Home / ಕಥೆ / ಸಣ್ಣ ಕಥೆ / ಕುಟೀರವಾಣಿ

ಕುಟೀರವಾಣಿ

ಪೀಠಿಕೆ

ನನ್ನ ಬಡಗುಡಿಸಲ ಹೆಸರು “ಆನಂದಕುಟೀರ”.

ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು. ಹೃದಯವು ನಿರಾಶೆಯಿಂದ ಬಿರಿಯುತಿತ್ತು. ಎಷ್ಟು ಆಸೆಗಳು! . . . ಎಷ್ಟು ಉದ್ಯಮ!! ಒಂದೂ ನೆರವೇರಲಿಲ್ಲವಲಾ!- ಎಂಬ ನೋವೊಂದು ಉಳಿದಿತ್ತು.

ಅಸೆಯೋ, ಆಕಾಶವನೇ ಆವರಿಸುವಂತಹುದು!– ಕಡಲನೇ ಹೀರಿ ಕುಡಿಯುವಂತಹುದು!! ಶಕ್ತಿ ಮಾತ್ರ ಇಲ್ಲ! ಇದೆಂತಹ ವಿಚಿತ್ರ! ಇಷ್ಟು ದುರ್ಬಲದ ದೇಹದಲಿ ಅದೆನಿತು ಪ್ರಬಲದಾಸೆಗಳು!

ನಿರಾಶೆ-ಬೇಸರ ಎಲ್ಲ, ಕುಟೀರದ-ಆನಂದಕುಟೀರದ-ಒಳಗೆ. ಕಿಟಕಿಯ ಹೊರಗೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಆಸೆ ಭರವಸೆಗಳೇ ಕಣ್ಣನು ಒತ್ತುತಿವೆ! ಕಿವಿಯಲಿಳಿಯುತಿವೆ!

ದೂರದ ಕಡಲತೀರದಿಂದ, ಅಲೆಯ ಫೋಷೆ ಅವಿಚ್ಛಿನ್ನವಾಗಿ ಭರವಸೆಯ ಸಂದೇಶವನು ಬೀರುತಿದೆ.

ಅದೋ ಆ ಮರ, ಈ ಗಿಡ, ಅಲ್ಲಿರುವ ಬಳ್ಳಿ, ಇಲ್ಲಿ ಕಾಣುವ ಪೊದೆ ಪ್ರತಿಯೊಂದರಲೂ ಉಕ್ಕುತಿದೆ ಆಸೆ! ತೋರುತಿದೆ ಚಿಗುರಿ ಹೂಬಿಟ್ಟು ಹಣ್ಣಾಗುವ ಭರವಸೆ!

ಅದೋ ಆ ಹಸುರುಕ್ಕಿ ಹಬ್ಬಿರುವ ಪೊದೆಯಲೊಂದು ಪುಟ್ಟಹಕ್ಕಿ ಕುಳಿತು ಹಾಡುತಿದೆ. ಅದರ ಹೆಸರೇನೋ ನಾನರಿಯೆ. ನನಗೆ ಕಾಣುತಿರುವುದು ಅದರ ಬಣ್ಣ; ನನಗೆ ಕೇಳುತಿರುವುದು ಅದರ ಗಾನ. ಏನು ಸೊಗಸಿನ ಬಣ್ಣ! ಅದೆಷ್ಟು ತೆರನ ರಾಗ! ಒಂದು ಸಲ ಚಿಮ್ಮುವುದು ತಿಳಿನೀರ ಚಿಲುಮೆಯಂತೆ! ಒಂದು ಸಲ ಉರುಳುರುಳಿ ಹೊಮ್ಮುವುದು ಕಿರುಝರಿಯಂತೆ!! ಬಣ್ಣದ ಪುತ್ಥಳಿಯಲಿ ಗಾನದಮೃತ! ಅದರ ಕೋಮಲವಾದ ಕಂಠದಲಿ ಹುಟ್ಟಿ ಹರಿಯುತಿದೆ ಭರವಸೆ! ಆಹಾ! ಯಾರಿಗಾಗಿ ಈ ಗಾನಮಧು….?

ನಿರಾಶೆ ನಿರ್‍ನಾಮವಾಗಿ ಶಾಂತಿ ಮೊಳೆಯತೊಡಗಿತು.

“ಪಕ್ಷೀ, ನಿನ್ನ ಹೆಸರೇನು?” ಎಂದು ಕೇಳಿದೆ.

“ನಾನರಿಯೆ” ಎಂದು ಹಾಡಿತು ಹಕ್ಕಿ.

ಆಹಾ! ಹೆಸರಿಲ್ಲದ ಪಕ್ಷಿ! ಆದರೇನು? ಕಾಗೆಗೆ ಹೆಸರಿದೆ! ಗೂಗೆಗೆ ಹೆಸರಿದೆ! ನನಗೂ ಹೆಸರಿದೆ!- ಬಂತೆ ಭಾಗ್ಯ? ಖ್ಯಾತನಾಮರೆನಿತು ಜನ ನಿರ್‍ನಾಮರಾಗಿಲ್ಲ! ಹೆಸರಿಲ್ಲದಿರೇನು? ತರತರದ ರಾಗ ರುಚಿಯಿರೆ!-ಗಾನದಿಂಪಿರೆ!

“ಓ! ಹೆಸರಿಲ್ಲದ ಪಕ್ಷಿಯೇ, ಇಲ್ಲಿ ಬಾ” ಎಂದೆ.

ಪಕ್ಷಿಯು ಹಾರಿಬಂದು ಕಿಟಕಿಯಲ್ಲಿ ಕುಳಿತು,-

“ಕರೆದುದೇಕೆ?” ಎಂದಿತು,

“ಅನಾಮಿಕ, ಯಾರಿಗಾಗಿ-ನಿನ್ನ ಗಾನ?” ಎಂದು ಕೇಳಿದೆ.

“ಯಾರು ಮನವಿಟ್ಟು, ಕಿವಿಗೊಟ್ಟು ಎದೆತೆರೆದು ಆಲಿಸುವರೋ ಅವರಿಗೆ”.

“ಆಹಾ! ಇದೊ-ಇದೋ ನನ್ನ ಕಿವಿ, ನನ್ನ ಮನ, ನನ್ನ ಹೃದಯ ನಿನ್ನವು. ನನಗೆ ಗಾನ ಮಾಡುವೆಯಾ?”

“ಓಹೊ! ಮಾಡುವೆ”.

“ದಿನದಿನವೂ ಹಾಡುವೆಯಾ?”

“ದಿನದಿನವೂ ಹಾಡುವೆ. ದಿನದಿನವೂ ಹಾಡುತಿರುವೆ!”

“ಆಹಾ? ಇದೆ ಮೊದಲು ನಾ ಕೇಳಿದುದು!”

“ಅದು ನನ್ನ ತಪ್ಪೆ? ನಿನ್ನೆಡೆಯಲಾಸೆಗೆಡೆಗೊಟ್ಟೆ! ಕಡಲ ಹೀರಿ ಅಂಬರವನಪ್ಪುವ ಆಸೆ! ನಿನ್ನ ಮನ ಮುದುರಿ ಕಿವಿ ಮುಚ್ಚಿತು! ಇಂತಿರಲು ಹೆಸರಿಲ್ಲದ ಬಡಪಾಯಿಯ ಗಾನವ ಕೇಳಲು ಸಮಯವೆಲ್ಲಿ?”

“ಇಲ್ಲ, ಇಲ್ಲ! ಹಾಗೆನ್ನದಿರು ಕಾಯ ತಳೆದ ಕಾಮನ ಬಿಲ್ಲೇ! ಈಗ ಎಲ್ಲ ಆಸೆಗಳೂ ಕರಗಿ, ಆರಿ ಗುರುತಿಲ್ಲದಾದುವು. ಹೊಸತೊಂದು ಆಸೆ ಮೂಡುತಿದೆ ಎದೆಯಲಿ!”

“ಏನದು?”

“ನಿನ್ನ ಗಾನದಮೃತದಲಿ ತೋಯಚಬೇಕೆಂದು-ತಣಿಯ ಬೇಕೆಂದು!”

“ನಿನ್ನಾಸೆ ಫಲಿಸಿತೆಂದು ತಿಳಿ! ಬಯಕೆ ತೋರಲು, ಇಲ್ಲಿ ಬಂದು ಕುಳಿತು ಒಂದು ಸಲ ನೆನೆ ನನ್ನ; ತೋಯಿಸುವೆನು-ತಣಿಸುವೆನು ನಿನ್ನ!”

“ಸುಖಿಯಾದೆ!….. ಇರಲ್ಲಿ ನಿನ್ನ ಗಾನಕೇನ ಕೊಡಲಿ?”

“ನಿನ್ನ ಕಿವಿ, ನಿನ್ನ ಮನ, ನಿನ್ನ ಎದೆ!”
* * *

ನಾನಂದಿನಿಂದಾ ಪಕ್ಷಿಯ ಗೆಳೆಯನಾದೆ!

ಯಾವ ದಿನವಾದರೂ ಸರಿಯೆ, ಯಾವ ಹೊತ್ತಾದರೂ ಸರಿಯೆ, ಮುರುಕು ಕಿಟಿಕಿಯ ಬಳಿ ನಾ ಕುಳಿತು ಗೆಳೆಯನನೊಮ್ಮೆ ನೆನೆಯೆ ಅವನು ಎಲ್ಲಿಂದಲೋ ಮೂಡಿ ಬರುತಾನೆ! -ಹಾಡಿಕೊಂಡೇ ಬರುತಾನೆ! ಎನಿತು ದಿನ ಕೇಳಿರುವೆನೋ! ಏನೇನು ಕೇಳಿರುವೆನೋ! ಎಣಿಕೆಯುಂಟೆ? ಎಂತಹ ಗಾನರಸಲಹರಿ! ಅದರಲೇನು ರಾಗದೂರ್‍ಮಿ ಮಾಲೆ! ಒಂದೊಂದು ಗಾನವೂ ಒಂದೊಂದು ಕಥೆ! ಆ ಗಾನ ಕಥೆಗಳ ಸುಖವೋ ದುಃಖವೋ!-ಧೈರ್‍ಯವೋ ದೈನ್ಯವೊ!- ಪ್ರಣಯವೋ ಪ್ರೇಮವೋ!- ಚೆಲುವೋ ಒಲವೊ!

ಇದೋ, ಇವು ನನಗೆ ಆ ಪುಟ್ಟ ಅನಾಮಿಕ ಅಂಬರವಿಹಾರಿಯು ಹಾಡಿದ ಅಮರಗಾನಗಳಲಿ ಕೆಲವು. ಅದರ ಕಂಠಸಿರಿಯನೀ ಬಡ ನುಡಿಗಳಲಿ ವರ್‍ಣಿಸಲೆತ್ಲಿಸಿರುವೆನು.

ರಸಿಕರೂ ಸಹೃದಯರೂ ಆದ ಶ್ರೋತೃಗಳಿರಾ, ಮನವಿಟ್ಟು, ಕಿವಿಗೊಟ್ಟು ಕೇಳಿ-ಎದೆದೆರೆದು. ತುಂಬಿಕೊಳಿ. ನೀವು ಮೆಚ್ಚಿ ತಲೆ ದೂಗಿದರೆ, ನಾನು ಕಿಟಿಕಿಯ ಬಳಿ ಕುಳಿತುದು ಸಾರ್‍ಥಕವಾಯ್ತು- ಪಕ್ಷಿಯು ಹಾಡಿದುದೂ ಸಾರ್‍ಥಕವಾಯ್ತು.

ಇಂತು-

ಕುಟೀರವಾಸಿ
ಆನಂದ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...