Home / ಕವನ / ಕವಿತೆ / ಕಲಿಸಿದರು

ಕಲಿಸಿದರು

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು
ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ
ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು
ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು

ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು
ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು
ಮಲ್ಲಿಗೆಯಾಗೆಂದು ಕಲ್ಲ ಕೆಳಗಪ್ಪಚ್ಚಿಗಿಕ್ಕಿದರು
ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡೆಂದು
ಮೀಸೆ ಹೊತ್ತ ಮುಖಕ್ಕೆ ಮಸಿ ಹಚ್ಚಿದರು
ವಿಷವಿಕ್ಕಿದವಗೆ ಷಡ್ರಸವನಿಕ್ಕೆಂದು ಮನೆಹಾಳತನವ ಬೋಧಿಸಿದರು
ಒದೆಸಿಕೊಂಡರೂ ಅಳುನುಂಗಿ ನಗು ಎಂದು
ಅಳುಬುರುಕುತನವ ಕಲಿಸಿದರು

ಉಗುಳಿದರೆ ಒರೆಸಿಕೊಂಡು ಹೊಗಳೆಂದು
ಬೊಗಳುಸನ್ನಿತನವ ಕಲಿಸಿದರು
ಕೋಡಿದ್ದರೂ ತಿವಿಯದೆ ತಲೆಹಾಕುವುದ ಕಲಿಸಿದರು
ಗಂಡ ಬೇರನ್ನು ಕೊಟ್ಟು ಕಸಿ ಮಾಡಿ
ನರಹಿಚುಕಿ ಜೀವಧಾತು ಹರಿಯದೆ ಬರಲಾಗಿಸಿ
ಕೆಂಡ ಕೆರಳದಂತೆ ತಣ್ಣೀರು ಹಾಕಿ
ಷಂಡತನವ ಕಲಿಸಿದರು ನಮ್ಮವರು

ತಲೆ ಪಂಜರಪಕ್ಷಿಗೆ ಗಿಳಿಯೋದಿಸಿ
ಮೂಗುಹಿಡಿಸಿ ಜಪ ಮಾಡ ಕಲಿಸಿದರು
ತೀರ್ಥಕುಡಿಸಿ ಮಬ್ಬೇರಿಸಿ ಗೂಡಿನಲ್ಲಿಹಪರವೆಂದು ಕೂಡಿಹಾಕಿ
ಬಯಲಾಗಸದ ತಿಳಿಹೊಳೆಯ ಗಿರಿನೀರ ತನಿವಣ್ಣ ರಸಗಳಿಗೆಲ್ಲ
ಎರವಾಗಿಸಿ ಬಂದೋಬಸ್ತಾಗಿ ಬಂಧಿಸಿದರೋ ನಾಗರಿಕ ನೆರಳಲ್ಲಿ
ಕತ್ತಿಕೋಲು ಕುಣಿದಾಡುವ ಗೊಂಡಾರಣ್ಯದಲ್ಲಿ
ಮುಳ್ಳುಗಳೆದ್ದೆದ್ದು ಕಣ್ಣು ಚುಚ್ಚುವಲ್ಲಿ
ಕೋರೆ ಹಲ್ಲುಗಳು ಮಸೆಯುವಲ್ಲಿ ಕೆನ್ನಾಲಿಗೆ ಚಾಚಿದಲ್ಲಿ
ಕಲ್ಲು ಗುಂಡು ಸದಾ ಸುರಿಯುವಲ್ಲಿ
ಬೋಳಾಗಿಸಿ ಬಿಳಿಚು ಮಲ್ಲಿಗೆಯಾಗಿಸಿ
ಬಾಳಾ ಬಾಳೆಂದು ಕಲಿಸಿಬಿಟ್ಟರು ನಮ್ಮವರು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್