Home / ಕವನ / ಕವಿತೆ / ಸಂದ್ಯಾ-ಸೂಕ್ತ

ಸಂದ್ಯಾ-ಸೂಕ್ತ

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ
ಬೆಳೆದು ನಿಂತಿದೆ ಸಂಪದ
ಹಕ್ಕಿ ಹಾರಿದ ಹಾಗೆ ಹರಿಯಿತು
ಮನದಿ ಊರಿದ ಆ ಪದ

ಚೆಂಗುಲಾಬಿಯ ಬನವು ಅರಳಿದೆ
ನೋಡು ಬಾನಿನ ದಂಡೆಗೆ
ಪ್ರಾಣ ಶುಕವೇ ಕ್ಷುಬ್ಧವಾಯಿತು
ಬಂತು ಕಣ್ಣಿನ ಕಿಂಡಿಗೆ

ಸ್ವರ್ಗಲೋಕದ ಸ್ವರ್ಣ ದ್ವಾರವು
ತೆರೆಯಿತೆನುವೊಲು ಅರೆಚಣ
ಸಂಜೆಗೆಂಪಿನ ಸುಮನ ಕಾಂತಿಗೆ
ತುಂಬ ಹೊತ್ತಿತು ಪಡುವಣ.

ನೋವು ನರಳಿಕೆಯಿಂದ ನವೆದಿಹ
ಜಗದ ಕೊರಳಿಗೆ ತಾಯಿತ
ಸುತ್ತಿಕೊಂಡಿದೆ ಸಂಜೆಗೆಂಪಿನ
ಮುತ್ತು ಮಾಲೆಯು ಮಂತ್ರಿತ

ದೇವ ಮಮತೆಯ ಕೈಯು ಚಾಚಿತು
ತಂಪು ಗಾಳಿಯ ಸುಳಿಯಲಿ
ಬೆಂದ ಹಣೆಗಳ ಬೇಗೆ ಸವರಿತು
ಶಾಂತಿಯೆರಚಿತು ಎದೆಯಲಿ.

ಮಡದಿ ಮಕ್ಕಳ ಮಮತೆ ನುಡಿಸಿತು
ಹಕ್ಕಿಯುಲಿಯುವ ಚಿಲಿಪಿಲಿ
ಕಿರಣ ಶಿಶುಗಳ ಚರಣ ಕಿಂಕಿಣಿ
ನಾದ ತುಂಬಿತು ಜಗದಲಿ

ಜಗದ ಬಗೆವಟ ಹರಡಿ ನಿಂತಿತು
ಟೊಂಗೆ ಟೊಂಗೆಯು ಕೊನರಿತು
ಗಾಳಿಗಡಲಿನ ತೆರೆಗೆ ನೌಕೆಯ
ಹಾಗೆ ಉಯ್ಯಲೆಯಾಡಿತು.

ಕಾಲದಿಕ್ತಟ ದಾಟಿ ಸೇರಿತು
ನೆನಹು ಹಕ್ಕಿಯ ಸಂಕುಲ.
ಕಳೆದ ಸತ್ವ ವಿಭೂತಿ ನೆರೆಯಿತೊ
ಎನ್ನು ವೊಲು ತಾರಾಕುಲ

ಮೋಡ ನೀಡದಿ ಚಿಕ್ಕೆ ಹಕ್ಕಿಯ
ತುಂಬಿ ತುಳುಕುವ ಪಿಕರುತಿ
ಕಾಲವೀಣೆಯು ಮಿಡಿಯ ತೊಡಗಿತೊ
ದೇವ ವಾಣಿಯ ಆ ಶೃತಿ

ಸಪ್ತ ಋಷಿಗಳ ವೇದ ವಾಣಿಯು
ಉಸುರಿತಾ ಗಾಯತ್ರಿಯ
ಯಮನ ಜಯಿಸಿದ ಸತ್ವ ಹೊಮ್ಮಿತು
ಕರಿಯಿತಾ ಸಾವಿತ್ರಿಯ

ವ್ಯಾಸ ವಾಲ್ಮೀಕಿಯರ ಪ್ರತಿಭೆಯ
ಗಂಗೆ ಬಾನೊಳು ಹರಿಯಿತು
ಧರ್ಮ ಭೀಮರ ರಾಮ ಹನುಮರ
ವೀರ ತೇಜವು ಚಿಮುಕಿತು.

ಕ್ರಿಸ್ತ ನೇರಿದ ಶಿಲುಬೆಯಿಂದಲಿ
ಸುರಿದ ರಕ್ತದ ಹನಿಯಲಿ
ಸಾವನರಿಯದ ಸೊಲ್ಲು ಗುಡುಗಿತು
ಚಿಕ್ಕೆ ಚಿಕ್ಕೆಯ ಎಡೆಯಲಿ

ಬುದ್ಧ ಬೋಧಿಯು ಮತ್ತೆ ಚಿಗುರಿತು
ಜಿನನ ವಾಣಿಯು ಅರಳಿತು
ಸೋತು ಸರಿದಿಹ ತತ್ವವೇತ್ತರ
ಶಬ್ದ ಸೌಷ್ಠವ ಕೊನರಿತು.

“ಬೆಂದು ಬಳಲಿದ ಜಗದ ಜೀವವೆ,
ಏಳು ಕುಡಿಯಲು ಸಿಡಿಲನು
ಮರೆತ ಮಾತಿನ ಹಣ್ಣು ಹಂಪಲ-
ದಿಂದ ತುಂಬಾ ಮಡಿಲನು

ಏಕೆ ಅಶುಭದ ಹೊಲೆಗೆ ಆಳುಕುವೆ
ಸಾವಿನಲಿ ನೀ ಬಾಳುವೆ
ಅಮೃತ ಪುತ್ರರ ಪಿತಗೆ ಭಯವೆ
ನೀನೆ ಎಂದಿಗು ಆಳುವೆ”

ಕಾಲಸಾಗರ ಕೆರಳಿ ಕೆದರಿತು
ನಾದ ಹೊಮ್ಮಿತು ತೆರೆತೆರೆ
ಹಾಲ ಸಾಗರ ನಂದ ಕಂದನು
ನೋಡು ನಕ್ಕನು ಜಗದೊರೆ

“ಕ್ಲೈಬೃಂ ಮಾಸ್ಮಗುಮಃ ಪ್ರಾಣೀ
ಸಲ್ಲದಿದು ನಿನಗೆಂದಿಗು
ಕುರುಕ್ಷೇತ್ರವಿದು ಧರ್ಮಕ್ಷೇತ್ರವು
ಉಂಟು ಕೊನೆಯಾ ಸಾವಿಗು.”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...