ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ
ತಣಿವ ತಂಪನು ಮನದಿ ತಳೆಯಬಹುದೆ?
ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ
ಒಡಲಲ್ಲಿ ಶಾಂತಿಯದು ಆರಳಬಹುದೆ?
ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು
‘ಇಂದು’ಗಳಿಗಾಳಾಗಿ ದುಡಿಯುತಿಹೆವು
ಮುಂದಿರುವ ‘ನಾಳೆ’ಗಳ ನೆಳಲಲ್ಲಿ ಚಿಂತೆಗಳ
ಚಿಗುರಿಸುತ ಎದೆಗುದಿಯ ಬೆಳೆಸುತಿಹೆವು.
ಸಾಕಾಯ್ತು ಬಾಳುವೆಯ ಕುರುಡು ಕಾಮನೆಯಾಟ
ಅನ್ಯಾಯ ಮೋಸಗಳ ಮೋಹದಾಟ
ನುಗ್ಗಿ ಬಹ ತೆರೆಗಳೇರಾಟ ಕಾಟದಿ ನನ್ನ
ಅಂಗಾಂಗವಾಯಾಸ ವಿದ್ಧವಕಟ
ಬೇಡಿದೆನೆ ಬಾನಿನಲಿ ಬೆಳೆವ ಅಮೃತದ ಹನಿಯ
ದೇವತೆಯ ವೈಭವವ ಕಾಮಿಸಿದೆನೆ ?
ಹುಲುಮನುಜನೆದೆಯೊಳಿಹ ಕಿರಿಯಾಸೆಗೂ ದೈವ
ಮುಚ್ಚಿರುವ ಬಾಗಿಲವ ತೆರೆಯಿತೇನೆ?
ಕೆರಳಿರುವ ಬಾಳ್ಗಡಲ ತೊರೆದು ಬಾ ನೀರೆಯೆ
ಏರಿಳಿತವಿಬ್ಲದೀಯುಸುಕಿನಲ್ಲಿ
ಧೆರ್ಮಬಂಧನ ಜರೆದು ಕರ್ಮಕ್ರಂದನ ತೊರೆದು
ಕೊರಳ ಕೊಯ್ಯುವ ಬಾಳನೊಗವ ಹರಿದು
ಸಿಕತಸೀಮೆಯ ಸೌಮ್ಯ ಶಾಂತಿಯಲಿ ಇಲ್ಲಿ ಬಾ
ಆಯಾಸವಾರಿಸುವ ವಿಶ್ರಾಂತಿಗೆ
ಕನಸಿನಾರಾಮದಲಿ ಕೊನರಬಹುದೆಲೆ ತಣಿವು
ಮರೆಯಬಹುದೆಲೆ ಮಲೆತ ವ್ಯಥೆಯಮೊನೆಯು
ಕಡಲತ್ತ ತನ್ನೆದೆಯ ಕದಡಿಸಿದ ಚಂದಿರನ
ಮಕ್ಕಲಿಕೆ ನಾಲಗೆಯ ಚಾಚುತಿರಲಿ
ಕಾಲ್ಕೆಳಗೆ ಸುಳಿಯುತಿಹ ಶೇಷನನು ಕುಕ್ಕಲಿಕೆ
ಪಾತಾಳವನು ಅಗಿದು ಮೊರೆಯುತಿರಲಿ
ಇಲ್ಲಿ ಕಾಣುವುದೇನು?- ನೀರ್ನೊರೆಯ ಬಿಳಿಗೆರೆಯೆ
ಕಡಲ ಮೊಳಗೂ ಕೂಡ ಕಿವಿಯ ಪುಗದು.
ಇಲ್ಲಿ ಗಾಳಿಯು ಕೂಡ ದಣಿದು ಗರಿಗಳ ಮುಗಿದು
ಹೂವಿನುಯ್ಯಲೆಯಲ್ಲಿ ಮಲಗಿರುವುದು.
ರಿಕ್ತವಹ ಸಂತಾಪ ಪರಿತಾಪಗಳ ತೊರೆದು
ಸೌಮ್ಯಸುಪ್ತಿಯಲೆದೆಯು ಮಿಡಿಯುತಿರಲಿ
ಇಲ್ಲಿರುವ ಗಿರಿಗಳಲಿ, ಹರಿಯುತಿಹ ಹೊಳೆಗಳಲಿ
ಹಸಿರಿನಲಿ ಬಿತ್ತರದ ಉಸುಕಿನಲ್ಲಿ
ಅಕ್ಷಯ್ಯ ಶಾಂತಿಯದು ನೆಲೆಸಿರಲು ನಾವೇಕೆ
ವ್ಯರ್ಥವಾದೆಣಿಕೆಯಲ್ಲಿ ನವೆಯಬೇಕು?
ಕನಸಿನಲಿ ಕಣ್ತೆರೆದು ನಸುಕಿನಲಿ ನಸುಬೆಳೆದು
ಅರಳಿಯಳಿವಲರಿನಾ ಬಾಳೆ ಸಾಕು!
ಮುಳುಗಲಿಹ ನೇಸರನು, ಮೂಡಲಿಹ ಚಂದಿರನು
ಮೆರೆಯುತಿಹರಾಗಸದ ಅಂಚುಗಳಲಿ
ಕ್ಷಣಕಾಲ ಮರೆತಿಹರು ರೇಗಿಸುವ ಕದನವನು
ಶಾಂತಿಯಾ ಕಾಂತಿಯನೆ ಕರೆಯುತಿಹರು,
ಗೆಳತಿ, ವೀಣೆಯಮೇಲೆ ತಂತಿ ನೋಯದೊಲಿನ್ನು
ಮೆಲ್ಪೆಲರಿಗೂ ಮಿದುವು ಬೆರಳಾಡಲಿ
ಗಾಳಿಗೂ ತಿಳಿಯದೊಲು ಮೌನವೂ ಮುರಿಯದೊಲು
ಗೀತಗಳು ಕಿವಿಯಲ್ಲಿ ಮೆಲ್ಲುಲಿಯಲಿ!
ಹುಸಿಯಾಸೆಗಳ ಪಾಶ, ಕೃತಿ ವಿರಸದಾಯಾಸ
ಮಾಯವಾಗುವುವೆಲ್ಲ ಸುಪ್ತಿಯಲ್ಲಿ
ಮಲೆತು ಮುರಿಯುವುದೇನು? ಅಲೆದು ಅರಸುವುದೇನು?
ಬಾಳೆಲ್ಲ ಸುಖಪಡೆಯೆ ವಿರತಿಯಲ್ಲಿ
ಸುಪ್ತಿಯೇ ಜೀವನದ ಸುಖ ಪೂರ್ಣ ಭುಕ್ತಿ
ಭಾವಗಳ ರಾಗಗಳ ಕೊನೆಯ ತೃಪ್ತಿ
ಪ್ರಕ್ಷುಬ್ಧ ಜಲಧಿಯಾ ಜಲವೆ ಶಿಲೆಯಾಗಿರುವ
ಹಮವತಿಯ ಸಿದ್ಧಿಯೂ ದೀರ್ಫ ಸುಪ್ತಿ.
ಸುಪ್ತಿ ಶುಕ್ತಿಯ ಸೇರೆ ಮನವು ಮೌಕ್ತಿಕವಾಗಿ
ಪಡೆಯಬಹುದೆಲೆ, ನಲ್ಲೆ, ನಿತ್ಯ ಮುಕ್ತಿ!
*****



















