡೆಯ ಉಸುಕಿನಿಂದಲೆ
ಗುಬ್ಬಿ ಗೂಡನು ಕಟ್ಟುತ
ಆಟವಾಡುತ ಮರೆತ ಕೆಲವರ
ಕರೆವೆ ತೆರೆ ಬೆರಳೆತ್ತುತ
ಕಣ್ಣ ಮಿಂಚಿನ ಬಲೆಯ ಬೀಸುತ
ಸೆಳೆವೆ ನಿನ್ನೆಡೆ ಹಲವರ.
ಸ್ವಪ್ನ ಸುಂದರ ಮಾಯೆಯಾಮಿಷ
ಹರಡಿ ನೀ ಸ್ನೇಹಾಕರ

ನೀ ಕೃಪಾಕರನೆಂದು ನಿನ್ನಡಿ
ಗೆರಗಿದವರನು ಮುರಿಯುವೆ
ನೀ ಕೃಪಾಣದ ಕೈಯನೆತ್ತುತ
ರುದ್ರರೂಪವ ತೋರುವೆ
ಯಾವ ಸಾಸಿಗ ನಿನ್ನ ನೀರೊಳು
ಧುಮುಕಿ ಸಿರಿಯನು ಜರೆವನು
ನಿನ್ನದೊಂದೇ ಹನಿಯನಾಶಿಸಿ
ಶಾಂತಿ ಸುಖವನು ತೊರೆವನು.

ನಿನ್ನ ಕರೆಯನು ಕೇಳಿದವರಿಗೆ
ಎಲ್ಲಿ ಬಿಡುಗಡೆ ಇರುವುದು
ನಿನ್ನ ಸುಡುವುರಿ ಮಡಲಿನಲಿ
ಒಡಲೆಲ್ಲಿ ತಂಪನು ಪಡೆವುದು.
ನಿನ್ನ ಮಡಿಲಲಿ ಆಡ ಬಂದೆನು
ಲೀಲೆಯಲಿ ಕುಣಿದಾಡಲು
ತಿಳಿಯದೆಯೆ ನಾ ಬೆಂದು ಹೋದೆನು
ಕನಸಿನಾಳಿಕೆ ಮುಗಿಯಲು

ನನ್ನ ಆಸೆಯ ಭವ್ಯ ಮಂದಿರ
ಶೂನ್ಯದಲಿ ಮರೆಯಾಯಿತು
ಮನದ ಬಾಂದಳದಲ್ಲಿ ಮಿನುಗಿದ
ಚಂದ್ರ ದೀಪವು ಆರಿತು.
ರಮ್ಯ ಭಾವದ ಸುಮನ ಪಲ್ಲವ
ಬಾಡೆ ಎದೆ ಕೊರಡಾಯಿತು
ಪಾರಿಜಾತದ ಮೃದುಲ ಹಾಸುಗೆ
ಶರಗಳಾಸನವಾಯಿತು.

ಸ್ವಪ್ನ ಸುಂದರವಾದ ಸುಖಮಯ
ಸುಲಭ ಜೀವನ ಮುಗಿಯಿತು
ನಿಜದ ಕಲ್ಲೆದೆ ಕೊರೆದು ಹರಿಯುವ
ಸತ್ವ ಸಮಯವು ಬಂದಿತು.
ನಿನ್ನ ಆಸರೆಯಲ್ಲಿ ನಿಂದಿಹ
ಬಾಳ ಬಗೆಯನು ಅರಿತೆನು
ಮುರಿನ ಕೈಯೇ ಅಭಯ ಕರವೆಂ-
ಬುದರೆ ಪರಿಯನು ತಿಳಿದೆನು.

ಬೆನ್ಗೆ ನಿನ್ನಯ ಭೀಮರಕ್ಷೆಯ
ಕಟ್ಟಿಿಕೊಂಡಿಹ ಧೀರರು
ಶಿಲುಬೆಯನು ನಗುನಗುತಲೇ-
ರಿದರತುಲ ತ್ಯಾಗದ ವೀರರು.
ನಂಜುನುಂಗಿದ ಒಡಲಿಗಿಳಿಯಿತು
ಅಮೃತ ಸತ್ವದ ಶಾಂತಿಯು
ಉರಿಗೆ ಧುಮುಕಿದರೇನು ದೊರೆಯಿತು
ಚಂದ್ರಶೀತಲ ಪ್ರೀತಿಯು

ಆದರೆನ್ನೆದೆಯಲ್ಲಿ ಭೀತಿಯು
ನೆರಳ ಚಾಚುತಲಿರುವುದು
ಕಣ್ಗೆ ಮಂಕನು ಕವಿದು ಹೃದಯದ
ಕಸುವ ಕೀಳುತಲಿರುವುದು.
ಏತಕಿನ್ನೂ ಹೃದಯ ತಳದಲಿ
ಹಗೆಯ ಹಾವವಿತಿರುವುದು
ಹೆಡೆಯ ಹರಡುತ ಬಾಳಿನಲಿ ನಂ-
ಜೇಕೆ ಚಿಮ್ಮುತಲಿರುವುದು.

ಹೃದಯವೆಲ್ಲಾ ನಿನ್ನೆ ಕರುಣೆಯ
ಕಿರಣಕಾಶಿಸಿ ಕಾಯ್ದಿದೆ
ಯಾವ ದೈವವು ನಮ್ಮ ಮಧ್ಯದಿ
ಮೇಘ ಜವನಿಕೆಯೆಳೆದಿದೆ.
ಯಾರು ಕೆಡುಕಿನ ಬೀಜ ಗಾಳಿಗೆ
ತೂರಿ ಎಲ್ಲೆಡೆ ಬೆಳೆದರು
ಹಗೆಯ ಕಾಡಿನ ವಿಷದ ವಲಯವ
ನಾಡು ಬೀಡಿಗೆ ಬಿಗಿದರು.

ದಿನವು ಚಿಮ್ಮುವ ಕೊಲೆಯ ರಕ್ತವು
ಹೇಗೆ ನನ್ನೆದೆ ತಟ್ಟಿತು
ಜಗದ ಪಾಪದ ಭೂತ ನೃತ್ಯವು
ಮನದ ರಂಗಕ್ಕಿಳಿಯಿತು.
ಯಾರ ಕರ್ಮವು ಬೆಳೆದ ಕಟುಫಲ
ನನ್ನ ಬಾಯಲಿ ಬಿದ್ದಿತು
ಅದರ ಕಹಿ ಯೊಡಲನ್ನು ತುಂಬಿರೆ
ಹರಣ ಕಸಿವಿಸಿ ಗೊಂಡಿತು.

ಯಾರು ಈ ಕಹಿ ಕಳೆವರೆನ್ನಯ
ಕೊಳೆಯನ್ನೆಲ್ಲಾ ತೊಳೆವರು
ಲೋಕವೆಲ್ಲಾ ತುಂಬಿ ಉಳಿದಿಹ
ಪಾಪವನು ಉರಿಗಿಡುವರು
ಪಾಪನಾಶನ ಗಂಗೆಯಲಿ ಇ-
ಕ್ಕೆಲದಿ ಕೊಳೆಯೇ ತುಂಬಿದೆ
ಸಪ್ತಸಾಗರದಂತರಂಗದಿ
ಕೊಲೆಯ ಜಾಲವು ಹರಡಿದೆ.

ಇನ್ನು ನೀನೇ ಶರಣು ಪತಿತಗೆ
ಯಾರು ಎತ್ತುವರನ್ಯರು
ನಿನ್ನ ಕರೆಯನು ಕೇಳಿ ನಿನ್ನೆಡೆ
ಓಡಿಬರುವರೆ ಧನ್ಯರು
ಏಳು ಸ್ನೇಹನೆ ಅರಳು ನಂದಾ-
ದೀಪವಾಗೆನ್ನೆದೆಯಲಿ
ನಿನ್ನ ಸಾಗರ ಘೋಷವೇಳಲಿ
ನನ್ನ ತನುಮನ ಕೆಣಕಲಿ.

ಕ್ಲೈಬ್ಯ ತೊಲಗಲಿ ಭೀತಿಯೋಡಲಿ
ಕೀಳು ಎಣಿಕೆಗಳಳಿಯಲಿ
ನಿನ್ನ ನಂಬಿದ ನನ್ನ ನೌಕೆಯು
ನಿನ್ನ ನೀರಲಿ ಧುಮುಕಲಿ
ಮತ್ತೆ ಬೇರೆಡೆ ಸುಖದ ಜೀವನ
ದೊರೆತರೂ ನಾನೊಲ್ಲೆನು
ಇಲ್ಲಿ ನಿನ್ನೆಡೆಯಲ್ಲಿ ಸಾವಿನ
ಸಖ್ಯ ಬೆಳೆಸಲು ಸಿದ್ಧನು.

ನಿನ್ನ ಸ್ಪರ್ಶವು ರೋಮ ರೋಮದಿ
ಸ್ನೇಹವಲ್ಲಿಯ ಚಿಗಿಸಲಿ
ನಿನ್ನ ಕರುಣಾ ದೃಷ್ಟಿ ಹೃದಯದ
ಅಮೃತ ಸೃಷ್ಟಿಯ ತೆರೆಯಲಿ
ದಿಗ್‌ದಿಗಂತದಿ ಮುತ್ತು ಹವಳದ
ವರ್ಣ ಸಂಪದ ಬೆಳೆಯಲಿ
ಬಾನು ನೆಲದಲಿ ಹರ್ಷಧವಲತೆ
ಜೊನ್ನದೊಲು ತುಳುಕಾಡಲಿ

ಸ್ನೇಹ ಸಿಂಧುವೆ, ನಿನ್ನ ಸ್ನೇಹಲ
ಲಹರಿಯಲಿ ಮುಳುಗೇಳಲು
ಶುದ್ಧ ಪಾವನ ತ್ಯಾಗ ಜೀವನ
ಸತ್ವವನು ಸವಿದೇಳಲು
ನನ್ನ ಬಾಳಿನ ಭಾವ ಬಳ್ಳಿಗೆ
ಆಶೆಯೊಂದೇ ಕೊನರಿದೆ
ನಿನ್ನನೊಳ ಹೊರಗೆಲ್ಲ ಕಡೆಗೂ
ತುಂಬಿಕೊಳ್ಳಲು ಎಳಸಿದೆ.
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...