Home / ಕವನ / ಕವಿತೆ / ನುತಿಸುವೆನು ಬಸವ

ನುತಿಸುವೆನು ಬಸವ

ಬಸವಣ್ಣ ಬಸವಯ್ಯ ಬಸವೇಶ ಶರಣು
ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ ||

ಶರಣರು ಕವಿಗಳು ಹೊಗಳಿದರು ನಿನ್ನ
ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. ||

ಕಲ್ಯಾಣ ಪಣತೆಗೆ ಭಕ್ತಿ ತ್ಯೆಲವೆರೆದು
ದೀಪ ಹೊತ್ತಿಸಿ ನೀನು ಬೆಳಕಾಗಲು
ನೂರಾರು ಹಣತೆಗಳು ಹೊತ್ತಿಕೊಂಡವು ಶರಣ
ಕಾಂತಿ ಪುಂಜದ ಹೊನಲು ಇರುಳು ಹಗಳು || ೧ ||

ಭಾವದ ಬುಗ್ಗೆಗೆ ಭಾಷಯು ಚಿಮ್ಮಲು
ನುಡಿಯೆಲ್ಲ ವಚನದ ಕಾವ್ಯಸುಗ್ಗಿ
ಸುವಿಚಾರ ಮೊಗ್ಗು ಆಚಾರದ ಹೂವರಳಿ
ಕನ್ನಡ ವನದನುಭಾವ ಹಿಗ್ಗಿ || ೨ ||

ಶಿವನ ಪ್ರೀತಿಯ ಕಂದ ಶಿವಕೀರ್ತಿಯಾನಂದ
ಶಿವ ಭಕ್ತಿ ಭಂಡಾರಿ ಶಿವಲಿಂಗ ಬಸವ
ಪ್ರಮಥರ ಜೀವನೆ ಪೂರ್ವಾಚಾರ್ಯನೆ
ವೀರಶೈವದ ಆದಿ ಗುರುವೆ ಬಸವ || ೩ ||

ನಂಬಿದವರಿಗೆಲ್ಲ ತಂದೆ ತಾಯಿಯು ನೀನೆ
ಬಂಧುಬಳಗ ಸರ್ವ ಶರಣ ಬಸವ
ಗತಿ ನೀನೆ ಮತಿ ನೀನೆ ಸರ್ವಾವಲಂಬನೆ
ಬಾಳಿನ ಬೆಳಕು ಜಗಜ್ಯೋತಿ ಬಸವ || ೪ ||

ದೋಷರಹಿತನೆ ಬಸವ ಪಾಪ ವಿದೂರನೆ
ತನುಮನ ಬಯಲಾದ ಪೂರ್ಣ ಬಸವ
ಭವ ಪಾಶ ಹರಿಯುತ ಭಕ್ತಿಯ ಹರಡಿದೆ
ಯುಗಕೊಬ್ಬ ಜಗಕೆ ಮಹಾಂತ ಬಸವ || ೫ ||

ಹರಬಸವ ಶಿವಬಸವ ಗುರುಬಸವ ದೇವನೆ
ನಿನ್ನ ನೆನೆದರೆ ಭವವು ನಾಸ್ತಿಯಹುದು
ಜ್ಞಾನ ಮೂಲನೆ ಧ್ಯಾನ ಲೋಲನೆ ಬಸವೇಶ
ನಿನ್ನಿಂದ ನರಜನ್ಮ ಹರಜನ್ಮವಹುದು || ೬ ||

ಶರಣರಿಗೆ ಶರಣು ಶರಣರ ಬಂಧುವೆ
ಶರಣ ಧರ್ಮವ ಮೆರೆದೆ ಲೋಕದಲ್ಲಿ
ವೀರರಿಗೆ ಧೀರನು ಛಲದಂಕ ಮಲ್ಲನು
ಬಹಿರಂತರಂಗದ ಪಾಕದಲ್ಲಿ || ೭ ||

ಕುಲಭೇದ ಮೀರಿದ ಭೂತದಯಾಪರನೆ
ಲಿಂಗದ ಮುಂದಿಲ್ಲ ಲಿಂಗಭೇದ
ಅಂಗದಿ ಲಿಂಗವ ಸಾಕ್ಷಾತ್ಕರಿಸಿದ
ಕೂಡಲ ಸಂಗಮ ದೇವ ಪಾದ || ೮ ||

ಇಹಪರ ನಡೆನುಡಿ ಶಿವಜೀವ ದ್ವಂದ್ವಗಳ
ಒಂದಾಗಿ ಬೆಸೆದೆಯೊ ತುಂಬು ಬಸವ
ಭಕ್ತಿ ಜ್ಞಾನ ಕರ್ಮ ವೈರಾಗ್ಯ ಅನುಭಾವ
ಎಲ್ಲ ಹದಗೂಡಿ ಸಮಗ್ರ ಬಸವ || ೯ ||

ಗುರುಲಿಂಗ ಜಂಗಮ ಪ್ರಾಣ ಬಸವಣ್ಣ
ಅರಿವಿನಿ ಜ್ಯೋತಿಯ ಕ್ರಾಂತಿ ಸೂರ್ಯ
ಪ್ರಸಾದ ಕಾಯನೆ ಕಾಯಕ ಜೀವನೆ
ಸಿದ್ಧ ಯೋಗಿಯೆ ನೀನು ಶಾಂತಿವರ್‍ಯ || ೧೦ ||

ಸತ್ಯದ ತವನಿಧಿ ಮುಕ್ತಿಯ ಸನ್ನಿಧಿ
ಸುವಿಚಾರ ಚಿಂತನ ಮಹೋದಯ
ಮರ್ತ್ಯವ ಅಮೃತದ ಮಹಮನೆ ಮಾಡಿದೆ
ಇಹಬಾಳು ಭಾಗ್ಯದ ಶುಭೋದಯ || ೧೧ ||

ಆದಿಯ ಗುರು ನರ ಜಾತಿಯ ಗುರು ನೀನೆ
ದೇವತೆಗಳಿಗೆಲ್ಲ ಬಸವ ಗುರುವೆ
ಹಿರಿಯ ಶರಣರು ಕೂಡ ಗುರುವೆಂದು ನುತಿಸಿದರು
ಪರ ಗುರು ವರಗುರು ನೀನೆ ಗುರುವೆ || ೧೨ ||

ಭಕ್ತಿಗೆ ಬೀಜನೆ ಮುಕ್ತಿಗೆ ಓಜನೆ
ಶಕ್ತಿಗೆ ಯುಕ್ತಿಗೆ ನೀನೆ ಬಸವ
ದೀಕ್ಷೆಗೆ ಬಸವಣ್ಣ ಮೋಕ್ಷಕೆ ಬಸವಣ್ಣ
ಕ್ರಮ ಶಿಕ್ಷೆ ಬೋಧೆಗು ತಂದೆ ಬಸವ || ೧೩ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...