Home / ಕಥೆ / ಸಣ್ಣ ಕಥೆ / ಕುಟೀರವಾಣಿ

ಕುಟೀರವಾಣಿ

ಪೀಠಿಕೆ

ನನ್ನ ಬಡಗುಡಿಸಲ ಹೆಸರು “ಆನಂದಕುಟೀರ”.

ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು. ಹೃದಯವು ನಿರಾಶೆಯಿಂದ ಬಿರಿಯುತಿತ್ತು. ಎಷ್ಟು ಆಸೆಗಳು! . . . ಎಷ್ಟು ಉದ್ಯಮ!! ಒಂದೂ ನೆರವೇರಲಿಲ್ಲವಲಾ!- ಎಂಬ ನೋವೊಂದು ಉಳಿದಿತ್ತು.

ಅಸೆಯೋ, ಆಕಾಶವನೇ ಆವರಿಸುವಂತಹುದು!– ಕಡಲನೇ ಹೀರಿ ಕುಡಿಯುವಂತಹುದು!! ಶಕ್ತಿ ಮಾತ್ರ ಇಲ್ಲ! ಇದೆಂತಹ ವಿಚಿತ್ರ! ಇಷ್ಟು ದುರ್ಬಲದ ದೇಹದಲಿ ಅದೆನಿತು ಪ್ರಬಲದಾಸೆಗಳು!

ನಿರಾಶೆ-ಬೇಸರ ಎಲ್ಲ, ಕುಟೀರದ-ಆನಂದಕುಟೀರದ-ಒಳಗೆ. ಕಿಟಕಿಯ ಹೊರಗೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಆಸೆ ಭರವಸೆಗಳೇ ಕಣ್ಣನು ಒತ್ತುತಿವೆ! ಕಿವಿಯಲಿಳಿಯುತಿವೆ!

ದೂರದ ಕಡಲತೀರದಿಂದ, ಅಲೆಯ ಫೋಷೆ ಅವಿಚ್ಛಿನ್ನವಾಗಿ ಭರವಸೆಯ ಸಂದೇಶವನು ಬೀರುತಿದೆ.

ಅದೋ ಆ ಮರ, ಈ ಗಿಡ, ಅಲ್ಲಿರುವ ಬಳ್ಳಿ, ಇಲ್ಲಿ ಕಾಣುವ ಪೊದೆ ಪ್ರತಿಯೊಂದರಲೂ ಉಕ್ಕುತಿದೆ ಆಸೆ! ತೋರುತಿದೆ ಚಿಗುರಿ ಹೂಬಿಟ್ಟು ಹಣ್ಣಾಗುವ ಭರವಸೆ!

ಅದೋ ಆ ಹಸುರುಕ್ಕಿ ಹಬ್ಬಿರುವ ಪೊದೆಯಲೊಂದು ಪುಟ್ಟಹಕ್ಕಿ ಕುಳಿತು ಹಾಡುತಿದೆ. ಅದರ ಹೆಸರೇನೋ ನಾನರಿಯೆ. ನನಗೆ ಕಾಣುತಿರುವುದು ಅದರ ಬಣ್ಣ; ನನಗೆ ಕೇಳುತಿರುವುದು ಅದರ ಗಾನ. ಏನು ಸೊಗಸಿನ ಬಣ್ಣ! ಅದೆಷ್ಟು ತೆರನ ರಾಗ! ಒಂದು ಸಲ ಚಿಮ್ಮುವುದು ತಿಳಿನೀರ ಚಿಲುಮೆಯಂತೆ! ಒಂದು ಸಲ ಉರುಳುರುಳಿ ಹೊಮ್ಮುವುದು ಕಿರುಝರಿಯಂತೆ!! ಬಣ್ಣದ ಪುತ್ಥಳಿಯಲಿ ಗಾನದಮೃತ! ಅದರ ಕೋಮಲವಾದ ಕಂಠದಲಿ ಹುಟ್ಟಿ ಹರಿಯುತಿದೆ ಭರವಸೆ! ಆಹಾ! ಯಾರಿಗಾಗಿ ಈ ಗಾನಮಧು….?

ನಿರಾಶೆ ನಿರ್‍ನಾಮವಾಗಿ ಶಾಂತಿ ಮೊಳೆಯತೊಡಗಿತು.

“ಪಕ್ಷೀ, ನಿನ್ನ ಹೆಸರೇನು?” ಎಂದು ಕೇಳಿದೆ.

“ನಾನರಿಯೆ” ಎಂದು ಹಾಡಿತು ಹಕ್ಕಿ.

ಆಹಾ! ಹೆಸರಿಲ್ಲದ ಪಕ್ಷಿ! ಆದರೇನು? ಕಾಗೆಗೆ ಹೆಸರಿದೆ! ಗೂಗೆಗೆ ಹೆಸರಿದೆ! ನನಗೂ ಹೆಸರಿದೆ!- ಬಂತೆ ಭಾಗ್ಯ? ಖ್ಯಾತನಾಮರೆನಿತು ಜನ ನಿರ್‍ನಾಮರಾಗಿಲ್ಲ! ಹೆಸರಿಲ್ಲದಿರೇನು? ತರತರದ ರಾಗ ರುಚಿಯಿರೆ!-ಗಾನದಿಂಪಿರೆ!

“ಓ! ಹೆಸರಿಲ್ಲದ ಪಕ್ಷಿಯೇ, ಇಲ್ಲಿ ಬಾ” ಎಂದೆ.

ಪಕ್ಷಿಯು ಹಾರಿಬಂದು ಕಿಟಕಿಯಲ್ಲಿ ಕುಳಿತು,-

“ಕರೆದುದೇಕೆ?” ಎಂದಿತು,

“ಅನಾಮಿಕ, ಯಾರಿಗಾಗಿ-ನಿನ್ನ ಗಾನ?” ಎಂದು ಕೇಳಿದೆ.

“ಯಾರು ಮನವಿಟ್ಟು, ಕಿವಿಗೊಟ್ಟು ಎದೆತೆರೆದು ಆಲಿಸುವರೋ ಅವರಿಗೆ”.

“ಆಹಾ! ಇದೊ-ಇದೋ ನನ್ನ ಕಿವಿ, ನನ್ನ ಮನ, ನನ್ನ ಹೃದಯ ನಿನ್ನವು. ನನಗೆ ಗಾನ ಮಾಡುವೆಯಾ?”

“ಓಹೊ! ಮಾಡುವೆ”.

“ದಿನದಿನವೂ ಹಾಡುವೆಯಾ?”

“ದಿನದಿನವೂ ಹಾಡುವೆ. ದಿನದಿನವೂ ಹಾಡುತಿರುವೆ!”

“ಆಹಾ? ಇದೆ ಮೊದಲು ನಾ ಕೇಳಿದುದು!”

“ಅದು ನನ್ನ ತಪ್ಪೆ? ನಿನ್ನೆಡೆಯಲಾಸೆಗೆಡೆಗೊಟ್ಟೆ! ಕಡಲ ಹೀರಿ ಅಂಬರವನಪ್ಪುವ ಆಸೆ! ನಿನ್ನ ಮನ ಮುದುರಿ ಕಿವಿ ಮುಚ್ಚಿತು! ಇಂತಿರಲು ಹೆಸರಿಲ್ಲದ ಬಡಪಾಯಿಯ ಗಾನವ ಕೇಳಲು ಸಮಯವೆಲ್ಲಿ?”

“ಇಲ್ಲ, ಇಲ್ಲ! ಹಾಗೆನ್ನದಿರು ಕಾಯ ತಳೆದ ಕಾಮನ ಬಿಲ್ಲೇ! ಈಗ ಎಲ್ಲ ಆಸೆಗಳೂ ಕರಗಿ, ಆರಿ ಗುರುತಿಲ್ಲದಾದುವು. ಹೊಸತೊಂದು ಆಸೆ ಮೂಡುತಿದೆ ಎದೆಯಲಿ!”

“ಏನದು?”

“ನಿನ್ನ ಗಾನದಮೃತದಲಿ ತೋಯಚಬೇಕೆಂದು-ತಣಿಯ ಬೇಕೆಂದು!”

“ನಿನ್ನಾಸೆ ಫಲಿಸಿತೆಂದು ತಿಳಿ! ಬಯಕೆ ತೋರಲು, ಇಲ್ಲಿ ಬಂದು ಕುಳಿತು ಒಂದು ಸಲ ನೆನೆ ನನ್ನ; ತೋಯಿಸುವೆನು-ತಣಿಸುವೆನು ನಿನ್ನ!”

“ಸುಖಿಯಾದೆ!….. ಇರಲ್ಲಿ ನಿನ್ನ ಗಾನಕೇನ ಕೊಡಲಿ?”

“ನಿನ್ನ ಕಿವಿ, ನಿನ್ನ ಮನ, ನಿನ್ನ ಎದೆ!”
* * *

ನಾನಂದಿನಿಂದಾ ಪಕ್ಷಿಯ ಗೆಳೆಯನಾದೆ!

ಯಾವ ದಿನವಾದರೂ ಸರಿಯೆ, ಯಾವ ಹೊತ್ತಾದರೂ ಸರಿಯೆ, ಮುರುಕು ಕಿಟಿಕಿಯ ಬಳಿ ನಾ ಕುಳಿತು ಗೆಳೆಯನನೊಮ್ಮೆ ನೆನೆಯೆ ಅವನು ಎಲ್ಲಿಂದಲೋ ಮೂಡಿ ಬರುತಾನೆ! -ಹಾಡಿಕೊಂಡೇ ಬರುತಾನೆ! ಎನಿತು ದಿನ ಕೇಳಿರುವೆನೋ! ಏನೇನು ಕೇಳಿರುವೆನೋ! ಎಣಿಕೆಯುಂಟೆ? ಎಂತಹ ಗಾನರಸಲಹರಿ! ಅದರಲೇನು ರಾಗದೂರ್‍ಮಿ ಮಾಲೆ! ಒಂದೊಂದು ಗಾನವೂ ಒಂದೊಂದು ಕಥೆ! ಆ ಗಾನ ಕಥೆಗಳ ಸುಖವೋ ದುಃಖವೋ!-ಧೈರ್‍ಯವೋ ದೈನ್ಯವೊ!- ಪ್ರಣಯವೋ ಪ್ರೇಮವೋ!- ಚೆಲುವೋ ಒಲವೊ!

ಇದೋ, ಇವು ನನಗೆ ಆ ಪುಟ್ಟ ಅನಾಮಿಕ ಅಂಬರವಿಹಾರಿಯು ಹಾಡಿದ ಅಮರಗಾನಗಳಲಿ ಕೆಲವು. ಅದರ ಕಂಠಸಿರಿಯನೀ ಬಡ ನುಡಿಗಳಲಿ ವರ್‍ಣಿಸಲೆತ್ಲಿಸಿರುವೆನು.

ರಸಿಕರೂ ಸಹೃದಯರೂ ಆದ ಶ್ರೋತೃಗಳಿರಾ, ಮನವಿಟ್ಟು, ಕಿವಿಗೊಟ್ಟು ಕೇಳಿ-ಎದೆದೆರೆದು. ತುಂಬಿಕೊಳಿ. ನೀವು ಮೆಚ್ಚಿ ತಲೆ ದೂಗಿದರೆ, ನಾನು ಕಿಟಿಕಿಯ ಬಳಿ ಕುಳಿತುದು ಸಾರ್‍ಥಕವಾಯ್ತು- ಪಕ್ಷಿಯು ಹಾಡಿದುದೂ ಸಾರ್‍ಥಕವಾಯ್ತು.

ಇಂತು-

ಕುಟೀರವಾಸಿ
ಆನಂದ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...