Home / ಕವನ / ಕವಿತೆ / ಸಂದ್ಯಾ-ಸೂಕ್ತ

ಸಂದ್ಯಾ-ಸೂಕ್ತ

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ
ಬೆಳೆದು ನಿಂತಿದೆ ಸಂಪದ
ಹಕ್ಕಿ ಹಾರಿದ ಹಾಗೆ ಹರಿಯಿತು
ಮನದಿ ಊರಿದ ಆ ಪದ

ಚೆಂಗುಲಾಬಿಯ ಬನವು ಅರಳಿದೆ
ನೋಡು ಬಾನಿನ ದಂಡೆಗೆ
ಪ್ರಾಣ ಶುಕವೇ ಕ್ಷುಬ್ಧವಾಯಿತು
ಬಂತು ಕಣ್ಣಿನ ಕಿಂಡಿಗೆ

ಸ್ವರ್ಗಲೋಕದ ಸ್ವರ್ಣ ದ್ವಾರವು
ತೆರೆಯಿತೆನುವೊಲು ಅರೆಚಣ
ಸಂಜೆಗೆಂಪಿನ ಸುಮನ ಕಾಂತಿಗೆ
ತುಂಬ ಹೊತ್ತಿತು ಪಡುವಣ.

ನೋವು ನರಳಿಕೆಯಿಂದ ನವೆದಿಹ
ಜಗದ ಕೊರಳಿಗೆ ತಾಯಿತ
ಸುತ್ತಿಕೊಂಡಿದೆ ಸಂಜೆಗೆಂಪಿನ
ಮುತ್ತು ಮಾಲೆಯು ಮಂತ್ರಿತ

ದೇವ ಮಮತೆಯ ಕೈಯು ಚಾಚಿತು
ತಂಪು ಗಾಳಿಯ ಸುಳಿಯಲಿ
ಬೆಂದ ಹಣೆಗಳ ಬೇಗೆ ಸವರಿತು
ಶಾಂತಿಯೆರಚಿತು ಎದೆಯಲಿ.

ಮಡದಿ ಮಕ್ಕಳ ಮಮತೆ ನುಡಿಸಿತು
ಹಕ್ಕಿಯುಲಿಯುವ ಚಿಲಿಪಿಲಿ
ಕಿರಣ ಶಿಶುಗಳ ಚರಣ ಕಿಂಕಿಣಿ
ನಾದ ತುಂಬಿತು ಜಗದಲಿ

ಜಗದ ಬಗೆವಟ ಹರಡಿ ನಿಂತಿತು
ಟೊಂಗೆ ಟೊಂಗೆಯು ಕೊನರಿತು
ಗಾಳಿಗಡಲಿನ ತೆರೆಗೆ ನೌಕೆಯ
ಹಾಗೆ ಉಯ್ಯಲೆಯಾಡಿತು.

ಕಾಲದಿಕ್ತಟ ದಾಟಿ ಸೇರಿತು
ನೆನಹು ಹಕ್ಕಿಯ ಸಂಕುಲ.
ಕಳೆದ ಸತ್ವ ವಿಭೂತಿ ನೆರೆಯಿತೊ
ಎನ್ನು ವೊಲು ತಾರಾಕುಲ

ಮೋಡ ನೀಡದಿ ಚಿಕ್ಕೆ ಹಕ್ಕಿಯ
ತುಂಬಿ ತುಳುಕುವ ಪಿಕರುತಿ
ಕಾಲವೀಣೆಯು ಮಿಡಿಯ ತೊಡಗಿತೊ
ದೇವ ವಾಣಿಯ ಆ ಶೃತಿ

ಸಪ್ತ ಋಷಿಗಳ ವೇದ ವಾಣಿಯು
ಉಸುರಿತಾ ಗಾಯತ್ರಿಯ
ಯಮನ ಜಯಿಸಿದ ಸತ್ವ ಹೊಮ್ಮಿತು
ಕರಿಯಿತಾ ಸಾವಿತ್ರಿಯ

ವ್ಯಾಸ ವಾಲ್ಮೀಕಿಯರ ಪ್ರತಿಭೆಯ
ಗಂಗೆ ಬಾನೊಳು ಹರಿಯಿತು
ಧರ್ಮ ಭೀಮರ ರಾಮ ಹನುಮರ
ವೀರ ತೇಜವು ಚಿಮುಕಿತು.

ಕ್ರಿಸ್ತ ನೇರಿದ ಶಿಲುಬೆಯಿಂದಲಿ
ಸುರಿದ ರಕ್ತದ ಹನಿಯಲಿ
ಸಾವನರಿಯದ ಸೊಲ್ಲು ಗುಡುಗಿತು
ಚಿಕ್ಕೆ ಚಿಕ್ಕೆಯ ಎಡೆಯಲಿ

ಬುದ್ಧ ಬೋಧಿಯು ಮತ್ತೆ ಚಿಗುರಿತು
ಜಿನನ ವಾಣಿಯು ಅರಳಿತು
ಸೋತು ಸರಿದಿಹ ತತ್ವವೇತ್ತರ
ಶಬ್ದ ಸೌಷ್ಠವ ಕೊನರಿತು.

“ಬೆಂದು ಬಳಲಿದ ಜಗದ ಜೀವವೆ,
ಏಳು ಕುಡಿಯಲು ಸಿಡಿಲನು
ಮರೆತ ಮಾತಿನ ಹಣ್ಣು ಹಂಪಲ-
ದಿಂದ ತುಂಬಾ ಮಡಿಲನು

ಏಕೆ ಅಶುಭದ ಹೊಲೆಗೆ ಆಳುಕುವೆ
ಸಾವಿನಲಿ ನೀ ಬಾಳುವೆ
ಅಮೃತ ಪುತ್ರರ ಪಿತಗೆ ಭಯವೆ
ನೀನೆ ಎಂದಿಗು ಆಳುವೆ”

ಕಾಲಸಾಗರ ಕೆರಳಿ ಕೆದರಿತು
ನಾದ ಹೊಮ್ಮಿತು ತೆರೆತೆರೆ
ಹಾಲ ಸಾಗರ ನಂದ ಕಂದನು
ನೋಡು ನಕ್ಕನು ಜಗದೊರೆ

“ಕ್ಲೈಬೃಂ ಮಾಸ್ಮಗುಮಃ ಪ್ರಾಣೀ
ಸಲ್ಲದಿದು ನಿನಗೆಂದಿಗು
ಕುರುಕ್ಷೇತ್ರವಿದು ಧರ್ಮಕ್ಷೇತ್ರವು
ಉಂಟು ಕೊನೆಯಾ ಸಾವಿಗು.”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...