Home / ಕವನ / ಕವಿತೆ / ಸಂದ್ಯಾ-ಸೂಕ್ತ

ಸಂದ್ಯಾ-ಸೂಕ್ತ

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ
ಬೆಳೆದು ನಿಂತಿದೆ ಸಂಪದ
ಹಕ್ಕಿ ಹಾರಿದ ಹಾಗೆ ಹರಿಯಿತು
ಮನದಿ ಊರಿದ ಆ ಪದ

ಚೆಂಗುಲಾಬಿಯ ಬನವು ಅರಳಿದೆ
ನೋಡು ಬಾನಿನ ದಂಡೆಗೆ
ಪ್ರಾಣ ಶುಕವೇ ಕ್ಷುಬ್ಧವಾಯಿತು
ಬಂತು ಕಣ್ಣಿನ ಕಿಂಡಿಗೆ

ಸ್ವರ್ಗಲೋಕದ ಸ್ವರ್ಣ ದ್ವಾರವು
ತೆರೆಯಿತೆನುವೊಲು ಅರೆಚಣ
ಸಂಜೆಗೆಂಪಿನ ಸುಮನ ಕಾಂತಿಗೆ
ತುಂಬ ಹೊತ್ತಿತು ಪಡುವಣ.

ನೋವು ನರಳಿಕೆಯಿಂದ ನವೆದಿಹ
ಜಗದ ಕೊರಳಿಗೆ ತಾಯಿತ
ಸುತ್ತಿಕೊಂಡಿದೆ ಸಂಜೆಗೆಂಪಿನ
ಮುತ್ತು ಮಾಲೆಯು ಮಂತ್ರಿತ

ದೇವ ಮಮತೆಯ ಕೈಯು ಚಾಚಿತು
ತಂಪು ಗಾಳಿಯ ಸುಳಿಯಲಿ
ಬೆಂದ ಹಣೆಗಳ ಬೇಗೆ ಸವರಿತು
ಶಾಂತಿಯೆರಚಿತು ಎದೆಯಲಿ.

ಮಡದಿ ಮಕ್ಕಳ ಮಮತೆ ನುಡಿಸಿತು
ಹಕ್ಕಿಯುಲಿಯುವ ಚಿಲಿಪಿಲಿ
ಕಿರಣ ಶಿಶುಗಳ ಚರಣ ಕಿಂಕಿಣಿ
ನಾದ ತುಂಬಿತು ಜಗದಲಿ

ಜಗದ ಬಗೆವಟ ಹರಡಿ ನಿಂತಿತು
ಟೊಂಗೆ ಟೊಂಗೆಯು ಕೊನರಿತು
ಗಾಳಿಗಡಲಿನ ತೆರೆಗೆ ನೌಕೆಯ
ಹಾಗೆ ಉಯ್ಯಲೆಯಾಡಿತು.

ಕಾಲದಿಕ್ತಟ ದಾಟಿ ಸೇರಿತು
ನೆನಹು ಹಕ್ಕಿಯ ಸಂಕುಲ.
ಕಳೆದ ಸತ್ವ ವಿಭೂತಿ ನೆರೆಯಿತೊ
ಎನ್ನು ವೊಲು ತಾರಾಕುಲ

ಮೋಡ ನೀಡದಿ ಚಿಕ್ಕೆ ಹಕ್ಕಿಯ
ತುಂಬಿ ತುಳುಕುವ ಪಿಕರುತಿ
ಕಾಲವೀಣೆಯು ಮಿಡಿಯ ತೊಡಗಿತೊ
ದೇವ ವಾಣಿಯ ಆ ಶೃತಿ

ಸಪ್ತ ಋಷಿಗಳ ವೇದ ವಾಣಿಯು
ಉಸುರಿತಾ ಗಾಯತ್ರಿಯ
ಯಮನ ಜಯಿಸಿದ ಸತ್ವ ಹೊಮ್ಮಿತು
ಕರಿಯಿತಾ ಸಾವಿತ್ರಿಯ

ವ್ಯಾಸ ವಾಲ್ಮೀಕಿಯರ ಪ್ರತಿಭೆಯ
ಗಂಗೆ ಬಾನೊಳು ಹರಿಯಿತು
ಧರ್ಮ ಭೀಮರ ರಾಮ ಹನುಮರ
ವೀರ ತೇಜವು ಚಿಮುಕಿತು.

ಕ್ರಿಸ್ತ ನೇರಿದ ಶಿಲುಬೆಯಿಂದಲಿ
ಸುರಿದ ರಕ್ತದ ಹನಿಯಲಿ
ಸಾವನರಿಯದ ಸೊಲ್ಲು ಗುಡುಗಿತು
ಚಿಕ್ಕೆ ಚಿಕ್ಕೆಯ ಎಡೆಯಲಿ

ಬುದ್ಧ ಬೋಧಿಯು ಮತ್ತೆ ಚಿಗುರಿತು
ಜಿನನ ವಾಣಿಯು ಅರಳಿತು
ಸೋತು ಸರಿದಿಹ ತತ್ವವೇತ್ತರ
ಶಬ್ದ ಸೌಷ್ಠವ ಕೊನರಿತು.

“ಬೆಂದು ಬಳಲಿದ ಜಗದ ಜೀವವೆ,
ಏಳು ಕುಡಿಯಲು ಸಿಡಿಲನು
ಮರೆತ ಮಾತಿನ ಹಣ್ಣು ಹಂಪಲ-
ದಿಂದ ತುಂಬಾ ಮಡಿಲನು

ಏಕೆ ಅಶುಭದ ಹೊಲೆಗೆ ಆಳುಕುವೆ
ಸಾವಿನಲಿ ನೀ ಬಾಳುವೆ
ಅಮೃತ ಪುತ್ರರ ಪಿತಗೆ ಭಯವೆ
ನೀನೆ ಎಂದಿಗು ಆಳುವೆ”

ಕಾಲಸಾಗರ ಕೆರಳಿ ಕೆದರಿತು
ನಾದ ಹೊಮ್ಮಿತು ತೆರೆತೆರೆ
ಹಾಲ ಸಾಗರ ನಂದ ಕಂದನು
ನೋಡು ನಕ್ಕನು ಜಗದೊರೆ

“ಕ್ಲೈಬೃಂ ಮಾಸ್ಮಗುಮಃ ಪ್ರಾಣೀ
ಸಲ್ಲದಿದು ನಿನಗೆಂದಿಗು
ಕುರುಕ್ಷೇತ್ರವಿದು ಧರ್ಮಕ್ಷೇತ್ರವು
ಉಂಟು ಕೊನೆಯಾ ಸಾವಿಗು.”
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...