Home / ಕವನ / ಕವಿತೆ / ಅಗಲಿಕೆ

ಅಗಲಿಕೆ

ಸಾರಂಗ

ಅಗಲಿಕೆಯೆ, ನಿನ್ನಗಲನಳೆಯುವವರಾರು ?
ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ?

ಹಿಂದೆ ಗೋವಳತಿಯರು ನಂದಕಂದನನಗಲಿ
ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ
ನೊಂದು ನಿಡುಸರದಿ ಮನಬಂದಂತೆ ಕೂಗುತಲಿ
ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ
“ಹುಲ್ಲೆಯೇ ನಲ್ಲನೆಲ್ಲಿರುವ ನೀನರುಹು !
“ಕೋಗಿಲೆಯೆ ಕೂಗಿ ನುಡಿ ಅವನಿರುವ ಕುರುಹು !
“ಗಿಳಿಹಿಂಡೆ ಕಂಡಿಹೆಯ ಗೆಳೆಯನನು ? ಹೇಳು !
“ಅಳಿಕುಳವೆ ಅಡಗಿರುವನೆಲ್ಲಿ ನಮ್ಮಾಳು ?

“ಅಣ್ಣ ! ಗರಿಗಣ್ಣ ! ಮನದನ್ನನಿರುಹನು ತಿಳುಹು !
“ಹೆಣ್ಣುಗಳ ಹೋಗಲಿಹ ಹರಣಗಳ ನೀನುಳುಹು !
“ಹಕ್ಕಿಗಳೆ, ನುಡಿಹೇಳಿ ಚಿಕ್ಕ ಚೆನ್ನಿಗನೆಲ್ಲಿ?
“ದಿಕ್ಕ ತೋರಿರಿ, ಸಾಕು, ಹೊಕ್ಕು ಹುಡುಕುವೆವಲ್ಲಿ!
“ಜಂಗುಳಿಯ ಹಸುಗಳೇ ರಂಗನೆಲ್ಲಿಹನು?
“ಕಂಗಳಿಗೆ ಕಾಣದೊಲು ಮೈಯ ಮರೆಸಿಹನು;
“ಮಂಗಣ್ಣಗಳಿರ, ಮಿತ್ರನ ಮರೆಯ ಹೇಳಿ!
“ಹೆಂಗಳೀ ಹರಕೆಯನು ಹೊಂದಿ ಸೊಗಬಾಳಿ!

“ಮರಬಳ್ಳಿಗಳೆ ಅರುಹಿ ಹರಿಯಿರುವ ತಾಣವನು !
“ಕೆರೆತೊರೆಗಳೇ ತೋರಿ ಅರಸನಿಹ ಗುರುತನ್ನು !
“ಹೊಳೆಯಮ್ಮ, ತಿಳುಹಿಸೌ ಕೊಳಲಿಗನ ನೆಲೆಯನ್ನು !
“ಬೆಟ್ಟದೊರೆ, ಮೂಗುತನ ಬಿಟ್ಟು ತೋರಾತನನು !
“ಮುಗಿಲೆ, ನಿನ್ನಂತಿರುವ ಸೊಗಸೊಡಲನೆಲ್ಲಿ ?
“ಹಗಲೊಡೆಯ, ನಮ್ಮ ಬಗೆಗಳ್ಳನಿಹನೆಲ್ಲಿ ?
“ಸುಳಿವೆಲರೆ, ನಮ್ಮೊಲವ ಸುಲಿದಾತನೆಲ್ಲಿ?
“ಬನಸಿರಿಯೆ, ನಮ್ಮ ಮನ ತಣಿಸುವವನೆಲ್ಲಿ?”

ಇಂತು ಹೆಣ್ಣುಗಳು ಕಣ್ಣಿಗೆ ಕಂಡುದೆಲ್ಲವನು-
ನಸುವು ತಿಳಿವಿರದಿರುವ ಹಸು ಹಕ್ಕಿ ಮಿಗಗಳನು-
ಉಸಿರಿಲ್ಲದಿಹ ಬಳ್ಳಿ-ಹಸಿರು-ಗಿಡ-ಮರಗಳನು-
ನುಡಿಸುತಳುತಲೆದ ಕತೆಯನ್ನ೦ದು ಕೇಳಿದೆನು.
‘ಹುಚ್ಚು ಹೆಣ್ಣುಗಳವರು !’ ಎಂದು ಬಗೆದಂದೆ
‘ಹೆಚ್ಚು ಇದು ! ಎಲ್ಲ ಕವಿಕಲ್ಪನೆಯು !’ ಎಂದೆ;
‘ಕೆಲಸವಿಲ್ಲದ ಕವಿಗೆ ಹುಸಿಯ ಹೆಣೆಯುವುದೇ
‘ಬಲು ಕೆಲಸ!’ ಎಂದು ಬೀಳ್‌ಗಳೆದು ನಾ ನುಡಿದೆ.

ಅಂದೆನಗೆ ತಿಳಿಯದೆಯೆ ಬಾಯ್ಗೆ ಬಂದುದನೊರೆದೆ;
ಇಂದು ಆ ಕತೆಯೆಲ್ಲ ಸರಿಯೆಂದು ತೋರುತಿದೆ.
ಸಟಿಯಲ್ಲ ಕವಿಯುಸಿರು, ಹುಚ್ಚಲ್ಲ ಹುಡುಗಿಯರು,
ದಿಟವನನುಭವಿಸದೆಯೆ ಅರಿತವರದಾರಿಹರು ?
‘ಮುಳುಗದೆಯೆ ನೀರ ನೆಲೆಯೊಳಗನರಿಯಲಿಕೆ-
‘ಬೆಳಕಳಿದ ಕಣ್ಗೆ ತಿಂಗಳನು ತಿಳಿಯಲಿಕೆ-
‘ಎಂತಾಗುವುದು?’ ಎಂಬ ಕಂಡುಂಡ ಮಾತು
ಇಂತೆನಗೆ ತಿಳಿದು ಮನದಾ ಮುಸುಕು ಹೋಯ್ತು.

ದೂರವಿಹ ನನ್ನಿನಿಯನೂರ ದಿಕ್ಕಿನ ಮುಗಿಲು
ಏರಿ ನನ್ನಯ ಬಳಿಯ ಸಾರಿ ಬರೆ ಬಾನಿನೊಳು,
ನನ್ನವುಗಳೆಂದು ನೇಹದ ನೆಟ್ಟ ನೋಟದಲಿ
ಮುಗಿಲ ನೋಡುತ ನಿಲುವೆ ಹಲವು ಹಾರಯಿಸುತಲಿ;
ದೊರೆಯಿರುವ ದೆಸೆಯಿಂದ ಹಕ್ಕಿಗಳು ಹಾರಿ
ಬರುತಿರಲು, ಹರುಷದೊಳು ನವಿರುಗಳು ನಿಮಿರಿ
ನನ್ನ ನಂಟುಗಳೆಂದು ನೆನೆವೆನವುಗಳನು,
ನನ್ನಾತನೊಸಗೆಯನು ಕೇಳಲೆಳಸುವೆನು.

ಮೆಲುಗಾಳಿಯೆ ಇರಲಿ, ಬಲುಗಾಳಿಯೇ ಇರಲಿ,
ಗೆಳೆಯನಿಹ ಕಡೆಯಿಂದ ಸುಳಿದು ಒರೆ-ಮೋಹದಲಿ
ತಿಳಿಯುವೆನು ನಾ ತೀರ ಬಳಿಯಾಪ್ತನೆಂದದನು-
ತಿಳುಹಿಸಲು ನನ್ನೆದೆಯ ಒಳಮಾತನೆಲ್ಲವನು
ನಾಲಗೆಯು ನಲಿಯುವುದು, ಮನವು ಕುಣಿಯುವುದು
ಕೇಳಲಾತನ ಕತೆಯ ಕಿವಿಯು ಕೋರುವುದು,
ಹೀಗೆನ್ನ ನಾಡಿಸುವುದಾವುದದು ಹುಚ್ಚೋ..?
ಆಗದಿರಲಿನಿಯನಲ್ಲಿರುವೆದೆಯ ನಚ್ಚೋ…?

ಇನಿಯನನು ನೋಡಿ ನುಡಿಸಿದ ಮಂದಿಯೆಲ್ಲರನು
ಮನೆಯವರೆ ಎಂದು ನಾ ಮನ್ನಿಸುವೆನವರನ್ನು
ಮನದನ್ನನಾ ರೂಪುಗುಣದ ಬಣ್ಣನೆಯನ್ನು
ನನಗೊರೆಯೆ ನನ್ನ ನಾನೇ ಮರೆತು ಕೇಳುವೆನು.
ಎನಿತೊ ಜನರಿಲ್ಲವೇ ಮತ್ತೆ ನೆರೆಗಳೊಳು ?
ಎನಿಸುವರು ನನಗವರು ಬರಡುಬೊಂಬೆಯೊಲು;
ಮಾತಿಲ್ಲದುವನೆಲ್ಲ ಮಾತನಾಡಿಸುವೆ,
ಮಾತನಾಡುವರಲ್ಲಿ ಮಗುವಡೆದಿರುವೆ.

ಜಡವಸ್ತುಗಳನ್ನು ಜೀವಿಗಳಂತೆ ಕಾಣಿಸುವ
ನಡೆನುಡಿವ ಜೀವಿಗಳ ಜಡಗಳಂತಾಗಿಸುವ
ಅಗಲಿಕೆಯೆ, ನಿನ್ನ ಗಲಗಳೆಯುವವರಾರಿಹರು?
ಬಗೆಯೊಲವೆ ನಿನ್ನ ನೆಲೆ ತಿಳಿದವರದಾರು ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...