Home / ಕವನ / ಕವಿತೆ / ಅಗಲಿಕೆ

ಅಗಲಿಕೆ

ಸಾರಂಗ

ಅಗಲಿಕೆಯೆ, ನಿನ್ನಗಲನಳೆಯುವವರಾರು ?
ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ?

ಹಿಂದೆ ಗೋವಳತಿಯರು ನಂದಕಂದನನಗಲಿ
ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ
ನೊಂದು ನಿಡುಸರದಿ ಮನಬಂದಂತೆ ಕೂಗುತಲಿ
ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ
“ಹುಲ್ಲೆಯೇ ನಲ್ಲನೆಲ್ಲಿರುವ ನೀನರುಹು !
“ಕೋಗಿಲೆಯೆ ಕೂಗಿ ನುಡಿ ಅವನಿರುವ ಕುರುಹು !
“ಗಿಳಿಹಿಂಡೆ ಕಂಡಿಹೆಯ ಗೆಳೆಯನನು ? ಹೇಳು !
“ಅಳಿಕುಳವೆ ಅಡಗಿರುವನೆಲ್ಲಿ ನಮ್ಮಾಳು ?

“ಅಣ್ಣ ! ಗರಿಗಣ್ಣ ! ಮನದನ್ನನಿರುಹನು ತಿಳುಹು !
“ಹೆಣ್ಣುಗಳ ಹೋಗಲಿಹ ಹರಣಗಳ ನೀನುಳುಹು !
“ಹಕ್ಕಿಗಳೆ, ನುಡಿಹೇಳಿ ಚಿಕ್ಕ ಚೆನ್ನಿಗನೆಲ್ಲಿ?
“ದಿಕ್ಕ ತೋರಿರಿ, ಸಾಕು, ಹೊಕ್ಕು ಹುಡುಕುವೆವಲ್ಲಿ!
“ಜಂಗುಳಿಯ ಹಸುಗಳೇ ರಂಗನೆಲ್ಲಿಹನು?
“ಕಂಗಳಿಗೆ ಕಾಣದೊಲು ಮೈಯ ಮರೆಸಿಹನು;
“ಮಂಗಣ್ಣಗಳಿರ, ಮಿತ್ರನ ಮರೆಯ ಹೇಳಿ!
“ಹೆಂಗಳೀ ಹರಕೆಯನು ಹೊಂದಿ ಸೊಗಬಾಳಿ!

“ಮರಬಳ್ಳಿಗಳೆ ಅರುಹಿ ಹರಿಯಿರುವ ತಾಣವನು !
“ಕೆರೆತೊರೆಗಳೇ ತೋರಿ ಅರಸನಿಹ ಗುರುತನ್ನು !
“ಹೊಳೆಯಮ್ಮ, ತಿಳುಹಿಸೌ ಕೊಳಲಿಗನ ನೆಲೆಯನ್ನು !
“ಬೆಟ್ಟದೊರೆ, ಮೂಗುತನ ಬಿಟ್ಟು ತೋರಾತನನು !
“ಮುಗಿಲೆ, ನಿನ್ನಂತಿರುವ ಸೊಗಸೊಡಲನೆಲ್ಲಿ ?
“ಹಗಲೊಡೆಯ, ನಮ್ಮ ಬಗೆಗಳ್ಳನಿಹನೆಲ್ಲಿ ?
“ಸುಳಿವೆಲರೆ, ನಮ್ಮೊಲವ ಸುಲಿದಾತನೆಲ್ಲಿ?
“ಬನಸಿರಿಯೆ, ನಮ್ಮ ಮನ ತಣಿಸುವವನೆಲ್ಲಿ?”

ಇಂತು ಹೆಣ್ಣುಗಳು ಕಣ್ಣಿಗೆ ಕಂಡುದೆಲ್ಲವನು-
ನಸುವು ತಿಳಿವಿರದಿರುವ ಹಸು ಹಕ್ಕಿ ಮಿಗಗಳನು-
ಉಸಿರಿಲ್ಲದಿಹ ಬಳ್ಳಿ-ಹಸಿರು-ಗಿಡ-ಮರಗಳನು-
ನುಡಿಸುತಳುತಲೆದ ಕತೆಯನ್ನ೦ದು ಕೇಳಿದೆನು.
‘ಹುಚ್ಚು ಹೆಣ್ಣುಗಳವರು !’ ಎಂದು ಬಗೆದಂದೆ
‘ಹೆಚ್ಚು ಇದು ! ಎಲ್ಲ ಕವಿಕಲ್ಪನೆಯು !’ ಎಂದೆ;
‘ಕೆಲಸವಿಲ್ಲದ ಕವಿಗೆ ಹುಸಿಯ ಹೆಣೆಯುವುದೇ
‘ಬಲು ಕೆಲಸ!’ ಎಂದು ಬೀಳ್‌ಗಳೆದು ನಾ ನುಡಿದೆ.

ಅಂದೆನಗೆ ತಿಳಿಯದೆಯೆ ಬಾಯ್ಗೆ ಬಂದುದನೊರೆದೆ;
ಇಂದು ಆ ಕತೆಯೆಲ್ಲ ಸರಿಯೆಂದು ತೋರುತಿದೆ.
ಸಟಿಯಲ್ಲ ಕವಿಯುಸಿರು, ಹುಚ್ಚಲ್ಲ ಹುಡುಗಿಯರು,
ದಿಟವನನುಭವಿಸದೆಯೆ ಅರಿತವರದಾರಿಹರು ?
‘ಮುಳುಗದೆಯೆ ನೀರ ನೆಲೆಯೊಳಗನರಿಯಲಿಕೆ-
‘ಬೆಳಕಳಿದ ಕಣ್ಗೆ ತಿಂಗಳನು ತಿಳಿಯಲಿಕೆ-
‘ಎಂತಾಗುವುದು?’ ಎಂಬ ಕಂಡುಂಡ ಮಾತು
ಇಂತೆನಗೆ ತಿಳಿದು ಮನದಾ ಮುಸುಕು ಹೋಯ್ತು.

ದೂರವಿಹ ನನ್ನಿನಿಯನೂರ ದಿಕ್ಕಿನ ಮುಗಿಲು
ಏರಿ ನನ್ನಯ ಬಳಿಯ ಸಾರಿ ಬರೆ ಬಾನಿನೊಳು,
ನನ್ನವುಗಳೆಂದು ನೇಹದ ನೆಟ್ಟ ನೋಟದಲಿ
ಮುಗಿಲ ನೋಡುತ ನಿಲುವೆ ಹಲವು ಹಾರಯಿಸುತಲಿ;
ದೊರೆಯಿರುವ ದೆಸೆಯಿಂದ ಹಕ್ಕಿಗಳು ಹಾರಿ
ಬರುತಿರಲು, ಹರುಷದೊಳು ನವಿರುಗಳು ನಿಮಿರಿ
ನನ್ನ ನಂಟುಗಳೆಂದು ನೆನೆವೆನವುಗಳನು,
ನನ್ನಾತನೊಸಗೆಯನು ಕೇಳಲೆಳಸುವೆನು.

ಮೆಲುಗಾಳಿಯೆ ಇರಲಿ, ಬಲುಗಾಳಿಯೇ ಇರಲಿ,
ಗೆಳೆಯನಿಹ ಕಡೆಯಿಂದ ಸುಳಿದು ಒರೆ-ಮೋಹದಲಿ
ತಿಳಿಯುವೆನು ನಾ ತೀರ ಬಳಿಯಾಪ್ತನೆಂದದನು-
ತಿಳುಹಿಸಲು ನನ್ನೆದೆಯ ಒಳಮಾತನೆಲ್ಲವನು
ನಾಲಗೆಯು ನಲಿಯುವುದು, ಮನವು ಕುಣಿಯುವುದು
ಕೇಳಲಾತನ ಕತೆಯ ಕಿವಿಯು ಕೋರುವುದು,
ಹೀಗೆನ್ನ ನಾಡಿಸುವುದಾವುದದು ಹುಚ್ಚೋ..?
ಆಗದಿರಲಿನಿಯನಲ್ಲಿರುವೆದೆಯ ನಚ್ಚೋ…?

ಇನಿಯನನು ನೋಡಿ ನುಡಿಸಿದ ಮಂದಿಯೆಲ್ಲರನು
ಮನೆಯವರೆ ಎಂದು ನಾ ಮನ್ನಿಸುವೆನವರನ್ನು
ಮನದನ್ನನಾ ರೂಪುಗುಣದ ಬಣ್ಣನೆಯನ್ನು
ನನಗೊರೆಯೆ ನನ್ನ ನಾನೇ ಮರೆತು ಕೇಳುವೆನು.
ಎನಿತೊ ಜನರಿಲ್ಲವೇ ಮತ್ತೆ ನೆರೆಗಳೊಳು ?
ಎನಿಸುವರು ನನಗವರು ಬರಡುಬೊಂಬೆಯೊಲು;
ಮಾತಿಲ್ಲದುವನೆಲ್ಲ ಮಾತನಾಡಿಸುವೆ,
ಮಾತನಾಡುವರಲ್ಲಿ ಮಗುವಡೆದಿರುವೆ.

ಜಡವಸ್ತುಗಳನ್ನು ಜೀವಿಗಳಂತೆ ಕಾಣಿಸುವ
ನಡೆನುಡಿವ ಜೀವಿಗಳ ಜಡಗಳಂತಾಗಿಸುವ
ಅಗಲಿಕೆಯೆ, ನಿನ್ನ ಗಲಗಳೆಯುವವರಾರಿಹರು?
ಬಗೆಯೊಲವೆ ನಿನ್ನ ನೆಲೆ ತಿಳಿದವರದಾರು ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್