Home / ಕಥೆ / ಸಣ್ಣ ಕಥೆ / ಕುಟೀರವಾಣಿ

ಕುಟೀರವಾಣಿ

ಪೀಠಿಕೆ

ನನ್ನ ಬಡಗುಡಿಸಲ ಹೆಸರು “ಆನಂದಕುಟೀರ”.

ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು. ಹೃದಯವು ನಿರಾಶೆಯಿಂದ ಬಿರಿಯುತಿತ್ತು. ಎಷ್ಟು ಆಸೆಗಳು! . . . ಎಷ್ಟು ಉದ್ಯಮ!! ಒಂದೂ ನೆರವೇರಲಿಲ್ಲವಲಾ!- ಎಂಬ ನೋವೊಂದು ಉಳಿದಿತ್ತು.

ಅಸೆಯೋ, ಆಕಾಶವನೇ ಆವರಿಸುವಂತಹುದು!– ಕಡಲನೇ ಹೀರಿ ಕುಡಿಯುವಂತಹುದು!! ಶಕ್ತಿ ಮಾತ್ರ ಇಲ್ಲ! ಇದೆಂತಹ ವಿಚಿತ್ರ! ಇಷ್ಟು ದುರ್ಬಲದ ದೇಹದಲಿ ಅದೆನಿತು ಪ್ರಬಲದಾಸೆಗಳು!

ನಿರಾಶೆ-ಬೇಸರ ಎಲ್ಲ, ಕುಟೀರದ-ಆನಂದಕುಟೀರದ-ಒಳಗೆ. ಕಿಟಕಿಯ ಹೊರಗೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಆಸೆ ಭರವಸೆಗಳೇ ಕಣ್ಣನು ಒತ್ತುತಿವೆ! ಕಿವಿಯಲಿಳಿಯುತಿವೆ!

ದೂರದ ಕಡಲತೀರದಿಂದ, ಅಲೆಯ ಫೋಷೆ ಅವಿಚ್ಛಿನ್ನವಾಗಿ ಭರವಸೆಯ ಸಂದೇಶವನು ಬೀರುತಿದೆ.

ಅದೋ ಆ ಮರ, ಈ ಗಿಡ, ಅಲ್ಲಿರುವ ಬಳ್ಳಿ, ಇಲ್ಲಿ ಕಾಣುವ ಪೊದೆ ಪ್ರತಿಯೊಂದರಲೂ ಉಕ್ಕುತಿದೆ ಆಸೆ! ತೋರುತಿದೆ ಚಿಗುರಿ ಹೂಬಿಟ್ಟು ಹಣ್ಣಾಗುವ ಭರವಸೆ!

ಅದೋ ಆ ಹಸುರುಕ್ಕಿ ಹಬ್ಬಿರುವ ಪೊದೆಯಲೊಂದು ಪುಟ್ಟಹಕ್ಕಿ ಕುಳಿತು ಹಾಡುತಿದೆ. ಅದರ ಹೆಸರೇನೋ ನಾನರಿಯೆ. ನನಗೆ ಕಾಣುತಿರುವುದು ಅದರ ಬಣ್ಣ; ನನಗೆ ಕೇಳುತಿರುವುದು ಅದರ ಗಾನ. ಏನು ಸೊಗಸಿನ ಬಣ್ಣ! ಅದೆಷ್ಟು ತೆರನ ರಾಗ! ಒಂದು ಸಲ ಚಿಮ್ಮುವುದು ತಿಳಿನೀರ ಚಿಲುಮೆಯಂತೆ! ಒಂದು ಸಲ ಉರುಳುರುಳಿ ಹೊಮ್ಮುವುದು ಕಿರುಝರಿಯಂತೆ!! ಬಣ್ಣದ ಪುತ್ಥಳಿಯಲಿ ಗಾನದಮೃತ! ಅದರ ಕೋಮಲವಾದ ಕಂಠದಲಿ ಹುಟ್ಟಿ ಹರಿಯುತಿದೆ ಭರವಸೆ! ಆಹಾ! ಯಾರಿಗಾಗಿ ಈ ಗಾನಮಧು….?

ನಿರಾಶೆ ನಿರ್‍ನಾಮವಾಗಿ ಶಾಂತಿ ಮೊಳೆಯತೊಡಗಿತು.

“ಪಕ್ಷೀ, ನಿನ್ನ ಹೆಸರೇನು?” ಎಂದು ಕೇಳಿದೆ.

“ನಾನರಿಯೆ” ಎಂದು ಹಾಡಿತು ಹಕ್ಕಿ.

ಆಹಾ! ಹೆಸರಿಲ್ಲದ ಪಕ್ಷಿ! ಆದರೇನು? ಕಾಗೆಗೆ ಹೆಸರಿದೆ! ಗೂಗೆಗೆ ಹೆಸರಿದೆ! ನನಗೂ ಹೆಸರಿದೆ!- ಬಂತೆ ಭಾಗ್ಯ? ಖ್ಯಾತನಾಮರೆನಿತು ಜನ ನಿರ್‍ನಾಮರಾಗಿಲ್ಲ! ಹೆಸರಿಲ್ಲದಿರೇನು? ತರತರದ ರಾಗ ರುಚಿಯಿರೆ!-ಗಾನದಿಂಪಿರೆ!

“ಓ! ಹೆಸರಿಲ್ಲದ ಪಕ್ಷಿಯೇ, ಇಲ್ಲಿ ಬಾ” ಎಂದೆ.

ಪಕ್ಷಿಯು ಹಾರಿಬಂದು ಕಿಟಕಿಯಲ್ಲಿ ಕುಳಿತು,-

“ಕರೆದುದೇಕೆ?” ಎಂದಿತು,

“ಅನಾಮಿಕ, ಯಾರಿಗಾಗಿ-ನಿನ್ನ ಗಾನ?” ಎಂದು ಕೇಳಿದೆ.

“ಯಾರು ಮನವಿಟ್ಟು, ಕಿವಿಗೊಟ್ಟು ಎದೆತೆರೆದು ಆಲಿಸುವರೋ ಅವರಿಗೆ”.

“ಆಹಾ! ಇದೊ-ಇದೋ ನನ್ನ ಕಿವಿ, ನನ್ನ ಮನ, ನನ್ನ ಹೃದಯ ನಿನ್ನವು. ನನಗೆ ಗಾನ ಮಾಡುವೆಯಾ?”

“ಓಹೊ! ಮಾಡುವೆ”.

“ದಿನದಿನವೂ ಹಾಡುವೆಯಾ?”

“ದಿನದಿನವೂ ಹಾಡುವೆ. ದಿನದಿನವೂ ಹಾಡುತಿರುವೆ!”

“ಆಹಾ? ಇದೆ ಮೊದಲು ನಾ ಕೇಳಿದುದು!”

“ಅದು ನನ್ನ ತಪ್ಪೆ? ನಿನ್ನೆಡೆಯಲಾಸೆಗೆಡೆಗೊಟ್ಟೆ! ಕಡಲ ಹೀರಿ ಅಂಬರವನಪ್ಪುವ ಆಸೆ! ನಿನ್ನ ಮನ ಮುದುರಿ ಕಿವಿ ಮುಚ್ಚಿತು! ಇಂತಿರಲು ಹೆಸರಿಲ್ಲದ ಬಡಪಾಯಿಯ ಗಾನವ ಕೇಳಲು ಸಮಯವೆಲ್ಲಿ?”

“ಇಲ್ಲ, ಇಲ್ಲ! ಹಾಗೆನ್ನದಿರು ಕಾಯ ತಳೆದ ಕಾಮನ ಬಿಲ್ಲೇ! ಈಗ ಎಲ್ಲ ಆಸೆಗಳೂ ಕರಗಿ, ಆರಿ ಗುರುತಿಲ್ಲದಾದುವು. ಹೊಸತೊಂದು ಆಸೆ ಮೂಡುತಿದೆ ಎದೆಯಲಿ!”

“ಏನದು?”

“ನಿನ್ನ ಗಾನದಮೃತದಲಿ ತೋಯಚಬೇಕೆಂದು-ತಣಿಯ ಬೇಕೆಂದು!”

“ನಿನ್ನಾಸೆ ಫಲಿಸಿತೆಂದು ತಿಳಿ! ಬಯಕೆ ತೋರಲು, ಇಲ್ಲಿ ಬಂದು ಕುಳಿತು ಒಂದು ಸಲ ನೆನೆ ನನ್ನ; ತೋಯಿಸುವೆನು-ತಣಿಸುವೆನು ನಿನ್ನ!”

“ಸುಖಿಯಾದೆ!….. ಇರಲ್ಲಿ ನಿನ್ನ ಗಾನಕೇನ ಕೊಡಲಿ?”

“ನಿನ್ನ ಕಿವಿ, ನಿನ್ನ ಮನ, ನಿನ್ನ ಎದೆ!”
* * *

ನಾನಂದಿನಿಂದಾ ಪಕ್ಷಿಯ ಗೆಳೆಯನಾದೆ!

ಯಾವ ದಿನವಾದರೂ ಸರಿಯೆ, ಯಾವ ಹೊತ್ತಾದರೂ ಸರಿಯೆ, ಮುರುಕು ಕಿಟಿಕಿಯ ಬಳಿ ನಾ ಕುಳಿತು ಗೆಳೆಯನನೊಮ್ಮೆ ನೆನೆಯೆ ಅವನು ಎಲ್ಲಿಂದಲೋ ಮೂಡಿ ಬರುತಾನೆ! -ಹಾಡಿಕೊಂಡೇ ಬರುತಾನೆ! ಎನಿತು ದಿನ ಕೇಳಿರುವೆನೋ! ಏನೇನು ಕೇಳಿರುವೆನೋ! ಎಣಿಕೆಯುಂಟೆ? ಎಂತಹ ಗಾನರಸಲಹರಿ! ಅದರಲೇನು ರಾಗದೂರ್‍ಮಿ ಮಾಲೆ! ಒಂದೊಂದು ಗಾನವೂ ಒಂದೊಂದು ಕಥೆ! ಆ ಗಾನ ಕಥೆಗಳ ಸುಖವೋ ದುಃಖವೋ!-ಧೈರ್‍ಯವೋ ದೈನ್ಯವೊ!- ಪ್ರಣಯವೋ ಪ್ರೇಮವೋ!- ಚೆಲುವೋ ಒಲವೊ!

ಇದೋ, ಇವು ನನಗೆ ಆ ಪುಟ್ಟ ಅನಾಮಿಕ ಅಂಬರವಿಹಾರಿಯು ಹಾಡಿದ ಅಮರಗಾನಗಳಲಿ ಕೆಲವು. ಅದರ ಕಂಠಸಿರಿಯನೀ ಬಡ ನುಡಿಗಳಲಿ ವರ್‍ಣಿಸಲೆತ್ಲಿಸಿರುವೆನು.

ರಸಿಕರೂ ಸಹೃದಯರೂ ಆದ ಶ್ರೋತೃಗಳಿರಾ, ಮನವಿಟ್ಟು, ಕಿವಿಗೊಟ್ಟು ಕೇಳಿ-ಎದೆದೆರೆದು. ತುಂಬಿಕೊಳಿ. ನೀವು ಮೆಚ್ಚಿ ತಲೆ ದೂಗಿದರೆ, ನಾನು ಕಿಟಿಕಿಯ ಬಳಿ ಕುಳಿತುದು ಸಾರ್‍ಥಕವಾಯ್ತು- ಪಕ್ಷಿಯು ಹಾಡಿದುದೂ ಸಾರ್‍ಥಕವಾಯ್ತು.

ಇಂತು-

ಕುಟೀರವಾಸಿ
ಆನಂದ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...